- Home
- News
- India News
- ಎಂಜಿಆರ್ ಬಂಗಲೆ ಪಟ್ಟಾ ಹಕ್ಕಿನಿಂದ ಕುಟುಂಬದವರ ಹೆಸರು ಮಾಯ, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಾರಸುದಾರ!
ಎಂಜಿಆರ್ ಬಂಗಲೆ ಪಟ್ಟಾ ಹಕ್ಕಿನಿಂದ ಕುಟುಂಬದವರ ಹೆಸರು ಮಾಯ, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಾರಸುದಾರ!
ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂಜಿಆರ್ರ ತಿರುಚ್ಚಿಯಲ್ಲಿರುವ 25 ಕೋಟಿ ಮೌಲ್ಯದ ಬಂಗಲೆಯ ಪಟ್ಟಾವನ್ನು ಕಾನೂನುಬಾಹಿರವಾಗಿ ಎಐಎಡಿಎಂಕೆ ಪಕ್ಷಕ್ಕೆ ಬರೆಯಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ನಿವೃತ ಸರ್ವೆಯರ್ ಒಬ್ಬರು ಜಿಲ್ಲಾ ಕಚೇರಿಯಲ್ಲಿ ಇದನ್ನು ಪ್ರಶ್ನಸಿದ್ದಾರೆ.

ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂಜಿ ರಾಮಚಂದ್ರನ್ ತಿರುಚ್ಚಿಯಲ್ಲಿರುವ 25 ಕೋಟಿ ಮೌಲ್ಯದ ಬಂಗಲೆಯ ಪಟ್ಟಾವನ್ನು ಕಾನೂನುಬಾಹಿರವಾಗಿ ಬದಲಾಯಿಸಲಾಗಿದೆ. ಎಂಜಿಆರ್ ವಾರಸುದಾರರ ಹೆಸರಿಗೆ ಪಟ್ಟಾವನ್ನು ಬದಲಾಯಿಸಬೇಕೆಂದು ತಿರುಚ್ಚಿ ಕಟ್ಟೂರ್ ಗಾಂಧಿನಗರದ ನಿವೃತ್ತ ಸರ್ವೇಯರ್ ಚಾರ್ಲ್ಸ್ ತಿರುಚ್ಚಿ ಜಿಲ್ಲಾಧಿಕಾರಿ ಪ್ರದೀಪ್ ಕುಮಾರ್ಗೆ ಮನವಿ ಸಲ್ಲಿಸಿದ್ದಾರೆ. ಎಐಎಡಿಎಂಕೆ ಪಕ್ಷಕ್ಕೆ ಆ ಆಸ್ತಿ ಹೋಗಿದ್ದೇಗೆ ಎಂದು ಪ್ರಶ್ನಿಸಿದ್ದಾರೆ.
ತಿರುಚ್ಚಿ ಉರೈಯೂರ್ ತಿರುತ್ತಾಂತೋಣಿ ರಸ್ತೆಯಲ್ಲಿರುವ ಮೃತ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂಜಿಆರ್ಗೆ ಸೇರಿದ ಬಂಗಲೆ ಮತ್ತು ಖಾಲಿ ಜಾಗ 80,000 ಚದರ ಅಡಿ ವಿಸ್ತೀರ್ಣದಲ್ಲಿದೆ. ಇದರ ಪ್ರಸ್ತುತ ಮಾರುಕಟ್ಟೆ ಮೌಲ್ಯ 25 ಕೋಟಿ ರೂ. ಆಗಿದೆ. ಎಂಜಿಆರ್ ನಿಧನದ ನಂತರ, ಅವರ ಅಣ್ಣ ಎಂಜಿ ಚಕ್ರಪಾಣಿಯವರ ಮಗ ಮತ್ತು ಹತ್ತು ಹೆಣ್ಣುಮಕ್ಕಳು ವಾರಸುದಾರರಾಗಿ ತಮ್ಮ ಹೆಸರು ನೋಂದಾಯಿಸಿಕೊಂಡು ತಮ್ಮ ಹೆಸರಿನಲ್ಲಿ ಪಟ್ಟಾ ಪಡೆದರು.
