ರೈತರಿಗೆ ಖುಷಿ ಸುದ್ದಿ, ಕಿಸಾನ್ ಕ್ರೆಡಿಟ್ ಕಾರ್ಡ್ ಬಳಕೆ ಇನ್ನಷ್ಟು ಈಸಿ
Kisan Credit Card Scheme : ರೈತರ ಹೊರೆಯನ್ನು ಆರ್ ಬಿಐ ಕಡಿಮೆ ಮಾಡ್ತಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಲ್ಲಿ ಕೆಲ ಬದಲಾವಣೆ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ ಮುಂದಾಗಿದೆ.

ರೈತರಿಗೆ ಖುಷಿ ಸುದ್ದಿ
ದೇಶದ ಲಕ್ಷಾಂತರ ರೈತರಿಗೆ ಖುಷಿ ಸುದ್ದಿಯೊಂದಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಯೋಜನೆಯನ್ನು ಇನ್ನಷ್ಟು ಸರಳ, ಸ್ಪಷ್ಟ ಹಾಗೂ ರೈತ ಸ್ನೇಹಿ ಮಾಡಲು ಸಿದ್ಧತೆ ನಡೆಸಿದೆ. ಯಾವುದೇ ತೊಂದ್ರೆ ಇಲ್ದೆ ರೈತರಿಗೆ ಅತಿ ಬೇಗ ಹಾಗೂ ಸುಲಭವಾಗಿ ಸಾಲ ನೀಡುವ ಈ ಯೋಜನೆಗೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸೋದಾಗಿ ಆರ್ ಬಿಐ (RBI) ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.
ಆರ್ ಬಿಐ ಹೊಸ ಯೋಜನೆ
ಆರ್ ಬಿಐಯ ಹೊಸ ಯೋಜನೆಯಡಿಯಲ್ಲಿ, ಕಿಸಾನ್ ಕ್ರೆಡಿಟ್ ಕಾರ್ಡ್ನ ವ್ಯಾಪ್ತಿಯನ್ನು ವಿಸ್ತರಿಸಲಾಗುವುದು. ಎಲ್ಲಾ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ವಿವಿಧ ನಿಯಮಗಳನ್ನು ಕ್ರೋಢೀಕರಿಸಲಾಗುತ್ತದೆ ಮತ್ತು ನವೀಕರಿಸಲಾಗುತ್ತದೆ. ಯೋಜನೆಯಲ್ಲಿರುವ ವಿವಿಧ ನಿಯಮಗಳನ್ನು ಅರ್ಥ ಮಾಡಿಕೊಳ್ಳಲು ರೈತರಿಗೆ ತೊಂದ್ರೆ ಆಗ್ತಿದೆ. ಅದನ್ನು ಸುಲಭಗೊಳಿಸಲು ಮತ್ತು ಬ್ಯಾಂಕುಗಳಿಂದ ಸುಲಭವಾಗಿ ಸಾಲ ಮಂಜೂರಿ ಮಾಡುವುದನ್ನು ಸುಗಮಗೊಳಿಸುವುದು ಇದ್ರ ಉದ್ದೇಶವಾಗಿದೆ. ಸದ್ಯದ ಬದಲಾವಣೆಗಳಲ್ಲಿ ಬೆಳೆ ಋತುವನ್ನು ಏಕೀಕರಿಸುವುದು, ಕೆಸಿಸಿ (KCC) ಅವಧಿಯನ್ನು ಹೆಚ್ಚಿಸುವುದು, ಪ್ರತಿ ಬೆಳೆ ಚಕ್ರವನ್ನು ಆಧರಿಸಿ ಸಾಲದ ಮಿತಿಗಳನ್ನು ನಿಗದಿಪಡಿಸುವುದು ಸೇರಿವೆ. ಇದರಿಂದ ರೈತರು ಪದೆ ಪದೇ ದಾಖಲಾತಿ ನೀಡ್ಬೇಕಾಗಿಲ್ಲ. ಅಗತ್ಯವಿದ್ದಾಗ ಅವರು ಸುಲಭವಾಗಿ ಹಣಪಡೆಯಬಹುದು.
ಕೆಸಿಸಿ ಅವಧಿ ವಿಸ್ತರಣೆ ಪ್ರಸ್ತಾವನೆ
ಕಿಸಾನ್ ಕ್ರೆಡಿಟ್ ಕಾರ್ಡ್ನ ಅವಧಿ ಸೀಮಿತವಾಗಿತ್ತು. ಆದರೆ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಅದನ್ನು 6 ವರ್ಷಗಳಿಗೆ ವಿಸ್ತರಿಸಲು ಪ್ರಸ್ತಾಪಿಸಲಾಗಿದೆ. ಇದು ರೈತರು ಪ್ರತಿ ವರ್ಷ ಹೊಸ ಕಾರ್ಡ್ ಪಡೆಯುವ ಅಥವಾ ಪದೇ ಪದೇ ಬ್ಯಾಂಕ್ಗೆ ಅಲೆಯುವುದನ್ನು ತಪ್ಪಿಸುತ್ತದೆ. ಒಂದೇ ಕಾರ್ಡನ್ನು ದೀರ್ಘಕಾಲ ಬಳಕೆ ಮಾಡೋದ್ರಿಂದ ರೈತರ ಕೆಲಸ ಸುಲಭವಾಗಲಿದೆ.
