ಕ್ರಿಶ್ಚಿಯನ್ ಧರ್ಮ ಪಾಲನೆ: ನಾಲ್ವರು ಸಿಬ್ಬಂದಿಯನ್ನು ವಜಾಗೊಳಿಸಿದ ಟಿಟಿಡಿ
ತಿರುಮಲ ತಿರುಪತಿ ದೇವಸ್ಥಾನ (TTD) ನಾಲ್ವರು ಸಿಬ್ಬಂದಿಯನ್ನು ಕ್ರಿಶ್ಚಿಯನ್ ಧರ್ಮ ಪಾಲಿಸುತ್ತಿದ್ದ ಕಾರಣಕ್ಕೆ ವಜಾಗೊಳಿಸಿದೆ. ಹಿಂದೂ ಧಾರ್ಮಿಕ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡು ಅನ್ಯ ಧರ್ಮ ಪಾಲಿಸುವುದು ಸಾಂಸ್ಥಿಕ ನೀತಿಯ ಉಲ್ಲಂಘನೆ ಎಂದು ಟಿಟಿಡಿ ಹೇಳಿದೆ.

ತಿರುಮಲ ತಿರುಪತಿ ದೇವಸ್ಥಾನ (TTD) ಆಡಳಿತ ಮಂಡಳಿ ನಾಲ್ವರು ಸಿಬ್ಬಂದಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ. ಅಮಾನುತುಗೊಂಡಿರುವ ನಾಲ್ವರು ಉದ್ಯೋಗಿಗಳು ಕ್ರಿಶ್ಚಿಯನ್ ಧರ್ಮ ಅನುಸರಿಸುತ್ತಿದ್ದರು ಎಂದು ಟಿಟಿಡಿ ಹೇಳಿದೆ.
ಹಿಂದೂ ಧಾರ್ಮಿಕ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡು ಅನ್ಯ ಧರ್ಮ ಪಾಲಿಸೋದು ಟ್ರಸ್ಟ್ನ ಸಾಂಸ್ಥಿಕ ನೀತಿ ಸಂಹಿತೆಯ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ ಎಂದು ಟಿಟಿಡಿ ಹೇಳಿದೆ. ವಿಜಿಲೆನ್ಸ್ ವರದಿ ಮತ್ತು ಆಂತರಿಕ ತನಿಖೆಯ ನಂತರವೇ ನಾಲ್ವರು ಉದ್ಯೋಗಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಅಮಾನತುಗೊಂಡ ನೌಕರರು ಹಿಂದೂ ಧಾರ್ಮಿಕ ಸಂಸ್ಥೆಯಲ್ಲಿ ಕೆಲಸ ಮಾಡುವಾಗ ನಿರೀಕ್ಷಿತ ಧಾರ್ಮಿಕ ನಡವಳಿಕೆಯನ್ನು ಅನುಸರಿಸಲು ವಿಫಲರಾಗಿದ್ದಾರೆ. ನಿಯಮಗಳ ಪ್ರಕಾರ ನಾಲ್ವರನ್ನು ಅಮಾನತುಗೊಳಿಸಲಾಗಿದೆ ಎಂದು ಟ್ರಸ್ಟ್ ಹೇಳುತ್ತದೆ.
ಅಮಾನತುಗೊಂಡ ಅಧಿಕಾರಿಗಳ ವಿವರ
- ಬಿ. ಅಲಿಜರ್ - ಉಪ ಕಾರ್ಯನಿರ್ವಾಹಕ ಎಂಜಿನಿಯರ್ (ಗುಣಮಟ್ಟ ನಿಯಂತ್ರಣ ಅಧಿಕಾರಿ)
- ಎಸ್. ರೋಸ್ಸಿ - ಸ್ಟಾಫ್ ನರ್ಸ್, BIRD ಆಸ್ಪತ್ರೆ
- ಎಂ.ಪ್ರೇಮಾವತಿ - ಗ್ರೇಡ್-1 ಫಾರ್ಮಾಸಿಸ್ಟ್, ಬಿಆರ್ಡಿ ಆಸ್ಪತ್ರೆ
- ಡಾ. ಜಿ. ಅಸುಂತ - ಎಸ್ವಿ ಆಯುರ್ವೇದ ಫಾರ್ಮಸಿ
2007ರಲ್ಲಿ ನಿಯಮ ಬದಲಾವಣೆ
ಹಿಂದೂ ಧಾರ್ಮಿಕ ಸಂಸ್ಥೆಯಲ್ಲಿ ಕೆಲಸ ಮಾಡುವ ನೌಕರರು ಸಂಸ್ಥೆಯ ಸಂಪ್ರದಾಯಗಳು ಮತ್ತು ಮೌಲ್ಯಗಳಿಗೆ ಅನುಗುಣವಾಗಿ ವರ್ತಿಸಬೇಕು. ಶಿಸ್ತು ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 2007ರಲ್ಲಿ TTD ಸೇವಾ ನಿಯಮಗಳನ್ನು ಬದಲಾವಣೆ ಮಾಡಲಾಗಿದ್ದು, ಹಿಂದೂಯೇತರರ ಹೊಸ ನೇಮಕಾತಿ ನಿಷೇಧಿಸಲಾಗಿದೆ. ಈ ನಿಯಮ ಬದಲಾವಣೆಗೂ ನೇಮಕಗೊಂಡ ಸಿಬ್ಬಂದಿ ಇನ್ನೂ ಸೇವೆ ಸಲ್ಲಿಸುತ್ತಿದ್ದಾರೆ.
ಸದ್ಯ ಸೇವೆ ಟಿಟಿಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿಂದೂಯೇತರ ನೌಕರರನ್ನು ತೆಗೆದು ಹಾಕಲಾಗುವುದು. ಇವರನ್ನು ಇತರ ಸರ್ಕಾರಿ ಇಲಾಖೆಗಳಿಗೆ ವರ್ಗಾವಣೆ ಮಾಡಲಾಗುವುದು ಎಂದು ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಸ್ಪಷ್ಟಪಡಿಸಿದ್ದಾರೆ.
ಟಿಟಿಡಿಯ ಪ್ರಸ್ತುತ ನಿಯಮಗಳು
- ಹಿಂದೂ ಧರ್ಮ ಪಾಲನೆ ಮಾಡುವ ಜನರು ಮಾತ್ರ ಟಿಟಿಡಿ ಸಂಸ್ಥೆಯಲ್ಲಿ ಕೆಲಸ ಮಾಡಲುಅ ಅರ್ಹರು.
- ಎಲ್ಲಾ ಉದ್ಯೋಗಿಗಳು ಹಿಂದೂ ಧರ್ಮ ಮತ್ತು ದೇವಾಲಯದ ಸಂಪ್ರಾದಯ ಗೌರವಿಸಬೇಕು.
- ಹಿಂದೂಯೇತರ ಉದ್ಯೋಗಿಗಳನ್ನು ರಾಜ್ಯ ಸರ್ಕಾರದ ಇತರ ಇಲಾಖೆಗಳಿಗೆ ವರ್ಗಾಯಿಸುವ ಕುರಿತು ಅಥವಾ ಸ್ವಯಂಪ್ರೇರಿತ ನಿವೃತ್ತಿ (ವಿಆರ್ಎಸ್) ನೀಡುತ್ತಿದೆ.