- Home
- Sports
- Hockey
- Hockey: ಆರೆಂಜ್ ಜರ್ಸಿ ಧರಿಸಿದ್ದರ ಹಿಂದಿನ ಅಸಲಿ ಗುಟ್ಟು ಕೊನೆಗೂ ರಟ್ಟು! ಟೀಮ್ ಇಂಡಿಯಾ ಕ್ಯಾಪ್ಟನ್ ಬಿಚ್ಚಿಟ್ಟ ಸತ್ಯ ಇಲ್ಲಿದೆ!
Hockey: ಆರೆಂಜ್ ಜರ್ಸಿ ಧರಿಸಿದ್ದರ ಹಿಂದಿನ ಅಸಲಿ ಗುಟ್ಟು ಕೊನೆಗೂ ರಟ್ಟು! ಟೀಮ್ ಇಂಡಿಯಾ ಕ್ಯಾಪ್ಟನ್ ಬಿಚ್ಚಿಟ್ಟ ಸತ್ಯ ಇಲ್ಲಿದೆ!
ಮುಂಬರುವ ಹಾಕಿ ವಿಶ್ವಕಪ್ಗಾಗಿ ಭಾರತ ತಂಡದ ಸಾಂಪ್ರದಾಯಿಕ ನೀಲಿ ಜರ್ಸಿಯನ್ನು ಕಿತ್ತಳೆ ಬಣ್ಣಕ್ಕೆ ಬದಲಿಸಿದ್ದು ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಆದರೆ,ಈ ಕುರಿತು ಹಾಕಿ ತಂಡದ ನಾಯಕ ಸತ್ಯ ಬಿಚ್ಚಿಟ್ಟ ದ್ದಾನೆ. ಅದೇನು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ!

ಕ್ರೀಡೆ ಎಂದರೆ ಆಟವಲ್ಲ, ಅದೊಂದು ಭಾವನೆ!
ಭಾರತದಲ್ಲಿ ಕ್ರೀಡೆ ಎಂದರೆ ಕೇವಲ ಆಟವಲ್ಲ, ಅದೊಂದು ಭಾವನೆ. ಅದರಲ್ಲೂ ಭಾರತದ ರಾಷ್ಟ್ರೀಯ ಕ್ರೀಡೆಯಾದ ಹಾಕಿಗೆ ದೇಶದಲ್ಲಿ ವಿಶೇಷ ಗೌರವವಿದೆ. ಸಾಮಾನ್ಯವಾಗಿ 'ಮೆನ್ ಇನ್ ಬ್ಲೂ' ಎಂದೇ ಕರೆಯಲ್ಪಡುವ ಭಾರತೀಯ ಹಾಕಿ ತಂಡ, ಮೈದಾನಕ್ಕಿಳಿದರೆ ನೀಲಿ ಜರ್ಸಿಯಲ್ಲಿ ಮಿಂಚುವುದನ್ನು ನೋಡಿ ಅಭಿಮಾನಿಗಳಿಗೆ ಅಭ್ಯಾಸವಾಗಿ ಹೋಗಿದೆ. ಆದರೆ, ಮುಂಬರುವ ಎಫ್ಐಎಚ್ ಪುರುಷ ಮತ್ತು ಮಹಿಳಾ ಹಾಕಿ ವಿಶ್ವಕಪ್ ಪಂದ್ಯಾವಳಿಗಾಗಿ ಹಾಕಿ ಇಂಡಿಯಾ ಅನಾವರಣಗೊಳಿಸಿದ ಹೊಸ 'ಕಿತ್ತಳೆ' (Orange) ಬಣ್ಣದ ಜರ್ಸಿ ಈಗ ದೇಶಾದ್ಯಂತ ದೊಡ್ಡ ಚರ್ಚೆ ಹುಟ್ಟುಹಾಕಿದೆ.
ವಿವಾದಕ್ಕೆ ಕಾರಣವೇನು?
