- Home
- Karnataka Districts
- Bengaluru Urban
- Bengaluru: ನಾಳೆಯಿಂದ ಕಡಲೆಕಾಯಿ ಪರಿಷೆ ಆರಂಭ: 7 ದಿನ ಬೆಂಗಳೂರಿನ ಪ್ರಮುಖ ರಸ್ತೆ ಬಂದ್
Bengaluru: ನಾಳೆಯಿಂದ ಕಡಲೆಕಾಯಿ ಪರಿಷೆ ಆರಂಭ: 7 ದಿನ ಬೆಂಗಳೂರಿನ ಪ್ರಮುಖ ರಸ್ತೆ ಬಂದ್
ಐತಿಹಾಸಿಕ ಬಸವನಗುಡಿ ಕಡ್ಲೆಕಾಯಿ ಪರಿಷೆಯು ನವೆಂಬರ್ 17 ರಿಂದ 21 ರವರೆಗೆ ಐದು ದಿನಗಳ ಕಾಲ ನಡೆಯಲಿದೆ. ಈ ವರ್ಷ 5 ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆಯಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆ ಬಂದ್, ಭದ್ರತೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಂತಹ ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಬಸವನಗುಡಿ
ಸೋಮವಾರದಿಂದ (ನ.17ರಿಂದ 21ರವರೆಗೆ) ಐತಿಹಾಸಿಕ ಬಸವನಗುಡಿ ಕಡ್ಲೆಕಾಯಿ ಪರಿಷೆ ಆರಂಭವಾಗಲಿದೆ. ಕಳೆದ 116 ವರ್ಷಗಳಿಂದ ಕಡಲೆಕಾಯಿ ಪರಿಷೆ ಆಚರಿಸಿಕೊಂಡು ಬರಲಾಗುತ್ತಿದೆ. 2024ರಲ್ಲಿ ನಡೆದ ಕಡಲೆಕಾಯಿ ಪರಿಷೆಯಲ್ಲಿ ಸುಮಾರು 5 ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಹಾಗಾಗಿ ಈ ವರ್ಷ 5 ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆಗಳಿವೆ.
5 ದಿನ ಕಡಲೆಕಾಯಿ ಪರಿಷೆ
ಈ ಬಾರಿಯೂ 5 ದಿನ ಕಡಲೆಕಾಯಿ ಪರಿಷೆ ನಡೆಸಲು ನಿರ್ಧರಿಸಲಾಗಿದೆ. ಬಸವನಿಗೆ ಹುಲ್ಲು ತಿನ್ನಿಸುವ ಮೂಲಕ ಪರಿಷೆ ಉದ್ಘಾಟನೆಗೆ ತೀರ್ಮಾನಿಸಲಾಗಿದೆ. ಕಡಲೆಕಾಯಿ ಪರಿಷೆ ಹಿನ್ನೆಲೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ಹಿನ್ನೆಲೆ ಭದ್ರತೆಗೆ ಒತ್ತು ನೀಡಲಾಗಿದ್ದು, ಹಲವು ಕಡೆಗಳಲ್ಲಿ ಸಿಸಿಟಿವಿಗಳ ಅಳವಡಿಕೆ ಮಾಡಲಾಗಿದೆ.
7 ದಿನ ರಸ್ತೆ ಕ್ಲೋಸ್
ಕಡಲೆಕಾಯಿ ಪರಿಷೆ ಹಿನ್ನೆಲೆಯಲ್ಲಿ ಬಸವನಗುಡಿ ದೊಡ್ಡ ಗಣಪತಿ ರಸ್ತೆಯನ್ನು ಸಂಪೂರ್ಣವಾಗಿ ಏಳು ದಿನ ಬಂದ್ ಮಾಡಲಾಗುತ್ತಿದೆ. ಹಾಗಾಗಿ ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಲಹೆ ನೀಡಲಾಗಿದೆ. ನಾಳೆ ಬೆಳಗ್ಗೆಯಿಂದ ರಸ್ತೆ ಕ್ಲೋಸ್ ಆಗಲಿದೆ.
ಅಧಿಕೃತ ಚಾಲನೆ
ಸೋಮವಾರ ಬೆಳಗ್ಗೆ 10 ಗಂಟೆಗೆ ಕಡಲೆಕಾಯಿ ಪರಿಷೆಗೆ ಅಧಿಕೃತ ಚಾಲನೆ ಸಿಗಲಿದೆ. ಪಾಲಿಕೆ ವತಿಯಿಂದ ಹೆಲ್ತ್, ಕಸ ನಿರ್ವಹಣೆ ಮತ್ತು ಬೆಸ್ಕಾಂನಿಂದ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಸಲವೂ ಸುಂಕ ರಹಿತ ಮಳಿಗೆಗಳಿಗೆ ಅವಕಾಶ ನೀಡಲಾಗಿದೆ.
ಲೈಟಿಂಗ್ ವ್ಯವಸ್ಥೆ, ಸಿಸಿಟಿವಿ ವ್ಯವಸ್ಥೆ, ಜನಪ್ರಿಯ ಸಾಂಸ್ಕೃತಿಕ ಕಾರ್ಯಕ್ರಮ ಅಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. 24 ಗಂಟೆಯೂ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ.
ಇದನ್ನೂ ಓದಿ: ಯಾರೋ ಬರೆದಿರೋ ಕೃತಿಗೆ ಡಿ.ಕೆ.ಶಿವಕುಮಾರ್ ಭಾವಚಿತ್ರ ಹಾಕಿ ಬಿಡುಗಡೆ: ಬಿ.ವೈ.ವಿಜಯೇಂದ್ರ
ಮುಂಜಾಗ್ರತ ಕ್ರಮ
ಪರಿಷೆ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡೆಸಲಿದ್ದಾರೆ. ಐದು ಬಸವಣ್ಣಗಳನ್ನು ಅಲಂಕರಿಸಿ ದೇವಾಲಯಕ್ಕೆ ಕರೆತಂದು ಅವುಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪರಿಷೆಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ನ.17ರಿಂದ ಬಸವನಗುಡಿ ಕಡಲೆಕಾಯಿ ಪರಿಷೆ: ಹಾಸನಾಂಬೆ ಉತ್ಸವ ಮಾದರಿಯಲ್ಲಿ ಅಲಂಕಾರ