- Home
- Sports
- Cricket
- ಸಿಂಪಲ್ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರ ಫೇವರೇಟ್ ಕ್ಯಾಪ್ಟನ್ ಯಾರು? ಇಲ್ಲಿದೆ ನೋಡಿ ಕನ್ನಡಿನ ಮಾತು
ಸಿಂಪಲ್ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರ ಫೇವರೇಟ್ ಕ್ಯಾಪ್ಟನ್ ಯಾರು? ಇಲ್ಲಿದೆ ನೋಡಿ ಕನ್ನಡಿನ ಮಾತು
ಬೆಂಗಳೂರು: ಭಾರತ ಕಂಡ ಅತ್ಯಂತ ಯಶಸ್ವಿ ವೇಗದ ಬೌಲರ್, ತಮ್ಮ ಸಿಂಪ್ಲಿಸಿಟಿ ಮೂಲಕವೇ ಆಗಾಗ ಸುದ್ದಿಯಾಗುವ ಜಾವಗಲ್ ಶ್ರೀನಾಥ್ ತಮ್ಮ ನೆಚ್ಚಿನ ಕ್ಯಾಪ್ಟನ್ ಯಾರು ಎನ್ನುವ ಪ್ರಶ್ನೆಗೆ ಕುತೂಹಲಕಾರಿ ಉತ್ತರ ನೀಡಿದ್ದಾರೆ.

ಸಿಂಪಲ್ ಕ್ರಿಕೆಟಿಗ ಜಾವಗಲ್ ಶ್ರೀನಾಥ್
ಜಾವಗಲ್ ಎಕ್ಸ್ಪ್ರೆಸ್ ಖ್ಯಾತಿಯ ಜಾವಗಲ್ ಶ್ರೀನಾಥ್, ಭಾರತದ ದಿಗ್ಗಜ ವೇಗಿಗಳ ಪೈಕಿ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಬಳಿಕ ಜಾವಗಲ್ ಶ್ರೀನಾಥ್, ಸದ್ಯ ಐಸಿಸಿ ಮ್ಯಾಚ್ ರೆಫ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಇತ್ತೀಚೆಗೆ ಶ್ರೀನಾಥ್ ಸಿಂಪಲ್ ಆಗಿ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡುವ ಮೂಲಕವೂ ಸುದ್ದಿಯಾಗಿದ್ದರು.
ಜಾವಗಲ್ ಶ್ರೀನಾಥ್ ಫೇವರೇಟ್ ಕ್ಯಾಪ್ಟನ್:
ಇನ್ನು ಇದೀಗ ಸಂದರ್ಶನವೊಂದರಲ್ಲಿ ಜಾವಗಲ್ ಶ್ರೀನಾಥ್ ಅವರಿಗೆ ನಿಮ್ಮ ನೆಚ್ಚಿನ ಕ್ಯಾಪ್ಟನ್ ಅಥವಾ ಲೀಡರ್ ಯಾರು ಎನ್ನುವ ಪ್ರಶ್ನೆಗೆ ಉತ್ತರಿಸಿದ್ದಾರೆ. ಶ್ರೀನಾಥ್ ತಾವು ಭಾರತ ಪರ ಕ್ರಿಕೆಟ್ ಆಡುವ ಸಮಯದಲ್ಲಿ ಪ್ರಮುಖವಾಗಿ ಮೊಹಮ್ಮದ್ ಅಜರುದ್ದೀನ್, ಸಚಿನ್ ತೆಂಡೂಲ್ಕರ್ ಹಾಗೂ ಕೊನೆಯಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದರು.
ಶ್ರೀನಾಥ್ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದಾಗ ಅಜರುದ್ದೀನ್ ಕ್ಯಾಪ್ಟನ್ ಆಗಿದ್ದರು
ತಮ್ಮ ನೆಚ್ಚಿನ ಕ್ಯಾಪ್ಟನ್ ವಿಚಾರವಾಗಿ ಪ್ರತಿಕ್ರಿಯಿಸಿರುವ ಶ್ರೀನಾಥ್, ನಾನು ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದಾಗ ಮೊಹಮ್ಮದ್ ಅಜರುದ್ದೀನ್ ಕ್ಯಾಪ್ಟನ್ ಆಗಿದ್ದರು. ನನಗೆ ಆಗ 21-23 ವರ್ಷ ವಯಸ್ಸಾಗಿತ್ತು. ಅಜರುದ್ದೀನ್ ನೀನು ಮನಸ್ಸಿಗೆ ಬಂದ ಹಾಗೆ ಬೌಲಿಂಗ್ ಮಾಡು ಎಂದು ಮುಕ್ತ ಸ್ವಾತಂತ್ರ್ಯ ನೀಡಿದ್ದರು ಎಂದು ಅಜರುದ್ದೀನ್ ಅವರನ್ನು ಕೊಂಡಾಡಿದ್ದಾರೆ.
