ಅಮಿತಾಭ್ಗಾಗಿ ಉರುಳುಸೇವೆ ಮಾಡಿದ್ದ ಡಾ.ರಾಜ್: ಆ ದಿನಗಳ ನೆನೆದ ಜಯಂತ್ ಕಾಯ್ಕಿಣಿ
ಬಾಲಿವುಡ್ ನಟ ಅಮಿತಾಭ್ ಬಚ್ಚನ್ 'ಕೂಲಿ' ಚಿತ್ರದ ಚಿತ್ರೀಕರಣದ ವೇಳೆ ಗಾಯಗೊಂಡಾಗ, ಡಾ. ರಾಜ್ಕುಮಾರ್ ಅವರು ನಂಜನಗೂಡಿಗೆ ತೆರಳಿ ಉರುಳು ಸೇವೆ ಮಾಡಿ ಪ್ರಾರ್ಥಿಸಿದ್ದರು. ಸಾಹಿತಿ ಜಯಂತ್ ಕಾಯ್ಕಿಣಿ ಮತ್ತು ಸ್ವತಃ ಅಮಿತಾಭ್ ಬಚ್ಚನ್ ಅವರೇ ಈ ಘಟನೆಯನ್ನು ನೆನಪಿಸಿಕೊಂಡಿದ್ದರು.

ಡಾ.ರಾಜ್ ಮಾನವೀಯ ಗುಣ
ಬಣ್ಣದ ಲೋಕದಲ್ಲಿ ಒಬ್ಬ ನಟನಿಗಾಗಿ ಇನ್ನೊಬ್ಬ ನಟ ಮನ ಮಿಡಿಯುವುದು, ಒಬ್ಬನ ಶ್ರೇಯಸ್ಸಿಗೆ ಇನ್ನೊಬ್ಬ ಆಶಿಸುವುದು, ಹಾರೈಕೆ ಮಾಡುವುದು ಬಲು ಅಪರೂಪ. ಏಕೆಂದರೆ ವಿವಿಧ ಕ್ಷೇತ್ರಗಳಂತೆಯೇ ಇಲ್ಲಿಯೂ ಭಾರಿ ಪೈಪೋಟಿ, ಸ್ಪರ್ಧೆ ಇದ್ದೇ ಇರುತ್ತದೆ. ಆದರೆ ಇದಕ್ಕಿಂತ ಸ್ವಲ್ಪ ಭಿನ್ನವಾಗಿದ್ದವರು ಕರುನಾಡ ಕಣ್ಮಣಿ ಎನ್ನಿಸಿದ್ದ ಡಾ.ರಾಜ್ಕುಮಾರ್. ಬಾಲಿವುಡ್ ಬಿಗ್-ಬಿ ಎಂದೇ ಫೇಮಸ್ ಆಗಿರೋ ಅಮಿತಾಭ್ ಬಚ್ಚನ್ ಮತ್ತು ಡಾ.ರಾಜ್ ಅವರಿಗೆ ನಿಕಟ ಸಂಬಂಧವಿತ್ತು. ಒಮ್ಮೆ ಡಾ. ರಾಜ್ಕುಮಾರ್ ಅವರು ಅಮಿತಾಭ್ ಅವರಿಗಾಗಿ ಉರುಳು ಸೇವೆ ಮಾಡಿದ್ದರಂತೆ.
ಜಯಂತ್ ಕಾಯ್ಕಿಣಿ ನೆನೆದ ಘಟನೆ
ಈ ವಿಷಯವನ್ನು ಕವಿ, ಕತೆಗಾರ, ಸಾಹಿತಿ ಜಯಂತ್ ಕಾಯ್ಕಿಣಿ ಅವರು ಇದೀಗ ವಿವರಿಸಿದ್ದಾರೆ. radio azimpremji univಗೆ ನೀಡಿರುವ ಸಂದರ್ಶನದಲ್ಲಿ ಕಾಯ್ಕಿಣಿ ಅವರು ಈ ವಿಷಯವನ್ನು ತೆರೆದಿಟ್ಟಿದ್ದಾರೆ. 1983ರಲ್ಲಿ ತೆರೆ ಕಂಡ ಅಮಿತಾಭ್ ನಟನೆಯ ಕೂಲಿ ಚಿತ್ರ ಸಕತ್ ಸೌಂಡ್ ಮಾಡಿರುವುದು ಸಿನಿಪ್ರಿಯರಿಗೆ ತಿಳಿದೇ ಇದೆ. ಇದಕ್ಕೆ ಕಾರಣ, ವಿಲನ್ ಚೂರಿ ಹಾಕುವ ದೃಶ್ಯ ಮಾಡುವಾಗ, ಅಕಸ್ಮಾತ್ತಾಗಿ ಆ ರಿಯಲ್ ಚಾಕು ಅಮಿತಾಭ್ ಅವರ ಹೊಟ್ಟೆಯನ್ನು ಹೊಕ್ಕು ಭಾರಿ ದುರಂತ ಸಂಭವಿಸಿತ್ತು.
