IPL 2021: ಸಿಎಸ್ಕೆ ತಂಡಕ್ಕೆ ಆಘಾತ, ಕೊನೇ ಕ್ಷಣದಲ್ಲಿ ಧೋನಿ ಟೀಂ ತೊರೆದ ಸ್ಟಾರ್ ವೇಗಿ..!
ಮೆಲ್ಬರ್ನ್: ಮಿಲಿಯನ್ ಡಾಲರ್ ಟೂರ್ನಿ ಎನಿಸಿಕೊಂಡಿರುವ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಬಹುನಿರೀಕ್ಷಿತ ಭಾರತದ ಚುಟುಕು ಕ್ರಿಕೆಟ್ ಹಬ್ಬದಲ್ಲಿ ತಮ್ಮ ಅಭಿಮಾನಿಗಳನ್ನು ರಂಜಿಸಲು ಎಲ್ಲಾ ಕ್ರೀಡಾತಾರೆಯರು ತುದಿಗಾಲಿನಲ್ಲಿ ನಿಂತಿದ್ದಾರೆ. ಹೀಗಿರುವಾಗಲೇ 3 ಬಾರಿ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಪಾಲಿಗೆ ಆಘಾತಕಾರಿಯಾದ ಸುದ್ದಿಯೊಂದು ಹೊರಬಿದ್ದಿದೆ. ತಂಡದ ಪ್ರಮುಖ ಸ್ಟಾರ್ ವೇಗಿ ಪಂದ್ಯಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಟೂರ್ನಿಯಿಂದ ಹಿಂದೆ ಸರಿಯುವ ಮೂಲಕ ಧೋನಿ ಪಡೆಗೆ ಶಾಕ್ ನೀಡಿದ್ದಾರೆ.
ಬಹುನಿರೀಕ್ಷಿತ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಏಪ್ರಿಲ್ 09ರಿಂದ ಆರಂಭವಾಗಲಿದ್ದು, ಚೆನ್ನೈನ ಚೆಪಾಕ್ ಮೈದಾನ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಉದ್ಘಾಟನಾ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.
ಎಂ. ಎಸ್. ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಯುಎಇನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮೊದಲ ಬಾರಿಗೆ ಪ್ಲೇ ಆಫ್ ಪ್ರವೇಶಿಸಲು ವಿಫಲವಾಗಿ ನಿರಾಸೆ ಅನುಭವಿಸಿತ್ತು.
ಹೀಗಾಗಿ ಈ ಬಾರಿ ಎಲ್ಲಾ ತಂಡಗಳಿಗಿಂತ ಮೊದಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಭ್ಯಾಸ ಆರಂಭಿಸಿತ್ತು. ಧೋನಿ, ರೈನಾ ಸೇರಿದಂತೆ ಈಗಾಗಲೇ ನೆಟ್ ಪ್ರಾಕ್ಟೀಸ್ ಆರಂಭಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಮುಂಬೈನ ವಾಂಖೆಡೆ ಮೈದಾನದಲ್ಲಿ ಏಪ್ರಿಲ್ 10ರಂದು ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೊದಲ ಪಂದ್ಯವನ್ನಾಡುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.
ಹೀಗಿರುವಾಗಲೇ ಚೆನ್ನೈ ಸೂಪರ್ ಕಿಂಗ್ಸ್ ಪಾಲಿಗೆ ಆಘಾತಕಾರಿಯಾದ ಸುದ್ದಿಯೊಂದು ಹೊರಬಿದ್ದಿದ್ದು, ತಂಡದ ಸ್ಟಾರ್ ವೇಗಿ ಜೋಸ್ ಹೇಜಲ್ವುಡ್ ಕೊನೆಯ ಕ್ಷಣದಲ್ಲಿ ಐಪಿಎಲ್ನಿಂದ ದೂರ ಉಳಿಯುವುದಾಗಿ ತಿಳಿಸಿದ್ದಾರೆ.
ಬೇರೆ ಬೇರೆ ಸಮಯದಲ್ಲಿ ಸುಮಾರು 10 ತಿಂಗಳುಗಳ ಕಾಲ ಕ್ವಾರಂಟೈನ್ ಹಾಗೂ ಬಯೋಬಬಲ್ನಲ್ಲಿದ್ದೇನೆ. ಹೀಗಾಗಿ ಕೆಲಕಾಲ ಕುಟುಂಬದೊಟ್ಟಿಗೆ ಕಾಲ ಕಳೆಯಲು ಕ್ರಿಕೆಟ್ನಿಂದ 2 ತಿಂಗಳುಗಳ ಕಾಲ ದೂರ ಉಳಿಯಲು ತೀರ್ಮಾನಿಸಿದ್ದೇನೆ.
ಮುಂಬರುವ ದಿನಗಳಲ್ಲಿ ಸಾಕಷ್ಟು ಮಹತ್ವದ ಸರಣಿಗಳಿದ್ದು, ಟಿ20 ವಿಶ್ವಕಪ್, ಆಷಸ್ ಸರಣಿ ವೇಳೆ ನಾನು ಆಸ್ಟ್ರೇಲಿಯಾ ತಂಡದಲ್ಲಿರಬೇಕೆಂದು ನಿರ್ಧರಿಸಿದ್ದೇನೆ. ಈ ಸರಣಿಗಳಿಗೆ ನಾನು ಮಾನಸಿಕವಾಗಿ ಹಾಗೆಯೇ ದೈಹಿಕವಾಗಿ ಸದೃಢನಾಗಿರಲು ಬಯಸಿದ್ದೇನೆ. ಹೀಗಾಗಿ ಐಪಿಎಲ್ನಿಂದ ದೂರ ಉಳಿಯಲು ತೀರ್ಮಾನಿಸಿದ್ದೇನೆ ಎಂದು ಜೋಸ್ ಹೇಜಲ್ವುಡ್ ಹೇಳಿದ್ದಾರೆ.
13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಇಂಗ್ಲೆಂಡ್ ಯುವ ಪ್ರತಿಭೆ ಸ್ಯಾಮ್ ಕರ್ರನ್ ಆಲ್ರೌಂಡ್ ಪ್ರದರ್ಶನ ತೋರಿದ್ದರಿಂದ ಜೋಸ್ ಹೇಜಲ್ವುಡ್ಗೆ ಕೇವಲ 3 ಪಂದ್ಯಗಳನ್ನಾಡಲು ಅವಕಾಶ ಪಡೆದುಕೊಂಡಿದ್ದರು.
2010, 2011 ಹಾಗೂ 2018ರಲ್ಲಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿರುವ ಚೆನ್ನೈ ಸೂಪರ್ ಕಿಂಗ್ಸ್ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರುವುದರ ಮೂಲಕ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.