ಫ್ರಿಡ್ಜ್ನಲ್ಲಿದ್ದ ಚಿಕನ್, ಮಟನ್, ಬೋಟಿ ಬಿಸಿ ಮಾಡಿ ತಿಂದು ಓರ್ವ ಸಾವು; ಮೂವರ ಸ್ಥಿತಿ ಗಂಭೀರ
Consuming Refrigerated Meat: ಫ್ರಿಡ್ಜ್ನಲ್ಲಿಟ್ಟ ಮಾಂಸಾಹಾರ ಸೇವಿಸಿ ಒಬ್ಬರು ಸಾವನ್ನಪ್ಪಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಒಟ್ಟು 9 ಜನರಲ್ಲಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಫುಡ್ ಪಾಯ್ಸನ್ ಸಾವಿಗೆ ಕಾರಣ ಎಂದು ಶಂಕಿಸಲಾಗಿದೆ.

ವಿಷ ಆಹಾರ ಸೇವನೆಯಿಂದಾಗಿ ವ್ಯಕ್ತಿಯೋರ್ವ ಸಾವನ್ನಪ್ಪಿದ್ದು, ಮೂವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ,ಫ್ರಿಡ್ಜ್ನಲ್ಲಿಟ್ಟಿದ್ದ ಮಾಂಸಾಹಾರವನ್ನು ಬಿಸಿ ಮಾಡಿ ತಿಂದಿದ್ದರು. ಈ ಆಹಾರ ಸೇವನೆ ಎಲ್ಲರ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಮೃತ ವ್ಯಕ್ತಿಯನ್ನು 46 ವರ್ಷದ ಶ್ರೀನಿವಾಸ್ ಯಾದವ್ ಎಂದು ಗುರುತಿಸಲಾಗಿದೆ.
ಶ್ರೀನಿವಾಸ್ ಯಾದವ್ ಅವರ ವನಸ್ಥಳಿಪುರದ ಮನೆಯಲ್ಲಿ ಹಬ್ಬದ ಪ್ರಯುಕ್ತ ಚಿಕನ್, ಮಟನ್ ಮತ್ತು ಬೋಟಿ ಮಾಡಲಾಗಿತ್ತು. ಮರುದಿನ ಶ್ರೀನಿವಾಸ್ ಯಾದವ್ ಕುಟುಂಬ ಉಳಿದ ಮಾಂಸವನ್ನು ಬಿಸಿ ಮಾಡಿ ತಿಂದಿದೆ. ಸ್ವಲ್ಪ ಸಮಯದಲ್ಲೇ ಕುಟುಂಬದ 9 ಜನರಿಗೆ ವಾಂತಿ ಮತ್ತು ಭೇದಿ ಕಾಣಿಸಿಕೊಂಡಿತು. ಕೂಡಲೇ ಎಲ್ಲರನ್ನೂ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಲಾಗಿದೆ.
ಶ್ರೀನಿವಾಸ್ ಅವರ ಪತ್ನಿ ರಜಿತಾ, ಮಕ್ಕಳಾದ ಲಹರಿ, ಜಾಸ್ಮಿತಾ, ತಾಯಿ ಗೌರಮ್ಮ, ರಜಿತಾ ಅವರ ಸಹೋದರ ಸಂತೋಷ್ ಕುಮಾರ್, ಪತ್ನಿ ರಾಧಿಕಾ ಮತ್ತು ಅವರ ಹೆಣ್ಣುಮಕ್ಕಳಾದ ಪೂರ್ವಿಕಾ, ಕೃತಜ್ಞ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವಾಗಲೇ ಶ್ರೀನಿವಾಸ್ ಯಾದವ್ ಪ್ರಾಣಪಕ್ಷಿ ಹಾರಿ ಹೋಗಿದೆ.
ಮೂವರು ಗಂಭೀರ ಸ್ಥಿತಿಯಲ್ಲಿದ್ದಾರೆ. ಉಳಿದವರನ್ನು ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಫುಡ್ ಪಾಯಿಸನ್ನಿಂದ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಪೋಸ್ಟ್ಮಾರ್ಟಮ್ ವರದಿ ಬಂದ ನಂತರವೇ ಸಾವಿಗೆ ನಿಖರ ಕಾರಣ ತಿಳಿಯಲು ಸಾಧ್ಯ ಎಂದು ವನಸ್ಥಳಿಪುರ ಪೊಲೀಸರು ತಿಳಿಸಿದ್ದಾರೆ.
ಆರೋಗ್ಯಾಧಿಕಾರಿಗಳ ಸಲಹೆ
ಆಹಾರ ವಿಷವೇ ಸಾವಿಗೆ ಕಾರಣ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಫ್ರಿಡ್ಜ್ನಲ್ಲಿಟ್ಟಿದ್ದ ಆಹಾರವನ್ನು ಮತ್ತೆ ಬಿಸಿ ಮಾಡಿ ತಿಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಫ್ರಿಡ್ಜ್ನಲ್ಲಿಟ್ಟ ಉಳಿದ ಮಾಂಸ ತಿನ್ನುವಾಗ ಜಾಗ್ರತೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ

