ಪರೀಕ್ಷೆಯಲ್ಲಿ ಉತ್ತಮ ಮಾರ್ಕ್ಸ್ ಬೇಕೆನ್ನೋರು ಬಸಂತ ಪಂಚಮಿ ದಿನ ಈ ಕೆಲ್ಸ ತಪ್ಪದೆ ಮಾಡಿ
Basant Panchami 2026 : ಈ ವರ್ಷ ಜನವರಿ 23 ರಂದು ಬಸಂತ ಪಂಚಮಿ ಆಚರಣೆ ಮಾಡಲಾಗ್ತಿದೆ. ಬಸಂತ ಪಂಚಮಿ ಮಕ್ಕಳಿಗೆ ಸಾಕಷ್ಟು ವಿಶೇಷವಾಗಿದೆ. ಆ ದಿನ ಮಕ್ಕಳು ಮಾಡುವ ಕೆಲ್ಸ, ಅವರು ವಿದ್ಯೆಯಲ್ಲಿ ಏಳ್ಗೆ ಕಾಣಲು ದಾರಿಯಾಗುತ್ತದೆ.

ಬಸಂತ ಪಂಚಮಿ
ಮಾಘ ಮಾಸದ ಐದನೇ ಪಂಚಮಿ ದಿನದಂದು ಬಸಂತ ಪಂಚಮಿಯನ್ನು ಆಚರಿಸಲಾಗುತ್ತದೆ. ಈ ಬಾರಿ ಜನವರಿ 23 ರಂದು ಬಸಂತ ಪಂಚಮಿ ಆಚರಿಸಲಾಗ್ತಿದೆ. ಕಲಿಕೆ, ಜ್ಞಾನ, ಕಲೆ ಮತ್ತು ಸಂಗೀತದ ದೇವತೆ ಸರಸ್ವತಿಯನ್ನು ಈ ದಿನ ಪೂಜಿಸಲಾಗುತ್ತದೆ. ಈ ದಿನ ವಿದ್ಯಾರ್ಥಿಗಳಿಗೆ ಬಹಳ ವಿಶೇಷವಾದ ದಿನ. ಬಸಂತ್ ಪಂಚಮಿಯಂದು ಮಕ್ಕಳಿಗಾಗಿ ವಿದ್ಯಾರಂಭ ಸಂಸ್ಕಾರ ಮಾಡುವುದು ಬಹಳ ಶುಭವೆಂದು ಪರಿಗಣಿಸಲಾಗಿದೆ. ಹಾಗೆ ಮಾಡುವುದರಿಂದ ಜೀವನದಲ್ಲಿ ಪ್ರಗತಿ ಉಂಟಾಗುತ್ತದೆ ಎಂದು ನಂಬಲಾಗಿದೆ.
ಸರಸ್ವತಿ ಮಂತ್ರ
ಫೆಬ್ರವರಿ ಅಂದ್ರೆ ಅದು ಪರೀಕ್ಷಾ ತಿಂಗಳು. ಫೆಬ್ರವರಿ ಹಾಗೂ ಮಾರ್ಚ್ ನಲ್ಲಿ ಎಲ್ಲ ಮಕ್ಕಳು ಪರೀಕ್ಷೆ ತರಾತುರಿಯಲ್ಲಿರುತ್ತಾರೆ. ಪರೀಕ್ಷೆಯಲ್ಲಿ ಉತ್ತಮ ಅಂಕ ಬರಬೇಕು ಎನ್ನುವವರು ಬಸಂತ ಪಂಚಮಿಯಂದು ಬಹು ಮುಖ್ಯ ಕೆಲ್ಸವನ್ನು ಮಾಡಬೇಕು. ವಿದ್ಯಾರ್ಥಿಗಳು ಬೆಳಿಗ್ಗೆ ಸ್ನಾನ ಮಾಡಿ ಸರಸ್ವತಿ ದೇವಿಯನ್ನು ಪೂಜಿಸಬೇಕು. ಓಂ ಐಂ ಸರಸ್ವತ್ಯೈ ನಮಃ ಎಂಬ ಮಂತ್ರವನ್ನು 108 ಬಾರಿ ಜಪಿಸಬೇಕು. ಹಾಗೆ ಮಾಡುವುದರಿಂದ ವಿದ್ಯಾರ್ಥಿಗಳು ಬುದ್ಧಿವಂತಿಕೆ ಮತ್ತು ಏಕಾಗ್ರತೆಯನ್ನು ಪಡೆಯುತ್ತಾರೆ. ಗಮನವನ್ನು ಒಂದೇ ಕಡೆ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ.
ಬಸಂತ ಪಂಚಮಿ ದಾನ
ಬಸಂತ ಪಂಚಮಿಯಂದು ಬರೀ ಸರಸ್ವತಿ ಪೂಜೆ ಮಾತ್ರ ಶ್ರೇಷ್ಠವಲ್ಲ. ದಾನ ಕೂಡ ಶ್ರೇಷ್ಠತೆ ಪಡೆದಿದೆ. ಬಸಂತ ಪಂಚಮಿಯಂದು ವಿದ್ಯಾರ್ಥಿಗಳು ಸರಸ್ವತಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಬೇಕು. ನೋಟ್ಬುಕ್ಗಳು, ಪುಸ್ತಕಗಳು, ಪೆನ್ಸಿಲ್ಗಳು, ಪೆನ್ನುಗಳು ಇತ್ಯಾದಿಗಳನ್ನು ಇತರರಿಗೆ ದಾನ ಮಾಡಿದರೆ, ಸರಸ್ವತಿ ತೃಪ್ತಳಾಗ್ತಾಳೆ. ವಿದ್ಯಾಭ್ಯಾಸದಲ್ಲಿ ಯಶಸ್ಸು ಸುಲಭವಾಗಿ ಸಾಧ್ಯವಾಗುತ್ತದೆ.
ಇದೇ ಅಂತಿಮ ಅಲ್ಲ
ಸರಸ್ವತಿ ದೇವಿಯ ಪೂಜೆ ಹಾಗೂ ದಾನ ಅಂತಿಮವಲ್ಲ. ಬಸಂತ ಪಂಚಮಿ ದಿನ ಸರಸ್ವತಿ ದೇವಿಯ ಪೂಜೆ ಮಾಡಿದ್ರೆ ಪರೀಕ್ಷೆಯಲ್ಲಿ ಯಶಸ್ಸು ಸಿಗುತ್ತದೆ ನಿಜ. ಆದ್ರೆ ವಿದ್ಯಾರ್ಥಿಗಳ ಶ್ರಮ ಇಲ್ಲಿ ಅತ್ಯಗತ್ಯ. ದೇವಿ ನಿಮಗೆ ಆಶೀರ್ವಾದ ಹಾಗೂ ಜ್ಞಾನ ನೀಡುತ್ತಾಳೆ. ನೀವು ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಓದಿ ಪರೀಕ್ಷೆಗೆ ಸಿದ್ಧರಾಗಬೇಕು. ಜೊತೆಗೆ ಪ್ರಾಮಾಣಿಕತೆಯಿಂದ ಪರೀಕ್ಷೆ ಬರೆಯಬೇಕು. ಆಗ ಮಾತ್ರ ಸರಸ್ವತಿ ಆಶೀರ್ವಾದ ನಿಮಗೆ ಸಂಪೂರ್ಣವಾಗಿ ಸಿಗಲು ಸಾಧ್ಯ.
ಸರಸ್ವತಿ ಫೋಟೋ
ಬಸಂತ ಪಂಚಮಿ ದಿನ ನೀವು ನಿಮ್ಮ ಸ್ಟಡಿ ರೂಮಿನಲ್ಲಿ ಸರಸ್ವತಿ ದೇವಿಯ ಫೋಟೋ ಅಥವಾ ಮೂರ್ತಿಯನ್ನು ಇಡಿ. ದೇವಿ ಫೋಟೋ, ಮಕ್ಕಳಿಗೆ ಅಧ್ಯಯನ ಮಾಡುವ ಬುದ್ಧಿಯನ್ನು ನೀಡುತ್ತದೆ. ಪ್ರತಿದಿನ ಮಕ್ಕಳ ಕಣ್ಣಿಗೆ ಈ ಸರಸ್ವತಿ ದೇವಿ ಫೋಟೋ ಕಾಣಿಸೋದ್ರಿಂದ ಸರಸ್ವತಿ ದೇವಿಯ ಆಶೀರ್ವಾದ ಮಕ್ಕಳಿಗೆ ದೊರೆಯುತ್ತದೆ. ಓದಿನಲ್ಲಿಏಕಾಗ್ರತೆ ಹೆಚ್ಚಾಗುತ್ತದೆ.
ಸರಸ್ವತಿಯ ನೆಚ್ಚಿನ ನೈವೇದ್ಯ
ಬಸಂತ ಪಂಚಮಿ ದಿನ ಸರಸ್ವತಿಗೆ ಪೂಜೆ ಮಾಡುವ ಜೊತೆಗೆ ಆಕೆಯ ನೆಚ್ಚಿನ ಆಹಾರವನ್ನು ನೀವು ನೈವೇದ್ಯವಾಗಿ ನೀಡಬೇಕು. ಸರಸ್ವತಿ ದೇವಿಗೆ ಹಳದಿ ಬಣ್ಣ ತುಂಬಾ ಇಷ್ಟ. ಹಳದಿ ಶುದ್ಧತೆ, ಹೊಸ ಶಕ್ತಿ ಮತ್ತು ಜ್ಞಾನವನ್ನು ಸಂಕೇತಿಸುತ್ತದೆ. ಹಾಗಾಗಿ ನೀವು ಕೇಸರಿ ಸಿಹಿ ಅನ್ನವನ್ನು ಸರಸ್ವತಿಗೆ ಅರ್ಪಿಸಿ. ಬೇಸನ್ ಲಡ್ಡು, ಮಾಲ್ಪುವಾ, ಪ್ಲಮ್, ಹಳದಿ ಹಣ್ಣು ಅಥವಾ ಸಿಹಿ, ಜೇನುತುಪ್ಪ , ಸಕ್ಕರೆ ಮಿಠಾಯಿಯನ್ನು ನೀವು ದೇವಿಗೆ ನೈವೇದ್ಯದ ರೂಪದಲ್ಲಿ ಅರ್ಪಿಸಬಹುದು.

