ಪ್ರೀತಿಸಿ ಕೈ ಹಿಡಿದ ಹೆಂಡತಿಯ ಶೀಲ ಶಂಕಿಸಿ ಪತಿಯೋರ್ವ ಕೊಡಲಿಯಿಂದ ಹೊಡೆದು ಪತ್ನಿಯನ್ನು ಕೊಲೆ ಮಾಡಿದ ಘಟನೆ ಗಜೇಂದ್ರಗಡ ತಾಲೂಕಿನ ಬೇವಿನಕಟ್ಟಿ ಗ್ರಾಮದಲ್ಲಿ ನಡೆದಿದೆ‌.

ಗದಗ : ಪ್ರೀತಿಸಿ ಕೈ ಹಿಡಿದ ಹೆಂಡತಿಯ ಶೀಲ ಶಂಕಿಸಿ ಪತಿಯೋರ್ವ ಕೊಡಲಿಯಿಂದ ಹೊಡೆದು ಪತ್ನಿಯನ್ನು ಕೊಲೆ ಮಾಡಿದ ಘಟನೆ ಗಜೇಂದ್ರಗಡ ತಾಲೂಕಿನ ಬೇವಿನಕಟ್ಟಿ ಗ್ರಾಮದಲ್ಲಿ ನಡೆದಿದೆ‌. ವಿದ್ಯಾ ಆಡಿನ್ (29) ಕೊಲೆಯಾದ ಮಹಿಳೆ. ಜಮೀನಿಗೆ ಕಡಲೆ ಕೀಳೋದಕ್ಕೆ ಅಂತಾ ಹೋಗಿದ್ದ ಪತ್ನಿ ವಿದ್ಯಾ 11 ಗಂಟೆ ಸುಮಾರಿಗೆ ಮನೆಗೆ ಬಂದಿದ್ದರು. 

Add Asianetnews Kannada as a Preferred SourcegooglePreferred

ಈ ವೇಳೆ ಕುಡಿದು ಫುಲ್ ಟೈಟ್ ಆಗಿದ್ದ ಮೌನೇಶ್ (Mounesh) ಮನೆಗೆ ಬಂದ ವಿದ್ಯಾಳೊಂದಿಗೆ ಜಗಳ ತೆಗೆದಿದ್ದ, ಬೇಡ ಅಂದ್ರು ಜಮೀನಿಗೆ ಹೋಗಿದ್ದಿಯಾ, ಯಾವನೊಂದಿಗೆ ಸಂಬಂಧ ಇಟ್ಕೊಂಡಿದಿಯಾ ಅಂತಾ ಜಗಳ ಶುರು ಮಾಡಿದ್ದಾನೆ. ಅಲ್ಲದೇ ಕುಡಿದ ಆವೇಶದಲ್ಲಿದ್ದ ಮೌನೇಶ ಮನೆಯಲ್ಲಿದ್ದ ಕೊಡಲಿ ತೆಗೆದುಕೊಂಡು ಬಂದು ಹೆಂಡತಿ ವಿದ್ಯಾ ಕತ್ತಿಗೆ ಕಡಿದಿದ್ದಾನೆ. ಒಂದೇ ಏಟಿಗೆ ವಿದ್ಯಾ (Vidya) ಮನೆ ಹೊಸ್ತಿಲಲ್ಲೇ ಪ್ರಾಣ ಬಿಟ್ಟಿದ್ದಾಳೆ. ಕೊಡಲಿ (Axe) ಏಟಿನಿಂದ ಪತ್ನಿ ಕೆಳಗೆ ಬಿದ್ದಾಗ ಗಾಬರಿಗೊಂಡ ಮೌನೇಶ್ ಅಕ್ಕಪಕ್ಕದ ಮನೆಯವರನ್ನೆಲ್ಲಾ ಕರೆದು ಹೊಡೆದುಬಿಟ್ಟೆ ಸಹಾಯ ಮಾಡಿ ಎಂದು ಗೋಳಾಡಿದ್ದಾನೆ. ಆದರೆ ಅಷ್ಟರಲ್ಲಿ ವಿದ್ಯಾ ಪ್ರಾಣ ಬಿಟ್ಟಿದ್ದಾಳೆ. ಆಕೆಗೆ ಬೇರೆಯವರೊಂದಿಗೆ ಸಂಬಂಧ ಇತ್ತು ಅದಕ್ಕಾಗಿ ಹೊಡೆದೇ ಎಂದು ಆತ ಪೊಲೀಸರೆದುರು ಹೇಳಿಕೊಂಡಿದ್ದಾನೆ. 

