ಟಿ20ಯಲ್ಲಿ ಡಬಲ್ ಸೆಂಚುರಿ ಬಾರಿಸೋ ಮೊದಲ ಆಟಗಾರ ಇವನೇ ನೋಡಿ! ಲಲಿತ್ ಮೋದಿ ಅಚ್ಚರಿ ಭವಿಷ್ಯ
ಲಂಡನ್: 2026ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಯಶಸ್ವಿಯಾಗಿ ಮುಕ್ತಾಯವಾಗಿದೆ. ಈ ಟೂರ್ನಿಯಲ್ಲಿ ಹೆಚ್ಚು ಗಮನ ಸೆಳೆದಿದ್ದು, ಬಿಹಾರ ಮೂಲದ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ. ಈ ಆಟಗಾರನ ಬಗ್ಗೆ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಅಚ್ಚರಿ ಭವಿಷ್ಯ ನುಡಿದಿದ್ದಾರೆ.
ವೈಭವ್ ಸೂರ್ಯವಂಶಿಯನ್ನು ಕೊಂಡಾಡಿದ ಲಲಿತ್ ಮೋದಿ
ಐಪಿಎಲ್ ಮಾಜಿ ಕಮಿಷನರ್ ಲಲಿತ್ ಮೋದಿ, 15 ವರ್ಷದ ಯುವ ಬ್ಯಾಟಿಂಗ್ ತಾರೆ ವೈಭವ್ ಸೂರ್ಯವಂಶಿ ಬಗ್ಗೆ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ. ರಾಜಸ್ಥಾನ್ರಾಯಲ್ಸ್ ಪರ ಆಡಿದ್ದ ವೈಭವ್, ಈ ಟೂರ್ನಿಯಲ್ಲಿ 16 ಪಂದ್ಯಗಳಿಂದ 776 ರನ್ ಗಳಿಸಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು.
ಟಿ20ಯಲ್ಲಿ ವೈಭವ್ ಸೂರ್ಯವಂಶಿ ದ್ವಿಶತಕ ಸಿಡಿಸ್ತಾರೆ ಎಂದ ಲಲಿತ್ ಮೋದಿ
ವಿಸ್ಡನ್ಗೆ ನೀಡಿದ ಸಂದರ್ಶನವೊಂದರಲ್ಲಿ ಲಲಿತ್ ಮೋದಿ, ವೈಭವ್ ಬಗ್ಗೆ ದೊಡ್ಡ ಭವಿಷ್ಯ ನುಡಿದಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ದ್ವಿಶತಕ ಬಾರಿಸೋ ಮೊದಲ ಆಟಗಾರ ವೈಭವ್ ಆಗ್ತಾನೆ ಅಂತ ಮೋದಿ ಹೇಳಿದ್ದಾರೆ. ಅಷ್ಟೇ ಅಲ್ಲ, ಯಾವುದೇ ಹಾಲಿವುಡ್, ಬಾಲಿವುಡ್ ನಟರಿಗಿಂತ ದೊಡ್ಡ ಸೂಪರ್ಸ್ಟಾರ್ ಆಗಿ ವೈಭವ್ ಬೆಳೀತಾನೆ ಅಂತಾನೂ ಲಲಿತ್ ಮೋದಿ ಭವಿಷ್ಯ ನುಡಿದಿದ್ದಾರೆ.
ವೈಭವ್ ಸೂರ್ಯವಂಶಿಗೆ ಲಲಿತ್ ಮೋದಿ ಕಿವಿ ಮಾತು
"ಆ ದಿನಕ್ಕಾಗಿ ನಾನು ಕಾಯ್ತಾ ಇದ್ದೀನಿ. ಅವನು ಟಿ20ಯಲ್ಲಿ 200 ರನ್ ಗಳಿಸ್ತಾನೆ. ಅವನಿಗೆ ನಾನು ಹೇಳೋದು ಒಂದೇ ಮಾತು, ಹಣ ತಲೆಗೆ ಏರಲು ಬಿಡಬೇಡ. ನೀನು ಈ ಭೂಮಿಯ ಮೇಲಿನ ನಂಬರ್ ಒನ್ ಸೂಪರ್ಸ್ಟಾರ್ ಆಗ್ತೀಯಾ; ಯಾವುದೇ ಹಾಲಿವುಡ್, ಬಾಲಿವುಡ್ ಸ್ಟಾರ್ಗಿಂತಲೂ ದೊಡ್ಡ ಸ್ಟಾರ್ ಆಗ್ತೀಯಾ" ಎಂದು ಲಲಿತ್ ಮೋದಿ ಹೇಳಿದ್ದಾರೆ.
