ರಫೀ ಎಂಬ ಗಾಯನ ಲೋಕದ ಸಿಹಿಯಾದ ಬರ್ಫಿ
ಭಾರತೀಯ ಚಿತ್ರರಂಗದಲ್ಲಿ ಸಂಗೀತ ತನ್ನದೇ ಆದ ವಿಶೇಷ ಪ್ರಾಧಾನ್ಯತೆ ಪಡೆದುಕೊಂಡಿದೆ.ಮನರಂಜನಾ ಕ್ಷೇತ್ರದಲ್ಲಿ ತಮ್ಮ ಸಾಧನೆಯ ಮೂಲಕ ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಗಿಟ್ಟಿಸಿಕೊಂಡಿರುವವರು ಅನೇಕರಿದ್ದಾರೆ ಅಂತವರಲ್ಲಿ ಗಾಯಕ ಮೊಹಮದ್ ರಫೀ ಮೊದಲಿಗರಾಗಿದ್ದಾರೆ. ಅಂದಿನಿಂದ ಇಂದಿನವರೆಗೂ ತಮ್ಮ ಹಾಡುಗಳಿಂದ ಕೇಳುಗರನ್ನು ತನ್ಮಯಗೊಳಿಸುತ್ತಿದ್ದಾರೆ. ಸಾವು ಶರೀರಕ್ಕಷ್ಟೇ ಶಾರೀರಕ್ಕಲ್ಲ ಎಂಬ ಮಾತಿಗೆ ಸ್ಪಷ್ಟ ಉದಾಹರಣೆಯಾಗಿದ್ದಾರೆ ರಫೀ ಅವರು.ಇಂದು ಈ ಮಹಾನ್ ಚೇತನರ ಪುಣ್ಯಸ್ಮರಣೆಯ ದಿನವಾಗಿದ್ದು ಅವರನ್ನು ಗೌರವದಿಂದ ನೆನಪಿಸಿಕೊಳ್ಳುತ್ತಾ ಸಾವಿರದ ಅವರ ಹಾಡುಗಳಿಗೆ ಮತ್ತೆ ಮತ್ತೆ ಕಿವಿಯಾಗೋಣ...
ಕ್ಯಾ ಹೂವ ತೇರಾ ವಾದ , ಚಾಂದ್ ಮೇರಾ ದಿಲ್ ಹಾಡುಗಳ್ಳನ ಕೇಳಿದ್ದೀರೇನೋ ನಮ್ ರಫೀ ಸಾಬ್ ಹಾಡಿರೋದು ಅಂತ ನಮ್ಮ ಹಿರಿಯರು ಹೆಮ್ಮೆಯಿಂದ ಹೇಳ್ಕೊಳೋವಾಗ ರಫೀ ಅವರು ಭಾಷೆಗಳ ಗಡಿ ದಾಟಿ ಜನರಿಗೆ ಎಷ್ಟು ಹತ್ತಿರವಾಗಿದ್ದಾರೆ ಎನ್ನುವುದು ತಿಳಿಯುತ್ತದೆ. ತಮ್ಮ ಮುದ್ದು ಕಂಠದ ಮೂಲಕವಷ್ಟೇಯಲ್ಲದೆ ಮುಗ್ಧ ನಗುವಿನಿಂದಲೂ ಜನರನ್ನು ಸೆಳೆಯುತ್ತಿದ್ದರು ರಫೀ.
ಬೆಟ್ಟದಷ್ಟು ಸಾಧನೆ ಮಾಡಿರುವ ಇವರ ವೈಯಕ್ತಿಕ ಜೀವನವೂ ಕೂಡ ಸಾಕಷ್ಟು ವಿಶೇಷಗಳಿಂದ ಕೂಡಿದೆ .ಅಮೃತಸರ್ ಹತ್ತಿರದ ಕೋಟ್ಲಾ ಸುಲ್ತಾನ್ ಸಿಂಗ್ ನಲ್ಲಿ ಡಿಸೆಂಬರ್ 24,1924 ರಂದು ಜನಿಸಿದ ಇವರು ತಮ್ಮ 13 ನೇ ವಯಸ್ಸಿನಲ್ಲೇ ಹಾಡುಗಾರಿಕೆಯಲ್ಲಿ ಪ್ರಶಂಸೆ ಗಿಟ್ಟಿಸಿಕೊಂಡವರು.ಶಾಸ್ತ್ರೀಯ ಸಂಗೀತ, ಗಜ್ಹಲ್ ಹೀಗೆ ವಿವಿಧ ಮಾದರಿಯಲ್ಲಿ ಪರಿಣಿತರಾಗಿದ್ದವರು ನಂತರ ಸಿನಿ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟು ತಮ್ಮ 40 ವರ್ಷದ ಯಶಸ್ವಿ ಸಿನಿ ಪಯಣದಲ್ಲಿ 19 ಭಾಷೆಗಳಲ್ಲಿ ಸರಿಸುಮಾರು 26000 ಕ್ಕೂ ಅಧಿಕ ಹಾಡುಗಳನ್ನು ಹಾಡಿರುವುದು ಇವರ ಹೆಗ್ಗಳಿಕೆ.
ದುಃಖವನ್ನು ಬಿಂಬಿಸುವ ಹಾಡುಗಳಾದ ಕ್ಯಾ ಹುಹಾ ತೆರೆ ವಾದಾ ದಿಂದ ನೃತ್ಯ ಪ್ರಧಾನ ಗೀತೆ ಆಫ್ಫೋ ಖುದಾ ಹಾಡುಗಳು ಚಿತ್ರ ರಸಿಕರ ಮನದಲ್ಲಿ ಇಂದಿಗೂ ಗುನುಗುವಂತಿದೆ. ಜೋ ವಾದಾ ಕಿಯಾ ವೋ ನಿಭಾನಾ ಪಡೆಗಾ , ಮೈ ಜಿಂದಗಿ ಕಾ ಸಾಥ್ ನಿಭಾತಾ ಚಲಾ ಗಯಾ, ತುಮ್ ಜೋ ಮಿಲ್ ಗಯೇ ಹೋ ,ದೀನ್ ಧಾಲ್ ಜಾಯೆ ಇಂತಹ ಸಾವಿರಾರು ಗೀತೆಗಳನ್ನು ನೀಡಿರುವ ರಫೀ ಅವರ ಗಾಯನ ಶೈಲಿ ಹಿಂದಿನ ,ಇಂದಿನ ಮತ್ತು ಮುಂದಿನ ಪೀಳಿಗೆಯ ಸಂಗೀತ ಪ್ರೇಮಿಗಳ ಮೇಲೆ ಸಾಕಷ್ಟು ಪ್ರಭಾವ ಬೀರಿದೆ.
5 ರಾಷ್ಟ್ರೀಯ ಪ್ರಶಸ್ತಿ , 6 ಫಿಲಂ ಫೇರ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಇವರಿಗೆ 1967ರಲ್ಲಿ ಭಾರತ ಸರ್ಕಾರ ನೀಡುವ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ .ರಫೀ ಅವರ ಕಂಠ ಕೇವಲ ಸ್ವದೇಶಕ್ಕೆ ಸಮೀತವಾಗಿರದೆ ವಿದೇಶಿ ಭಾಷೆಗಳಾದ ಇಂಗ್ಲೀಷ್, ಪರ್ಸಿಯನ್, ಸ್ಪ್ಯಾನಿಶ್ ಮತ್ತು ಡಚ್ ನಲ್ಲೂ ಹಾಡುಗಳನ್ನು ಧ್ವನಿ ಮುದ್ರಣ ಮಾಡಿದ್ದಾರೆ.
ತಮ್ಮ ಹಾಡುಗಾರಿಕೆಯ ವೃತ್ತಿ ಜೀವನದಲ್ಲಿ ನೌಶಾದ್. ಎಸ್ ಡಿ ಬರ್ಮನ್ , ಶಂಕರ್ ಜೈ ಕಿಶನ್ , ಮದನ್ ಮೋಹನ್ ,ಲಕ್ಷ್ಮಿಕಾಂತ್-ಪ್ಯಾರೆಲಾಲ್ ಮುಂತಾದ ದಿಗ್ಗಜ ಸಂಯೋಜಕರೊಂದಿಗಿನ ಕೆಲಸ ಮಾಡುತ್ತಾ ಅವರೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದು ಅದೆಷ್ಟೋ ಹಿಟ್ ಹಾಡುಗಳನ್ನು ನೀಡಲು ಸಹಕಾರಿಯಾಗಿದೆ ಎಂದು ಅನೇಕ ಸಲ ಖುದ್ದು ರಫಿ ಅವರೇ ಹೇಳಿಕೊಂಡಿದ್ದಾರೆ.
ಒಂದೇ ಬಳ್ಳಿಯ ಹೂಗಳು ಚಿತ್ರದ ಗೀತಪ್ರಿಯ ಅವರ ಸಾಹಿತ್ಯದ "ನೀನೆಲ್ಲಿ ನಡೆವೆ ದೂರ ಎಲ್ಲೆಲ್ಲೂ ಶೋಕವೇ "ಎಂಬ ಏಕೈಕ ಕನ್ನಡ ಹಾಡಿಗೆ ದನಿಯಾಗಿರುವುದು ಕನ್ನಡಿಗರಿಗೆ ಖುಷಿಯ ಸಂಗತಿ ಅಷ್ಟೇಯಲ್ಲದೆ ಪ್ರಸಿದ್ಧ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ಅವರಿಗೆ ರಫೀ ಅವರೇ ಸ್ಪೂರ್ತಿ ಎನ್ನುವುದು ಅವರ ಸಾಧನೆಗೆ ಸಾಕ್ಷಿಯಾಗಿದೆ.
ಲಕ್ಷ್ಮಿಕಾಂತ್-ಪ್ಯಾರೆಲಾಲ್ ಅವರ "ಶ್ಯಾಮ್ ಫಿರ್ ಕ್ಯುಂವ್ ಉದಾಸ್ ಹೈ ದೋಸ್ತ್" ಹಾಡು ರಫೀ ಅವರ ಕಂಠದಿಂದ ಹೊರಬಂದ ಕೊನೆಯ ಹಾಡಾಗಿದ್ದು ಇವರು ಸಾವಿಗೀಡಾಗುವ ಕೆಲವೇ ಗಂಟೆಗಳ ಮುಂಚೆ ರೆಕಾರ್ಡ್ ಮಾಡಿದ್ದರಂತೆ.ಜುಲೈ31 ,1980 ,ಗುರುವಾರ ರಾತ್ರಿ 10:50ರ ಸುಮಾರು ಹೃದಯಾಘಾತಕ್ಕೊಳಗಾಗಿ ಮೃತರಾದರು.
ಇಂದು ಈ ಮಹಾನ್ ಚೇತನ ನಮ್ಮೆಲ್ಲರನ್ನು ಅಗಲಿದ ದಿನವಾಗಿದ್ದು 40 ವರ್ಷಗಳೇ ಕಳೆದಿವೆ. ಅವರ ಹಾಡುಗಳನ್ನು ಗುನುಗುತ್ತಾ ಗೌರವದಿಂದ ಸ್ಮರಿಸೋಣ.ಅಂದಹಾಗೆ ,ರಫೀ ಅವರ ನಿಮ್ಮಿಷ್ಟದ ಹಾಡು ಯಾವುದು ಕಾಮೆಂಟ್ ಮೂಲಕ ತಿಳಿಸಿ.