ಅಮಿತಾಭ್ಗೆ ಅಪಘಾತ
ಅಮಿತಾಭ್ ಅವರು ಆಗ ಸಾವು- ನೋವಿನ ನಡುವೆ ಇದ್ದರು. ಎಲ್ಲರೂ ಅವರ ಒಳಿತಿಗಾಗಿ, ಅವರು ಹುಷಾರಾಗಿ ಬರಲಿ ಎಂದು ಹಾರೈಸುತ್ತಿದ್ದರು. ಆ ಸಂದರ್ಭದಲ್ಲಿ ಅಪಾರ ದೈವ ಭಕ್ತರಾಗಿದ್ದ ಡಾ.ರಾಜ್ ಅವರು, ನಂಜನಗೂಡಿಗೆ ಹೋಗಿ ಅಮಿತಾಭ್ ಬಚ್ಚನ್ ಅವರ ಚೇತರಿಕೆಗಾಗಿ ಏಳು ಉರುಳು ಸೇವೆ ಮಾಡಿರುವ ಬಗ್ಗೆ ಕಾಯ್ಕಿಣಿ ಹೇಳಿದ್ದಾರೆ. ಅಂಥ ತುಂಬಾ ಮಾನವೀಯ ನೆಲೆಯ ಮನುಷ್ಯ ಆಗಿದ್ದರು ಎಂದು ಹೇಳಿದ್ದಾರೆ.
ಕೌನ್ ಬನೇಗಾ ಕರೋರ್ಪತಿಯಲ್ಲಿ
ಈ ಹಿಂದೆ ಕೌನ್ ಬನೇಗಾ ಕರೋರ್ಪತಿಯ ಸಂದರ್ಭದಲ್ಲಿ ನಟ ರಿಷಬ್ ಶೆಟ್ಟಿ ಅವರು ಹೋಗಿದ್ದಾಗ, ಈ ಘಟನೆಯನ್ನು ಖುದ್ದು ಅಮಿತಾಭ್ ಅವರೇ ನೆನಪಿಸಿಕೊಂಡಿದ್ದರು. ಕೂಲಿ ಚಿತ್ರದ ಘಟನೆಯ ಬಳಿಕ ವೈದ್ಯರು ಕೂಡ 'ಕ್ಲಿನಿಕಲಿ ಡೆಡ್' ಎಂದು ಘೋಷಿಸಿಬಿಟ್ಟಿದ್ದರು. ಬಳಿಕ ನಿರಂತರ ಚಿಕಿತ್ಸೆಯಿಂದಾಗಿ ನಾನು ಬದುಕುಳಿದಿದ್ದೆ ಎಂದಿದ್ದರು ನಟ.
ಡಾ.ರಾಜ್ರನ್ನು ನೆನೆದಿದ್ದ ಬಿಗ್ ಬಿ
ಸಂದರ್ಭದಲ್ಲಿ ಕನ್ನಡದ ದಿಗ್ಗಜ ನಟ ಡಾ. ರಾಜ್ಕುಮಾರ್ ಅವರು ನನಗಾಗಿ, ನನ್ನ ಜೀವ ಉಳಿಯಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು. ಅವರು ದೇವಸ್ಥಾನವೊಂದಕ್ಕೆ ಹೋಗಿ, ಅಲ್ಲಿ ಒದ್ದೆ ಬಟ್ಟೆ ಧರಿಸಿ, ದೇವರಲ್ಲಿ ನನ್ನ ಜೀವ ಉಳಿಯಲೆಂದು 'ಉರುಳು ಸೇವೆ'ಯನ್ನು ತಮಗಾಗಿ ರಾಜ್ಕುಮಾರ್ ಅವರು ಮಾಡಿದ್ದರು ಎಂದು ಅಮಿತಾಭ್ ಹೇಳಿದ್ದರು.
ತುಂಬಾ ಸಿಂಪಲ್ ಮನುಷ್ಯ
ಸರಳ ಉಡುಪು ಧರಿಸಿ, ಸರಳವಾಗಿ ವಾಸಿಸುತ್ತಿದ್ದರು. ಅವರ ಮಾತುಗಳಲ್ಲಿ ಅಂತಹ ಆತ್ಮೀಯತೆ ಇತ್ತು. ಅಷ್ಟು ದೊಡ್ಡ ನಟರಾಗಿದ್ದರೂ, ತುಂಬಾ ಸಿಂಪಲ್ ಆಗಿರುತ್ತಿದ್ದರು. ಡಾ. ರಾಜ್ಕುಮಾರ್ ಅವರು ನಿಧನರಾಗುವವರೆಗೂ ಅವರೊಂದಿಗೆ ಬಾಂಧವ್ಯ ಇತ್ತು. ಅವರ ಮಕ್ಕಳೂ ಈಗ ದೊಡ್ಡ ನಟರಾಗಿದ್ದಾರೆ. ಅವರೊಂದಿಗೂ ನನಗೆ ಉತ್ತಮ ಸಂಬಂಧವಿದೆ. ರಾಜ್ಕುಮಾರ್ ಅವರಂತಹ ಮಹಾನ್ ವ್ಯಕ್ತಿಯ ಆಶೀರ್ವಾದ ಪಡೆದದ್ದು ನನ್ನ ಪುಣ್ಯ'' ಎಂದು ಹೇಳಿದ್ದರು ಅಮಿತಾಭ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

