- Home
- Sports
- Cricket
- ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವಂತೆ; ತವರಿನಲ್ಲಿ ವೈಟ್ವಾಷ್ ಅನುಭವಿಸಿದ್ರೂ ಗೌತಮ್ ಗಂಭೀರ್ ಹಿಂಗಾ ಹೇಳೋದು?
ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವಂತೆ; ತವರಿನಲ್ಲಿ ವೈಟ್ವಾಷ್ ಅನುಭವಿಸಿದ್ರೂ ಗೌತಮ್ ಗಂಭೀರ್ ಹಿಂಗಾ ಹೇಳೋದು?
ಗುವಾಹಟಿ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ನಲ್ಲೂ ಟೀಂ ಇಂಡಿಯಾ ಸೋಲು ಅನುಭವಿಸಿದೆ. ಈ ಮೂಲಕ ಎರಡನೇ ಬಾರಿಗೆ ಭಾರತ ತವರಿನಲ್ಲಿ ವೈಟ್ವಾಷ್ ಮುಖಭಂಗ ಅನುಭವಿಸಿದೆ. ಈ ಸೋಲಿನ ಹೊರತಾಗಿಯೂ ಗೌತಮ್ ಗಂಭೀರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಭಾರತಕ್ಕೆ ಮತ್ತೊಂದು ಹೀನಾಯ ಸೋಲು
ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಭಾರತ ಟೆಸ್ಟ್ ತಂಡಕ್ಕೆ ಮತ್ತೊಂದು ಅವಮಾನಕಾರಿ ಸೋಲು ಎದುರಾಗಿದೆ. ಗಂಭೀರ್ ಮಾರ್ಗದರ್ಶನದಲ್ಲಿ ಭಾರತ ಎರಡನೇ ಬಾರಿಗೆ ತವರಿನಲ್ಲೇ ವೈಟ್ವಾಷ್ ಮುಖಭಂಗ ಅನುಭವಿಸಿದೆ.
ಎರಡು ಬಾರಿ ಭಾರತಕ್ಕೆ ತವರಿನಲ್ಲಿ ವೈಟ್ವಾಷ್ ಮುಖಭಂಗ
ಮೊದಲು ನ್ಯೂಜಿಲೆಂಡ್ ಎದುರು ತವರಿನಲ್ಲಿ ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-0 ಅಂತರದಲ್ಲಿ ವೈಟ್ವಾಷ್ ಅನುಭವಿಸಿದ್ದ ಭಾರತ, ಇದೀಗ ಹರಿಣಗಳ ಎದುರು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಸೋತು ಮುಖಭಂಗಕ್ಕೀಡಾಗಿದೆ.
ಗಂಭೀರ್ ಮಾರ್ಗದರ್ಶನದಲ್ಲಿ ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು
ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಇದುವರೆಗೂ ಒಟ್ಟು 18 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಈ ಪೈಕಿ 10 ಪಂದ್ಯಗಳಲ್ಲಿ ಸೋತಿದೆ. ಇನ್ನು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ರವಿಚಂದ್ರನ್ ಅಶ್ವಿನ್ ಟೆಸ್ಟ್ನಿಂದ ಸೈಡ್ಲೈನ್ ಆಗಲು ಗಂಭೀರ್ ಕಾರಣ ಎನ್ನುವ ಮಾತೂ ಇದೆ.
ಗಂಭೀರ್ಗೆ ಅಗರ್ಕರ್ ಸಾಥ್
ಹಿರಿಯ ಆಟಗಾರರನ್ನು ಕಡೆಗಣಿಸಿ, ಯುವ ಆಟಗಾರರಿಗೆ ಮಣೆಹಾಕಲು ಮುಂದಾಗಿದ್ದು ಗಂಭೀರ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದರ ಜತೆಗೆ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಸಾಥ್ ಕೊಡುತ್ತಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ
ತನ್ನ ಕೆಲಸ ಸಮರ್ಥಿಸಿಕೊಂಡ ಗಂಭೀರ್
ಇನ್ನು ದಕ್ಷಿಣ ಆಫ್ರಿಕಾ ಎದುರು ಬರೋಬ್ಬರಿ 408 ರನ್ ಅಂತರದ ಸೋಲಿನ ಹೊರತಾಗಿಯೂ ಗೌತಮ್ ಗಂಭೀರ್ ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ. ನನ್ನ ನಾಯಕತ್ವದಲ್ಲೇ ಭಾರತ ಐಸಿಸಿ ಚಾಂಪಿಯನ್ಸ್ ಟ್ರೋಫಿ, ಏಷ್ಯಾಕಪ್ ಜಯಿಸಿದೆ ಎಂದು ಹೇಳಿದ್ದಾರೆ.
ಗೌತಮ್ ಗಂಭೀರ್ಗೆ ಮಾಧ್ಯಮದವರ ಖಡಕ್ ಪ್ರಶ್ನೆ
ಸೋಲಿನ ಬಳಿಕ ಮಾಧ್ಯಮದವರು, ನೀವು ಇನ್ನೂ ಟೆಸ್ಟ್ ಕ್ರಿಕೆಟ್ನಲ್ಲಿ ಈ ಹುದ್ದೆಯಲ್ಲಿ ಮುಂದುವರೆಯಲು ಯೋಗ್ಯವಾದ ವ್ಯಕ್ತಿ ಎನಿಸುತ್ತದೆಯೇ ಎಂದು ಗಂಭೀರ್ ಅವರನ್ನು ಪ್ರಶ್ನಿಸಲಾಯಿತು. ಆಗ ಗೌತಿ, ಅದು ಬಿಸಿಸಿಐ ತೀರ್ಮಾನಿಸಲಿದೆ. ನಾನು ನಿರ್ದಿಷ್ಟವಾದ ಗುರಿ ಸಾಧಿಸಲು ಪ್ರಯತ್ನ ಪಡುತ್ತಿದ್ದೇನೆ ಎಂದು ಹೇಳಿದ್ದಾರೆ.
ನನ್ನ ಮಾರ್ಗದರ್ಶನದಲ್ಲಿ ಭಾರತ ಚೆನ್ನಾಗಿ ಆಡಿದೆ ಎಂದ ಗೌತಿ
ಅಂದಹಾಗೆ ನಿಮಗೆ ನೆನಪಿರಲಿ ನನ್ನ ಮಾರ್ಗದರ್ಶನದಲ್ಲಿಯೇ ಭಾರತ ಇಂಗ್ಲೆಂಡ್ನಲ್ಲಿ ಉತ್ತಮ ಪ್ರದರ್ಶನ ತೋರಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ ಏಷ್ಯಾಕಪ್ ಗೆದ್ದಿದೆ ಎಂದು ಗಂಭೀರ್ ಹೇಳಿದ್ದಾರೆ
ಗಂಭೀರ್ ತಲೆದಂಡವಾಗುತ್ತಾ?
ಭಾರತದ ಈ ದಯನೀಯ ಸೋಲಿನ ಬೆನ್ನಲ್ಲೇ ಗೌತಮ್ ಗಂಭೀರ್ ಅವರ ಟೆಸ್ಟ್ ಹೆಡ್ಕೋಚ್ ಹುದ್ದೆಯ ತಲೆದಂಡಕ್ಕೆ ಆಗ್ರಹ ಜೋರಾಗಿದೆ. ಮುಂದೇನು ಬೆಳವಣಿಗೆಯಾಗಲಿವೆ ಎನ್ನುವುದನ್ನು ಕಾದು ನೋಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

