ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ ನಿವೃತ್ತಿ ವದಂತಿ ಹಬ್ಬಿತ್ತು. ಆದರೆ, ಶತಕ ಸಿಡಿಸಿ ಉತ್ತರ ನೀಡಿದ್ದ ರೋಹಿತ್ ಕುರಿತ ವದಂತಿಗಳ ಹಿಂದೆ ಸತ್ಯಾಂಶವಿತ್ತು ಎಂದು ರವಿಚಂದ್ರನ್ ಅಶ್ವಿನ್ ಇದೀಗ ಹೇಳಿದ್ದು, ಅವರ ಭವಿಷ್ಯದ ಬಗ್ಗೆಯೂ ಮಾತನಾಡಿದ್ದಾರೆ.

ಚೆನ್ನೈ: ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆದ ಕೊನೆಯ ಏಕದಿನ ಪಂದ್ಯವೇ ಮಾಜಿ ನಾಯಕ ರೋಹಿತ್ ಶರ್ಮಾ ಅವರ ಕೊನೆಯ ಪಂದ್ಯವಾಗಲಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಆ ಪಂದ್ಯದಲ್ಲಿ ರೋಹಿತ್ ಶರ್ಮಾ 110 ಎಸೆತಗಳಲ್ಲಿ 138 ರನ್ ಸಿಡಿಸಿ ಮಿಂಚಿದ್ದರು. ಈ ಮೂಲಕ, ಲಾರ್ಡ್ಸ್‌ನಲ್ಲಿ ಏಕದಿನ ಶತಕ ಬಾರಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಈ ಇನ್ನಿಂಗ್ಸ್ ಅವರ ನಿವೃತ್ತಿ ಚರ್ಚೆಗಳಿಗೆ ತೆರೆ ಎಳೆದಿತ್ತು. ಆದರೆ ಈಗ, ಆ ಏಕದಿನ ಪಂದ್ಯಕ್ಕೂ ಮುನ್ನ ಹಬ್ಬಿದ್ದ ವದಂತಿಗಳ ಹಿಂದೆ ಸತ್ಯಾಂಶವಿತ್ತು ಎಂದು ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.

ಹೊಸ ಬಾಂಬ್ ಸಿಡಿಸಿದ ರವಿಚಂದ್ರನ್ ಅಶ್ವಿನ್

ಕೊನೆಯ ಏಕದಿನ ಪಂದ್ಯಕ್ಕೂ ಮುನ್ನ, ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಮತ್ತು ಹೆಡ್ ಕೋಚ್ ಗೌತಮ್ ಗಂಭೀರ್ ಜೊತೆ ರೋಹಿತ್ ಶರ್ಮಾ ಜಗಳವಾಡಿದ್ದಾರೆ ಎಂಬ ವರದಿಗಳು ಹೊರಬಂದಿದ್ದವು. ಆದರೆ, ಪಂದ್ಯ ನಡೆಯುವುದಕ್ಕೂ ಎರಡು ದಿನಗಳ ಮೊದಲು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಈ ಊಹಾಪೋಹಗಳನ್ನು ತಳ್ಳಿಹಾಕಿದ್ದರು. ಅಲ್ಲದೆ, ಇದು ರೋಹಿತ್ ಅವರ ಕೊನೆಯ ಪಂದ್ಯವಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೂ, ಇದರಲ್ಲಿ ಕೆಲವು ಸತ್ಯಾಂಶಗಳಿದ್ದವು, ಆದರೆ ರೋಹಿತ್ ತಮ್ಮ ಪ್ರದರ್ಶನದ ಮೂಲಕ ಅದಕ್ಕೆ ತಕ್ಕ ಉತ್ತರ ನೀಡಿದ್ದಾರೆ ಎಂದು ಅಶ್ವಿನ್ ಸ್ಪಷ್ಟಪಡಿಸಿದ್ದಾರೆ.

2027ರ ಏಕದಿನ ವಿಶ್ವಕಪ್ ಆಡುವ ಬಗ್ಗೆ ರೋಹಿತ್ ಮನಸ್ಸಿನಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ. 2026ರ ಐಪಿಎಲ್ ಸೀಸನ್ ವೇಳೆ ಗಾಯಗೊಂಡು ಐದು ಪಂದ್ಯಗಳಿಂದ ಹೊರಗುಳಿದಿದ್ದ ರೋಹಿತ್, ಗಾಯದ ನೋವು ಮತ್ತು ಹೊರಗಿನ ಒತ್ತಡವನ್ನು ಮೆಟ್ಟಿನಿಂತು ಈ ಶತಕ ಬಾರಿಸಿದ್ದಾರೆ ಎಂದು ಅಶ್ವಿನ್ ಶ್ಲಾಘಿಸಿದ್ದಾರೆ. ರೋಹಿತ್ ಸಂಪೂರ್ಣ ಫಿಟ್ ಆಗಿದ್ದರೆ, ಇಂಗ್ಲೆಂಡ್ ವಿರುದ್ಧ ಇನ್ನಷ್ಟು ಪ್ರಾಬಲ್ಯ ಸಾಧಿಸಿ ಭಾರತವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದರು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಇನ್ಮುಂದೆ ರೋ-ಕೊ ಅವರನ್ನು ಟಚ್ ಮಾಡಲು ಸಾಧ್ಯವಿಲ್ಲ

2027ರ ಏಕದಿನ ವಿಶ್ವಕಪ್ ತಂಡದಲ್ಲಿ ರೋಹಿತ್ ಮತ್ತು ವಿರಾಟ್ ಕೊಹ್ಲಿ ಅವರ ಸ್ಥಾನದ ಬಗ್ಗೆ ಟೀಮ್ ಮ್ಯಾನೇಜ್‌ಮೆಂಟ್ ಇನ್ನೂ ಯಾವುದೇ ಅಧಿಕೃತ ದೃಢೀಕರಣ ನೀಡಿಲ್ಲ. ಅತ್ಯುತ್ತಮ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ ತಂಡದಲ್ಲಿ ತಮ್ಮ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದ್ದಾರೆ. ಆದರೆ, ಶುಭ್‌ಮನ್ ಗಿಲ್‌ಗೆ ಏಕದಿನ ನಾಯಕತ್ವವನ್ನು ಬಿಟ್ಟುಕೊಟ್ಟ ನಂತರ ರೋಹಿತ್ ಪ್ರದರ್ಶನದಲ್ಲಿ ಏರಿಳಿತ ಕಂಡಿದೆ. ಆದರೂ, ಲಾರ್ಡ್ಸ್‌ನಲ್ಲಿನ ಶತಕವು ಅವರ ಭವಿಷ್ಯದ ಬಗೆಗಿನ ಚರ್ಚೆಗಳಿಗೆ ಸದ್ಯಕ್ಕೆ ಬ್ರೇಕ್ ಹಾಕಿದೆ. ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿರುವವರೆಗೂ ಸೆಲೆಕ್ಟರ್‌ಗಳಾಗಲಿ, ಕೋಚ್ ಆಗಲಿ ಅವರನ್ನು ತಂಡದಿಂದ ಕೈಬಿಡಲು ಸಾಧ್ಯವಿಲ್ಲ ಎಂದು ಅಶ್ವಿನ್ ವಾದಿಸಿದ್ದಾರೆ.