ಎಂ ಎಸ್ ಧೋನಿ ಏಕದಿನ ವಿಶ್ವಕಪ್ ವಿನ್ನಿಂಗ್ ಸಿಕ್ಸರ್ ಅಜರಾಮರವಾಗಿಸಿದ ಮುಂಬೈ ಕ್ರಿಕೆಟ್ ಸಂಸ್ಥೆ..!
ಮುಂಬೈ(ಏ.08): ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ, 2011ರಲ್ಲಿ ಶ್ರೀಲಂಕಾವನ್ನು ಮಣಿಸಿ ಐಸಿಸಿ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಧೋನಿ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ತಂಡವನ್ನು ಚಾಂಪಿಯನ್ ಪಟ್ಟಕ್ಖೇರಿಸಿದ್ದರು. ಇದೀಗ ಧೋನಿ ಬಾರಿಸಿದ ಚೆಂಡು ಬಿದ್ದ ಸ್ಥಳವನ್ನು ಸ್ಮಾರಕವನ್ನಾಗಿ ಮಾಡುವ ಮೂಲಕ ಮುಂಬೈ ಕ್ರಿಕೆಟ್ ಸಂಸ್ಥೆಯು ಧೋನಿಗೆ ವಿಶೇಷ ಗೌರವ ನೀಡಿದೆ. ಧೋನಿ ಈ ಸ್ಮಾರಕವನ್ನು ಉದ್ಘಾಟಿಸಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ, 2011ರ ಐಸಿಸಿ ಏಕದಿನ ವಿಶ್ವಕಪ್ ಜಯಿಸುವ ಮೂಲಕ ಬರೋಬ್ಬರಿ 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಲಂಕಾ ಎದುರು ಟೀಂ ಇಂಡಿಯಾ 6 ವಿಕೆಟ್ ಜಯ ಸಾಧಿಸಿತ್ತು. ಗೌತಮ್ ಗಂಭೀರ್ 97 ರನ್ ಸಿಡಿಸಿದರೆ, ನಾಯಕ ಧೋನಿ ಅಜೇಯ 91 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.
ಸವಾಲಿನ ಗುರಿ ಬೆನ್ನತ್ತಿದ ಟೀಂ ಇಂಡಿಯಾ 49ನೇ ಓವರ್ನ ಎರಡನೇ ಎಸೆತದಲ್ಲಿ ನುವಾನ್ ಕುಲಸೇಖರ ಬೌಲಿಂಗ್ನಲ್ಲಿ ಮುಗಿಲೆತ್ತರದ ಸಿಕ್ಸರ್ ಸಿಡಿಸಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಇದು ಕ್ರಿಕೆಟ್ ಅಭಿಮಾನಿಗಳ ಸ್ಮೃತಿಪಟಲದಲ್ಲಿ ಅಚ್ಚಳಿಯದೇ ಉಳಿದಿದೆ.
2011ರ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಭಾರತದ ಗೆಲುವಿನ ಸಿಕ್ಸರ್ ಬಾರಿಸಿದ್ದ ಎಂ.ಎಸ್.ಧೋನಿಯನ್ನು ಶುಕ್ರವಾರ ಮುಂಬೈ ಕ್ರಿಕೆಟ್ ಸಂಸ್ಥೆ(ಎಂಸಿಎ)ಯು ವಾಂಖೇಡೆ ಕ್ರೀಡಾಂಗಣದಲ್ಲಿ ಸನ್ಮಾನಿಸಿತು.
ಸಿಕ್ಸರ್ ಬಾರಿಸುವ ಚಿತ್ರವಿರುವ ಫ್ರೇಮ್ ನೀಡಿ ಸಂಸ್ಥೆಯ ಅಧಿಕಾರಿಗಳು ಗೌರವಿಸಿದರು. ಗೆಲುವಿನ ಸಿಕ್ಸರ್ ಬಾರಿಸಿದ ವೇಳೆ ಚೆಂಡು ಬಿದ್ದ ಸ್ಥಳದಲ್ಲಿ 5 ಆಸನಗಳನ್ನು ಎಂಸಿಎ ಗುರುತಿಸಿದ್ದು, ಆ ಸ್ಥಳದಲ್ಲಿ ನಿರ್ಮಾಣವಾಗಲಿರುವ ಸ್ಮಾರಕವನ್ನು ಧೋನಿ ವೀಕ್ಷಿಸಿದರು.