ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ಪ್ರಕಾರ, ಕಾಂಗ್ರೆಸ್ ಪಕ್ಷದ ಶಕ್ತಿ ಅಹಿಂದ ವರ್ಗಗಳಲ್ಲಿದ್ದು, ಅವರ ವಿಶ್ವಾಸ ಗಳಿಸುವುದರ ಮೇಲೆ ಸರ್ಕಾರದ ಭವಿಷ್ಯ ನಿಂತಿದೆ. ಮುಖ್ಯಮಂತ್ರಿ ಆಯ್ಕೆ ಮತ್ತು ಬಿ.ಕೆ. ಹರಿಪ್ರಸಾದ್ ನೇಮಕದ ಬಗ್ಗೆಯೂ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಜೂ.5): ‘ಕಾಂಗ್ರೆಸ್ ಶಕ್ತಿ ಅಹಿಂದ ವರ್ಗಗಳಲ್ಲಿದೆ. ಅಹಿಂದ ಸಮುದಾಯಗಳನ್ನು ಎಷ್ಟರಮಟ್ಟಿಗೆ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಾರೆ ಎಂಬುದರ ಮೇಲೆ ಪಕ್ಷ ಹಾಗೂ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ’ ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ.
ಗುರುವಾರ ಸುದ್ದಿಗಾರರ ಜತೆಗೆ ಮಾತನಾಡಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ನೇತೃತ್ವದಲ್ಲಿ, ‘ಸರ್ಕಾರ ಮತ್ತು ಪಕ್ಷ ಉತ್ತಮ ಪ್ರದರ್ಶನ ನೀಡಿದರೆ ಜನರ ಬೆಂಬಲ ದೊರೆಯುತ್ತದೆ. ಇಲ್ಲದಿದ್ದರೆ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ’ ಎಂದು ಎಚ್ಚರಿಸಿದರು.
ಹೈಕಮಾಂಡ್ ಆಯ್ಕೆ ಕೆಟ್ಟದ್ದು ಅಂತ ಹೇಳಲಾಗಲ್ಲ:
ಮುಖ್ಯಮಂತ್ರಿ ಆಯ್ಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಜಣ್ಣ, ಹೈಕಮಾಂಡ್ ನಿರ್ಧಾರ ಮಾಡಿದ ಮೇಲೆ ಬ್ಯಾಡ್ ಚಾಯ್ಸ್ (ಕೆಟ್ಟ ಆಯ್ಕೆ) ಅಂತ ಹೇಳಲಾಗಲ್ಲ. ಆಯ್ಕೆಗೂ ಮುನ್ನ ಕೇಳಿದ್ದರೆ, ಗುಡ್ (ಒಳ್ಳೆಯದು) ಯಾವುದು ಮತ್ತು ಬ್ಯಾಡ್ (ಕೆಟ್ಟದ್ದು) ಯಾವುದು ಅಂತ ಹೇಳಬಹುದು’ ಎಂದರು.
ಇದೇ ವೇಳೆ ಬಿ.ಕೆ.ಹರಿಪ್ರಸಾದ್ ಆಯ್ಕೆ ಬಗ್ಗೆ ಕೇಳಿದಾಗ, ‘ಆಯ್ಕೆ ಬಹಳ ಸಂತೋಷ ತರುವಂತಹದ್ದು. ನಾವಿಬ್ಬರೂ ಜತೆಯಲ್ಲೇ ಯುವ ಕಾಂಗ್ರೆಸ್ನಲ್ಲಿ ಕೆಲಸ ಮಾಡಿದ್ದೇವೆ. ಹೋರಾಟದಿಂದ ಬಂದ ಅವರು, ಸಾಕಷ್ಟು ಅನುಭವ ಹೊಂದಿದ್ದಾರೆ’ ಎಂದರು.
