- Home
- News
- India News
- Breaking: ದಳಪತಿ ವಿಜಯ್ಗೆ ಕೊನೆಗೂ ಸಿಕ್ತು ರಾಜ್ಯಪಾಲರ ಗ್ರೀನ್ಸಿಗ್ನಲ್, ನಾಳೆ 11 ಗಂಟೆಗೆ ಪ್ರಮಾಣವಚನ ಸ್ವೀಕಾರ
Breaking: ದಳಪತಿ ವಿಜಯ್ಗೆ ಕೊನೆಗೂ ಸಿಕ್ತು ರಾಜ್ಯಪಾಲರ ಗ್ರೀನ್ಸಿಗ್ನಲ್, ನಾಳೆ 11 ಗಂಟೆಗೆ ಪ್ರಮಾಣವಚನ ಸ್ವೀಕಾರ
ತಮಿಳಗ ವೆಟ್ರಿ ಕಳಗಂ (TVK) ಸಂಸ್ಥಾಪಕ, ನಟ ವಿಜಯ್ ಅವರಿಗೆ ಸರ್ಕಾರ ರಚಿಸಲು ರಾಜ್ಯಪಾಲರು ಅಧಿಕೃತವಾಗಿ ಅನುಮತಿ ನೀಡಿದ್ದಾರೆ. ಈ ಐತಿಹಾಸಿಕ ಬೆಳವಣಿಗೆಯೊಂದಿಗೆ, ತಮಿಳುನಾಡಿನಲ್ಲಿ 62 ವರ್ಷಗಳ ದ್ರಾವಿಡ ಪಕ್ಷಗಳ ಆಡಳಿತಕ್ಕೆ ತೆರೆಬಿದ್ದಂತಾಗಿದೆ.

ಸರ್ಕಾರ ರಚಿಸಲು ರಾಜ್ಯಪಾಲರ ಅನುಮತಿ
ತಮಿಳುನಾಡು ರಾಜಕೀಯದಲ್ಲಿ ಸೃಷ್ಟಿಯಾಗಿದ್ದ ಸುದೀರ್ಘ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ತಮಿಳಗ ವೆಟ್ರಿ ಕಳಗಂ (TVK) ಸಂಸ್ಥಾಪಕ ಮತ್ತು ಸೂಪರ್ ಸ್ಟಾರ್ ವಿಜಯ್ ಅವರು ರಾಜ್ಯದಲ್ಲಿ ಸರ್ಕಾರ ರಚಿಸಲು ರಾಜ್ಯಪಾಲ ಆರ್.ವಿ. ಅರ್ಲೇಕರ್ ಅಧಿಕೃತವಾಗಿ ಸಮ್ಮತಿ ನೀಡಿದ್ದಾರೆ.
ನಾಳೆ ಅಧಿಕಾರ ಸ್ವೀಕಾರ
ವಿಜಯ್ ಅವರು ನಾಳೆ (ಶನಿವಾರ) ಬೆಳಿಗ್ಗೆ 11 ಗಂಟೆಗೆ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇಂದು ಸಂಜೆ ರಾಜ್ಯಪಾಲರನ್ನು ಭೇಟಿಯಾದ ವಿಜಯ್, ತಮ್ಮ ಮೈತ್ರಿಕೂಟಕ್ಕೆ ಇರುವ 118 ಶಾಸಕರ ಬೆಂಬಲದ ಪತ್ರವನ್ನು ಹಸ್ತಾಂತರಿಸಿದ್ದರು. ಸಂಖ್ಯಾಬಲದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ರಾಜ್ಯಪಾಲರು, ಸರ್ಕಾರ ರಚನೆಗೆ ಆಹ್ವಾನ ನೀಡಿದ್ದಾರೆ.
62 ವರ್ಷಗಳ ದ್ರಾವಿಡ ರಾಜಕಾರಣಕ್ಕೆ ಕೊನೆ
ಈ ಐತಿಹಾಸಿಕ ಕ್ಷಣದೊಂದಿಗೆ ತಮಿಳುನಾಡಿನಲ್ಲಿ 62 ವರ್ಷಗಳ ದ್ರಾವಿಡ ಪಕ್ಷಗಳ ಏಕಸ್ವಾಮ್ಯ ಅಂತ್ಯಗೊಂಡು, ಹೊಸ ಮೈತ್ರಿ ಸರ್ಕಾರದ ಆಡಳಿತ ಆರಂಭವಾಗಲಿದೆ. ನಾಳೆಯ ಸಮಾರಂಭದಲ್ಲಿ ವಿಜಯ್ ಅವರೊಂದಿಗೆ ಮಿತ್ರಪಕ್ಷಗಳಾದ ಕಾಂಗ್ರೆಸ್, ವಿಸಿಕೆ ಮತ್ತು ಎಡಪಕ್ಷಗಳ ಕೆಲವು ನಾಯಕರು ಕೂಡ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ.
ಚೆನ್ನೈನಲ್ಲಿ ಹಬ್ಬದ ವಾತಾವರಣ
ಚೆನ್ನೈನಲ್ಲಿ ಈಗ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಲಕ್ಷಾಂತರ ಅಭಿಮಾನಿಗಳು ತಮ್ಮ 'ದಳಪತಿ' ಮುಖ್ಯಮಂತ್ರಿ ಆಗುವುದನ್ನು ಸಂಭ್ರಮಿಸಲು ಸಜ್ಜಾಗಿದ್ದಾರೆ. ಇದರ ನಡುವೆ ಟಿವಿಕೆ ಸದಸ್ಯರು ರಾಜ್ಯಪಾಲರು ಸರ್ಕಾರ ರಚಿಸಲು ಅನುಮತಿ ನೀಡದ ಕಾರಣಕ್ಕೆ ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು. ‘ಪಕ್ಷವು 118 ಸಹಿಗಳನ್ನು ಸ್ವೀಕರಿಸಿದ್ದು, ನಾಳೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ’ ಎಂದು ಹಿರಿಯ ಟಿವಿಕೆ ನಾಯಕ ಕೆ. ಸೆಂಗೋಟ್ಟಯನ್ ತಿಳಿಸಿದ್ದಾರೆ.
ಪ್ರಮಾಣವಚನ ಕಾರ್ಯಕ್ರಮದಲ್ಲಿ ಖರ್ಗೆ, ರಾಹುಲ್ ಗಾಂಧಿ
ವಿಜಯ್ ಜೋಸೆಫ್ ಅವರ ಟಿವಿಕೆ ಪಕ್ಷಕ್ಕೆ ಮೊದಲಿಗರಾಗಿ ಬೆಂಬಲ ನೀಡಿದ್ದ ಕಾಂಗ್ರೆಸ್ ಪಕ್ಷದಿಂದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ

