2023ರ ಏಕದಿನ ವಿಶ್ವಕಪ್ ಟೂರ್ನಿಗೆ ಈ ಐವರು ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯೋದು ಡೌಟ್..!
ಬೆಂಗಳೂರು: ಬಹುನಿರೀಕ್ಷಿತ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ದಿನಗಣನೆ ಶುರುವಾಗಿದೆ. 2011ರ ಬಳಿಕ ಮತ್ತೊಮ್ಮೆ ತವರಿನಲ್ಲಿ ಏಕದಿನ ವಿಶ್ವಕಪ್ ಜಯಿಸಲು ಟೀಂ ಇಂಡಿಯಾ ರಣತಂತ್ರ ಹೆಣೆಯುತ್ತಿದೆ. ಹೀಗಾಗಿ ಸಾಕಷ್ಟು ಅಳೆದು-ತೂಗಿ ಬಲಿಷ್ಠ 15 ಆಟಗಾರರನ್ನೊಳಗೊಂಡ ತಂಡವನ್ನು ಆಯ್ಕೆ ಮಾಡಲು ಬಿಸಿಸಿಐ ಆಯ್ಕೆ ಸಮಿತಿ ಸಜ್ಜಾಗಿದೆ. ಹೀಗಾದಲ್ಲಿ ಈ ಐವರು ಆಟಗಾರರು ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವುದು ಅನುಮಾನ ಎನಿಸಿದೆ. ಅಷ್ಟಕ್ಕೂ ಯಾರು ಆ ಐವರು ಕ್ರಿಕೆಟಿಗರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

5. ರಿಷಭ್ ಪಂತ್:
ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಕಳೆದ ವರ್ಷದ ಕೊನೆಯಲ್ಲಿ ಭೀಕರ ಕಾರು ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಸ್ಪರ್ಧಾತ್ಮಕ ಕ್ರಿಕೆಟ್ನಿಂದ ಸಾಕಷ್ಟು ದೂರವೇ ಉಳಿದಿದ್ದಾರೆ.
25 ವರ್ಷದ ರಿಷಭ್ ಪಂತ್, ಸಾಕಷ್ಟು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಏಕದಿನ ವಿಶ್ವಕಪ್ ಟೂರ್ನಿಗೆ ಕೆಲವೇ ತಿಂಗಳುಗಳು ಬಾಕಿ ಇರುವುದರಿಂದ ದಿಢೀರ್ ಎನ್ನುವಂತೆ ಮಹತ್ವದ ಟೂರ್ನಿಗೆ ಪಂತ್ ಅವರನ್ನು ಕಣಕ್ಕಿಳಿಸುವುದು ಅನುಮಾನ ಎನಿಸಿದೆ.
4. ಶಿಖರ್ ಧವನ್:
ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್, ಸರಿಸುಮಾರು ಕಳೆದೊಂದು ದಶಕದಿಂದ ಟೀಂ ಇಂಡಿಯಾ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದರು. ಕಳೆದ ಕೆಲ ವರ್ಷಗಳಿಂದ 37 ವರ್ಷದ ಧವನ್ಗೆ ಭಾರತ ತಂಡದಲ್ಲಿ ಸ್ಥಾನ ನೀಡುತ್ತಿಲ್ಲ.
ಇನ್ನು ಇದೇ ವೇಳೆ ಆರಂಭಿಕನಾಗಿ ಶುಭ್ಮನ್ ಗಿಲ್ ಅವರು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವತ್ತ ದಿಟ್ಟ ಹೆಜ್ಜೆ ಹಾಕುತ್ತಿದ್ದಾರೆ. ಇನ್ನು ಇಶಾನ್ ಕಿಶನ್ ಕೂಡಾ ಸ್ಪೋಟಕ ಆರಂಭಿಕನಾಗಿ ಗುರುತಿಸಿಕೊಂಡಿದ್ದು, ಧವನ್ಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗುವುದು ಅನುಮಾನ ಎನಿಸಿದೆ.
