- Home
- Karnataka Districts
- Bengaluru Urban
- ಗುರೂಜಿ ಮಾತು ನಂಬಿ 2 ಲಕ್ಷ ಕಳೆದುಕೊಂಡ ಮದುವೆ ಕನಸು ಕಂಡಿದ್ದ ಬೆಂಗಳೂರಿನ ಯುವತಿ!
ಗುರೂಜಿ ಮಾತು ನಂಬಿ 2 ಲಕ್ಷ ಕಳೆದುಕೊಂಡ ಮದುವೆ ಕನಸು ಕಂಡಿದ್ದ ಬೆಂಗಳೂರಿನ ಯುವತಿ!
ಆನ್ಲೈನ್ನಲ್ಲಿ ಭವಿಷ್ಯ ಹೇಳುವುದಾಗಿ ನಂಬಿಸಿದ ಗುರೂಜಿಯೊಬ್ಬನಿಗೆ, ಮದುವೆಯ ವಿಷಯವಾಗಿ ಯುವತಿಯೊಬ್ಬರು ₹2.05 ಲಕ್ಷ ಕಳೆದುಕೊಂಡಿದ್ದಾರೆ. ಹಣ ವಾಪಸ್ ಕೇಳಿದಾಗ ಬೆದರಿಕೆ ಹಾಕಿದ್ದು, ಈ ಸಂಬಂಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಚಂದ್ರಶೇಖರ್ ಸುಗತ್ ಗುರೂಜಿ ಎಂಬುವವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

₹2.05 ಲಕ್ಷ ವಂಚಿಸಿರುವ ಗುರೂಜಿ
ಪಿ.ಜಿಯಲ್ಲಿ ವಾಸವಾಗಿದ್ದ ಯುವತಿಯೊಬ್ಬರಿಗೆ ಆನ್ಲೈನ್ ಮೂಲಕ ಭವಿಷ್ಯ ಹೇಳುವುದಾಗಿ ಗುರೂಜಿ ಸೋಗಿನಲ್ಲಿ ನಂಬಿಸಿದ ವ್ಯಕ್ತಿಯೊಬ್ಬ ₹2.05 ಲಕ್ಷ ವಂಚಿಸಿರುವ ಘಟನೆ ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಎಫ್ಐಆರ್ ದಾಖಲು
ಆಡುಗೋಡಿ ನಿವಾಸಿಯಾದ 21 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಜ.2ರಂದು ಚಂದ್ರಶೇಖರ್ ಸುಗತ್ ಗುರೂಜಿ ಎಂಬುವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
₹2.05 ಲಕ್ಷ ಹಣ ವರ್ಗಾವಣೆ
ಸಾಮಾಜಿಕ ಜಾಲತಾಣದಲ್ಲಿ ‘ಕಷ್ಟಕ್ಕೆ ಪರಿಹಾರ’ ಎಂದು ಜಾಹೀರಾತು ಪ್ರಕಟಿಸಲಾಗಿತ್ತು. ಆ ಜಾಹೀರಾತು ಗಮನಿಸಿದ ಯುವತಿ ತನಗೆ ಮದುವೆ ಆಗುತ್ತದೆಯೇ ಎನ್ನುವುದರ ಬಗ್ಗೆ ಕರೆ ಮಾಡಿ ವಿಚಾರಿಸಿದ್ದಾರೆ. ಅದಕ್ಕೆ ಗುರೂಜಿ ಮದುವೆ ಆಗುತ್ತದೆ. ಆದರೆ, ಅದಕ್ಕೆ ಸ್ವಲ್ಪ ಹಣ ಖರ್ಚಾಗುತ್ತದೆ ಎಂದು ಹೇಳಿದ್ದರು.
ಇದಕ್ಕೆ ಒಪ್ಪಿಕೊಂಡ ಯುವತಿ ಗುರೂಜಿ ಸೂಚನೆ ಮೇರೆಗೆ ಆತ ನೀಡಿದ್ದ ನಂಬರ್ಗೆ ಆನ್ಲೈನ್ ಮೂಲಕ ಕಳೆದ ಡಿಸೆಂಬರ್ನಲ್ಲಿ ಹಂತ-ಹಂತವಾಗಿ ₹2.05 ಲಕ್ಷ ಹಣ ವರ್ಗಾವಣೆ ಮಾಡಿದ್ದಾರೆ.
ಇದನ್ನೂ ಓದಿ: Bengaluru: ನಕಲಿ ಬಿಲ್ ಸೃಷ್ಟಿಸಿ ಸರ್ಕಾರಕ್ಕೆ ₹1464 ಕೋಟಿ ವಂಚನೆ ಮಾಡಿದ್ದ ಇಬ್ಬರ ಬಂಧನ
ಗುರೂಜಿ ಬೆದರಿಕೆ
ಮದುವೆ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದರಿಂದ ಯುವತಿ ಹಣ ವಾಪಸ್ ಕೇಳಿದ್ದಾರೆ. ಅದಕ್ಕೆ ಹಣ ನೀಡುವುದಿಲ್ಲ. ಏನು ಮಾಡುತ್ತಿಯೋ ಮಾಡಿಕೋ ಎಂದು ಗುರೂಜಿ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಸಂಬಂಧ ಆಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾತುಕತೆ, ಹಣ ವರ್ಗಾವಣೆ ಎಲ್ಲವೂ ಆನ್ಲೈನ್ ಮೂಲಕ ನಡೆದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಕುಟುಂಬದ ರಂಪಾಟಕ್ಕೆ 29ರ ಯುವಕ ಬಲಿ

