- Home
- Karnataka Districts
- Hassan
- ಅಂದು ಸಕಲೇಶಪುರದ ರಸ್ತೆಯಲ್ಲಿ ನಡೆದಿದ್ದೇನು? ಮಧ್ಯರಾತ್ರಿ ಬೈಕ್ ರೈಡರ್ಸ್ಗೆ ಸಿಕ್ಕ ಆ ತಲೆ ಇಲ್ಲದ ನೆರಳಿನ ರಹಸ್ಯವಿದು
ಅಂದು ಸಕಲೇಶಪುರದ ರಸ್ತೆಯಲ್ಲಿ ನಡೆದಿದ್ದೇನು? ಮಧ್ಯರಾತ್ರಿ ಬೈಕ್ ರೈಡರ್ಸ್ಗೆ ಸಿಕ್ಕ ಆ ತಲೆ ಇಲ್ಲದ ನೆರಳಿನ ರಹಸ್ಯವಿದು
Sakleshpur ghost photo ಸಕಲೇಶಪುರ ಕಾಡಿನಲ್ಲಿ ಮಧ್ಯರಾತ್ರಿ ರೈಡ್… ಒಂದು ಫೋಟೋ ಇಬ್ಬರು ಸ್ನೇಹಿತರ ಬದುಕನ್ನೇ ಬದಲಿಸಿತಂತೆ, ಒಂದು ವಿಚಿತ್ರ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕದ ಸಕಲೇಶಪುರ ಸಮೀಪದ ಕಾಡು ರಸ್ತೆಯಲ್ಲಿ ನಡೆದಿತ್ತೆಂದು ಹೇಳಲಾಗುತ್ತಿರುವ ಒಂದು ವಿಚಿತ್ರ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಮಧ್ಯರಾತ್ರಿ ಬೈಕ್ ರೈಡ್ಗೆ ತೆರಳಿದ್ದ ಇಬ್ಬರು ಸ್ನೇಹಿತರಿಗೆ ಸಂಭವಿಸಿದ ಅನುಭವಗಳು ಇಂದಿಗೂ ರಹಸ್ಯವಾಗಿಯೇ ಉಳಿದಿವೆ ಎನ್ನಲಾಗಿದೆ.
ಕುಣಿಗಲ್ನ ವೆಂಕಿ ಮತ್ತು ರಾಜು ಬೈಕ್ನಲ್ಲಿ ಸಕಲೇಶಪುರ ಪ್ರವಾಸಕ್ಕೆ ತೆರಳಿದ್ದರು. ಎರಡು ದಿನಗಳ ಪ್ರವಾಸದ ಬಳಿಕ ಜನವರಿ 8ರ ಮಧ್ಯರಾತ್ರಿ ಕುಣಿಗಲ್ಗೆ ಮರಳುವ ವೇಳೆ ದಟ್ಟ ಮಂಜಿನಿಂದ ತಪ್ಪು ದಾರಿ ಹಿಡಿದಿದ್ದಾರೆ. ಮಾಗಡಿ ಕಡೆ ಸಾಗುತ್ತಿದ್ದ ನಿರ್ಜನ ಕಾಡು ರಸ್ತೆಯಲ್ಲಿ ಅವರಿಗೆ ವಿಚಿತ್ರ ಅನುಭವಗಳು ಆರಂಭವಾಗಿವೆ ಎಂದು ಕಥೆ ಹೇಳುತ್ತದೆ.
ಮೊದಲು ರಾಜುಗೆ ಕಾಡಿನೊಳಗಿಂದ ಮರ ಕಡಿಯುವ ಶಬ್ದ ಕೇಳಿಸಿದೆ. ವೆಂಕಿ ಅದನ್ನು ನಿರ್ಲಕ್ಷಿಸಿದರೂ, ಸ್ವಲ್ಪ ಹೊತ್ತಿನ ಬಳಿಕ ಇಬ್ಬರಿಗೂ ಅದೇ ಶಬ್ದ ಸ್ಪಷ್ಟವಾಗಿ ಕೇಳಿದೆಯಂತೆ. ಕೆಲವೇ ನಿಮಿಷಗಳಲ್ಲಿ ಫೋಟೋ ತೆಗೆಯೋಣ ಎಂದು ನಿಂತ ಅವರು, ಬಳಿಕ ಗ್ಯಾಲರಿಯಲ್ಲಿ ಫೋಟೋ ನೋಡಿದಾಗ ವೆಂಕಿಯ ತಲೆಯ ಮೇಲೊಂದು ತಲೆ ಇಲ್ಲದ ನೆರಳು ಕಾಣಿಸಿಕೊಂಡಿತ್ತೆಂದು ಹೇಳಲಾಗಿದೆ.
