ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಇಲ್ಲದೇ ಇದ್ರೂ ಪಂದ್ಯ ಗೆಲ್ಲಿಸಿದ ರಾಣಾ!
ಇಂಗ್ಲೆಂಡ್ ಎದುರಿನ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಪ್ಲೇಯಿಂಗ್ 11ರಲ್ಲಿ ಇಲ್ಲದ ಹರ್ಷಿತ್ ರಾಣಾ ಪಂದ್ಯ ಆಡಿ ಭಾರತಕ್ಕೆ ಗೆಲುವು ತಂದುಕೊಟ್ಟರು.

ಹರ್ಷಿತ್ ರಾಣಾ
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಭಾರತ-ಇಂಗ್ಲೆಂಡ್ ನಡುವಿನ ನಾಲ್ಕನೇ ಟಿ20 ಪಂದ್ಯ ನಡೆಯಿತು. ಕೊನೆಯ ಓವರ್ ವರೆಗೂ ರೋಚಕವಾಗಿದ್ದ ಪಂದ್ಯದಲ್ಲಿ ಟೀಂ ಇಂಡಿಯಾ ಆಲ್ರೌಂಡ್ ಪ್ರದರ್ಶನದೊಂದಿಗೆ ಇಂಗ್ಲೆಂಡ್ ಅನ್ನು ಮಣಿಸಿ ಸರಣಿ ಗೆದ್ದುಕೊಂಡಿತು.
ಆದರೆ, ಈ ಪಂದ್ಯದಲ್ಲಿ ಪ್ಲೇಯಿಂಗ್ 11ರಲ್ಲಿ ಸ್ಥಾನ ಪಡೆಯದ ಭಾರತದ ಬೌಲರ್ ಹರ್ಷಿತ್ ರಾಣಾ ಅನಿರೀಕ್ಷಿತವಾಗಿ ಪದಾರ್ಪಣೆ ಮಾಡಿ ಅದ್ಭುತ ಬೌಲಿಂಗ್ನಿಂದ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಶಿವಂ ದುಬೆ ಬದಲಿಗೆ ಹರ್ಷಿತ್ ರಾಣಾ
ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟಿ20 ಪಂದ್ಯದಲ್ಲಿ ಎರಡೂ ತಂಡಗಳ ನಡುವೆ ತೀವ್ರ ಪೈಪೋಟಿ ಕಂಡುಬಂದಿತು. ಕೊನೆಗೆ ಭಾರತ ಗೆಲುವು ಸಾಧಿಸಿತು. ಈ ಗೆಲುವಿನಲ್ಲಿ ಹರ್ಷಿತ್ ರಾಣಾ ಮೂರು ವಿಕೆಟ್ ಪಡೆದು ಪ್ರಮುಖ ಪಾತ್ರ ವಹಿಸಿದರು.
ಬ್ಯಾಟಿಂಗ್ನಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ಅರ್ಧಶತಕ ಬಾರಿಸಿದರು. ಬೌಲಿಂಗ್ನಲ್ಲಿ ಹರ್ಷಿತ್ ರಾಣಾ ಟೀಂ ಇಂಡಿಯಾದಲ್ಲಿ ವಿಚಿತ್ರವಾಗಿ ಪದಾರ್ಪಣೆ ಮಾಡಿದರು. ಅವರು ಪ್ಲೇಯಿಂಗ್ 11ರಲ್ಲಿ ಇರಲಿಲ್ಲ, ಆದರೆ ಶಿವಂ ದುಬೆ ಬದಲಿಗೆ ತಂಡಕ್ಕೆ ಬಂದರು. ಮೈದಾನಕ್ಕೆ ಬಂದು ಚೆಂಡನ್ನು ಕೈಗೆ ಪಡೆದ ತಕ್ಷಣ ಹರ್ಷಿತ್ ತಮ್ಮ ಮ್ಯಾಜಿಕ್ ಅನ್ನು ತೋರಿಸಿದರು. ಮೂರು ಪ್ರಮುಖ ವಿಕೆಟ್ಗಳನ್ನು ಪಡೆದರು. ಹರ್ಷಿತ್ ಕಂಕಷನ್ ಬದಲಿ ಆಟಗಾರನಾಗಿ ಬಂದು ಮೂರು ಪ್ರಮುಖ ವಿಕೆಟ್ಗಳನ್ನು ಪಡೆದ ಮೊದಲ ಆಟಗಾರ ಎನಿಸಿಕೊಂಡರು.
