ಒಂದು ರುಪಾಯಿಗೆ ಊಟ, ಬಡವರ ಹೊಟ್ಟೆ ತುಂಬಿಸುವುದರಲ್ಲಿ ತೃಪ್ತಿ ಕಾಣುತ್ತಿರುವ ಗಂಭೀರ್..!
ಬೆಂಗಳೂರು: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ ಯಾರಿಗೆ ಗೊತ್ತಿಲ್ಲ ಹೇಳಿ. ಕ್ರಿಕೆಟಿಗನಾಗಿದ್ದಾಗಲೂ ಹಾಗೂ ಸಂಸದನಾಗಿ ಗಂಭೀರ್ ಸದಾ ಸುದ್ದಿಯಲ್ಲಿರುವ ವ್ಯಕ್ತಿತ್ವ ಅವರದ್ದು. ಆದರೆ ಗಂಭೀರ್ ನಡೆಸುತ್ತಿರುವ ಒಂದು ಸಮಾಜಮುಖಿ ಕೆಲಸಕ್ಕೆ ಎಂತಹ ವಿರೋಧಿಗಳು ಸೆಲ್ಯೂಟ್ ಹೊಡೆಯಲೇಬೇಕು. ಏನದು ಅಂತೀರಾ? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ.

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಎರಡು ಬಾರಿಯ ವಿಶ್ವಕಪ್ ಫೈನಲ್ ಪಂದ್ಯದ ಹೀರೋ ಗೌತಮ್ ಗಂಭೀರ್, ಕ್ರಿಕೆಟ್ಗೆ ವಿದಾಯ ಹೇಳಿದ ಬಳಿಕ ಪೂರ್ವ ಡೆಲ್ಲಿಯಿಂದ ಬಿಜೆಪಿ ಪಕ್ಷದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದಾರೆ.
ಗೌತಮ್ ಗಂಭೀರ್, ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದರೂ ಸಹಾ, ಅವರು ಸಂಸತ್ನಲ್ಲಿ ಕಾಣಿಸಿಕೊಂಡಿದ್ದಕ್ಕಿಂತ ಹೆಚ್ಚಾಗಿ ಕ್ರಿಕೆಟ್ ವಿಶ್ಲೇಷಕರಾಗಿ, ಕೆಲವು ಟಿ20 ಲೀಗ್ಗಳಲ್ಲಿ ಆಟಗಾರರಾಗಿ ಹಾಗೂ ಐಪಿಎಲ್ನಲ್ಲಿ ಟೀಮ್ ಮೆಂಟರ್ಗಳಾಗಿ ಕಾಣಿಸಿಕೊಂಡಿದ್ದೇ ಹೆಚ್ಚು.
ಗೌತಮ್ ಗಂಭೀರ್ ಅವರ ಈ ನಡೆಯ ಬಗ್ಗೆ ಹಲವರು ಕಟು ವಿಮರ್ಶೆಗಳನ್ನು ಮಾಡುತ್ತಾ ಬಂದಿದ್ದಾರೆ. ಈತ ಜನಗಳ ಪ್ರತಿನಿಧಿಯಾಗಿ ಸಂಸತ್ನಲ್ಲಿ ಮಾತನಾಡಬೇಕಿದ್ದವರು, ಟಿವಿಯಲ್ಲಿ ಕ್ರಿಕೆಟ್ ಕಾಮೆಂಟ್ರಿ ಮಾಡುತ್ತಿದ್ದಾರೆ ಎನ್ನುವ ಮಾತುಗಳು ನಿಮ್ಮ ಕಿವಿಗೂ ಬಿದ್ದಿರಬಹುದು.
ಹೌದು, ಇದು ಒಂದು ಅರ್ಥದಲ್ಲಿ ಸತ್ಯವೆನಿಸಿದರೂ, ಗಂಭೀರ್ ಒಂದು ಸಮಾಜಮುಖಿ ಕೆಲಸಕ್ಕಾಗಿ ಈ ರೀತಿಯ ಎಲ್ಲಾ ಕೆಲಸ ಮಾಡುತ್ತಿದ್ದಾರೆ. ಗಂಭೀರ್ ಅವರನ್ನು ಹತ್ತಿರದಿಂದ ಬಲ್ಲವರಿಗೆ ಹಾಗೂ ಪೂರ್ವ ಡೆಲ್ಲಿಯ ನಿವಾಸಿಗಳಿಗೆ ಗಂಭೀರ್ ಈಗಲೂ ರಿಯಲ್ ಹೀರೋ ಎನಿಸಿಕೊಂಡಿದ್ದಾರೆ.
ಈ ಕುರಿತಂತೆ ಗೌತಮ್ ಗಂಭೀರ್ ಮನಬಿಚ್ಚಿ ಮಾತನಾಡಿದ್ದಾರೆ. 12 ಗಂಟೆಗಳ ಕಾಲ ಕಾಮೆಂಟ್ರಿ ಮಾಡುವ ಯಾವ ಚಟವೂ ನನಗಿಲ್ಲ. ನಾನು ಈಗಲೇ ಬೇಕಿದ್ರೂ ಕಾಮೆಂಟ್ರಿ ಮಾಡುವುದನ್ನು ಬಿಟ್ಟು ಬಿಡಬಲ್ಲೆ.
