ಉಪವಾಸ ಮುರಿದು ಸೋಂಕಿತರ ಪ್ರಾಣ ಕಾಪಾಡಿದ ಮುಸ್ಲಿಂ ವ್ಯಕ್ತಿ!
ಕೊರೋನಾದ ಭಯ ಜನರಲ್ಲಿ ಅದೆಷ್ಟರ ಮಟ್ಟಿಗೆ ಬೇರೂರಿದೆ ಎಂದರೆ ಅನೇಕ ಮಂದಿ ತಮ್ಮ ನೆರೆ ಮನೆಯವರೊಂದಿಗೂ ಮಾತನಾಡುತ್ತಿಲ್ಲ. ಹೀಗಿರುವಾಗಲೇ ರಾಜಸ್ಥಾನದ ಉದ್ಪುರದಿಂದ ನಡೆದ ಘಟನೆ ಅನೇಕ ಮಂದಿಯ ಮನ ಗೆದ್ದಿದೆ. ಈ ಘಟನೆ ಮಾನವೀಯತೆಗಿಂತ ದೊಡ್ಡ ಧರ್ಮವಿಲ್ಲ ಎಂಬುವುದನ್ನು ಸಾಬೀತುಪಡಿಸಿದೆ. ಹೌದು ಇಲ್ಲೊಬ್ಬ ಮುಸ್ಲಿಂ ವ್ಯಕ್ತಿ ರಂಜಾನ್ ತಿಂಗಳ ಮಧ್ಯೆ ತನ್ನ ಉಪವಾಸ ಮುರಿದು ಸೋಂಕಿತರ ಪ್ರಾಣ ಕಾಪಾಡಿದ್ದಾರೆ. ಪ್ರತಿಯೊಬ್ಬರೂ ಈ ವ್ಯಕ್ತಿಯ ನಡೆಗೆ ಭೇಷ್ ಎಂದಿದ್ದಾರೆ.
ಉಪವಾಸ ಬಿಟ್ಟು ಪ್ಲಾಸ್ಮಾ ದಾನ: ಈ ಮಾನವೀಯ ನಡೆ ಅನುಸರಿಸಿದ ವ್ಯಕ್ತಿಯ ಹೆಸರು ಅಕೀಲ್ ಮನ್ಸೂರಿ. ಸೋಂಕಿತರ ಪ್ರಾಣ ಕಾಪಾಡಲು ಮುಂದೆ ಬಂದ ಈ ಯುವಕ ಒಂದು ಕ್ಷಣವೂ ತಡ ಮಾಡದೇ ರಂಜಾನ್ ತಿಂಗಳಲ್ಲಿ ಉಪವಾಸ ಬಿಟ್ಟು ಪ್ಲಾಸ್ಮಾ ದಾನ ಮಾಡಿ ಜನರ ಪ್ರಾಣ ಕಾಪಾಡಿದ್ದಾರೆ. ಅವರು ಇದಕ್ಕೂ ಮೊದಲು ಅನೇಕ ಬಾರಿ ಇದೇ ರೀತಿ ಅನೇಕರ ಪ್ರಾಣ ಕಾಪಾಡಿದ್ದಾರೆ.
ಕಳೆದ ವರ್ಷ ಕೊರೋನಾ ಮಣಿಸಿದ್ದ ಮನ್ಸೂರಿ: ನಾಲ್ಕು ದಿನದಿಂದ ಉದಯಪುರದ ಪೆಸಿಫಿಕ್ ಆಸ್ಪತ್ರೆಯಲ್ಲಿ 36 ವರ್ಷದ ನಿರ್ಮಲಾ ಹಾಗೂ 30 ವರ್ಷದ ಅಲ್ಕಾರಿಗೆ ಪ್ಲಾಸ್ಮಾದ ಅಗತ್ಯವಿತ್ತು. ಆಸ್ಪತ್ರೆ ಹಾಗೂ ಕುಟುಂಬ ಸದಸ್ಯರಿಂದ ಪ್ಲಾಸ್ಮಾ ಸಿಗುತ್ತಿರಲಿಲ್ಲ. ಈ ವಿಚಾರ ಮನ್ಸೂರಿಗೆ ತಿಳಿದ ಕೂಡಲೇ ಆಸ್ಪತ್ರೆಗೆ ತಲುಪಿ ಖುದ್ದು ದಾನ ಮಾಡಿದ್ದಾರೆ. 32 ವರ್ಷದ ಮನ್ಸೂರಿ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಕೊರೋನಾದಿಂದ ಚೇತರಿಸಿಕೊಂಡಿದ್ದರು.
ಆಸ್ಪತ್ರೆಯಲ್ಲೇ ಉಪವಾಸ ಮುರಿದರು: ಆಸ್ಪತ್ರೆ ತಲುಪಿದ ಮನ್ಸೂರಿ ಬಳಿ ವೈದ್ಯರು ನೀವೇನಾದರೂ ತಿನ್ನಬೇಕು. ಇದಾದ ಬಳಿಕವೇ ಪ್ಲಾಸ್ಮಾ ಪಡೆಯಲು ಸಾಧ್ಯ ಎಂದಿದ್ದಾರೆ. ಹೀಗಿರುವಾಗ ಮನ್ಸೂರಿ ಒಂದು ಕ್ಷಣವೂ ಯೋಚಿಸದೇ ತನ್ನ ಉಪವಾಸ ಬಿಟ್ಟಿದ್ದಾರೆ ಹಾಗೂ ಪ್ಲಾಸ್ಮಾ ದಾನ ಮಾಡಿದ್ದಾರೆ.
ಇದು ಅಲ್ಲಾಹುವಿನ ನಿಜವಾದ ಆರಾಧನೆ: ಪ್ಲಾಸ್ಮಾ ದಾನ ಮಾಡಿದ ಬಳಿಕ ಮಾತನಾಡಿದ ಮನ್ಸೂರಿ ನನ್ನ ಪಾಲಿಗೆ ಮಾನವೀಯತೆಗಿಂತ ದೊಡ್ಡ ಬೇರೊಂದಿಲ್ಲ. ಅಗತ್ಯದಲ್ಲಿರುವವರ ಸಹಾಯಕ್ಕೆ ಧಾವಿಸಬೇಕೆಂಬುವುದೇ ಅಲ್ಲಾಹು ಹೇಳಿಕೊಟ್ಟ ಮಾರ್ಗವಾಗಿತ್ತು. ತಾನು ಹಲವಾರು ಬಾರಿ ರಕ್ತದಾನ ಮಾಡಿದ್ದೇನೆ ಎಂದೂ ಅವರು ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮನ್ಸೂರಿಯ ಈ ಮಾನವೀಯ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.