- Home
- Business
- 'ಸಿಎ ಮಾಡದೇ ಇದ್ರೆ ಕಂಪನಿಯಲ್ಲಿ ಜಾಗವೇ ಇಲ್ಲ ಅಂದಿದ್ರು ಅಪ್ಪ..' ಕೆಬಿಸಿಯಲ್ಲಿ ದಿನಗಳ ನೆನೆದ ಉದ್ಯಮಿ ಕುಮಾರ ಮಂಗಲಂ ಬಿರ್ಲಾ
'ಸಿಎ ಮಾಡದೇ ಇದ್ರೆ ಕಂಪನಿಯಲ್ಲಿ ಜಾಗವೇ ಇಲ್ಲ ಅಂದಿದ್ರು ಅಪ್ಪ..' ಕೆಬಿಸಿಯಲ್ಲಿ ದಿನಗಳ ನೆನೆದ ಉದ್ಯಮಿ ಕುಮಾರ ಮಂಗಲಂ ಬಿರ್ಲಾ
ಉದ್ಯಮಿ ಕುಮಾರ್ ಮಂಗಲಂ ಬಿರ್ಲಾ 'ಕೌನ್ ಬನೇಗಾ ಕರೋಡ್ಪತಿ'ಯಲ್ಲಿ ಭಾರತದ ಆರ್ಥಿಕ ಪ್ರಗತಿಯ ಬಗ್ಗೆ ಮಾತನಾಡಿದರು. ಜೊತೆಗೆ, ತಮ್ಮ ತಂದೆ ಸಿಎ ಮಾಡಲು ಒತ್ತಾಯಿಸಿದ ಘಟನೆ, ಅವರ ಮರಣದ ನಂತರದ ಕಷ್ಟದ ದಿನಗಳು ಮತ್ತು ವೃತ್ತಿ ಜೀವನದ ಸವಾಲುಗಳಂತಹ ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡರು.

ಆದಿತ್ಯ ಬಿರ್ಲಾ ಗ್ರೂಪ್ನ ಅಧ್ಯಕ್ಷ ಉದ್ಯಮಿ ಕುಮಾರ್ ಮಂಗಲಂ ಬಿರ್ಲಾ, ಅಮಿತಾಬ್ ಬಚ್ಚನ್ ಅವರ ಕೌನ್ ಬನೇಗಾ ಕರೋಡ್ಪತಿಯಲ್ಲಿ ಅತಿಥಿಯಾಗಿ ಆಗಮಿಸಿದ್ದರು. ಅಲ್ಲಿ ಅವರು ಭಾರತದ ಆರ್ಥಿಕ ಪ್ರಗತಿ ಮತ್ತು ಅವರ ವೈಯಕ್ತಿಕ ಜೀವನದ ಕುರಿತು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು.
ಜಗತ್ತಿನಲ್ಲಿ ಹೆಚ್ಚುತ್ತಿರುವ ಭಾರತದ ಪ್ರಭಾವದ ಬಗ್ಗೆ ಮಾತನಾಡಿದ ಅವರು, ನಾವು ಈಗ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ. ಆಗುತ್ತಿರುವ ಬದಲಾವಣೆಯ ವೇಗದ ಬಗ್ಗೆ ವಿಸ್ಮಯ ಕೂಡ ವ್ಯಕ್ತಪಡಿಸಿದರು. ತಮ್ಮ ವೃತ್ತಿಜೀವನದ ಆರಂಭದಲ್ಲಿ ಭಾರತ ಮುಂದೊಂದು ದಿನ ಆರ್ಥಿಕವಾಗಿ ಜಪಾನ್ಅನ್ನು ಹಿಂದಿಕ್ಕುತ್ತದೆ ಎಂದು ಊಹೆ ಮಾಡುವುದೇ ಕಷ್ಟವಾಗಿತ್ತು ಎಂದರು.
"ಯುವಕರಾಗಿರಲು, ಭಾರತೀಯರಾಗಿರಲು ಮತ್ತು ಭಾರತದಲ್ಲಿರಲು ಇದಕ್ಕಿಂತ ಉತ್ತಮ ಸಮಯ ಎಂದಿಗೂ ಇರಲಿಲ್ಲ" ಎಂದು ಕುಮಾರ ಮಂಗಲಂ ಬಿರ್ಲಾ ಹೇಳಿದ್ದಾರೆ.
ಮಾತುಕತೆಯಲ್ಲಿ ಬಿರ್ಲಾ ಅವರ ಆರಂಭಿಕ ಜೀವನದ ಬಗ್ಗೆಯೂ ಮಾತನಾಡಲಾಯಿತು. ಪದವಿ ಪಡೆದ ಬಳಿಕ ಕುಮಾರ ಮಂಗಲಂ ಬಿರ್ಲಾ ಅವರಿಗೆ ವಿದೇಶದಲ್ಲಿ ಎಂಬಿಎ ಮಾಡುವ ಆಸೆ ಇತ್ತು. ಆದರೆ ತಂದೆ, ದಿವಂಗತ ಆದಿತ್ಯ ಬಿರ್ಲಾ ಮೊದಲು ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಆಗಬೇಕೆಂದು ಪಟ್ಟು ಹಿಡಿದಿದ್ದರು. ಸಿಎ ಆಗದೇ ಹೋದಲ್ಲಿ ಕುಟುಂಬದ ವ್ಯವಹಾರದಲ್ಲಿ ಯಾವುದೇ ಜಾಗ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದರು.
ಅಪ್ಪ ಹೇಳಿದ ಮಾತನ್ನು ನೆನಪಿಸಿಕೊಂಡ ಅವರು, 'ನೀನು ಸಿಎ ಆಗದಿದ್ದರೆ, ಈ ಕಚೇರಿಯಲ್ಲಿ ನಿನಗೆ ಜಾಗವಿಲ್ಲ' ಎಂದು ಅತ್ಯಂತ ಸ್ಪಷ್ಟವಾಗಿ ತಿಳಿಸಿದ್ದರು. ಆಗ ನಾನು ಕಣ್ಣೀರಿಡುತ್ತಲೇ ಅಜ್ಜನ (ಬಿಕೆ ಬಿರ್ಲಾ, ಬಸಂತ್ ಕುಮಾರ್ ಬಿರ್ಲಾ) ಬಳಿ ಹೋಗಿ ಸಹಾಯ ಮಾಡುವಂತೆ ಕೇಳಿದೆ. ಅದಕ್ಕೆ ಅವರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ಆಗೋದಿಲ್ಲ ಎಂದರು. ಸಿಎ ಕೋರ್ಸ್ ಮಾಡುವಂತೆ ತಿಳಿಸಿದರು. ಸೀದಾ ನಾನು ತಾಯಿ ಬಳಿ ಹೋಗಿ ಹೇಳಿದೆ. ಅದಕ್ಕೆ ಅವರು ನೀನು ಕಣ್ಣೀರು ಹಾಕಿದ್ರೂ ಅಷ್ಟೇ, ನಕ್ಕರೂ ಅಷ್ಟೇ. ಸಿಎ ಮಾಡಲೇಬೇಕು ಎಂದು ಹೇಳಿದ್ದರು ಎಂದು ತಿಳಿಸಿದ್ದಾರೆ.
ಕುಮಾರ ಮಂಗಲಂ ಬಿರ್ಲಾ ಅವರ ಮಾತು ಕೇಳಿ ಅಮಿತಾಬ್ ಬಚ್ಛನ್ ಕೂಡ ಅಚ್ಚರಿ ವ್ಯಕ್ತಪಡಿಸಿದರು. ವೃತ್ತಿಪರ ವಿಶ್ವಾಸಾರ್ಹತೆ ಕಲಿಯಬೇಕು. ಅದಕ್ಕೆ ಯಾವುದೇ ಶಾರ್ಟ್ಕಟ್ ಇಲ್ಲ ಅನ್ನೋದು ಗೊತ್ತಾಗುತ್ತದೆ ಎಂದು ಅಮಿತಾಬ್ ಹೇಳಿದರು. ಇದಕ್ಕೆ ಸಮ್ಮತಿ ಸೂಚಿಸಿದ ಬಿರ್ಲಾ, ನನ್ನ ಶಿಕ್ಷಣದಿಂದಲೇ ನನಗೆ ಬಲ. ಯಾಕೆಂದರೆ, ನಾನಿ ಎಂಬಿಎ ಪದವೀಧರನೂ ಹೌದು, ಸಿಎ ಕೂಡ ಹೌದು ಎಂದರು.