ಆದರೆ ಈಗ ವಾರಸುದಾರರ ಹೆಸರುಗಳು ಬದಲಾಗಿದೆ. ಕುಟುಂಬದವರ ಹೆಸರಿದ್ದ ದಾಖಲೆಯಿಂದ ಹೆಸರು ತೆಗೆದುಹಾಕಿ ಮಧುರಾಮ್ ಪತಿ ಗೋವಿಂದಸ್ವಾಮಿ ಎಂದು ಪಟ್ಟಾ ಹೆಸರನ್ನು ಬದಲಾಯಿಸಲಾಗಿದೆ. ಎಂಜಿಆರ್ ಅವರ ಉತ್ತರಾಧಿಕಾರಿಗಳ ಹೆಸರುಗಳನ್ನು ಪಟ್ಟಾದಿಂದ ತೆಗೆದುಹಾಕಬೇಕಾದರೆ, ಅವರು ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಮೇಲ್ಮನವಿ ಸಲ್ಲಿಸಿ ಹೆಸರುಗಳನ್ನು ತೆಗೆದುಹಾಕಲು ಅವರ ಆದೇಶವನ್ನು ಪಡೆಯಬೇಕಾಗಿತ್ತು. ಆದರೆ, ಈ ವಿಧಾನವನ್ನು ಕೂಡ ಅನುಸರಿಸಲಾಗಿಲ್ಲ. ಆದರೆ ಈಗ ಎಂಜಿಆರ್ ಅವರ ಉತ್ತರಾಧಿಕಾರಿಗಳ ಹೆಸರುಗಳನ್ನು ಪ್ರಸ್ತುತ ಭೂ ನೋಂದಣಿಯಲ್ಲಿ ದಾಖಲಿಸಲಾಗಿಲ್ಲ, ಮತ್ತು 'ಮಧುರಂ ಪತಿ ಗೋವಿಂದಸ್ವಾಮಿ' ಎಂಬ ಹೆಸರನ್ನು ಕೂಡ ತೆಗೆದು ಹಾಕಿ ಕಂಪ್ಯೂಟರ್ನಲ್ಲಿ 'ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ' ಎಂದು ಹೆಸರು ನಮೂದಿಸಲಾಗಿದೆ.
ಆದ್ದರಿಂದ, ಎಂಜಿಆರ್ ತಮ್ಮ ಆಸ್ತಿಯನ್ನು ಎಐಎಡಿಎಂಕೆಗೆ ಪತ್ರದ ಮೂಲಕ ನೀಡಿದ್ದಾರೋ ಅಥವಾ ತಮ್ಮ ಉಯಿಲಿನಲ್ಲಿ ಏನನ್ನಾದರೂ ಬರೆದಿದ್ದಾರೋ ಎಂಬ ಬಗ್ಗೆ ಸ್ಪಷ್ಟನೆ ಬೇಕು. ದಿವಂಗತ ಮಾಜಿ ಮುಖ್ಯಮಂತ್ರಿ ಎಂಜಿಆರ್ ಒಡೆತನದ ಬಂಗಲೆಯ ಹಕ್ಕು ಪತ್ರವನ್ನು ಅಕ್ರಮವಾಗಿ ಬದಲಾಯಿಸಲಾಗಿದೆ ಎಂದು ಆರೋಪಿಸಿರುವ ತಿರುಚ್ಚಿಯ ಉತ್ತರ ಕಟ್ಟೂರಿನ ಗಾಂಧಿನಗರ ಪ್ರದೇಶದ ನಿವೃತ್ತ ಭೂಮಾಪಕ ಚಾರ್ಲ್ಸ್ ಅವರು ತಿರುಚ್ಚಿ ಜಿಲ್ಲಾಧಿಕಾರಿ ಎಂ. ಪ್ರದೀಪ್ ಕುಮಾರ್ ಅವರಿಗೆ ಅರ್ಜಿ ಸಲ್ಲಿಸಿದ್ದಾರೆ.