ಆ ಫೋಟೋ ನೋಡಿ ಬೆಚ್ಚಿಬಿದ್ದ ಇಬ್ಬರೂ ಅಲ್ಲಿಂದ ಹೊರಡಲು ಮುಂದಾದರು. ಆದರೆ ರಾಜುವಿನ ವರ್ತನೆ ಏಕಾಏಕಿ ಬದಲಾಗತೊಡಗಿತು. "ಇಲ್ಲೇ ನನಗೆ ಪರಿಚಯದವರು ಇದ್ದಾರೆ... ಬೈಕ್ ನಿಲ್ಲಿಸು" ಎಂದು ಆತ ಪದೇ ಪದೇ ಹೇಳುತ್ತಿದ್ದನೆಂದು ವೆಂಕಿ ವಿವರಿಸಿದ್ದಾನೆ.
ಸ್ವಲ್ಪ ದೂರದಲ್ಲಿ ಮಂಜಿನ ನಡುವೆ ಇಬ್ಬರು ಮಹಿಳೆಯರ ಆಕೃತಿಗಳು ಕಾಣಿಸಿಕೊಂಡವು. ಅವರ ಮುಖಗಳು ಸ್ಪಷ್ಟವಾಗಿ ಕಾಣಿಸದಿದ್ದರೂ, ರಾಜು ಅವರನ್ನು ಪರಿಚಯದವರು ಎಂದು ಹೇಳುತ್ತಾ ಅವರ ಬಳಿಗೆ ಹೋಗಲು ಒತ್ತಾಯಿಸಿದ್ದಾನೆ ಎನ್ನಲಾಗಿದೆ.
ವೆಂಕಿ ಬೈಕ್ ನಿಲ್ಲಿಸದೆ ಮುಂದುವರಿದಾಗ, ರಾಜು ಕೋಪಗೊಂಡು ಅವನ ಕುತ್ತಿಗೆಯನ್ನು ಹಿಡಿದಿದ್ದಾನೆ. ಇದರಿಂದ ಬೈಕ್ ನಿಯಂತ್ರಣ ತಪ್ಪಿ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ವೆಂಕಿ ಸಹಾಯಕ್ಕಾಗಿ ಓಡುತ್ತಿದ್ದಾಗ, ಎದುರಿನಿಂದ ಬಂದ ಕೆಲ ಸ್ಥಳೀಯರು ರಾಜುವನ್ನು ರಕ್ಷಿಸಿದ್ದಾರೆ.
ಮರುದಿನ ಬೆಳಗ್ಗೆ ಇಬ್ಬರೂ ಸುರಕ್ಷಿತವಾಗಿ ಕುಣಿಗಲ್ ತಲುಪಿದರೂ, ರಾಜುವಿನ ಆರೋಗ್ಯ ಮತ್ತು ವರ್ತನೆ ದಿನದಿಂದ ದಿನಕ್ಕೆ ಬದಲಾಗತೊಡಗಿದೆಯಂತೆ. ಬಳಿಕ ಕುಟುಂಬದವರು ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸಿದ ನಂತರ ಮಾತ್ರ ಆತ ಸಹಜ ಸ್ಥಿತಿಗೆ ಬಂದನೆಂದು ಕಥೆಯಲ್ಲಿ ಹೇಳಲಾಗಿದೆ.
ನಂತರ ವೆಂಕಿ ಮತ್ತೆ ಅದೇ ಪ್ರದೇಶಕ್ಕೆ ತೆರಳಿ ಸ್ಥಳೀಯರೊಂದಿಗೆ ಮಾತನಾಡಿದಾಗ, ಆ ಕಾಡಿನಲ್ಲಿ ಹಲವು ವರ್ಷಗಳಿಂದ ವಿಚಿತ್ರ ಘಟನೆಗಳು ನಡೆದಿವೆ ಎಂಬ ಮಾತುಗಳನ್ನು ಕೇಳಿದ್ದಾಗಿ ಹೇಳಿದ್ದಾನೆ.
ಗಮನಿಸಿ: ಈ ಕಥೆ ಸಾಮಾಜಿಕ ಜಾಲತಾಣದಲ್ಲಿ ಲಭ್ಯವಾಗಿರುವ ಮಾಹಿತಿಯಾಗಿದ್ದು, ಈ ಸುದ್ದಿಗೆ ಏಷ್ಯಾನೆಟ್ ನ್ಯೂಸ್ ಕನ್ನಡಕ್ಕೆ ಯಾವುದೇ ಸಂಬಂಧವಿಲ್ಲ ಇದಕ್ಕೆ ವೈಜ್ಞಾನಿಕ ಅಥವಾ ಅಧಿಕೃತ ದೃಢೀಕರಣ ಲಭ್ಯವಿಲ್ಲ. ಇದನ್ನು ಮನರಂಜನೆ ಅಥವಾ ಜನಪ್ರಿಯ ನಂಬಿಕೆಗಳ ಕಥೆಯಾಗಿ ಮಾತ್ರ ಪರಿಗಣಿಸಬೇಕು.