- Home
- Sports
- Cricket
- IPL ಪಾದಾರ್ಪಣೆ ಪಂದ್ಯದಲ್ಲೇ RCB ಬ್ಯಾಟರ್ಗಳನ್ನು ಕಾಡಿದ ಮಾಂತ್ರಿಕ ಸ್ಪಿನ್ನರ್ ಸುಯಾಶ್ ಶರ್ಮಾ ಯಾರು..?
IPL ಪಾದಾರ್ಪಣೆ ಪಂದ್ಯದಲ್ಲೇ RCB ಬ್ಯಾಟರ್ಗಳನ್ನು ಕಾಡಿದ ಮಾಂತ್ರಿಕ ಸ್ಪಿನ್ನರ್ ಸುಯಾಶ್ ಶರ್ಮಾ ಯಾರು..?
ಕೋಲ್ಕತಾ(ಏ.07): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಟೂರ್ನಿಯಲ್ಲಿ ಕೊನೆಗೂ ಕೋಲ್ಕತಾ ನೈಟ್ ರೈಡರ್ಸ್ ತಂಡವು ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ. ಕೆಕೆಆರ್ ತಂಡದ ಮಿಸ್ಟ್ರಿ ಸ್ಪಿನ್ನರ್ಗಳಾದ ಸುನಿಲ್ ನರೈನ್, ವರುಣ್ ಚಕ್ರವರ್ತಿ ಹಾಗೂ ಸುಯಾಶ್ ಶರ್ಮಾ ಮಾರಕ ದಾಳಿಗೆ ಆರ್ಸಿಬಿ 81 ರನ್ಗಳ ಹೀನಾಯ ಸೋಲು ಅನುಭವಿಸಿದೆ. ಅಷ್ಟಕ್ಕೂ ಪಾದಾರ್ಪಣೆ ಪಂದ್ಯದಲ್ಲೇ ಮಿಂಚಿದ ಈ ಸುಯಾಶ್ ಶರ್ಮಾ ಯಾರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ಪಂಜಾಬ್ ಕಿಂಗ್ಸ್ ಎದುರು 7 ರನ್ ರೋಚಕ ಸೋಲು ಅನುಭವಿಸಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಕೊನೆಗೂ 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ. ನಿತೀಶ್ ರಾಣಾ ನೇತೃತ್ವದ ಕೆಕೆಆರ್ ತಂಡವು ಆರ್ಸಿಬಿ ಎದುರು ಭರ್ಜರಿ ಗೆಲುವು ಸಾಧಿಸಿದೆ.
ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರೆಹಮನುಲ್ಲಾ ಗುರ್ಬಾಜ್, ಶಾರ್ದೂಲ್ ಠಾಕೂರ್ ಸ್ಪೋಟಕ ಅರ್ಧಶತಕ ಹಾಗೂ ವರುಣ್ ಚಕ್ರವರ್ತಿ, ಸುನಿಲ್ ನರೈನ್ ಹಾಗೂ ಸುಯಾಶ್ ಶರ್ಮಾ ಮಿಂಚಿನ ದಾಳಿಯ ನೆರವಿನಿಂದ ಆರ್ಸಿಬಿ ಎದುರು ಕೆಕೆಆರ್ 81 ರನ್ ಅಂತರದ ಗೆಲುವು ದಾಖಲಿಸಿದೆ.
ಮೊದಲೇ ವರುಣ್ ಚಕ್ರವರ್ತಿ ಹಾಗೂ ಸುನಿಲ್ ನರೈನ್ ಅವರಂತಹ ಮಿಸ್ಟ್ರಿ ಸ್ಪಿನ್ನರ್ಗಳನ್ನು ಹೊಂದಿರುವ ಕೆಕೆಆರ್ ತಂಡಕ್ಕೆ ಇದೀಗ ಸುಯಾಶ್ ಶರ್ಮಾ ಎನ್ನುವ ಹೊಸ ಸ್ಪಿನ್ ಅಸ್ತ್ರ ಸೇರ್ಪಡೆಗೊಂಡಿದ್ದು, ತಂಡದ ಬೌಲಿಂಗ್ ಪಡೆ ಮತ್ತಷ್ಟು ಬಲಾಢ್ಯವಾಗಿದೆ.
