ಹಾಸನಾಂಬೆ ದೇವಾಲಯ ಉತ್ಸವ ಮಾದರಿಯಲ್ಲಿ ಈ ಬಾರಿ ದೊಡ್ಡ ಬಸವಣ್ಣ ಹಾಗೂ ದೊಡ್ಡಗಣಪತಿ ದೇವಾಲಯ ಅಲಂಕಾರ ಮಾಡುತ್ತಿದ್ದು, ವಿಜೃಂಭಣೆಯಿಂದ ನ.17ರಿಂದ 21ರವರೆಗೆ ಐತಿಹಾಸಿಕ ಕಡಲೆಕಾಯಿ ಪರಿಷೆ ಆಚರಿಸಲು ನಿರ್ಧರಿಸಲಾಗಿದೆ.

ಬೆಂಗಳೂರು (ನ.12): ಹಾಸನದ ಹಾಸನಾಂಬೆ ದೇವಾಲಯ ಉತ್ಸವ ಮಾದರಿಯಲ್ಲಿ ಈ ಬಾರಿ ದೊಡ್ಡ ಬಸವಣ್ಣ ಹಾಗೂ ದೊಡ್ಡಗಣಪತಿ ದೇವಾಲಯ ಅಲಂಕಾರ ಮಾಡುತ್ತಿದ್ದು, ವಿಜೃಂಭಣೆಯಿಂದ ನ.17ರಿಂದ 21ರವರೆಗೆ ಐತಿಹಾಸಿಕ ಕಡಲೆಕಾಯಿ ಪರಿಷೆ ಆಚರಿಸಲು ನಿರ್ಧರಿಸಲಾಗಿದೆ. ದೊಡ್ಡಬಸವಣ್ಣ ದೇವಸ್ಥಾನದಲ್ಲಿ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅಧ್ಯಕ್ಷತೆಯಲ್ಲಿ ಅಧಿಕಾರಿಗಳೊಂದಿಗೆ ನಡೆದ ಕಡಲೆಕಾಯಿ ಪರಿಷೆ ಆಚರಣೆ ಸಂಬಂಧ ಪೂರ್ವ ಸಿದ್ಧತಾ ಸಭೆಯಲ್ಲಿ ಉದ್ಘಾಟನಾ ಕಾರ್ಯಕ್ರಮ, ಅಲಂಕಾರ, ಭದ್ರತೆ, ತೆಪ್ಪೋತ್ಸವ, ಪ್ಲಾಸ್ಟಿಕ್ ಮುಕ್ತ ಪರಿಷೆ ಸೇರಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು.

ಪ್ರತಿ ವರ್ಷದಂತೆ ಕಡೇ ಕಾರ್ತಿಕ ಮಾಸದ ಕೊನೆಯ ಸೋಮವಾರ (ನ.17) ಬಸವನಗುಡಿಯ ಬಸವಣ್ಣ ದೇವಾಲಯದಲ್ಲಿ ಬೆಳಗ್ಗೆ 10ಕ್ಕೆ ಕಡಲೆಕಾಯಿ ಪರಿಷೆಗೆ ಚಾಲನೆ ನೀಡಲಾಗುವುದು. ಪರಿಷೆ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡೆಸಲಿದ್ದಾರೆ. ಐದು ಬಸವಣ್ಣಗಳನ್ನು ಅಲಂಕರಿಸಿ ದೇವಾಲಯಕ್ಕೆ ಕರೆತಂದು ಅವುಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪರಿಷೆಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ. ಈ ಮೊದಲು 21 ಬಸವಣ್ಣಗಳನ್ನು ಕರೆತರಲು ತೀರ್ಮಾನಿಸಲಾಗಿತ್ತು.

5 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡುವ ನಿರೀಕ್ಷೆ

ಆದರೆ ಜಾಗದ ಕೊರತೆಯಿಂದಾಗಿ ಐದು ಬಸವಣ್ಣಗಳನ್ನು ಮಾತ್ರವೇ ಕರೆತಂದು ಪೂಜಿಸಲು ನಿರ್ಧರಿಸಲಾಯಿತು. ಜೊತೆಗೆ ಬಸವನಗುಡಿ ರಸ್ತೆಗೆ ಸೀಮಿತವಾಗಿದ್ದ ವಿದ್ಯುತ್ ದೀಪಾಲಂಕಾರವನ್ನು ಸುತ್ತಮುತ್ತಲ ರಸ್ತೆಗಳಿಗೂ ವಿಸ್ತರಿಸುವ ಮೂಲಕ ವಿಜೃಂಭಣೆಯಿಂದ ಪರಿಷೆ ಆಚರಿಸಲು ತೀರ್ಮಾನಿಸಲಾಗಿದೆ. ಪರಿಷೆಗೆ 5 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡುವ ನಿರೀಕ್ಷೆ ಹೊಂದಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕ್ರಮವಹಿಸಲು ಅಗತ್ಯ ಭದ್ರತಾ ಸಿಬ್ಬಂದಿ, ಮಾರ್ಷಲ್‌ಗಳ ನಿಯೋಜನೆ, ಸಿಸಿ ಕ್ಯಾಮೆರಾ ಅಳವಡಿಕೆ ಇತ್ಯಾದಿ ಭದ್ರತೆಗಾಗಿ ಪೊಲೀಸ್ ಇಲಾಖೆ ಸಹಕಾರ ಪಡೆಯುವುದು.

ಹಾಗೂ ಕುಡಿಯುವ ನೀರಿನ ವ್ಯವಸ್ಥೆ, ತುರ್ತು ಚಿಕಿತ್ಸಾ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಸೇರಿ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಸಭೆಯಲ್ಲಿ ಶಾಸಕ ರವಿ ಸುಬ್ರಹ್ಮಣ್ಯ, ವಿಧಾನಪರಿಷತ್‌ ಮಾಜಿ ಸದಸ್ಯ ಯು.ಬಿ.ವೆಂಕಟೇಶ್‌, ಮುಖಂಡ ಕೆ.ಎಂ.ನಾಗರಾಜ್‌, ಪಾಲಿಕೆ ಮಾಜಿ ಸದಸ್ಯ ಕಟ್ಟೆ ಸತ್ಯ, ಪಶ್ಚಿಮ ಪಾಲಿಕೆ ಆಯುಕ್ತ ಕೆ.ವಿ. ರಾಜೇಂದ್ರ ಸೇರಿ ವಿವಿಧ ಇಲಾಖೆ ಇತರರು ಇದ್ದರು.