- Home
- Sports
- Cricket
- ಟಿ20 ಸರಣಿಗೆ ಭಾರತ ತಂಡ ಆಯ್ಕೆ; ಮುಗಿಯಿತಾ ಈ ಮೂವರ ಕ್ರಿಕೆಟ್ ಬದುಕು? 6 ಸ್ಪಷ್ಟ ಸಂದೇಶ ಕೊಟ್ಟ ಆಯ್ಕೆ ಸಮಿತಿ
ಟಿ20 ಸರಣಿಗೆ ಭಾರತ ತಂಡ ಆಯ್ಕೆ; ಮುಗಿಯಿತಾ ಈ ಮೂವರ ಕ್ರಿಕೆಟ್ ಬದುಕು? 6 ಸ್ಪಷ್ಟ ಸಂದೇಶ ಕೊಟ್ಟ ಆಯ್ಕೆ ಸಮಿತಿ
ಬೆಂಗಳೂರು: ಇದೇ ಜೂನ್ 26ರಿಂದ ಆರಂಭವಾಗಲಿರುವ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರಿನ ಟಿ20 ಸರಣಿಗೆ ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಬಲಿಷ್ಠ ಭಾರತ ತಂಡವನ್ನು ಪ್ರಕಟಿಸಿದೆ. ಇದರ ಜತೆಗೆ ಆರು ಸ್ಪಷ್ಟ ಸಂದೇಶವನ್ನು ರವಾನಿಸಿದೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ.

1. ಸೂರ್ಯಕುಮಾರ್ ಯಾದವ್ ಗೇಟ್ಪಾಸ್; ಶ್ರೇಯಸ್ ಅಯ್ಯರ್ ನಾಯಕ!
ಕೆಲ ತಿಂಗಳ ಹಿಂದಷ್ಟೇ ಭಾರತಕ್ಕೆ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಕೆಳಗಿಳಿಸಿ ಶ್ರೇಯಸ್ ಅಯ್ಯರ್ಗೆ ಭಾರತ ಚುಟುಕು ಕ್ರಿಕೆಟ್ ತಂಡದ ನಾಯಕತ್ವ ಪಟ್ಟ ಕಟ್ಟಿದೆ. ಮುಂಬರುವ ಟಿ20 ವಿಶ್ವಕಪ್ ಟೂರ್ನಿ, 2028ರ ಒಲಿಂಪಿಕ್ಸ್ನಲ್ಲೂ ಶ್ರೇಯಸ್ ಅಯ್ಯರ್ ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸುವುದು ಖಚಿತ ಎನ್ನಲಾಗುತ್ತಿದೆ.
2. ಮುಗಿಯಿತಾ ಈ ಮೂವರ ಕ್ರಿಕೆಟ್ ಬದುಕು?
ಐಪಿಎಲ್ ಟೂರ್ನಿಯಲ್ಲಿ ಆರ್ಸಿಬಿ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಹಾಗೂ ಆಲ್ರೌಂಡರ್ ಕೃನಾಲ್ ಪಾಂಡ್ಯ ಅದ್ಭುತ ಆಟ ಪ್ರದರ್ಶಿಸಿದ್ದರು. ಹೀಗಿದ್ದೂ ಈ ಇಬ್ಬರನ್ನು ಟಿ20 ಸರಣಿಗೆ ಆಯ್ಕೆ ಮಾಡಿಲ್ಲ. ಇದರ ಜತೆಗೆ ಸೂರ್ಯಕುಮಾರ್ ಯಾದವ್ ಅವರನ್ನು ಕೈಬಿಟ್ಟಿರುವುದರಿಂದ ಈ ಮೂವರ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕು ಮುಗಿಯಿತಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.
3. ಎರಡು ಐಪಿಎಲ್ ಟ್ರೋಫಿ ಗೆದ್ದ ನಾಯಕನಿಗಿಲ್ಲ ಸ್ಥಾನ:
ಆರ್ಸಿಬಿ ತಂಡದ ನಾಯಕ ರಜತ್ ಪಾಟೀದಾರ್ ಅವರನ್ನು ಮತ್ತೊಮ್ಮೆ ಕಡೆಗಣಿಸಲಾಗಿದೆ. ಸತತ ಎರಡು ಐಪಿಎಲ್ ಟ್ರೋಫಿ ಗೆಲ್ಲುವುದರ ಜತೆಗೆ ಬ್ಯಾಟಿಂಗ್ನಲ್ಲೂ ಮಿಂಚಿದ್ದ ಆರ್ಸಿಬಿ ನಾಯಕನಿಗೆ ಮತ್ತೆ ಆಯ್ಕೆ ಸಮಿತಿ ಅನ್ಯಾಯ ಮಾಡಿದೆ ಎನ್ನುವ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಕಾಡಲಾರಂಭಿಸಿದೆ.
4. ಗಂಭೀರ್ ಕಾಲಘಟ್ಟದಲ್ಲಿ ಆರ್ಸಿಬಿ ಆಟಗಾರರಿಗಿಲ್ಲ ಸ್ಥಾನ?
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರ್ಸಿಬಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಅದರಲ್ಲೂ ದೇವದತ್ ಪಡಿಕ್ಕಲ್, ಭುವನೇಶ್ವರ್ ಕುಮಾರ್, ರಜತ್ ಪಾಟೀದಾರ್, ಕೃನಾಲ್ ಪಾಂಡ್ಯ, ರಸಿಕ್ ಸಲಂ ಧರ್ ಹೀಗೆ ಹಲವು ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದರು. ಹೀಗಿದ್ದೂ ಗಂಭೀರ್-ಅಗರ್ಕರ್ ಜೋಡಿ ಮತ್ತೊಮ್ಮೆ ಆರ್ಸಿಬಿ ಆಟಗಾರರನ್ನು ಕಡೆಗಣಿಸಿದೆ.
5. ಭವಿಷ್ಯದ ನಾಯಕನಾಗಿ ತಿಲಕ್ ವರ್ಮಾಗೆ ಮಣೆ:
ಇನ್ನು ಭಾರತ ತಂಡದ ಭವಿಷ್ಯದ ನಾಯಕನನ್ನಾಗಿ ರೂಪಿಸುವ ನಿಟ್ಟಿನಲ್ಲಿ ತಿಲಕ್ ವರ್ಮಾಗೆ ಉಪನಾಯಕ ಪಟ್ಟ ಕಟ್ಟಲಾಗಿದೆ. ಈ ಅವಕಾಶವನ್ನು ಯಾವ ರೀತಿ ತಿಲಕ್ ವರ್ಮಾ ಬಳಸಿಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
6. ರಿಂಕು ದೇಶಿ ಕ್ರಿಕೆಟ್ನಲ್ಲಿ ಸಾಮರ್ಥ್ಯ ಸಾಬೀತು ಮಾಡಿದರಷ್ಟೇ ಚಾನ್ಸ್?
ಇನ್ನು ರಿಂಕು ಸಿಂಗ್ ಇತ್ತೀಚೆಗೆ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದ್ದಾರೆ. ಹೀಗಾಗಿ ದೇಶಿ ಕ್ರಿಕೆಟ್ನಲ್ಲಿ ರಿಂಕು ಸಿಂಗ್ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದರಷ್ಟೇ ಟೀಂ ಇಂಡಿಯಾದಲ್ಲಿ ಸ್ಥಾನ ಎನ್ನುವ ಸ್ಪಷ್ಟ ಸಂದೇಶವನ್ನು ಬಿಸಿಸಿಐ ಆಯ್ಕೆ ಸಮಿತಿಯು ರವಾನಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