ಅದೇ ರೀತಿ ಈ ವಯಸ್ಸಿನಲ್ಲಿ ಅಭ್ಯಾಸ ನಡೆಸಿ, ಕ್ರಿಕೆಟ್ ಆಡಬೇಕು ಎನ್ನುವ ಯಾವ ಹುಚ್ಚೂ ನನಗಿಲ್ಲ. ಯಾಕೆಂದರೆ ಕ್ರಿಕೆಟ್ನಲ್ಲಿ ನಾನು ಸಾಧಿಸಬೇಕು ಎನ್ನುವುದು ಏನೂ ಉಳಿದಿಲ್ಲ.
Jan Rasoi
ಆದರೂ ನಾನು ಪ್ರತಿವರ್ಷ ನನ್ನ ಜೇಬಿನಿಂದ ಸುಮಾರು ಮೂರೂವರೆ ಕೋಟಿ ರುಪಾಯಿಗಳನ್ನು ಖರ್ಚು ಮಾಡುತ್ತಿದ್ದೇನೆ. ಹಾಗಂತ ನನ್ನ ಮನೆಯಲ್ಲಿ ದುಡ್ಡಿನ ಗಿಡವಿಲ್ಲ ಎಂದು ಗಂಭೀರ್ ಹೇಳಿದ್ದಾರೆ.
ನಾನು ನಡೆಸುತ್ತಿರುವ ಒಂದು ಕಮ್ಯೂನಿಟಿ ಕಿಚೆನ್ 'ಏಕ್ ಆಶಾ ಜನ್ ರಸೋಯಿಗೆ' ಪ್ರತಿ ತಿಂಗಳು 5 ಲಕ್ಷ ರುಪಾಯಿ ಖರ್ಚಾಗುತ್ತದೆ. ಒಂದು ಕಮ್ಯುನಿಟಿ ಕಿಚೆನ್ನಲ್ಲಿ ಒಂದು ದಿನಕ್ಕೆ ಒಂದು ರುಪಾಯಿಗೆ ಸಾವಿರ ಜನಕ್ಕೆ ಊಟ ನೀಡುತ್ತಿದ್ದೇನೆ.
ಈ ರೀತಿ ನನ್ನ ಲೋಕಸಭಾ ಕ್ಷೇತ್ರದಲ್ಲಿ 5 'ಏಕ್ ಆಶಾ ಜನ್ ರಸೋಯಿ' ಕಮ್ಯೂನಿಟಿ ಕಿಚೆನ್ಗಳಿದ್ದು, ಈ ಕಿಚೆನ್ ನಿರ್ವಹಿಸಲು ಟ್ರಾನ್ಸ್ಪೋರ್ಟ್ ಖರ್ಚಿಗೆ ಒಂದು ತಿಂಗಳಿಗೆ 5 ಲಕ್ಷ ಬೇಕು. ಅಲ್ಲಿಗೆ ಒಂದು ತಿಂಗಳಿಗೆ 30 ಲಕ್ಷ ರುಪಾಯಿ ಖರ್ಚಾಗುತ್ತದೆ.
ಇದರರ್ಥ 12 ತಿಂಗಳಿಗೆ ಸುಮಾರು ಮೂರುವರೆ ಕೋಟಿ ರುಪಾಯಿ ಖರ್ಚು ಆಗುತ್ತದೆ. ಯಾರು ಬೇಕಿದ್ದರೂ ನನ್ನನ್ನು ಪಾರ್ಟ್ ಟೈಮ್ ಎಂಪಿ ಎಂದು ಕರೆದರೂ ತೊಂದರೆಯಿಲ್ಲ. ಯಾಕೆಂದರೆ ದಿನಕ್ಕೆ 5000 ಬಡ ಜನರ ಹೊಟ್ಟೆ ತುಂಬಿಸುತ್ತಿದ್ದೇನೆ ಎನ್ನುವುದರ ಬಗ್ಗೆ ನನಗೆ ಹೆಚ್ಚು ತೃಪ್ತಿಯಿದೆ ಎಂದು ಗಂಭೀರ್ ಹೇಳಿದ್ದಾರೆ
'ಏಕ್ ಆಶಾ ಜನ್ ರಸೋಯಿ' ಎನ್ನುವುದು ಗೌತಮ್ ಗಂಭೀರ್ ಅವರ ಮಹತ್ವಾಕಾಂಕ್ಷೆ ಸಮಾಜಮುಖಿ ಯೋಜನೆಯಾಗಿ ಕೇವಲ 1 ರುಪಾಯಿಗೆ ಅಗತ್ಯವಿರುವ ಜನರಿಗೆ ಪೋಷಕಾಂಶಯುಕ್ತ ತಾಜಾ ಆಹಾರವನ್ನು ಒದಗಿಸುತ್ತಿದ್ದಾರೆ. ಇದು ಸಾಕಷ್ಟು ಮೆಚ್ಚುಗೆಗೆ ಕಾರಣವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.