ಡೆಲ್ಲಿ ಮೂಲದ 19 ವರ್ಷದ ಯುವ ಸ್ಪಿನ್ನರ್ ಐಪಿಎಲ್ನ ಪಾದಾರ್ಪಣೆ ಪಂದ್ಯದಲ್ಲೇ ಆರ್ಸಿಬಿಯ ಸ್ಪೋಟಕ ಬ್ಯಾಟರ್ ದಿನೇಶ್ ಕಾರ್ತಿಕ್, ಅನೂಜ್ ರಾವತ್ ಹಾಗೂ ಕರ್ಣ್ ಶರ್ಮಾ ಅವರನ್ನು ಬಲಿ ಪಡೆಯುವ ಮೂಲಕ ಕೆಕೆಆರ್ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು.
ಕಳೆದ ಡಿಸೆಂಬರ್ನಲ್ಲಿ ನಡೆದ ಮಿನಿ ಹರಾಜಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಮೂಲಬೆಲೆ 20 ಲಕ್ಷ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಇದೀಗ ವೆಂಕಟೇಶ್ ಅಯ್ಯರ್ ಬದಲಿಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಸುಯಾಶ್ ಶರ್ಮಾ ಆರ್ಸಿಬಿ ಎದುರು 30 ರನ್ ನೀಡಿ 3 ವಿಕೆಟ್ ಉರುಳಿಸಿ ಮಿಂಚಿದ್ದಾರೆ.
ಇನ್ನು ಕುತೂಹಲಕಾರಿ ಸಂಗತಿಯೆಂದರೆ, ಸುಯಾಶ್ ಶರ್ಮಾ, ಆರ್ಸಿಬಿ ಎದುರು ಕಣಕ್ಕಿಳಿಯುವ ಮುನ್ನ ಯಾವುದೇ ಲಿಸ್ಟ್ 'ಎ', ಪ್ರಥಮ ದರ್ಜೆ ಅಥವಾ ಟಿ20 ಪಂದ್ಯವನ್ನಾಡಿರಲಿಲ್ಲ. ಆದರೆ ಇದೀಗ ಐಪಿಎಲ್ನಂತಹ ದೊಡ್ಡ ಟೂರ್ನಿಯಲ್ಲಿ ಸುಯಾಶ್ ಶರ್ಮಾ ತಮ್ಮ ಸಾಮರ್ಥ್ಯ ಅನಾವರಣ ಮಾಡುವ ಮೂಲಕ ದಿನಬೆಳಗಾಗುವುದರಲ್ಲಿ ಐಪಿಎಲ್ ಅಭಿಮಾನಿಗಳ ಮನೆ ಮಾತಾಗಿದ್ದಾರೆ.
ಅಭ್ಯಾಸ ಪಂದ್ಯಗಳಲ್ಲಿ ನಾವು ಸುಯಾಶ್ ಅವರ ಬೌಲಿಂಗ್ ಶೈಲಿಯನ್ನು ಗಮನಿಸಿದ್ದೆವು. ಅವರು ಗಾಳಿಯಲ್ಲಿ ತುಂಬಾ ವೇಗವಾಗಿ ಬೌಲಿಂಗ್ ಮಾಡುತ್ತಾರೆ. ಹೀಗಾಗಿ ಅವರ ಬೌಲಿಂಗ್ ಗ್ರಹಿಸುವುದು ಎದುರಾಳಿ ಬ್ಯಾಟರ್ಗಳಿಗೆ ಸುಲಭವಲ್ಲ. ಅವರು ಅನನುಭವಿ ಬೌಲರ್ ಆಗಿದ್ದರೂ ಸಹಾ, ಕೆಚ್ಚೆದೆಯ ಹೋರಾಟವನ್ನು ತೋರಿದ್ದಾರೆ ಎಂದು ಕೋಲ್ಕತಾ ನೈಟ್ ರೈಡರ್ಸ್ ತಂಡದ ಹೆಡ್ ಕೋಚ್ ಚಂದ್ರಕಾಂತ್ ಪಂಡಿತ್ ಹೇಳಿದ್ದಾರೆ.