ಶಿವಂ ದುಬೆ ಏಕೆ ಔಟ್ ಆದರು?
ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ನಲ್ಲಿ ಟೀಂ ಇಂಡಿಯಾ 100 ರನ್ಗಳಿಗೆ ಪ್ರಮುಖ ಬ್ಯಾಟ್ಸ್ಮನ್ಗಳನ್ನು ಕಳೆದುಕೊಂಡಿತು. ನಂತರ ಹಾರ್ದಿಕ್ ಪಾಂಡ್ಯ (53 ರನ್) ಮತ್ತು ಶಿವಂ ದುಬೆ (53 ರನ್) ಅರ್ಧಶತಕ ಬಾರಿಸಿದರು.
ಇನ್ನಿಂಗ್ಸ್ ಕೊನೆಯಲ್ಲಿ, ಶಿವಂ ದುಬೆಗೆ ಭಾರೀ ಬೌನ್ಸರ್ ತಗುಲಿತು. ಜೇಮಿ ಓವರ್ಟನ್ ಬೌನ್ಸರ್ ಅವರ ತಲೆಗೆ ಬಡಿಯಿತು. ಇದರಿಂದ ಭಾರತ ತಂಡ ಫೀಲ್ಡಿಂಗ್ ಮಾಡುವಾಗ ಮೈದಾನದ ಹೊರಗೆ ಕುಳಿತುಕೊಳ್ಳಬೇಕಾಯಿತು. ದುಬೆ ಇಲ್ಲದ ಕಾರಣ ಹರ್ಷಿತ್ ರಾಣಾಗೆ ಅದೃಷ್ಟ ಒಲಿಯಿತು. ಅವರ ಸ್ಥಾನದಲ್ಲಿ ತಂಡಕ್ಕೆ ಬಂದರು.
ಮೊದಲ ಓವರ್ನಲ್ಲೇ ಹರ್ಷಿತ್ ಅದ್ಭುತ ಪ್ರದರ್ಶನ
12ನೇ ಓವರ್ನಲ್ಲಿ ಸೂರ್ಯಕುಮಾರ್ ಯಾದವ್ ಚೆಂಡನ್ನು ಹರ್ಷಿತ್ ರಾಣಾಗೆ ನೀಡಿದರು. ರಾಣಾ ಅದ್ಭುತ ಆರಂಭ ಮಾಡಿ ಲಿಯಾಮ್ ಲಿವಿಂಗ್ಸ್ಟೋನ್ರನ್ನು ಔಟ್ ಮಾಡಿದರು. ಟಿ20 ಪದಾರ್ಪಣೆ ಮಾಡಿದ ಎರಡನೇ ಎಸೆತದಲ್ಲೇ ಹರ್ಷಿತ್ ರಾಣಾ ಲಿವಿಂಗ್ಸ್ಟೋನ್ರನ್ನು ಪೆವಿಲಿಯನ್ಗೆ ಕಳುಹಿಸಿದರು. ಆದರೆ, ಅವರ ಎರಡನೇ ಓವರ್ನಲ್ಲಿ 18 ರನ್ ನೀಡಿದರು. ಆದರೆ ಮೂರನೇ ಓವರ್ನಲ್ಲಿ ಜಾಕಬ್ ಬೈತಾಲ್ರನ್ನು ಔಟ್ ಮಾಡಿ ಮತ್ತೊಂದು ವಿಕೆಟ್ ಪಡೆದರು.
