EMI ಪಾವತಿಸದ್ದಕ್ಕೆ ಪತ್ನಿಯನ್ನು ಬಲವಂತವಾಗಿ ಕರೆದುಕೊಂಡು ಹೋದ ಬ್ಯಾಂಕ್ ಸಿಬ್ಬಂದಿ
ತಿಂಗಳ ಸಾಲದ ಕಂತು ಪಾವತಿಸದ್ದಕ್ಕೆ ಬ್ಯಾಂಕ್ ಸಿಬ್ಬಂದಿ ಸಾಲಗಾರನ ಪತ್ನಿಯನ್ನು ಬಲವಂತವಾಗಿ ಬ್ಯಾಂಕ್ಗೆ ಕರೆದುಕೊಂಡು ಹೋಗಿ ಬಂಧಿಸಿದ ಘಟನೆ ನಡೆದಿದೆ. ಪೊಲೀಸರು ಮಧ್ಯಪ್ರವೇಶಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ.

ಲಕ್ನೋ: ಉತ್ತರ ಪ್ರದೇಶದಿಂದ ಆಘಾತಕಾರಿ ವರದಿಯೊಂದು ಬಂದಿದೆ. ತಿಂಗಳ ಸಾಲದ ಕಂತು ಪಾವತಿಸದ್ದಕ್ಕೆ ಬ್ಯಾಂಕ್ ಸಿಬ್ಬಂದಿ ಸಾಲಗಾರನ ಮನೆಗೆ ತೆರಳಿ, ಆತನ ಪತ್ನಿಯನ್ನು ಬಲವಂತವಾಗಿ ಬ್ಯಾಂಕ್ಗೆ ಕರೆದುಕೊಂಡು ಬಂದಿದ್ದಾರೆ.
ಖಾಸಗಿ ಬ್ಯಾಂಕ್ ಸಿಬ್ಬಂದಿ ನಡೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. EMI ಪಾವತಿಸುವರೆಗೂ ಮಹಿಳೆಯನ್ನು ಬಂಧಿಯಾಗಿರಿಸಿಕೊಳ್ಳಲಾಗಿತ್ತು ಎಂದು ವರದಿಯಾಗಿದೆ. ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಮೋಂಠ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪೊಲೀಸರಿಂದ ಮಹಿಳೆಯ ರಕ್ಷಣೆ
ಮಹಿಳೆಯ ಪತಿ ರವೀಂದ್ರ ವರ್ಮಾ 112 ಸಂಖ್ಯೆಗೆ ಕರೆ ಮಾಡಿ ತನ್ನ ಪತ್ನಿಯನ್ನು ಬ್ಯಾಂಕ್ ಸಿಬ್ಬಂದಿ ಬಂಧಿಯಾಗಿರಿಸಿಕೊಂಡಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮಹಿಳೆಯನ್ನು ರಕ್ಷಿಸಿದ್ದಾರೆ. ಬ್ಯಾಂಕ್ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ರವೀಂದ್ರ ವರ್ಮಾ ಪತ್ನಿ ಪೂಜಾ ವರ್ಮಾ ಅವರನ್ನು ಮಧ್ಯಾಹ್ನ ಸುಮಾರು 12 ಗಂಟೆಗೆ ಕರೆದುಕೊಂಡು ಬರಲಾಗಿತ್ತು. ಸುಮಾರು 4 ಗಂಟೆ ಪೂಜಾ ವರ್ಮಾ ಅವರನ್ನು ಬಂಧಿಯಾಗಿರಿಸಿಕೊಳ್ಳಲಾಗಿತ್ತು ಎಂದು ರವೀಂದ್ರ ವರ್ಮಾ ಆರೋಪ ಮಾಡಿದ್ದಾರೆ.
ಪಾವತಿಸಿದ್ದು 11 ಕಂತು, ಬ್ಯಾಂಕ್ ಸಿಬ್ಬಂದಿ 8 ಅಂತಿದ್ದಾರೆ
EMI ಪಾವತಿಸುವರೆಗೂ ನಿಮ್ಮನ್ನು ಮನೆಗೆ ಕಳುಹಿಸಲ್ಲ ಎಂದು ಬ್ಯಾಂಕ್ ಸಿಬ್ಬಂದಿ ಹೇಳಿದ್ರು ಎಂದು ಪೂಜಾ ವರ್ಮಾ ಆರೋಪಿಸಿದ್ದಾರೆ. ಪೊಲೀಸರು ಆಗಮಿಸಿದ ಬಳಿಕ ನನ್ನನ್ನು ಕಳುಹಿಸಲಾಯ್ತು. ಖಾಸಗಿ ಬ್ಯಾಂಕ್ನಿಂದು 40 ಸಾವಿರ ರೂಪಾಯಿ ಸಾಲ ಪಡೆದುಕೊಳ್ಳಲಾಗಿತ್ತು. ಈವರೆಗೆ 11 ಕಂತುಗಳನ್ನು ಪಾವತಿಸಲಾಗಿದೆ. ಆದ್ರೆ ಬ್ಯಾಂಕ್ ಸಿಬ್ಬಂದಿ ಕೇವಲ 8 ಕಂತು ಎಂದು ಸುಳ್ಳು ಹೇಳುತ್ತಿದ್ದಾರೆ. ಬ್ಯಾಂಕ್ನ ಏಜೆಂಟ್ಗಳಾದ ಕೌಶಲ್ ಮತ್ತು ಧರ್ಮೇಂದ್ರ 3 ಕಂತುಗಳನ್ನು ಲಪಟಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಬ್ಯಾಂಕ್ ಸಿಬ್ಬಂದಿ ಸ್ಪಷ್ಟನೆ
ಮಹಿಳೆಯೇ ಸ್ವಯಿಚ್ಛೆಯಿಂದ ಬ್ಯಾಂಕ್ಗೆ ಬಂದಿದ್ದರು. ಯಾರು ಸಹ ಮಹಿಳೆಯನ್ನು ಬಲವಂತವಾಗಿ ಕರೆದುಕೊಂಡು ಬಂದಿರಲಿಲ್ಲ ಮತ್ತು ಬಂಧಿಯನ್ನಾಗಿ ಮಾಡಿಕೊಂಡಿರಲಿಲ್ಲ. ಮಹಿಳೆ ಪತಿ ಕೆಲವು ತಿಂಗಳಿನಿಂದ ಇಎಂಐ ಪಾವತಿಸಿರಲಿಲ್ಲ. ಹಾಗಾಗಿ ಶಾಖೆಗೆ ಬರುವಂತೆ ಸೂಚನೆ ನೀಡಲಾಗಿತ್ತು ಎಂದು ಬ್ಯಾಂಕ್ ಮ್ಯಾನೇಜರ್ ಅನುಜ್ ಕುಮಾರ್ ಹೇಳಿದ್ದಾರೆ.
ಇಬ್ಬರ ಕಡೆಯಿಂದಲೂ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಇಬ್ಬರೊಂದಿಗೆ ಮಾತುಕತೆ ನಡೆಸಲಾಗುತ್ತಿದ್ದು, ಮಹಿಳೆಯನ್ನು ಮನೆಗೆ ಕಳುಹಿಸಲಾಗಿದೆ. ಶಾಂತಿಯುತವಾಗಿ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಬ್ಯಾಂಕ್ ಸಿಬ್ಬಂದಿ ಮತ್ತು ಪೂಜಾ ವರ್ಮಾ ಇತ್ಯರ್ಥಕ್ಕೆ ಬಂದು ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.