ಸಚಿನ್ ನಾಯಕತ್ವದಲ್ಲಿ ಆಡಿದ್ದ ಶ್ರೀನಾಥ್
ಇದಾದ ಬಳಿಕ ಸಚಿನ್ ತೆಂಡೂಲ್ಕರ್ ಕ್ಯಾಪ್ಟನ್ ಆಗಿದ್ದರು. ಸಚಿನ್ ತಮ್ಮ ಬೌಲಿಂಗ್ನಲ್ಲಿ ಲೆಗ್ಸ್ಪಿನ್, ಆಫ್ಸ್ಪಿನ್, ಲೆಗ್ ಸ್ವಿಂಗ್, ಆಫ್ ಸ್ವಿಂಗ್ ಎಲ್ಲವನ್ನೂ ಮಾಡುತ್ತಿದ್ದರು. ಅದೇ ರೀತಿಯ ಬೌಲಿಂಗ್ ಅನ್ನು ವೇಗಿಗಳಿಂದ ನಿರೀಕ್ಷಿಸುತ್ತಿದ್ದರು. ನಾನು ಹಾಗೆ ಮಾಡ್ತೀನಿ ಅಂದ್ರೆ ನಿಮಗ್ಯಾಕೆ ಆಗಲ್ಲ ಅಂತ ನಮ್ಮನ್ನೇ ಪ್ರಶ್ನಿಸುತ್ತಿದ್ದರು. ಒಂದು ಒಳ್ಳೆಯ ರೀತಿಯಲ್ಲೇ ನಾವು ಪರಡಾಡುವಂತೆ ಆಗಿತ್ತು ಎಂದು ಆ ದಿನಗಳನ್ನು ಜಾವಗಲ್ ಮೆಲುಕು ಹಾಕಿದ್ದಾರೆ.
ಸಚಿನ್ ತೆಂಡೂಲ್ಕರ್ ನಾಯಕತ್ವ ವಿಮರ್ಶಿಸಿದ ಜಾವಗಲ್ ಎಕ್ಸ್ಪ್ರೆಸ್
ಇನ್ನು 1999ರಲ್ಲಿ ಮತ್ತೊಮ್ಮೆ ಕ್ಯಾಪ್ಟನ್ ಆಗಿ ಕಮ್ಬ್ಯಾಕ್ ಮಾಡಿದ ಬಳಿಕ ಸಚಿನ್ ತುಂಬಾ ಬದಲಾಗಿದ್ದರು. ಆಗ ಬೌಲರ್ಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದರು. ತುಂಬಾ ತಾಳ್ಮೆಯಿಂದ ಇರುತ್ತಿದ್ದರು, ಆಟಗಾರರ ಮಿತಿಗಳನ್ನು ಸಚಿನ್ ಅರ್ಥ ಮಾಡಿಕೊಳ್ಳುತ್ತಿದ್ದರು ಎಂದು ಜಾವಗಲ್ ಶ್ರೀನಾಥ್ ಹೇಳಿದ್ದಾರೆ.
ಗಂಗೂಲಿ ಗ್ರೇಟ್ ಕ್ಯಾಪ್ಟನ್ ಆಗಲು ಕಾರಣ ಏನು?
ಇನ್ನು ಇದಾದ ಬಳಿಕ ಸೌರವ್ ಗಂಗೂಲಿ ಕ್ಯಾಪ್ಟನ್ ಆದರು. ಆಗ ಬಹುಶಃ ತಂಡದಲ್ಲಿ ಐದಾರು ಕ್ಯಾಪ್ಟನ್ಗಳಿದ್ದರು. ಹೀಗಾಗಿ ತಂಡವನ್ನು ನಿಭಾಯಿಸುವುದು ಗಂಗೂಲಿಗೆ ತುಂಬಾನೆ ಸುಲಭವಾಗಿತ್ತು. ಗಂಗೂಲಿ ಇಂದು ಗ್ರೇಟ್ ಕ್ಯಾಪ್ಟನ್ ಎಂದು ಗುರುತಿಸಿಕೊಂಡಿರಬಹುದು. ಆದರೆ ಆ ಸಂದರ್ಭದಲ್ಲಿ ಐದಾರು ಮಂದಿ ತಂಡದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದರಿಂದ ಅವರ ಕೆಲಸ ಸುಲಭವಾಗುತ್ತಿತ್ತು. ಒಟ್ಟಿನಲ್ಲಿ ಎಲ್ಲಾ ಕ್ಯಾಪ್ಟನ್ಗಳು ಆಯಾ ಕಾಲಘಟ್ಟದಲ್ಲಿ ಒಳ್ಳೆಯ ಕ್ಯಾಪ್ಟನ್ ಗಳಾಗಿದ್ದರು ಎಂದು ಶ್ರೀನಾಥ್ ಅಭಿಪ್ರಾಯಪಟ್ಟಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