ವರುಣ್ ಚಕ್ರವರ್ತಿ ಮಹತ್ವದ ಓವರ್
ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಉತ್ತಮ ಫಾರ್ಮ್ನಲ್ಲಿದ್ದ ಸ್ಪಿನ್ ಬೌಲರ್ ವರುಣ್ ಚಕ್ರವರ್ತಿ ಒಂದೇ ಓವರ್ನಲ್ಲಿ ಪಂದ್ಯವನ್ನೇ ಬದಲಾಯಿಸಿದರು. ಸ್ಟಾರ್ ಬ್ಯಾಟ್ಸ್ಮನ್ ಹ್ಯಾರಿ ಬ್ರೂಕ್ ಅರ್ಧಶತಕ ಬಾರಿಸಿದರು. ಇದರಿಂದ ಪಂದ್ಯ ಇಂಗ್ಲೆಂಡ್ ಕೈಗೆ ಹೋಗುತ್ತಿತ್ತು. ಕೇವಲ 25 ಎಸೆತಗಳಲ್ಲಿ ಅರ್ಧಶತಕ ಸಾಧಿಸಿದರು. ಆದರೆ, 26ನೇ ಎಸೆತಕ್ಕೆ ವರುಣ್ ಚಕ್ರವರ್ತಿ ಸ್ಪಿನ್ಗೆ ಬಲಿಯಾದರು. ಚಕ್ರವರ್ತಿ ತಮ್ಮ ಓವರ್ನಲ್ಲಿ 2 ವಿಕೆಟ್ ಪಡೆದು ಪಂದ್ಯವನ್ನು ಭಾರತದ ಪರವಾಗಿ ತಿರುಗಿಸಿದರು.
ಸರಣಿ ಗೆದ್ದ ಭಾರತ
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ಗಳಲ್ಲಿ 9 ವಿಕೆಟ್ಗಳಿಗೆ 181 ರನ್ ಗಳಿಸಿತು. ಅಭಿಷೇಕ್ ಶರ್ಮ 29, ರಿಂಕು ಸಿಂಗ್ 30, ಶಿವಂ ದುಬೆ 53, ಹಾರ್ದಿಕ್ ಪಾಂಡ್ಯ 53 ರನ್ ಗಳಿಸಿದರು. ಇಂಗ್ಲೆಂಡ್ ಬೌಲರ್ಗಳಾದ ಸಾಕಿಬ್ ಮಹಮೂದ್ 3 ವಿಕೆಟ್, ಜೇಮಿ ಓವರ್ಟನ್ 2 ವಿಕೆಟ್ ಪಡೆದರು. ಇವರೊಂದಿಗೆ ಬ್ರೈಡನ್ ಕಾರ್ಸೆ ಮತ್ತು ಆದಿಲ್ ರಶೀದ್ ತಲಾ ಒಂದು ವಿಕೆಟ್ ಪಡೆದರು.
182 ರನ್ಗಳ ಗುರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ 19.4 ಓವರ್ಗಳಲ್ಲಿ 166 ರನ್ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಆಟಗಾರರಾದ ಫಿಲ್ ಸಾಲ್ಟ್ 23, ಬೆನ್ ಡಕೆಟ್ 39, ಹ್ಯಾರಿ ಬ್ರೂಕ್ 51 ರನ್ ಗಳಿಸಿದರು. ಭಾರತದ ಬೌಲರ್ಗಳಾದ ರವಿ ಬಿಷ್ಣೋಯ್ 3, ಹರ್ಷಿತ್ ರಾಣಾ 3, ವರುಣ್ ಚಕ್ರವರ್ತಿ 2 ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಭಾರತ 3-1 ಅಂತರದಲ್ಲಿ ಸರಣಿ ಗೆದ್ದುಕೊಂಡಿತು. ಈ ಸರಣಿಯ ಕೊನೆಯ ಪಂದ್ಯ ಫೆಬ್ರವರಿ 2 ರಂದು ಮುಂಬೈನಲ್ಲಿ ನಡೆಯಲಿದೆ.