Belagavi: ಗಂಡನಿರುವಾಗಲೇ ಪತ್ನಿಗೆ ಮತ್ತೊಂದು ಮದುವೆಯ ಸಂಚು? ದೂರು ದಾಖಲಿಸಿದ ಪತಿ
ಬೆಳಗಾವಿಯ ವೆಂಕಟೇಶ ರಾಠೋಡ ಎಂಬುವವರು, ತಾನು ಬದುಕಿರುವಾಗಲೇ ತನ್ನ ಪತ್ನಿಯ ಕುಟುಂಬಸ್ಥರು ಆಕೆಗೆ ಬಲವಂತವಾಗಿ ಮತ್ತೊಂದು ಮದುವೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪತ್ನಿಯ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಿ, ಅವರಿಂದಲೇ ಹಲ್ಲೆಗೊಳಗಾಗಿರುವುದಾಗಿ ಹೇಳಿಕೊಂಡಿದ್ದಾರೆ.

ಪತ್ನಿಗೆ ಮತ್ತೊಂದು ಮದುವೆ
ಬೆಳಗಾವಿ:ತಾನು ಬದುಕಿರುವಾಗಲೇ ತನ್ನ ಪತ್ನಿಗೆ ಮತ್ತೊಬ್ಬರೊಂದಿಗೆ ಮದುವೆ ಮಾಡಲು ಪತ್ನಿಯ ಕುಟುಂಬಸ್ಥರು ಮುಂದಾಗಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ನ್ಯಾಯಕ್ಕಾಗಿ ಮನವಿ ಮಾಡಿಕೊಂಡ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ.
ಬೆಳಗಾವಿ ಮೂಲದ ವೆಂಕಟೇಶ ರಾಠೋಡ ಎಂಬಾತ, 2022ರಲ್ಲಿ ಬೆಳಗಾವಿ ತಾಲೂಕಿನ ಯುವತಿಯೊಬ್ಬಳೊಂದಿಗೆ ಪರಸ್ಪರ ಒಪ್ಪಿಗೆಯಿಂದ ಮದುವೆಯಾಗಿದ್ದಾಗಿ ತಿಳಿಸಿದ್ದಾರೆ. ಮದುವೆಯ ಬಳಿಕ ಪತ್ನಿಗೆ ಮನೆ ಖರೀದಿ ಮಾಡಿಕೊಟ್ಟಿದ್ದು, ಕುಟುಂಬಕ್ಕೆ ಲಕ್ಷಾಂತರ ರೂಪಾಯಿ ಹಣ ಸಹ ನೀಡಿದ್ದೇನೆ ಎಂದು ಹೇಳಿದರು.

ಮದುವೆ ನಿಲ್ಲಿಸುವಂತೆ ಮನವಿ
ಹಿರೇಬಾಗೇವಾಡಿಯ ರುದ್ರಪ್ಪ ಹಂಚಿನಮನಿ ಹಾಗೂ ಅವರ ಪುತ್ರ ಪ್ರದೀಪ ಹಂಚಿನಮನಿ ಅವರು ತಮ್ಮ ಪತ್ನಿ ಮಂಜುಳಾ ಹಂಚಿನಮನಿಯನ್ನು ಮನೆಯಲ್ಲೇ ಕೂಡಿ ಹಾಕಿ ಇಟ್ಟಿದ್ದಾರೆ. ಬಲವಂತವಾಗಿ ಆಕೆಗೆ ಮತ್ತೊಬ್ಬ ವ್ಯಕ್ತಿಯೊಂದಿಗೆ ಮದುವೆ ಮಾಡಲು ಮುಂದಾಗಿದ್ದಾರೆ ಎಂದು ವೆಂಕಟೇಶ ರಾಠೋಡ ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಪರಸ್ಪರ ಒಪ್ಪಿಗೆಯಿಂದ ಮದುವೆಯಾಗಿದ್ದೇವೆ. ನಾನು ಬದುಕಿರುವಾಗಲೇ ಪತ್ನಿಗೆ ಮತ್ತೊಂದು ಮದುವೆ ಮಾಡಲು ಯತ್ನಿಸುತ್ತಿದ್ದಾರೆ. ಈ ಮದುವೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಸುಳ್ಳು ಪ್ರಕರಣ ದಾಖಲಿಸಿರುವ ಆರೋಪ
ಪತ್ನಿಯ ಮನೆಯವರು ತಮ್ಮ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಷಡ್ಯಂತ್ರ ರೂಪಿಸಿ ಜೈಲಿಗೂ ಕಳುಹಿಸಿದ್ದರು ಎಂದು ಆರೋಪಿಸಿದ್ದಾರೆ. ಮನೆ ನಿರ್ಮಾಣಕ್ಕಾಗಿ ಸಹಾಯಧನ ನೀಡಿದ್ದೇನೆ. ನನ್ನಿಂದ ಎಲ್ಲ ರೀತಿಯ ಸೌಲಭ್ಯ ಪಡೆದುಕೊಂಡ ಬಳಿಕ ಈಗ ನನ್ನ ಗಮನಕ್ಕೆ ತರದೇ ಮತ್ತೊಂದು ಮದುವೆ ಮಾಡಲು ಮುಂದಾಗಿದ್ದಾರೆ ಎಂದು ದೂರಿದ್ದಾರೆ.
ನನಗೆ ನ್ಯಾಯ ಬೇಕು
ಕೆಲ ದಿನಗಳ ಹಿಂದೆ ಹಿರೇಬಾಗೇವಾಡಿ ಪ್ರದೇಶದಲ್ಲಿ ತಮ್ಮ ಮೇಲೆ ಹಲ್ಲೆ ನಡೆಸಿ, ಬಂಗಾರ ಹಾಗೂ ಹಣ ಸುಲಿಗೆ ಮಾಡಲಾಗಿದೆ. ಈ ಕುರಿತು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ನನಗೆ ನ್ಯಾಯ ಬೇಕು. ನನ್ನ ಪತ್ನಿಯ ಮತ್ತೊಂದು ಮದುವೆಯನ್ನು ತಡೆಯಬೇಕು ಎಂದು ವೆಂಕಟೇಶ ರಾಠೋಡ ಅವರು ಮನವಿ ಮಾಡಿಕೊಂಡಿದ್ದಾರೆ.

