- Home
- Karnataka Districts
- ಚಿಕ್ಕಮಗಳೂರು ಹೆಚ್.ಡಿ. ತಮ್ಮಯ್ಯ ಚಿನ್ನದ ರಸ್ತೆ; ನಿನ್ನೆ ಡಾಂಬರ್ ಹಾಕಿದ್ರು, ಇವತ್ತು ಕಿತ್ಕೊಂಡು ಬಂತು!
ಚಿಕ್ಕಮಗಳೂರು ಹೆಚ್.ಡಿ. ತಮ್ಮಯ್ಯ ಚಿನ್ನದ ರಸ್ತೆ; ನಿನ್ನೆ ಡಾಂಬರ್ ಹಾಕಿದ್ರು, ಇವತ್ತು ಕಿತ್ಕೊಂಡು ಬಂತು!
ಚಿಕ್ಕಮಗಳೂರು ನಗರದ ನಾಯ್ಡು ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆ ನಡೆಸಿದ ಕಳಪೆ ಕಾಮಗಾರಿಯಿಂದಾಗಿ, ಹಾಕಿದ 24 ಗಂಟೆಯೊಳಗೆ ಡಾಂಬರ್ ಕಿತ್ತುಬಂದಿದೆ. ಶಾಸಕ ಹೆಚ್.ಡಿ. ತಮ್ಮಯ್ಯ ಅವರಿಗೆ ಗುಣಮಟ್ಟದ ರಸ್ತೆ ನಿರ್ಮಿಸಲು ಆಗ್ರಹಿಸಿದ್ದಾರೆ.

ನಿನ್ನೆ ಹಾಕಿದ ಡಾಂಬರ್ ಇವತ್ತು ಕಿತ್ತುಬಂತು
ಚಿಕ್ಕಮಗಳೂರು (ಡಿ.20): ಕಾಫಿನಾಡು ಚಿಕ್ಕಮಗಳೂರು ನಗರದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಗಳ ಗುಣಮಟ್ಟದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ನಾಯ್ಡು ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ನಿನ್ನೆ ತಾನೇ ಹಾಕಲಾಗಿದ್ದ ಡಾಂಬರ್ ಇಂದು ಕಾಲಿನಲ್ಲೇ ಕಿತ್ತು ಬರುತ್ತಿರುವುದು ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆ.
ಹೆಚ್.ಡಿ.ತಮ್ಮಯ್ಯ ಚಿನ್ನದ ರಸ್ತೆ
ರಸ್ತೆ ಕಾಮಗಾರಿಯ ಅವ್ಯವಸ್ಥೆಯನ್ನು ಕಂಡು ಕೆರಳಿದ ಸ್ಥಳೀಯರು, ಕಳಪೆ ರಸ್ತೆಯ ಮಧ್ಯೆ ಬಿಳಿ ಬಣ್ಣದಲ್ಲಿ 'ಹೆಚ್.ಡಿ.ತಮ್ಮಯ್ಯ ಚಿನ್ನದ ರಸ್ತೆ' ಎಂದು ಬರೆಯುವ ಮೂಲಕ ಶಾಸಕರ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಜನರನ್ನು ಮೂರ್ಖರನ್ನ ಮಾಡಬೇಡಿ
ಜನರನ್ನ ಮೂರ್ಖರನ್ನಾಗಿ (ಫೂಲ್) ಮಾಡಬೇಡಿ, ಮಾಡೋ ಕೆಲಸವನ್ನ ನೀಟಾಗಿ ಮಾಡಿ' ಎಂದು ಕಿಡಿ ಕಾರಿರುವ ಸ್ಥಳೀಯರು, ರಸ್ತೆ ಕೆಲಸವಾದ ಕೇವಲ 24 ಗಂಟೆಯೊಳಗೆ ಡಾಂಬರ್ ಕಿತ್ತು ಹೋಗುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬೈಕ್ ಸವಾರರ ಪರದಾಟ
ನಗರದಾದ್ಯಂತ ಲೋಕೋಪಯೋಗಿ ಇಲಾಖೆ ಡಾಂಬರೀಕರಣ ಮಾಡುತ್ತಿದ್ದು, ಕಳಪೆ ಗುಣಮಟ್ಟದ ಗ್ರಾವಲ್ (ಜಲ್ಲಿ) ಬಳಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ರಸ್ತೆಯ ಮೇಲೆ ಹರಡಿರುವ ಕಳಪೆ ಮಟ್ಟದ ಗ್ರಾವಲ್ನಿಂದಾಗಿ ಬೈಕ್ ಸವಾರರು ಸ್ಕಿಡ್ ಆಗಿ ಬೀಳುತ್ತಿದ್ದಾರೆ. 'ಯಾವುದಾದರೂ ಅನಾಹುತ ಸಂಭವಿಸಿದರೆ ಇದಕ್ಕೆ ಹೊಣೆ ಯಾರು?' ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಗುಣಮಟ್ಟದ ರಸ್ತೆ ನಿರ್ಮಿಸಲು ತಾಕೀತು
ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಕಳಪೆ ಕಾಮಗಾರಿಯನ್ನು ಸರಿಪಡಿಸಬೇಕು ಮತ್ತು ಗುಣಮಟ್ಟದ ರಸ್ತೆ ನಿರ್ಮಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಶಾಸಕ ಹೆಚ್.ಡಿ. ತಮ್ಮಯ್ಯ ಅವರು ತಮ್ಮ ಕ್ಷೇತ್ರದ ಕಾಮಗಾರಿಗಳ ಬಗ್ಗೆ ನಿಗಾವಹಿಸಬೇಕೆಂದು ಜನರು ಒತ್ತಾಯಿಸಿದ್ದಾರೆ.