Bengaluru Crime: ಡಿವೋರ್ಸ್‌ ಹೆಂಡತಿಯನ್ನ ಕೊಲೆಗೈದು ಮಗುವಿನೊಂದಿಗೆ ಪರಾರಿಯಾದ ಗಂಡ

ಡ್ರೈವರ್ (Driver) ಆಗಿ ಕೆಲಸ ಮಾಡ್ತಿದ್ದ ಮೌನೇಶ ಅದೇ ಗ್ರಾಮದ ವಿದ್ಯಾಳನ್ನು ಪ್ರೀತಿಸಿದ್ದ. ಈ ಮಧ್ಯೆ ವಿದ್ಯಾಳ ಮನೆಯವರು ಅವರ ಸಂಬಂಧಿಯೊಬ್ಬರ ಜೊತೆ ವಿದ್ಯಾಳ ಮದ್ವೆ ನಿಶ್ಚಯಿಸಿದ್ದರು ಆದರೆ ಮದ್ವೆ ನಿಶ್ಚಯವಾಗಿದ್ರೂ ಅದನ್ನು ಮುರಿದು ವಿದ್ಯಾ ಮೌನೇಶ್ ಜೊತೆ ಬಂದಿದ್ದರು. ಮೌನೇಶ ಇಲ್ದೆ ಜೀವನ ಇಲ್ಲ‌, ಅವನಿಲ್ಲದಿದ್ರೆ ಸತ್ತು ಹೋಗ್ತೀನಿ ಅಂತಾ ತಂದೆಯ ಬಳಿ ವಿದ್ಯಾ ಹೇಳಿ ಬಂದಿದ್ದು, ಈ ಜೋಡಿ ತಮ್ಮ ಪಾಡಿಗೆ ಇರ್ಲಿ ಅಂತ ವಿದ್ಯಾ ತಂದೆ ತಾಯಿ ಸುಮ್ಮನಾಗಿದ್ದರು. 

ಒಂದೇ ಊರಿನಲ್ಲಿದ್ದರೂ‌ ವಿದ್ಯಾ, ತಂದೆ ಮನೆಗೆ ಹೋಗ್ತಿರಲಿಲ್ಲ, ತನ್ನ ಮಕ್ಕಳು ತನ್ನ ಕುಟುಂಬ ಅಂತಾ ಇರ್ತಿದ್ರು. ಆದ್ರೆ ಮೌನೇಶನ ತಲೆಯಲ್ಲಿ ಹೊಕ್ಕಿದ್ದ ಸಂಶಯದ ಹುಳು, ತನ್ನನ್ನೇ ನಂಬಿ ಬಂದ ಪತ್ನಿಯ ಬಲಿ ಪಡೆದಿದೆ. ಕುಡಿತದ ದಾಸನಾಗಿದ್ದ ಮೌನೇಶ್ ಕಳೆದ ಕೆಲ ದಿನಗಳಿಂದ ಹೆಂಡತಿಯೊಂದಿಗೆ ಜಗಳ ಮಾಡಲು ಆರಂಭಿಸಿದ್ದ. ಈಗ ಆವೇಶದಲ್ಲಿ ಮಾಡಿದ ಕೆಲಸದಿಂದಾಗಿ ಚಿಕ್ಕ ವಯಸ್ಸಿನ ಇಬ್ಬರು ಮಕ್ಕಳು ತಂದೆ ತಾಯಿ ಇಲ್ಲದೇ ಅನಾಥರಾಗುವಂತಾಗಿದೆ.

Bengaluru: ಕುಡಿಯಲು ಹಣ ಕೊಟ್ಟಿಲ್ಲವೆಂದು ಪತ್ನಿಗೆ ಚಾಕು ಇರಿದ ಪಾಪಿ ಪತಿ