ಜುಲೈ 27 ರಿಂದ ಆರಂಭವಾಗಲಿರುವ ಹಾಕಿ ವಿಶ್ವಕಪ್ಗಾಗಿ ಹಾಕಿ ಇಂಡಿಯಾ ಸಾಂಪ್ರದಾಯಿಕ ನೀಲಿ ಜರ್ಸಿಯ ಬದಲಿಗೆ ಕಿತ್ತಳೆ ಬಣ್ಣದ ಹೊಸ ಜರ್ಸಿಯನ್ನು ಬಿಡುಗಡೆ ಮಾಡಿತು. ಈ ಹಠಾತ್ ಬದಲಾವಣೆ ಹಲವು ಮಾಜಿ ಹಾಕಿ ಆಟಗಾರರು, ಕ್ರೀಡಾ ಪ್ರೇಮಿಗಳು ಮತ್ತು ದಂತಕಥೆಗಳ ಅಸಮಾಧಾನಕ್ಕೆ ಕಾರಣವಾಯಿತು. ಕ್ರೀಡಾ ವಲಯದಿಂದ ಹಿಡಿದು ರಾಜಕೀಯ ಅಂಗಳದವರೆಗೆ "ದಿಢೀರ್ ಜರ್ಸಿ ಬಣ್ಣ ಬದಲಾಯಿಸಿದ್ದು ಏಕೆ?" ಎಂಬ ಪ್ರಶ್ನೆಗಳು ಎದ್ದವು. ಈ ವಿವಾದ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದ್ದಂತೆ, ಸ್ವತಃ ಭಾರತ ಹಾಕಿ ತಂಡದ ನಾಯಕ ಹರ್ಮನ್ಪ್ರೀತ್ ಸಿಂಗ್ ಮತ್ತು ಹಿರಿಯ ಆಟಗಾರ ಮನ್ಪ್ರೀತ್ ಸಿಂಗ್ ಮೌನ ಮುರಿದು ಅಸಲಿ ಕಾರಣವನ್ನು ಹಂಚಿಕೊಂಡಿದ್ದಾರೆ.
ಬೇಸರಕ್ಕೆ ಕಾರಣವೇನು?
ಮುಂದುವರಿದು ಮಾತನಾಡಿದ ಅವರು, "ನಾವು ಅತ್ಯಂತ ಪ್ರಮುಖವಾದ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲು ಸಜ್ಜಾಗುತ್ತಿದ್ದೇವೆ. ಇಂತಹ ಸಮಯದಲ್ಲಿ ನಾವು ಪಂದ್ಯದ ಮೇಲೆ ಗಮನ ಹರಿಸುವ ಬದಲು ಇಂತಹ ವಿವಾದಗಳಲ್ಲಿ ಸಿಲುಕಿಕೊಂಡಿದ್ದೇವೆ ಎಂಬುದು ನಿಜಕ್ಕೂ ಬೇಸರ ತರುತ್ತದೆ. ನಾವು ಮೈದಾನದಲ್ಲಿ ಯಾವುದೇ ಬಣ್ಣದ ಜರ್ಸಿ ಧರಿಸಿ ಆಡಿದರೂ, ನಮ್ಮ ಮುಖ್ಯ ಉದ್ದೇಶ ದೇಶಕ್ಕಾಗಿ ಆಡುವುದು ಮತ್ತು ಪಂದ್ಯವನ್ನು ಗೆಲ್ಲುವುದು. ದೇಶದ ಹೆಮ್ಮೆಯನ್ನು ಎತ್ತಿಹಿಡಿಯುವುದೇ ನಮ್ಮ ಗುರಿ" ಎಂದು ತಮ್ಮ ಮನದ ನೋವನ್ನು ತೆರೆದಿಟ್ಟರು.
ಇದು ರಾಜಕೀಯವಲ್ಲ, ಟೆಕ್ನಿಕಲ್ ಇಶ್ಯು!