ವಿಭಾಗೀಯ ಆಯುಕ್ತರ ಕಚೇರಿ ಕಡತವನ್ನು ಜಿಲ್ಲಾಧಿಕಾರಿಗಳು ಪಡೆದು ತನಿಖೆ ಮತ್ತು ಆದೇಶವನ್ನು ಪರಿಶೀಲಿಸಬೇಕು ಮತ್ತು ಬಡತನದಲ್ಲಿ ಬದುಕುತ್ತಿರುವ ಎಂಜಿಆರ್ ಅವರ ಉತ್ತರಾಧಿಕಾರಿಗಳ ಹೆಸರುಗಳನ್ನು ಭೂ ನೋಂದಣಿಯಲ್ಲಿ ಮತ್ತೆ ಸೇರಿಸಬೇಕೆಂದು ಒತ್ತಾಯಿಸಿದ್ದಾರೆ. ಎಂ.ಜಿ. ಚಕ್ರಪಾಣಿ ಅವರ ಮಗ ಚಂದ್ರನ್ ಎಂಜಿಆರ್ ಬಂಗಲೆಯ ಹೆಸರನ್ನು ಬದಲಾಯಿಸಲು ನಿರಂತರವಾಗಿ ಹೋರಾಟ ನಡೆಸಿದ್ದರು. ಆದರೆ ಕೊರೋನಾ ಸಮಯದಲ್ಲಿ ಅವರು ನಿಧನರಾದರು. ಇತರ ಎಂಜಿಆರ್ ಉತ್ತರಾಧಿಕಾರಿಗಳು ನಮ್ಮ ಚಿಕ್ಕಪ್ಪನ ಸ್ಥಳ ನಮಗೆ ಸಿಗಬೇಕೆಂದು ಹೋರಾಡುತ್ತಿದ್ದಾರೆ ಎಂದು ಚಾಲ್ಸ್ ಸ್ಥಳೀಯ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.
ಈಗ ಈ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಈ ಬಂಗಲೆಯ ಒಂದು ಭಾಗದ ಗೋಡೆಯನ್ನು ಒಡೆದು, ಸ್ಥಳೀಯ ಭಾಗದ ಜನರು ಕಸವನ್ನು ಸುರಿದು ಆ ಮನೆಯನ್ನು ಕಸದ ತೊಟ್ಟಿಯನ್ನಾಗಿ ಮಾಡಿದ್ದಾರೆ. ಕೆಲವರು ಆ ಸ್ಥಳಗಳನ್ನು ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ಕೂಡ ನಿರ್ಮಿಸಿದ್ದಾರೆ. ತಿರುಚಿಯಲ್ಲಿರುವ ಎಂಜಿಆರ್ ಎಸ್ಟೇಟ್ ಅನ್ನು ಎಂಜಿ ರಾಮಚಂದ್ರನ್ 1984 ರಲ್ಲಿ ₹4 ಲಕ್ಷಕ್ಕೆ ಖರೀದಿಸಿದ್ದರಂತೆ.
ರಾಜಕಾರಣದಲ್ಲಿ ತಿರುಚ್ಚಿಯನ್ನು 2 ನೇ ರಾಜಧಾನಿಯನ್ನಾಗಿ ಮಾಡುವುದಾಗಿ ಘೋಷಿಸಿದ ಎಂಜಿ ರಾಮಚಂದ್ರನ್ ವೃದ್ಧಾಪ್ಯದಲ್ಲಿ ತಿರುಚ್ಚಿಯಲ್ಲಿ ಮನೆ ಖರೀದಿಸಿ, ಬಯಸಿದಾಗಲೆಲ್ಲಾ ಅಲ್ಲಿಗೆ ಬಂದು ನೆಲೆಸಲು ಬಯಸಿದ್ದರು. ಅರ್ಚಕರೊಬ್ಬರಿಂದ ಎಂಜಿಆರ್ ಸುಮಾರು 2 ಎಕರೆ ವಿಸ್ತೀರ್ಣದಲ್ಲಿದ್ದ ಈ ಜಾಗ ಮತ್ತು ಬಂಗಲೆಯನ್ನು ಖರೀದಿಸಿದರು. ಆದರೆ ಬಳಿಕ ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಈ ಜಾಗದಲ್ಲಿ ಬಂದು ನೆಲೆಸುವ ಅವರ ಆಸೆ ಕನಸಾಗಿಯೇ ಉಳಿಯಿತು.