- Home
- Sports
- Cricket
- ಆರ್ಸಿಬಿಯ ಮೊದಲ ಪಂದ್ಯಕ್ಕೆ ಕನ್ನಡದಲ್ಲೇ ಶುಭ ಹಾರೈಸಿದ ವಿಜಯ್ ಮಲ್ಯ! ಬೆಂಗಳೂರು ಫ್ಯಾನ್ಸ್ ಫುಲ್ ಖುಷ್
ಆರ್ಸಿಬಿಯ ಮೊದಲ ಪಂದ್ಯಕ್ಕೆ ಕನ್ನಡದಲ್ಲೇ ಶುಭ ಹಾರೈಸಿದ ವಿಜಯ್ ಮಲ್ಯ! ಬೆಂಗಳೂರು ಫ್ಯಾನ್ಸ್ ಫುಲ್ ಖುಷ್
ಬೆಂಗಳೂರು: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಉದ್ಘಾಟನಾ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಹೀಗಿರುವಾಗಲೇ ಮೊದಲ ಪಂದ್ಯವಾಡಲು ಸಜ್ಜಾಗಿರುವ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮಾಜಿ ಓನರ್ ವಿಜಯ್ ಮಲ್ಯ ಕನ್ನಡದಲ್ಲೇ ಶುಭ ಹಾರೈಸಿದ್ದಾರೆ.

ಇಂದು ಐಪಿಎಲ್ ಉದ್ಘಾಟನಾ ಮ್ಯಾಚ್
2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿಂದು ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್ರೈಸರ್ಸ್ ಹೈದರಾಬಾದ್ ಎದುರು ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸಿದೆ.
ಕಳೆದ ವರ್ಷ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವು
ಕಳೆದ ವರ್ಷ ನಡೆದ ಆರ್ಸಿಬಿ ಸಂಭ್ರಮಾಚರಣೆಯ ವೇಳೆ ನಡೆದ ಕಾಲ್ತುಳಿದಲ್ಲಿ 11 ಮಂದಿ ಕೊನೆಯುಸಿರೆಳೆದಿದ್ದರು. ಇದಾದ ಬಳಿಕ ಇದೇ ಮೊದಲ ಬಾರಿಗೆ ಐಪಿಎಲ್ ಪಂದ್ಯಾಟಕ್ಕೆ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸುತ್ತಿದೆ. ಈಗಾಗಲೇ ಮೊದಲ ಪಂದ್ಯದ ಎಲ್ಲಾ ಟಿಕೆಟ್ಗಳು ಸೋಲ್ಡೌಟ್ ಆಗಿವೆ.
1.78 ಬಿಲಿಯನ್ಗೆ ಆರ್ಸಿಬಿ ಸೇಲ್
ಇನ್ನು 19ನೇ ಸೀಸನ್ ಐಪಿಎಲ್ ಟೂರ್ನಿಗೂ ಮುನ್ನ ಭಾರತದ ಆದಿತ್ಯಾ ಬಿರ್ಲಾ ಸಮೂಹ, ಟೈಮ್ಸ್ ಆಫ್ ಇಂಡಿಯಾ(ಟಿಒಐ) ಸಮೂಹ, ಅಮೆರಿಕದ ಬೋಲ್ಟ್ ವೆಂಚರ್ಸ್ ಹಾಗೂ ಬ್ಲ್ಯಾಕ್ಸ್ಟೋನ್ ಸಂಸ್ಥೆಗಳು 1.78 ಬಿಲಿಯನ್ ಅಮೆರಿಕನ್ ಡಾಲರ್ (ಅಂದಾಜು ₹16706 ಕೋಟಿ)ಗೆ ಆರ್ಸಿಬಿ ಫ್ರಾಂಚೈಸಿಯನ್ನು ಖರೀದಿಸಿವೆ. ಬ್ರಿಟನ್ನ ಮದ್ಯ ಮಾರಾಟ ಸಂಸ್ಥೆಯಾದ ಡಿಯಾಜಿಯೋದ ಅಂಗಸಂಸ್ಥೆಯಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (ಯುಎಸ್ಎಲ್) ಜೊತೆಗೆ ಬಿರ್ಲಾ ಹಾಗೂ ಟಿಒಐ ನೇತೃತ್ವದ ತಂಡ ಒಪ್ಪಂದಕ್ಕೆ ಸಹಿ ಹಾಕಿತು.
208ರಲ್ಲಿ 480 ಕೋಟಿ ರುಪಾಯಿಗೆ ಆರ್ಸಿಬಿ ಖರೀದಿಸಿದ್ದ ವಿಜಯ್ ಮಲ್ಯ
ಐಪಿಎಲ್ ಸ್ಥಾಪನೆಯಾದಾಗ ಆರ್ಸಿಬಿ ತಂಡವನ್ನು ಮದ್ಯದ ದೊರೆ ವಿಜಯ್ ಮಲ್ಯ 111.6 ಮಿಲಿಯನ್ ಡಾಲರ್ಗೆ ಖರೀದಿಸಿದ್ದರು. ಅಂದರೆ ಅಂದಿನ ಡಾಲರ್ ಮೌಲ್ಯದ ಪ್ರಕಾರ ಅಂದಾಜು ₹480 ಕೋಟಿ. 2016 ಮಲ್ಯ ತಂಡದ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದ ಬಳಿಕ, ಫ್ರಾಂಚೈಸಿಯನ್ನು ಡಿಯಾಜಿಯೋ ಸಂಸ್ಥೆ ನಿರ್ವಹಿಸುತ್ತಿತ್ತು.
ಕನ್ನಡದಲ್ಲಿ ಶುಭ ಹಾರೈಸಿದ ವಿಜಯ್ ಮಲ್ಯ
ಇದೀಗ ಆರ್ಸಿಬಿ ತಂಡದ ಮಾಜಿ ಮಾಲೀಕರಾದ ವಿಜಯ್ ಮಲ್ಯ, ಐಪಿಎಲ್ ಉದ್ಘಾಟನಾ ಪಂದ್ಯಕ್ಕೂ ಮುನ್ನ ಕನ್ನಡದಲ್ಲಿಯೇ ಬೆಂಗಳೂರು ತಂಡಕ್ಕೆ ಶುಭ ಹಾರೈಸಿದ್ದಾರೆ. ಬೆಂಗಳೂರಿನ ಸಿಂಹಗಳ ಪಾಲಿನ ದಿನ ಕೊನೆಗೂ ಬಂದೇ ಬಿಟ್ಟಿತು. ನಮ್ಮ ಸಿಂಹಗಳು. ಐಪಿಎಲ್ ಚಾಂಪಿಯನ್ಸ್. ಗುಡ್ ಲಕ್ ಅಂಡ್ ಪ್ಲೇ ಬೋಲ್ಡ್, ಧೈರ್ಯವಾಗಿ ಆಟವಾಡಿ ಎಂದು ವಿಜಯ್ ಮಲ್ಯ ಕನ್ನಡದಲ್ಲೇ ಶುಭ ಹಾರೈಸಿದ್ದಾರೆ.
ಮತ್ತೊಂದು ಕಪ್ ಗೆಲ್ಲುವ ವಿಶ್ವಾಸದಲ್ಲಿ ಆರ್ಸಿಬಿ
ಆರ್ಸಿಬಿ ತಂಡವು 18ನೇ ಸೀಸನ್ನಲ್ಲಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದೀಗ ಮತ್ತೊಮ್ಮೆ ಕಪ್ ಗೆಲ್ಲುವ ವಿಶ್ವಾಸದೊಂದಿಗೆ ರಜತ್ ಪಾಟೀದಾರ್ ಪಡೆ ಕಣಕ್ಕಿಳಿಯಲು ಸಜ್ಜಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