ತಂಡದ ಮತ್ತೊಬ್ಬ ಸ್ಟಾರ್ ಆಟಗಾರ ಮನ್ಪ್ರೀತ್ ಸಿಂಗ್ ಅವರು ಜರ್ಸಿ ಬದಲಾವಣೆಯ ಹಿಂದಿರುವ ಪ್ರಮುಖ ತಾಂತ್ರಿಕ ಕಾರಣವನ್ನು ವಿವರಿಸಿದರು. "ನೀವು ಹಿಂದಿನ ಇತಿಹಾಸವನ್ನು ಗಮನಿಸಿದರೆ, 2014ರ ವಿಶ್ವಕಪ್ ಹಾಗೂ ಕಾಮನ್ವೆಲ್ತ್ ಕ್ರೀಡಾಕೂಟದ ವೇಳೆಯಲ್ಲೂ ಭಾರತ ತಂಡ ಹಳದಿ ಬಣ್ಣದ ಜರ್ಸಿ ಧರಿಸಿ ಆಡಿತ್ತು. ಆಗ ಈ ವಿಚಾರ ಇಷ್ಟೊಂದು ದೊಡ್ಡ ಸುದ್ದಿಯಾಗಿರಲಿಲ್ಲ. ಪ್ರಸ್ತುತ ನಡೆಯುತ್ತಿರುವ ಚರ್ಚೆಗಳಿಗೂ, ಆಟಕ್ಕೂ ಸಂಬಂಧವಿಲ್ಲ. ಈ ನಿರ್ಧಾರವನ್ನು ಯಾರೂ ಹೊರಗಿನಿಂದ ನಮ್ಮ ಮೇಲೆ ಹೇರಿಲ್ಲ" ಎಂದರು.
ಸ್ಪಷ್ಟನೆಕೊಟ್ಟ ಕ್ಯಾಪ್ಟನ್!
ಮುಖ್ಯ ಕಾರಣವನ್ನು ವಿವರಿಸಿದ ಅವರು, "ಇತ್ತೀಚಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 'ಬ್ಲೂ ಟರ್ಫ್' (ನೀಲಿ ಬಣ್ಣದ ಮೈದಾನ) ಬಳಸಲಾಗುತ್ತದೆ. ಆಟಗಾರರು ಧರಿಸುವ ಸಾಕ್ಸ್ ಹಾಗೂ ಜರ್ಸಿ ಎರಡೂ ನೀಲಿ ಬಣ್ಣದ್ದಾಗಿದ್ದಾಗ, ಮೈದಾನದ ಬಣ್ಣದೊಂದಿಗೆ ಜರ್ಸಿ ಬಣ್ಣ ಒಂದಕ್ಕೊಂದು ಮಿಶ್ರಣವಾಗುತ್ತಿತ್ತು . ಇದರಿಂದ ಆಟಗಾರರಿಗೆ ಸಹ-ಆಟಗಾರರನ್ನು ಗುರುತಿಸಲು ಮತ್ತು ಚೆಂಡನ್ನು ಪಾಸ್ ಮಾಡಲು ಮೈದಾನದಲ್ಲಿ ತೊಂದರೆಯಾಗುತ್ತಿತ್ತು. ಇದು ಪ್ರದರ್ಶನದ ಮೇಲೆಯೂ ಪರಿಣಾಮ ಬೀರುತ್ತಿತ್ತು. ಹಾಗಾಗಿಯೇ ನಾವು ಬಣ್ಣ ಬದಲಾಯಿಸಿದೆವು" ಎಂದು ಹೇಳಿದರು.
ಹಾಕಿ ಇಂಡಿಯಾ ನೀಡಿದ ಅಧಿಕೃತ ಸ್ಪಷ್ಟೀಕರಣ!
ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಲು ಹಾಕಿ ಇಂಡಿಯಾ ಕೂಡ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. "ಆಟಗಾರರು ಹಾಗೂ ತಾಂತ್ರಿಕ ಸಿಬ್ಬಂದಿಯ ಜತೆ ಸುದೀರ್ಘ ಸಮಾಲೋಚನೆ ನಡೆಸಿದ ನಂತರವೇ ಈ ತೀರ್ಮಾನಕ್ಕೆ ಬರಲಾಗಿದೆ. ನೀಲಿ ಟರ್ಫ್ ಮೈದಾನದಲ್ಲಿ ನೀಲಿ ಜರ್ಸಿ ಧರಿಸಿ ಆಡುವಾಗ ದೃಶ್ಯಾವಳಿಗಳ ಸ್ಪಷ್ಟತೆ ಕಡಿಮೆಯಾಗುತ್ತಿತ್ತು. ಆಟಗಾರರು ಮೈದಾನದಲ್ಲಿ ಸ್ಪಷ್ಟವಾಗಿ ಕಾಣಿಸಲಿ ಎಂಬ ಒಂದೇ ಒಂದು ತಾಂತ್ರಿಕ ಕಾರಣಕ್ಕೆ ಕಿತ್ತಳೆ ಜರ್ಸಿ ಆಯ್ಕೆ ಮಾಡಲಾಗಿದೆ" ಎಂದು ತಿಳಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