3. ದೀಪಕ್ ಚಹರ್:
ಟೀಂ ಇಂಡಿಯಾ ಸ್ವಿಂಗ್ ಸ್ಪೆಷಲಿಸ್ಟ್ ವೇಗಿಯಾಗಿ ಗುರುತಿಸಿಕೊಂಡಿದ್ದ ದೀಪಕ್ ಚಹರ್ಗೆ ಫಿಟ್ನೆಸ್ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದೆ. ಕಳೆದ ಕೆಲ ವರ್ಷಗಳಲ್ಲಿ ದೀಪಕ್ ಚಹರ್, ಕ್ರಿಕೆಟ್ ಆಡಿದ್ದಕ್ಕಿಂತ, ಕ್ರಿಕೆಟ್ನಿಂದ ಹೊರಗುಳಿದಿದ್ದೇ ಹೆಚ್ಚು ಎನ್ನುವಂತಾಗಿದೆ.
ಇನ್ನು ವೇಗದ ಬೌಲಿಂಗ್ ಆಲ್ರೌಂಡರ್ಗಳ ರೂಪದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಶಾರ್ದೂಲ್ ಠಾಕೂರ್ ಈಗಾಗಲೇ ಐಪಿಎಲ್ನಲ್ಲೂ ಸ್ಥಿರ ಪ್ರದರ್ಶನ ತೋರುತ್ತಿದ್ದು, ದೀಪಕ್ ಚಹರ್ಗೆ ತಂಡದಲ್ಲಿ ಸ್ಥಾನ ಸಿಗುವುದು ಅನುಮಾನವೇ ಸರಿ ಎನಿಸಿದೆ.
Image credit: Getty
2. ವಾಷಿಂಗ್ಟನ್ ಸುಂದರ್:
ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಸ್ಪಿನ್ ವಾಷಿಂಗ್ಟನ್ ಸುಂದರ್, ಭಾರತ ತಂಡದಲ್ಲಿ ಸ್ಥಾನ ಪಡೆಯಲು ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ಅವರೊಂದಿಗೆ ಪೈಪೋಟಿ ನಡೆಸಬೇಕಿದೆ.
ಜಡೇಜಾ, ಬಹುತೇಕ ತಂಡದಲ್ಲಿ ಸ್ಥಾನ ಪಡೆಯಲಿದ್ದು, ಎರಡನೇ ಸ್ಪಿನ್ ಆಲ್ರೌಂಡರ್ ರೂಪದಲ್ಲಿ ಅಕ್ಷರ್ ಪಟೇಲ್ ಹಾಗೂ ರವಿ ಅಶ್ವಿನ್ ನಡುವೆ ಪೈಪೋಟಿ ಇರುವುದರಿಂದ ಸುಂದರ್ಗೆ ಭಾರತ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗುವುದು ಡೌಟ್.
1. ಸೂರ್ಯಕುಮಾರ್ ಯಾದವ್:
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ನಂ.1 ಬ್ಯಾಟರ್ ಎನಿಸಿಕೊಂಡಿರುವ ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟರ್ ಸೂರ್ಯಕುಮಾರ್ ಯಾದವ್, ಏಕದಿನ ಕ್ರಿಕೆಟ್ನಲ್ಲಿ ತಮ್ಮ ಛಾಪು ಮೂಡಿಸಲು ಪದೇ ಪದೇ ವಿಫಲವಾಗುತ್ತಲೇ ಇದ್ದಾರೆ.
ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಯಲ್ಲಿ ಮೂರೂ ಪಂದ್ಯಗಳಲ್ಲೂ ಶೂನ್ಯ ಸುತ್ತಿ ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಇನ್ನು ಶ್ರೇಯಸ್ ಅಯ್ಯರ್ ಸಂಪೂರ್ಣ ಫಿಟ್ ಆಗಿ ತಂಡ ಕೂಡಿಕೊಂಡರರೆ, ಸೂರ್ಯಗೆ ಸ್ಥಾನ ಸಿಗುವುದು ಸುಲಭದ ಮಾತಲ್ಲ.