Bengaluru ಒಂದೇ ಕುಟುಂಬದ ನಾಲ್ವರು ಆತ್ಮ*ಹತ್ಯೆಗೆ ಯತ್ನ; ಇಬ್ಬರು ಸಾವು, ಮತ್ತಿಬ್ಬರು ಗಂಭೀರ
ಬೆಂಗಳೂರಿನ ಆನೇಕಲ್ ಬಳಿ ಸಾಲದ ಬಾಧೆ ತಾಳಲಾರದೆ ಒಂದೇ ಕುಟುಂಬದ ನಾಲ್ವರು ಆತ್ಮ*ಹತ್ಯೆಗೆ ಯತ್ನಿಸಿದ್ದಾರೆ. ಈ ಘಟನೆಯಲ್ಲಿ ತಾಯಿ ಮತ್ತು ಮಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಂದೇ ಕುಟುಂಬದ ನಾಲ್ವರು
ಒಂದೇ ಕುಟುಂಬದ ನಾಲ್ವರು ಆತ್ಮ*ಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆ ಸಮೀಪದ ಮಲ್ಲೇನಹಳ್ಳಿಯಲ್ಲಿ ನಡೆದಿದೆ. ಸಾಲಗಾರರ ಕಾಟ ತಾಳಲಾರದೇ ಆತ್ಮ *ಹತ್ಯೆಗೆ ಯತ್ನಿಸಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ನಾಲ್ವರಲ್ಲಿ ಇಬ್ಬರು ಮನೆಯಲ್ಲಿ ಮೃತರಾಗಿದ್ದು, ಇಬ್ಬರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇಬ್ಬರ ಸಾವು
ಆಶಾ (55), ವರ್ಷಿತಾ (34) ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮೋಹನ್ ಗೌಡ (32) ಮತ್ತು ಮಯಾಂಕ್ (11) ಗಂಭೀರವಾಗಿ ಗಾಯಗೊಂಡಿದ್ದು, ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಸಾಲಗಾರರ ಕಾಟ ತಾಳಲಾರದೆ ಆತ್ಮ*ಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಮೃತರು ವಿಡಿಯೋ ಮಾಡಿ ಕೆಲವರೊಂದಿಗೆ ಶೇರ್ ಮಾಡಿಕೊಂಡಿದ್ದರು.
ಗಾಯಾಳುಗಳಿಗೆ ಚಿಕಿತ್ಸೆ
ಈ ವಿಡಿಯೋ ನೋಡಿದ ಸಂಬಂಧಿಕರು ಮನೆ ಬಳಿ ಆಗಮಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಮೋಹನ್ ಗೌಡ ಮತ್ತು ಮಯಾಂಕ್ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಚಾಕುವಿನಿಂದ ಕತ್ತು ಕೊಯ್ದ
ಮೋಹನ್ ಎಂ ಆರ್ ಬಾಗಿಲನ್ನು ಹಾಕಿಕೊಂಡು ತನ್ನ ತಾಯಿಯಾದ ಶ್ರೀಮತಿ ಆಶಾ, ಅಕ್ಕ. ವರ್ಷಿತ, ಅಕ್ಕನ ಮಗ ಮಯಾಂಕ್ 11 ವರ್ಷ ರವರನ್ನು ಚಾಕುವಿನಿಂದ ಕತ್ತು ಕೊಯ್ದು ತಾನು ಕತ್ತು ಕುಯ್ದುಕೊಂಡಿರುತ್ತಾನೆ. ಸ್ಥಳದಲ್ಲಿ ತಾಯಿ ಆಶಾ ಮತ್ತು ಅಕ್ಕ ವರ್ಷಿತ ಮೃತಪಟ್ಟಿದ್ದು ಮೋಹನ್ ಮತ್ತು ಮಯಾಂಕ್ ತೀವ್ರ ಸ್ವರೂಪದ ರಕ್ತ ಗಾಯಗಳಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಾಲ
ಅಕ್ಕ ಪಕ್ಕದ ಮನೆಯವರು ಕಿರುಚಾಡುವ ಶಬ್ದ ಕೇಳಿ ಬಂದು ಬಾಗಿಲು ಹೊಡೆದು ನೋಡಲಾಗಿ ತಾಯಿ ಮತ್ತು ಮಗಳು ಮೃತಪಟ್ಟಿದ್ದು ಗಾಯಾಳುಗಳಾದ ಮೋಹನ್ ಮತ್ತು ಮಯಂಕ್ ರವರನ್ನು ಅತ್ತಿಬೆಲೆಯ ಎಲೈಟ್ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ. ಮೋಹನ್ ರವರ ಅಕ್ಕ ವರ್ಷಿತ ಈಗ್ಗೆ ಸುಮಾರು ಒಂದುವರೆ ವರ್ಷಗಳಿಂದ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದು ಕೋಮ ಹಂತದಲ್ಲಿರುತ್ತಾರೆ. ಇವರ ಚಿಕಿತ್ಸೆಗಾಗಿ ಸಾಕಷ್ಟು ಹಣ ಸಾಲ ಮಾಡಿಕೊಂಡಿದ್ದು ಸಾಲದ ಹೊರೆ ತಡೆಯಲಾರದೆ ಈ ರೀತಿ ಮೋಹನ್ ಚಾಕುವಿನಿಂದ ತಾಯಿ, ಅಕ್ಕ ಮತ್ತು ಅಕ್ಕನ ಮಗನ ಕತ್ತು ಕೊಯ್ದು ತಾನು ಕತ್ತು ಕುಯ್ದುಕೊಂಡು ಆತ್ಮ*ಹತ್ಯೆಗೆ ಪ್ರಯತ್ನ ಪಟ್ಟಿರುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ

