Photos| ಭೋಪಾಲ್ ಆಸ್ಪತ್ರೆಯಲ್ಲಿ ಅಗ್ನಿ ದುರಂತ: 4 ಮಕ್ಕಳು ಬಲಿ, ಹಲವರಿಗೆ ಗಾಯ
ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನ ಅತಿದೊಡ್ಡ 'ಕಮಲಾ ನೆಹರೂ ಆಸ್ಪತ್ರೆ' ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಮೀಡಿಯಾ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಸೋಮವಾರ ಸಂಭವಿಸಿದ ಬೆಂಕಿಯಲ್ಲಿ ನಾಲ್ಕು ಮಕ್ಕಳು ಸಾವನ್ನಪ್ಪಿದ್ದಾರೆ. ಅವರಲ್ಲಿ ಮೂವರು ಹೊಗೆಯಲ್ಲಿ ಉಸಿರುಗಟ್ಟಿದರು. ಮೂರನೇ ಮಹಡಿಯಲ್ಲಿರುವ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ (ಎನ್ಐಸಿಯು) ಬೆಂಕಿ ಕಾಣಿಸಿಕೊಂಡಿದೆ. ಆಗ ವಾರ್ಡ್ನಲ್ಲಿ 40 ಮಕ್ಕಳಿದ್ದು, ಅವರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಸರ್ಕಾರದ ನಿರ್ಲಕ್ಷ್ಯಕ್ಕೆ ಈ ಸಾವು ನೋವು ಸಾಕ್ಷಿಯಾಗಿದೆ.
ಮಧ್ಯಪ್ರದೇಶದ ಕಮಲಾ ನೆಹರೂ ಸರ್ಕಾರಿ ಮಕ್ಕಳ ಆಸ್ಪತ್ರೆಯಲ್ಲಿ ಸೋಮವಾರ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡಕ್ಕೆ ನಾಲ್ಕು ಮಕ್ಕಳು ಬಲಿಯಾಗಿದ್ದಾರೆ. ಅಲ್ಲದೆ 7ಕ್ಕೂ ಹೆಚ್ಚು ಮಕ್ಕಳಿಗೆ ಸುಟ್ಟಗಾಯಗಳಾಗಿವೆ.
ರಾಜಧಾನಿ ಭೋಪಾಲ್ನಲ್ಲಿರುವ ಐಸಿಯು ಒಳಗೊಂಡ ಆಸ್ಪತ್ರೆ ಕಟ್ಟಡದ 3ನೇ ಮಹಡಿಯಲ್ಲಿ ರಾತ್ರಿ ಸುಮಾರು 9 ಗಂಟೆಗೆ ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆ ಸ್ಥಳಕ್ಕೆ ದೌಡಾಯಿಸಿದ 8-10 ವಾಹನಗಳಲ್ಲಿ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ರಕ್ಷಣೆಯಲ್ಲಿ ತೊಡಗಿದರು.
21 ವರ್ಷಗಳಷ್ಟು ಹಳೆಯದಾದ ಈ ಕಟ್ಟಡದಲ್ಲಿನ ಅಗ್ನಿಶಾಮಕ ವ್ಯವಸ್ಥೆ ನಿರ್ವಹಣೆಯ ಕೊರತೆಯಿಂದ ನಿಷ್ಕ್ರಿಯವಾಗಿವೆ. ಸಂಪೂರ್ಣ ಭದ್ರತಾ ವ್ಯವಸ್ಥೆಯು ಕೇವಲ ಒಬ್ಬ ಅಗ್ನಿಶಾಮಕ ಮೌಲ್ಯಮಾಪಕನ ಮೇಲೆ ಅವಲಂಬಿತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಾಗ 15 ನಿಮಿಷಗಳ ಕಾಲ ಆತಂಕ ಮುಂದುವರಿದಿತ್ತು.
ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಆಸ್ಪತ್ರೆಗೆ ಧಾವಿಸಿದರು. ನಿರ್ಲಕ್ಷ್ಯದ ಪ್ರಮಾಣವನ್ನು ನೋಡಿ ಹಾಗೂ ಅಮಾಯಕ ಮಕ್ಕಳು ಬೆಂಕಿಗೆ ಆಹುತಿಯಾದ ಬಳಿ ಸರ್ಕಾರ ಎಚ್ಚೆತ್ತುಕೊಂಡಿತು. ಅಷ್ಟರಲ್ಲಾಗಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಪೋಷಕರು ಗಾಬರಿಗೊಂಡು, ಆಸ್ಪತ್ರೆಯ ಮುಂದೆ ಜಮಾಯಿಸಿದರು.
ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ (ಎನ್ಐಸಿಯು) ಬೆಂಕಿ ಕಾಣಿಸಿಕೊಂಡಾಗ ಸ್ಟಾಫ್ ನರ್ಸ್ಗಳು ಮತ್ತು ವೈದ್ಯರು ಹಾಜರಿದ್ದರು. ಮಕ್ಕಳನ್ನು ರಕ್ಷಿಸಲು ವಾರ್ಡ್ನಲ್ಲಿದ್ದ ಗಾಜು ಒಡೆದು ಹೊಗೆ ಹೊರ ಹೋಗುವಂತೆ ಮಾಡಿದ್ದಾರೆ.
Bhopal Hospital Fire
ಈ ಘಟನೆಗೆ ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು, ಈ ದುರಂತಕ್ಕೆ ಕಾರಣವೇನಿರಬಹುದು ಎಂಬ ಪತ್ತೆಗೆ ಉನ್ನತ ಹಂತದ ತನಿಖೆಗೆ ಆದೇಶಿಸಿದ್ದಾರೆ. ಮೃತ ಮಕ್ಕಳ ಸಂಬಂಧಿಕರಿಗೆ ಸರ್ಕಾರ ತಲಾ 4 ಲಕ್ಷ ರೂಪಾಯಿ ನೆರವು ಘೋಷಿಸಿದೆ.