ಅಂಗಳದಲ್ಲಿತ್ತು ತಾಯಿ ಶವ: ಆದ್ರೂ ಕೊರೋನಾ ಪೀಡಿತರ ನೆರವಿಗೆ ಧಾವಿಸಿದ ವೈದ್ಯ!
ದೇಶದಾದ್ಯಂತ ಅಮಾನವೀಯ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಹೀಗಿರುವಾಗ ಒಡಿಶಾದಲ್ಲಿ ಮಾನವೀಯತೆ ಎತ್ತಿ ಹಿಡಿಯುವ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲೊಬ್ಬ ಡಾಕ್ಟರ್ ತನ್ನ ತಾಯಿ ಮೃತಪಟ್ಟಿದ್ದರೂ, ಕೊರೋನಾಪೀಡಿತರ ನೆರವಿಗೆ ಧಾವಿಸಿದ್ದಾರೆ, ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕಿಳಿದಿದ್ದಾರೆ. ಈ ಕುರಿತು ಕೇಳಿದವರೆಲ್ಲರೂ ಈ ವೈದ್ಯನಿಗೆ ಸಲಾಂ ಎಂದಿದ್ದು, ನಮಗೆ ನಿಮ್ಮ ಬಗ್ಗೆ ಬಹಳ ಹೆಮ್ಮೆ ಇದೆ ಎಂದಿದ್ದಾರೆ.
ಈ ಘಟನೆ ನಡೆದಿದ್ದು, ಒಡಿಶಾದ ಸಂಭಲ್ಪುರ್ ಜಿಲ್ಲೆಯಲ್ಲಿ. ಇಲ್ಲಿನ ಸಹಾಯಕ ವಿಭಾಗೀಯ ವೈದ್ಯಕೀಯ ಅಧಿಕಾರಿ ಅಶೋಕ್ ದಾಸ್ರವರ ಎಂಭತ್ತರ ಹರೆಯದ ತಾಯಿ ಮಾರ್ಚ್ 17ರಂದು ಮೃತಪಟ್ಟಿದ್ದರು. ಶೋಕಾಚರಣೆಗೆ ಕುಟುಂಬ ಸದಸ್ಯರು ಹಾಗೂ ಆಸು ಪಾಸಿನ ಜನರು ಮನೆಗೆ ಆಗಮಿಸಿದ್ದರು.
ಹೀಗಿರುವಾಗ ಅಶೋಕ್ಗೆ ಆಸ್ಪತ್ರೆಯಿಂದ ಕರೆ ಬಂದಿದ್ದು, ಕೂಡಲೇ ಅವರು ಕೊರೋನಾ ಪೀಡಿತರ ಚಿಕಿತ್ಸೆಗೆ ಹಾಗೂ ಅವರನ್ನು ಇದರಿಂದ ಕಾಪಾಡಲು ಆಸ್ಪತ್ರೆ ಕಡೆ ಧಾವಿಸಿದ್ದಾರೆ.
ಡ್ಯೂಟಿ ಮುಗಿಸಿ ಸಂಜೆ ಅವರು ಮನೆಗೆ ತಲುಪಿದ ಬಳಿಕ ತಾಯಿಯ ಅಂತ್ಯ ಸಂಸ್ಕಾರ ನಡೆಸಿದ್ದಾರೆ. ಇದನ್ನು ಕಂಡ ಕುಟುಂಬ ಸದಸ್ಯರು ಅಚ್ಚರಿಗೀಡಾಗಿದ್ದಾರೆ. ಅಲ್ಲದೇ ಯಾರೂ ನಿಮ್ಮಂತಿರಲು ಸಾಧ್ಯವಿಲ್ಲ ಎಂದು ನುಡಿದಿದ್ದಾರೆ.
ಈ ಸಂಬಂಧ ಮಾಧ್ಯಮಗಳು ಅಶೋಕ್ ದಾಸ್ ಬಳಿ ಮಾತನಾಡಿದಾಗ 'ಈ ಸಂದರ್ಭದಲ್ಲಿ ನಾನು ರಜೆ ತೆಗೆದುಕೊಳ್ಳುವುದಕ್ಕಿಂತ ಕರ್ತವ್ಯ ನಿಭಾಯಿಸುವುದು ಅತಿ ಅಗತ್ಯ. ಹೀಗಾಗಿ ಮಾನವೀಯ ದೃಷ್ಟಿಯಲ್ಲಿ ನನಗೆ ಸರಿ ಅನಿಸಿದ್ದನ್ನು ನಾನು ಮಾಡಿದ್ದೇನೆ' ಎಂದಿದ್ದಾರೆ.
ಇಂತಹ ನಿಸ್ವಾರ್ಥ ಸೇವೆ ಸಲ್ಲಿಸುವವರಿಗಾಗೇ ಪ್ರಧಾನಿ ಮೋದಿ ಜನತಾ ಕರ್ಫ್ಯೂ ದಿನ ಸಂಜೆ ಐದು ಗಂಟೆಗೆ ಚಪ್ಪಾಳೆ ಹಾಗೂ ಗಂಟೆ ಬಾರಿಸುವ ಮೂಲಕ ಗೌರವ ಸೂಚಿಸಲು ಹೇಳಿದ್ದು. ಹಾಗೂ ಇಡೀ ದೇಶ ಒಗ್ಗಟ್ಟಿನಿಂದ ಈ ರೀತಿ ನಡೆದುಕೊಂಡಿದ್ದು.
ಒಡಿಶಾದಲ್ಲಿ ಕೆಲ ದಿನಗಳ ಹಿಂದೆ ಇಂತುದೇ ಘಟನೆ ವರದಿಯಾಗಿತ್ತು. ಇಲ್ಲಿನ ಐಎಎಸ್ ಅಧಿಕಾರಿ ನಿಕುಂಜ್ ಧಲ್ ತನ್ನ ತಂದೆ ಕೊನೆಯಯುಸಿರೆಳೆದ 24 ಗಂಟೆಯೊಳಗೆ ಕರ್ತವ್ಯಕ್ಕೆ ಹಾಜರಾಗಿದ್ದರು.