ವಿಪರೀತ ಕೋಪಿಷ್ಠರನ್ನು ಬದಲಿಸುವುದು ಕಷ್ಟನಾ? ಸಿಟ್ಟಿನ ಬಗ್ಗೆ ಒಂದಿಷ್ಟು...
ಸಿಟ್ಟು, ಯಾರನ್ನು ಬಿಟ್ಟಿದೆ ಹೇಳಿ? ಕಷ್ಟ ಪಟ್ಟು ಬರೋ ಸಿಟ್ಟನ್ನು ತಡೆದುಕೊಳ್ಳಲು ಹಲವು ಮಾರ್ಗಗಳಿದ್ದರೂ, ಸಿಟ್ಟು ಮನುಷ್ಯನ ಸಹಜ ಗುಣವಾಗಿದ್ದರಿಂದ ಮಕ್ಕಳಿಂದ ಹಿಡಿದು, ವಯೋವೃದ್ಧರವೆರೆಗೆ ಎಲ್ಲರನ್ನೂ ಬೆಂಬಿಡದೇ ಕಾಡುತ್ತದೆ. ಬಂದ ಸಿಟ್ಟನ್ನು ಅದುಮಿಟ್ಟುಕೊಳ್ಳುವುದು ಮಾತ್ರವಲ್ಲ, ಯಾವಾಗ ಮನುಷ್ಯ ಸಿಟ್ಟು ಬರದಂತೆಯೇ ತನ್ನ ವ್ಯಕ್ತಿತ್ವವನ್ನು ರೂಢಿಸಿಕೊಳ್ಳುತ್ತಾನೋ ಆಗ ಆತ ಮಹಾನುಭಾವನಾಗುವುದರಲ್ಲಿ ಅನುಮಾನವೇ ಇಲ್ಲ. ಪ್ರಪಂಚದ ದೃಷ್ಟಿಯಲ್ಲಿ ದೊಡ್ಡವನಾಗದಿದ್ದರೂ, ತನ್ನೊಳಗಿನ ಸಂತೋಷ ಕಂಡುಕೊಳ್ಳುತ್ತಾರೆ ಕೋಪ ಗೆದ್ದವರು. ಇಂಥ ಸಿಟ್ಟಿನ ಬಗ್ಗೆ ತಪ್ಪು ಕಲ್ಪನೆಗಳೇನು? ಗೆಲ್ಲೋದು ಹೇಗೆ?
ಕೆಲವರಿಗೆ ವಿಪರೀತ ಸಿಟ್ಟಿರುತ್ತದೆ. ಇದು ಜನ್ಮತಃ ದೋಷವೆನ್ನುತ್ತಾರೆ. ಹೊಡೆದು, ಬಡಿದು ಸರಿ ಹೋಗಿಸಬಹುದು ಎಂದು ಕೊಳ್ಳುತ್ತಾರೆ.
ನಿಜವೇನೆಂದರೆ ಸಿಕ್ಕಾಪಟ್ಟೆ ಸಿಟ್ಟು ಮಾಡಿ ಕೊಳ್ಳುವುದು ಹುಟ್ಟಿನಿಂದ ಬಂದದ್ದು ಅಲ್ಲ. ನಾವೇ ರೂಢಿಸಿಕೊಳ್ಳುವಂಥದ್ದು. ಮನೆಯಲ್ಲಿ ದೊಡ್ಡವರು ಮಾಡುವುದನ್ನು ನೋಡಿ ಮಕ್ಕಳು ಕಲಿತು ಕೊಳ್ಳುತ್ತಾರೆ. ಈ ರೀತಿಯ ಸಿಟ್ಟಿರುವವರು ಅನೇಕ ವ್ಯಕ್ತಿತ್ವ ದೋಷಗಳನ್ನು ಹೊಂದಿರುತ್ತಾರೆ. ತಮ್ಮವರನ್ನೇ ಅನುಮಾನದಿಂದ ನೋಡಿ, ಒಳಗೊಳಗೆ ನರಳುತ್ತಿರುತ್ತಾರೆ.
ಕೆಲವರು ತಮ್ಮ ಸಿಟ್ಟನ್ನು ಎಂಜಾಯ್ ಮಾಡುತ್ತಿರುತ್ತಾರೆ. ಅವರನ್ನು ಸರಿ ಮಾಡುವುದು ಕಷ್ಟವೆಂದೇ ಭಾವಿಸುತ್ತಾರೆ. ಹೌದಾ ಸಿಟ್ಟು ಎಂಬ ದೋಷವನ್ನು ತಿದ್ದಿಕೊಳ್ಳಲು ಆಗುವುದಿಲ್ಲವೇ?