ತಂದೆ 51ನೇ ವರ್ಷಕ್ಕೆ ಸಾವು ಕಂಡಾಗ ನನಗೆ 28 ವರ್ಷ. ಎಲ್ಲವೂ ನನಗೆ ಹೊಸದಾಗಿತ್ತು. ಭಯಬೀಳುತ್ತಿದೆ. ಪ್ರತಿದಿನ ಮೂರು ಬಾರಿ ಹನುಮಾನ್ ಚಾಲೀಸಾ ಪಠಣ ಮಾಡುತ್ತಿದ್ದೆ. ರಾಮ್ ರಾಮ್ ಎಂದು ಬರೆದು ಕೋಣೆಯ ಗೋಡೆಯ ಮೇಲೆ ಅಂಟಿಸುತ್ತಿದ್ದೆ. ಮೂರು ಗೋಡೆಗಳು ಇದರಿಂದಲೇ ಮುಚ್ಚಿ ಹೋಗಿದ್ದವು. ತಂದೆಯ ಸಾವಿನ ಬಳಿಕ ನನಗೆ ಧೈರ್ಯ ಹಾಗೂ ಬಲ ತುಂಬಿದ್ದು ನನ್ನ ಅಜ್ಜ ಎಂದು ಬಿರ್ಲಾ ಹೇಳಿದ್ದಾರೆ.
ಅಜ್ಜನ ಸಾವಿನ ಬಳಿಕ ನಾನು ಅವರ ಕಬೋರ್ಡ್ಅನ್ನು ಓಪನ್ ಮಾಡಿ ನೋಡಿದ್ದೆ. ಅಲ್ಲಿ ಅವರ 2-3 ಕುರ್ತಾ, ಧೋತಿ, ಮೂರು ಸೂಟ್ಗಳು ಹಾಗೂ ಒಂದು ವಾಚ್ ಮಾತ್ರವೇ ಇತ್ತು ಎಂದು ತಿಳಿಸಿದ್ದಾರೆ.
ನನ್ನ ಅಜ್ಜ ಬಿಕೆ ಬಿರ್ಲಾ ಹಾಗೂ ತಂದೆ ಆದಿತ್ಯ ವಿಕ್ರಮ್ ಬಿರ್ಲಾ ಇಬ್ಬರೂ ಕೂಡ ದೇಶದಲ್ಲಿ ಉದ್ಯಮ ಮೌಲ್ಯಗಳ ಮೇಲೆ ಬೆಳೆಯಬೇಕು. ಕೇವಲ ನಂಬರ್ಗಳಿದ್ದರೆ ಪ್ರಯೋಜನ ಇಲ್ಲ ಎನ್ನುತ್ತಿದ್ದರು. ಇದೇ ವೇಳೆ, ಟಾಟಾ ಕುಟುಂಬದೊಂದಿಗೆ ನಾವು ಎಂದಿಗೂ ಆತ್ಮೀಯ ಸಂಬಂಧವನ್ನು ಹೊಂದಿದ್ದೇವೆ ಎಂದು ಕುಮಾರ ಮಂಗಲಂ ಬಿರ್ಲಾ ಹೇಳಿದ್ದಾರೆ.
ನನ್ನ ತಂದೆಯ ಅಂತ್ಯಕ್ರಿಯೆಯ ಸಮಯದಲ್ಲಿ, ಅವರು ನಮ್ಮೊಂದಿಗಿದ್ದಾರೆ ಅನಿಸುತ್ತಿತ್ತು. ಮತ್ತು ಅವರು ನನಗೆ, 'ನಿನಗೆ ನನ್ನಲ್ಲಿ ಒಬ್ಬ ಸ್ನೇಹಿತನಿದ್ದಾನೆ ಎಂಬುದನ್ನು ಯಾವಾಗಲೂ ನೆನಪಿಟ್ಟುಕೋ' ಎಂದು ಹೇಳಿದ್ದರು.
ಈ ಎಪಿಸೋಡ್ ಬಹಳ ವಿಶೇಷ ಏಕೆಂದರೆ, ದೇಶದ ಪ್ರಮುಖ ಉದ್ಯಮಿಯೊಬ್ಬರು ಟಿವಿಯಲ್ಲಿ ಇಂಥ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುವುದು ಬಹಳ ಅಪರೂ. ಈ ಸೀಸನ್ನಲ್ಲಿ ಜಾವೇದ್ ಅಖ್ತರ್, ದಿಲ್ಜಿತ್ ದೋಸಾಂಜ್, ಫರ್ಹಾನ್ ಅಖ್ತರ್, ರಿಷಭ್ ಶೆಟ್ಟಿ, ಸುನಿಲ್ ಗ್ರೋವರ್, ಕೃಷ್ಣ ಅಭಿಷೇಕ್, ಮನೋಜ್ ಬಾಜಪೇಯಿ, ಕಾರ್ತಿಕ್ ಆರ್ಯನ್ ಮತ್ತು ಅನನ್ಯ ಪಾಂಡೆ ಅವರಂತಹ ಸೆಲೆಬ್ರಿಟಿಗಳು ಭಾಗವಹಿಸಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.

