ಎಲ್ಲಿಯವರೆಗೆ ರೈತ ಪ್ರತಿಭಟನೆ? ದಿನಾಂಕ ಘೋಷಿಸಿದ ಮುಖಂಡ ರಾಕೇಶ್ ಟಿಕೈಟ್!
ಕಳೆದ ವರ್ಷ ಆರಂಭಗೊಂಡ ರೈತ ಸಂಘಟನೆಗಳ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಕೇಂದ್ರ ಸರ್ಕಾರದ ಕೃಷಿ ಮಸೂದೆ ಹಿಂಪಡೆಯಲು ಆಗ್ರಹಿಸಿ ನಡೆಸುತ್ತಿರುವ ಹೋರಾಟ ಸದ್ಯಕ್ಕೆ ಅಂತ್ಯ ಕಾಣುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇದರ ನಡುವೆ ರೈತ ಮುಖಂಡ ರಾಕೇಶ್ ಟಿಕೈಟ್ ಪ್ರತಿಭಟನೆ ಎಲ್ಲಿಯವರೆಗೆ ಮುಂದುವರಿಲಿದೆ ಅನ್ನೋ ಮಾಹಿತಿ ಬಹಿರಂಗ ಪಡಿಸಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ 3 ಕೃಷಿ ಕಾಯ್ದೆಗಳನ್ನು ಸಂಪೂರ್ಣವಾಗಿ ಹಿಂಪಡೆಯಬೇಕು ಎಂದು ಆಗ್ರಹಿಸಿ 40ಕ್ಕೂ ಹೆಚ್ಚು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದೆ.
ದೆಹಲಿ ಗಡಿಯಲ್ಲಿ ಪ್ರತಿಭಟನೆ ಆರಂಭಿಸಿದ ರೈತ ಸಂಘಟನೆಗಳು 100 ದಿನ ದಾಟಿದೆ. ಇದೀಗ ರೈತ ಮುಖಂಡ ರಾಕೇಶ್ ಟಿಕೈಟ್ ರೈತ ಪ್ರತಿಭಟನೆಯನ್ನು ಡಿಸೆಂಬರ್ ತಿಂಗಳ ವರೆಗೆ ಮುಂದುವರಿಯುವ ಸಾಧ್ಯತೆ ಇದೆ ಎಂದಿದ್ದಾರೆ.
ರೈತ ಸಂಘಟನೆಗಳ ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಯಲಿದೆ. ಕೇಂದ್ರ ಸರ್ಕಾರ ಇದಕ್ಕೆ ತಕ್ಕೆ ಬೆಲೆ ತೆರಲಿದೆ ಎಂದು ರಾಕೇಶ್ ಟಿಕೈಟ್ ಹೇಳಿದೆ.
ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪರ ಧನಿ ಎತ್ತಿರುವ ರಾಕೇಶ್ ಟಿಕೈಟ್, ಬಿಜೆಪಿಗೆ ಮತ ಹಾಕಬೇಡಿ ಎಂದು ಮನವಿ ಮಾಡಿದ್ದಾರೆ. ಇದೇ ವೇಳೆ ಪ್ರತಿಭಟೆಯನ್ನು ಡಿಸೆಂಬರ್ ವರೆಗೂ ಮುಂದುವರಿಸಲಿದ್ದೇವೆ ಎಂದಿದ್ದಾರೆ
ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿ ಕರ್ನಾಟಕ ಸೇರಿದಂತೆ ರಾಜ್ಯ ರಾಜ್ಯಗಳಿಗೆ ಭೇಟಿ ನೀಡುವುದಾಗಿ ರಾಕೇಶ್ ಟಿಕೈಟ್ ಹೇಳಿದ್ದಾರೆ.
ಮಾರ್ಚ್ 21ಕ್ಕೆ ಕರ್ನಾಚಕಕ್ಕೆ ರಾಕೇಶ್ ಟಿಕೈಟ್ ಆಗಮಿಸುವ ಸಾಧ್ಯತೆ ಇದೆ. ಈ ವೇಳೆ ಕರ್ನಾಟಕದಲ್ಲಿ ಸಮಾವೇಶ ಆಯೋಜನೆಗೆ ರೈತ ಸಂಘಟನೆಗಳು ಮುಂದಾಗಿದೆ.
ಕೇಂದ್ರ ಸರ್ಕಾರ ರೈತ ಸಂಘಟನೆಗಳ ಬೇಡಿಕೆಗೆ ಸ್ಪಂದಿಸಿದರೆ ಪ್ರತಿಭಟನೆ ಅಂತ್ಯಗೊಳ್ಳಲಿದೆ. ಆದರೆ ಬೇಡಿಕೆ ಈಡೇರದಿದ್ದರೆ ಯಾವುದೇ ಕಾರಣಕ್ಕೂ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.