ಸಿಟ್ಟಿನ ವರ್ತನೆ ತನ್ನಿಂತಾನೇ ಬದಲಾಗುವುದು ಕಷ್ಟ. ಆದರೆ, ಮನುಷ್ಯ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ. ಮೊದಲು ತಮ್ಮಲ್ಲಿರುವ ಕೋಪವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸುವ ಮನುಷ್ಯ ಅದನ್ನು ದೂರ ಮಾಡಲು ಅಗತ್ಯವಿರುವ ಅಭ್ಯಾಸಗಳನ್ನು ರೂಢಿಸಿಕೊಂಡರೆ ಕೋಪ ಅತಿರೇಕಕ್ಕೆ ಹೋಗುವುದನ್ನು ತಪ್ಪಿಸಿಕೊಳ್ಳುವುದು. ಇದು ತನಗೂ, ತನ್ನ ಸುತ್ತಿಲಿನವರ ಮಾನಸಿಕ ಆರೋಗ್ಯಕ್ಕೂ ಅತ್ಯಗತ್ಯವೆಂಬುದನ್ನು ಅರ್ಥ ಮಾಡಿಕೊಳ್ಳಬೇಕು.
.ಕೋಪಿಷ್ಠರೊಂದಿಗೆ ಬದುಕುವುದು ಕಷ್ಟ. ಇವರು ಸಂಬಂಧವನ್ನು ಬೇಗ ಕಡಿದುಕೊಳ್ಳುತ್ತಾರೆ, ಎನ್ನುವ ತಪ್ಪು ಕಲ್ಪನೆ ಇದೆ.
6. ಕೋಪ ಮಾ
ಡಿಕೊಳ್ಳುವವರೊಂದಿಗೆ ಬದುಕುವುದು ಕಷ್ಟ ಹೌದು. ಆದರೆ, ಅದೆಷ್ಟೋ ಮಂದಿ ಜಮದಗ್ನಿಗಳಂಥ ಸಂಗಾತಿಯೊಂದಿಗೇ ಜೀವನ ನಡೆಸುತ್ತಿದ್ದಾರೆ. ಅಂಥ ಸಂದರ್ಭವನ್ನು ಎದುರಿಸುವಂಥ ಚಾಕಚಕ್ಯತೆಯನ್ನು ಬದುಕಿನ ಅನುಭವದಿಂದಲೇ ಕಲಿತಿರುತ್ತಾರೆ.
ಯಾವಾಗ ಕೋಪ ಬರುತ್ತದೆ ಎಂಬುದನ್ನು ಅರಿತುಕೊಂಡು, ಪರಸ್ಪರ ಒಬ್ಬರನ್ನು ಅರ್ಥ ಮಾಡಿಕೊಂಡು, ಅಗತ್ಯ ಅವಶ್ಯಕತೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದರಿಂದ ಮನುಷ್ಯ ತನ್ನೆಲ್ಲಾ ವೀಕ್ನೆಸ್ ಗೆಲ್ಲಬಹುದು.
ಅದರಲ್ಲಿಯೂ ವಿಶೇಷವಾಗಿ ದಾಂಪತ್ಯ ಬಯಸುವ ಬದ್ಧತೆ, ಗೌರವ, ಪ್ರೀತಿಗೆ ಗಂಡ-ಹೆಂಡತಿ ಇಬ್ಬರೂ ಬದ್ಧರಾಗಿದ್ದರೆ ಬದುಕು ಹಸನಾಗುವುದರಲ್ಲಿ ಅನುಮಾನವೇ ಇಲ್ಲ.
ಮೂರ್ಛೆ ರೋಗ ಇರುವವರಿಗೆ, ತಮಗೆ ಯಾವಾಗ ಫಿಟ್ಸ್ ಬರುತ್ತದೆ ಎಂಬುವುದು ಗೊತ್ತಾಗುತ್ತದೋ, ಹಾಗೆಯೇ ಸಿಟ್ಟು ಯಾವಾಗ ಬರುತ್ತದೆ ಎಂದು ಕೋಪಿಷ್ಠರು ತಮ್ಮನ್ನು ತಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ಅಂಥ ಸಂದರ್ಭ ಎದುರಾಗುತ್ತಿದ್ದಂತೆ ಕೂಲ್ ಆಗಿರಲು ಬೇಕಾದ ಮನಸ್ಥಿತಿಯನ್ನು ರೂಢಿಸಿಕೊಂಡರೆ ಹಲವು ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತಾಗುತ್ತದೆ.
ಒಟ್ಟಿನಲ್ಲಿ ನಿಮಗೆ ಬರುವ ಸಿಟ್ಟು ನಿಮ್ಮನ್ನು ಬೆಳೆಸುತ್ತಿದೆಯೋ ಅಥವಾ ನಿಮ್ಮನ್ನು ಕಿತ್ತು ತಿನ್ನುತ್ತಿದೆಯೋ ಎಂಬುದನ್ನು ಮೊದಲು ಅರ್ಥ ಮಾಡಿಕೊಂಡು ಅದನ್ನು ಗೆಲ್ಲಲು ಪ್ರಯತ್ನಿಸಿದರೆ, ಬದುಕಿನ ನೆಮ್ಮದಿ ನಿಮ್ಮದಾಗುತ್ತದೆ. ಸಿಟ್ಟನ್ನು ಗೆಲ್ಲಿ. ಖುಷಿಯಾಗಿ ಬದುಕಿ. ಆಲ್ ದಿ ಬೆಸ್ಟ್....