ತಂತ್ರಜ್ಞಾನ ಸಂಬಂಧಿತ ವೆಚ್ಚ
ಕೃಷಿಯಲ್ಲಿ ತಂತ್ರಜ್ಞಾನದ ಬಳಕೆ ವೇಗವಾಗಿ ಹೆಚ್ಚುತ್ತಿದೆ. ರೈತರಿಗೆ ಹನಿ ನೀರಾವರಿ, ಸ್ಪ್ರಿಂಕ್ಲರ್ಗಳು, ಸಣ್ಣ ಕೃಷಿ ಯಂತ್ರೋಪಕರಣಗಳು ಮತ್ತು ಡಿಜಿಟಲ್ ಉಪಕರಣಗಳು ಬೇಕಾಗುತ್ತವೆ. ಆರ್ಬಿಐನ ಹೊಸ ಮಾರ್ಗಸೂಚಿಗಳು ಕೆಸಿಸಿ ಸಾಲಗಳಲ್ಲಿ ತಂತ್ರಜ್ಞಾನ-ಸಂಬಂಧಿತ ವೆಚ್ಚಗಳನ್ನು ಸೇರಿಸಲು ಸೂಚಿಸಿವೆ. ಇದು ಆಧುನಿಕ ಕೃಷಿಯನ್ನು ಉತ್ತೇಜಿಸುತ್ತದೆ. ರೈತರ ವೆಚ್ಚವನ್ನು ಕಡಿಮೆ ಮಾಡುತ್ತದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ
ರೈತರಿಗೆ ಸುಲಭವಾಗಿ ಹಾಗೂ ಸರಳವಾಗಿ ಸಾಲಗಳನ್ನು ಒದಗಿಸಲು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಪ್ರಾರಂಭಿಸಲಾಗಿದೆ. ರೈತರು ತಮ್ಮ ಸಣ್ಣ ಮತ್ತು ದೊಡ್ಡ ಕೃಷಿ ಅಗತ್ಯಗಳನ್ನು ಪೂರೈಸಲು ಇದನ್ನು ಬಳಸಿಕೊಳ್ಳಬಹುದು. ಬೀಜಗಳು, ರಸಗೊಬ್ಬರಗಳು, ಔಷಧಿಗಳು, ನೀರಾವರಿ, ಕೊಯ್ಲಿನ ನಂತರದ ವೆಚ್ಚಗಳು ಮತ್ತು ಮನೆಯ ಅಗತ್ಯಗಳಿಗೂ ಸಾಲಗಳನ್ನು ತೆಗೆದುಕೊಳ್ಳಬಹುದು.
ಎಷ್ಟು ಸಾಲ ಸಿಗುತ್ತೆ?
ಪರಿಷ್ಕೃತ ಬಡ್ಡಿ ಸಹಾಯಧನ ಯೋಜನೆಯಡಿಯಲ್ಲಿ, ಕಿಸಾನ್ ಕ್ರೆಡಿಟ್ ಕಾರ್ಡ್ಗಳಲ್ಲಿ 5 ಲಕ್ಷ ರೂಪಾಯಿವರೆಗೆ ಸಾಲ ಸಿಗಲಿದೆ. ಬಡ್ಡಿದರವನ್ನು ಶೇಕಡಾ 7 ಕ್ಕೆ ಮಿತಿಗೊಳಿಸಲಾಗಿದೆ. ರೈತರು ಸಕಾಲದಲ್ಲಿ ಸಾಲವನ್ನು ಮರುಪಾವತಿಸಿದರೆ, ಅವರಿಗೆ ಹೆಚ್ಚುವರಿ ಶೇಕಡಾ 3ರಷ್ಟು ರಿಯಾಯಿತಿ ಸಿಗುತ್ತದೆ.
ಕೆಸಿಸಿಯನ್ನು ಯಾರು ಪಡೆಯಬಹುದು?
ವಿವಿಧ ರೀತಿಯ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ನಿಂದ ಪ್ರಯೋಜನ ಪಡೆಯಬಹುದು. ಇವುಗಳಲ್ಲಿ ಭೂಮಾಲೀಕರು, ಜಂಟಿ ರೈತರು, ಬಾಡಿಗೆದಾರರು, ಷೇರುದಾರರು ಮತ್ತು ಮೌಖಿಕ ಗುತ್ತಿಗೆದಾರರು ಸೇರಿದ್ದಾರೆ. ಸ್ವಸಹಾಯ ಗುಂಪುಗಳು ಮತ್ತು ರೈತರ ಜಂಟಿ ಗುಂಪುಗಳು ಸಹ ಈ ಯೋಜನೆಯಡಿ ಬರುತ್ತವೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.

