ಮುಲ್ಲಪೆರಿಯಾರ್ ಡ್ಯಾಂನಿಂದ ತಮಿಳುನಾಡಿಗೆ ನೀರು ಬಿಟ್ಟ ಕೇರಳ
ತಮಿಳುನಾಡು ಕೃಷಿಗಾಗಿ ಮುಲ್ಲಪೆರಿಯಾರ್ ಅಣೆಕಟ್ಟಿನಿಂದ ನೀರು ಪಡೆಯಲು ಪ್ರಾರಂಭಿಸಿದೆ. 120 ದಿನಗಳವರೆಗೆ ಸೆಕೆಂಡಿಗೆ 300 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದ್ದು, ಐದು ಜಿಲ್ಲೆಗಳಿಗೆ ನೀರಾವರಿ ಮತ್ತು ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲಿದೆ.

ಇಡುಕ್ಕಿ: ಮುಲ್ಲಪೆರಿಯಾರ್ ಅಣೆಕಟ್ಟಿನಿಂದ ಕೃಷಿಗೆ ತಮಿಳುನಾಡು ನೀರು ತೆಗೆದುಕೊಳ್ಳಲು ಪ್ರಾರಂಭಿಸಿದೆ. ಸೆಕೆಂಡಿಗೆ 300 ಕ್ಯೂಸೆಕ್ ಅಡಿ ನೀರನ್ನು 120 ದಿನಗಳವರೆಗೆ ಬಿಡಲಾಗಿದೆ. 200 ಕ್ಯೂಸೆಕ್ ಅಡಿ ನೀರನ್ನು ಕೃಷಿಗೂ 100 ಕ್ಯೂಸೆಕ್ ಅಡಿ ನೀರನ್ನು ಕುಡಿಯುವ ನೀರಿಗೂ ಬಿಡಲಾಗುತ್ತಿದೆ. ಐದು ಜಿಲ್ಲೆಗಳ ಕೃಷಿ ಅಗತ್ಯಗಳಿಗಾಗಿ ತಮಿಳುನಾಡು ನೀರನ್ನು ಬಳಸುತ್ತದೆ. ತೇಕ್ಕಡಿಯಲ್ಲಿ ನಡೆದ ವಿಶೇಷ ಪೂಜೆಗಳ ನಂತರ ತೇಣಿ ಜಿಲ್ಲಾಧಿಕಾರಿ ರಂಜಿತ್ ಸಿಂಗ್ ಶಟರ್ ತೆರೆದರು. ತೇಣಿ ಜಿಲ್ಲೆಯಲ್ಲಿ 14700 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಆರಂಭಿಸಲು ಪೂರ್ವ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ತೇಣಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈ ನೀರು ಬಿಡುಗಡೆಯಿಂದ ಥೇಣಿ, ಉತ್ತಮಪಾಳ್ಯಂ ಮತ್ತು ಬೋಡಿ ತಾಲ್ಲೂಕುಗಳಾದ್ಯಂತ 14,707 ಎಕರೆ ಭೂಮಿಗೆ ಪ್ರಯೋಜನವಾಗಲಿದೆ.
ತಮಿಳುನಾಡಿನಲ್ಲಿ ನಡೆದಿದ್ದ ಸಭೆ
ಶುಕ್ರವಾರ ಮಧುರೈ ಜಿಲ್ಲಾಧಿಕಾರಿ ಎಂ.ಎಸ್. ಸಂಗೀತಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದ್ವಿ ಬೆಳೆ ಪ್ರದೇಶದ ಮೊದಲ ಬೆಳೆಗೆ ನೀರುಣಿಸಲು ಮುಲ್ಲಪೆರಿಯಾರ್ ಅಣೆಕಟ್ಟಿನಿಂದ ನೀರನ್ನು ಬಿಡುಗಡೆ ಮಾಡಬೇಕು ಎಂದು ರೈತರು ಒತ್ತಾಯಿಸಿದರು. ಹೆಚ್ಚಿನ ನೀರನ್ನು ಸಂಗ್ರಹಿಸಲು ಜಲಮೂಲಗಳನ್ನು ಹೂಳು ತೆಗೆದು ಆಳಗೊಳಿಸಬೇಕೆಂದು ರೈತರು ಅಧಿಕಾರಿಗಳನ್ನು ಒತ್ತಾಯಿಸಿದರು. ಜಲಮೂಲಗಳ ಮೇಲಿನ ಅತಿಕ್ರಮಣಗಳ ಬಗ್ಗೆಯೂ ಅವರು ದೂರು ನೀಡಿದರು. ಜಿಲ್ಲೆಯ ಜಲಮೂಲಗಳ ವಿಸ್ತೀರ್ಣ ಎಷ್ಟಿದೆ ಎಂಬುದನ್ನು ತಿಳಿಯಲು ಸಮೀಕ್ಷೆ ನಡೆಸುವಂತೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ತಿಳಿಸಿದರು. ರೈತರು ಜಲಮೂಲಗಳಿಂದ ಪ್ರೊಸೊಪಿಸ್ ಜುಲಿಫ್ಲೋರಾ (ಸೀಮೈ ಕರುವೇಲಂ) ಮರಗಳನ್ನು ತೆಗೆದುಹಾಕುವಂತೆಯೂ ಕೋರಿದರು ಸದ್ಯ ನೀರು ಬಿಡುಗಡೆ ಮಾಡಲಾಗಿದೆ.