ಐಪಿಎಲ್ನಲ್ಲಿ ಮಿಂಚಿದ ವೈಭವ್ ಸೂರ್ಯವಂಶಿ
19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿ, ಒಂದು ಶತಕ ಹಾಗೂ ಮೂರು ಬಾರಿ 90+ ರನ್ಗೆ ವಿಕೆಟ್ ಒಪ್ಪಿಸಿದ್ದರು. ಇದಷ್ಟೇ ಅಲ್ಲದೇ ವರ್ಷದ ಉದಯೋನ್ಮುಖ ಕ್ರಿಕೆಟಿಗ, ಆರೆಂಜ್ ಕ್ಯಾಪ್, ಸೂಪರ್ ಸ್ಟ್ರೈಕರ್ ಆಫ್ ದಿ ಟೂರ್ನಮೆಂಟ್(ಟಾಟಾ ಸಿಯಾರ ಕಾರು), ಮೋಸ್ಟ್ ವ್ಯಾಲ್ಯೂಯೇಬಲ್ ಪ್ಲೇಯರ್ ಪ್ರಶಸ್ತಿಗೆ ವೈಭವ್ ಪಾತ್ರರಾಗಿದ್ದರು.
ಯುವ ಕ್ರಿಕೆಟಿಗರು ಫ್ರಾಂಚೈಸಿ ಲೀಗ್ಗೆ ಆದ್ಯತೆ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ
ಯುವ ಆಟಗಾರರು ಅಂತರಾಷ್ಟ್ರೀಯ ಕ್ರಿಕೆಟ್ಗಿಂತ ಫ್ರಾಂಚೈಸಿ ಮತ್ತು ದೇಶೀಯ ಲೀಗ್ಗಳಿಗೆ ಹೆಚ್ಚು ಆದ್ಯತೆ ನೀಡುವ ಟ್ರೆಂಡ್ ಒಳ್ಳೆಯದು ಅಂತ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಬೇರೆ ಕ್ರೀಡೆಗಳ ಉದಾಹರಣೆಯನ್ನೂ ಅವರು ಕೊಟ್ಟಿದ್ದಾರೆ:
ವಾಸ್ತವವನ್ನು ನಾವು ಒಪ್ಪಿಕೊಳ್ಳಬೇಕು
"ಬ್ಯಾಸ್ಕೆಟ್ಬಾಲ್ನಲ್ಲಿ ಆಟಗಾರರು ಯುಎಸ್ ರಾಷ್ಟ್ರೀಯ ತಂಡಕ್ಕಿಂತ ಎನ್ಬಿಎಯಲ್ಲಿ ಆಡಲು ಇಷ್ಟಪಡುತ್ತಾರೆ. ಫುಟ್ಬಾಲ್ನಲ್ಲಿ, ಇಂಗ್ಲೆಂಡ್ ರಾಷ್ಟ್ರೀಯ ತಂಡಕ್ಕಿಂತ ಮ್ಯಾಂಚೆಸ್ಟರ್ ಸಿಟಿ ಪರ ಆಡುವುದರ ಬಗ್ಗೆ ಹೆಚ್ಚು ಮಾತಾಡುತ್ತಾರೆ. ಕ್ರಿಕೆಟ್ನಲ್ಲೂ ಮುಂದಿನ ದಿನಗಳಲ್ಲಿ ಇದೇ ರೀತಿ ಆಗಲಿದೆ. ಈ ವಾಸ್ತವವನ್ನು ನಾವು ಒಪ್ಪಿಕೊಳ್ಳಬೇಕು" ಅಂತ ಲಲಿತ್ ಮೋದಿ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