ಕೇರಳದಲ್ಲಿ ನೈಋತ್ಯ ಮಾನ್ಸೂನ್ ಈ ಬಾರಿ ಅವಧಿಗೂ ಮೊದಲೆ ಬಂದಿದ್ದರಿಂದ ತಮಿಳುನಾಡಿನ ದಕ್ಷಿಣ ಭಾಗಗಳ ಪಶ್ಚಿಮ ಘಟ್ಟಗಳಲ್ಲಿ ವ್ಯಾಪಕ ಮಳೆಯಾಯಿತು. ಜೊತೆಗೆ ನೀರು ಅಣೆಕಟ್ಟು ತುಂಬಿ ಅಪಾಯದ ಮಟ್ಟ ಮೀರಿ ಹರಿದಿದೆ. ಅಣೆಕಟ್ಟಿನ ಸುರಕ್ಷತೆ ಬಗ್ಗೆ ಕೇರಳ ಸರ್ಕಾರ ಕಳವಳ ಕೂಡ ವ್ಯಕ್ತಪಡಿಸಿದೆ. ಈ ಅಣೆಕಟ್ಟಿನಲ್ಲಿ ಒಟ್ಟು ಸಂಗ್ರಹಣಾ ಮಟ್ಟ 142 ಅಡಿಗಳು. ತಮಿಳುನಾಡು ಕೇರಳದ ಮುಲ್ಲಪೆರಿಯಾರ್ ಅಣೆಕಟ್ಟಿನಿಂದ ಕೃಷಿಗಾಗಿ, ಮುಖ್ಯವಾಗಿ ನೀರಾವರಿ ಮತ್ತು ಕುಡಿಯುವ ನೀರಿನ ಅಗತ್ಯಗಳಿಗಾಗಿ ನೀರನ್ನು ಪಡೆಯುತ್ತದೆ. ಅಣೆಕಟ್ಟಿನ ನೀರನ್ನು ಸುರಂಗಗಳ ಮೂಲಕ ತಮಿಳುನಾಡಿನ ವೈಗೈ ಜಲಾನಯನ ಪ್ರದೇಶಕ್ಕೆ ಬಿಡಲಾಗುತ್ತದೆ. ಇದು ಥೇಣಿ, ಮಧುರೈ, ದಿಂಡಿಗಲ್, ಶಿವಗಂಗೈ ಮತ್ತು ರಾಮನಾಥಪುರಂನಂತಹ ಜಿಲ್ಲೆಗಳಿಗೆ ನೀರಿನ ಅವಶ್ಯಕತೆಯನ್ನು ಒದಗಿಸಲಾಗುತ್ತದೆ.
ಮುಲ್ಲಪೆರಿಯಾರ್ ಅಣೆಕಟ್ಟನ್ನು 19 ನೇ ಶತಮಾನದ ಉತ್ತರಾರ್ಧದಲ್ಲಿ ನಿರ್ಮಾಣ ಮಾಡಲಾಗಿದೆ. ಆಗ ಮದ್ರಾಸ್ ಪ್ರೆಸಿಡೆನ್ಸಿ ಕಾಲದಲ್ಲಿ ತಮಿಳುನಾಡಿನ ಬರ ಪೀಡಿತ ಪ್ರದೇಶಗಳಿಗೆ ನೀರು ಒದಗಿಸಲು ಇದನ್ನು ಮಾಡಲಾಯ್ತು. ತಮಿಳುನಾಡಿನ ಐದು ಜಿಲ್ಲೆಗಳಿಗೆ ಈ ನೀರೇ ಜೀವನದಿಯಾಗಿದೆ. ಮುಖ್ಯವಾಗಿ ಕುಡಿಯಲು ಮತ್ತು ಕೃಷಿಗೆ. ತಮಿಳುನಾಡು ಮತ್ತು ಕೇರಳದ ನಡುವೆ ನೀರು ಹಂಚಿಕೆ ಬಗ್ಗೆ ನಿರಂತರ ವಿವಾದಗಳು ನಡೆಯುತ್ತಿವೆ ಕೇರಳವು ಅಣೆಕಟ್ಟಿನ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಅದನ್ನು ರದ್ದುಗೊಳಿಸಲು ಪ್ರಯತ್ನಿಸುತ್ತಿದೆ. ನಿರಂತರ ವಿವಾದಗಳ ಹೊರತಾಗಿಯೂ, ತಮಿಳುನಾಡು ಮುಲ್ಲಪೆರಿಯಾರ್ ಅಣೆಕಟ್ಟಿನಿಂದ ನೀರನ್ನು ಪಡೆಯುತ್ತಿದೆ.
ಮುಲ್ಲಪೆರಿಯಾರ್ ಅಣೆಕಟ್ಟಿನಿಂದ ಕೇರಳ ಮತ್ತು ತಮಿಳುನಾಡಿನ ಗಡಿಯಲ್ಲಿರುವ ಹಳ್ಳಿಗಳ ರೈತರಲ್ಲಿ ಕೃಷಿ ಆರಂಭಿಸಲು ಅನುಕೂಲವಾಗಲಿದೆ. ಕೇರಳದ ಇಡುಕ್ಕಿ ಜಿಲ್ಲೆಯ ಗಡಿಯಲ್ಲಿರುವ ಮುಳ್ಳಪೆರಿಯಾರ್ ಅಣೆಕಟ್ಟಿನಿಂದ ಮಳೆಗಾಲದಲ್ಲಿ ನೀರು ಬಿಡುಗಡೆಯಾದ ನಂತರ 3,000 ಎಕರೆಗಳಲ್ಲಿ ತಮಿಳುನಾಡಿನ ಥೇಣಿ ಜಿಲ್ಲೆಯ ರೈತರು ಭತ್ತವನ್ನು ಬೆಳೆಯುತ್ತಾರೆ. ಈ ಬಾರಿ ಮುಂಗಾರು ಕೂಡ ಬಹಳ ಬೇಗ ಬಂದಿದ್ದು, ಒಂದು ವಾರದ ನಿರಂತರ ಮಳೆಗೆ ಅಣೆಕಟ್ಟಿನಲ್ಲಿ ನೀರು ತಳಮಟ್ಟಕ್ಕೆ ಇಳಿದಿಲ್ಲ.
ತಮಿಳುನಾಡಿನಲ್ಲಿ ಜುಲೈ ಮಧ್ಯದಿಂದ ಆಗಸ್ಟ್ ಮಧ್ಯದವರೆಗೆ ಮಳೆಯಾಶ್ರಿತ ಪ್ರಮುಖ ಬೆಳೆ ಬೆಳೆಯಲಾಗುತ್ತದೆ. ಈ ಋತುವಿನಲ್ಲಿ ಸಾಮಾನ್ಯವಾಗಿ ಬೆಳೆಯುವ ಬೆಳೆಗಳು ಧಾನ್ಯಗಳು, ಎಣ್ಣೆಕಾಳುಗಳು ಮತ್ತು ತರಕಾರಿಗಳು. ನೈಋತ್ಯ ಮಾನ್ಸೂನ್ ಬೆಳೆಗಳ ಕೃಷಿಯನ್ನು ನಿರ್ಧರಿಸುತ್ತದೆ. ಈ ವರ್ಷದ ಮಾನ್ಸೂನ್ ಸಾಮಾನ್ಯಕ್ಕಿಂತ ಹೆಚ್ಚಿದೆ. ಹೀಗಾಗಿ ಬೆಳೆಗಳು ಯಾವ ರೀತಿಯಲ್ಲಿ ಇಳುವರಿ ಕೊಡಲಿದೆ ಎಂಬುದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