* ಡುರಾಂಡ್‌ ಕಪ್‌ ಫುಟ್ಬಾಲ್‌ ಟೂರ್ನಿಯಲ್ಲಿ ಎಫ್‌ಸಿ ಬೆಂಗಳೂರು ಯುನೈಟೆಡ್* ಸೆಮಿಫೈನಲ್‌ನಲ್ಲಿ ಬೆಂಗಳೂರು ಯುನೈಟೆಡ್‌ ತಂಡಕ್ಕೆ ಸೋಲು*  ಕೋಲ್ಕತಾದ ಮೊಹಮೆಡನ್‌ ಸ್ಪೋರ್ಟಿಂಗ್‌ ಕ್ಲಬ್‌ ವಿರುದ್ಧ ಸೋಲು

ಕೋಲ್ಕತ(ಸೆ.28): ಡುರಾಂಡ್‌ ಕಪ್‌ ಫುಟ್ಬಾಲ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡ, ಕೋಲ್ಕತಾದ ಮೊಹಮೆಡನ್‌ ಸ್ಪೋರ್ಟಿಂಗ್‌ ಕ್ಲಬ್‌ ವಿರುದ್ಧ 2-4 ಗೋಲುಗಳಿಂದ ಸೋಲುಂಡಿತು. 

ಸೋಮವಾರ ನಡೆದ ರೋಚಕ ಪಂದ್ಯದಲ್ಲಿ ಮೊಹಮೆಡನ್‌ ತಂಡ ಹೆಚ್ಚುವರಿ ನಿಮಿಷದಲ್ಲಿ ಬಾರಿಸಿದ 2 ಗೋಲುಗಳಿಂದ ಗೆಲುವು ಸಾಧಿಸಿ ಫೈನಲ್‌ ಪ್ರವೇಶಿಸಿತು. ಸೆಪ್ಟೆಂಬರ್‌ 29ರಂದು ನಡೆಯಲಿರುವ 2ನೇ ಸೆಮೀಸ್‌ನಲ್ಲಿ ಬೆಂಗಳೂರು ಎಫ್‌ಸಿ(ಬಿಎಫ್‌ಸಿ) ಹಾಗೂ ಎಫ್‌ಸಿ ಗೋವಾ ಸೆಣಸಲಿವೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದ ತಂಡವು ಅಕ್ಟೋಬರ್‌ 03ರಂದು ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಮೊಹಮೆಡನ್‌ ಸ್ಪೋರ್ಟಿಂಗ್‌ ಕ್ಲಬ್ ತಂಡವನ್ನು ಎದುರಿಸಲಿದೆ.

Badminton: ಇಂದಿನಿಂದ ಸುದೀರ್‌ಮನ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿ

Scroll to load tweet…

ಎಫ್‌ಸಿ ಬೆಂಗಳೂರು ಯುನೈಟೆಡ್ ಹಾಗೂ ಸುನಿಲ್ ಚೆಟ್ರಿ ನೇತೃತ್ವದ ಬೆಂಗಳೂರು ಫುಟ್ಬಾಲ್‌ ಕ್ಲಬ್ ತಂಡಗಳು ಸೆಮಿಫೈನಲ್‌ಗೇರುವ ಮೂಲಕ ರಾಜ್ಯದ ಫುಟ್ಬಾಲ್ ಅಭಿಮಾನಿಗಳ ಮನ ಗೆದ್ದಿದ್ದವು. ಬೆಂಗಳೂರಿನ ಎರಡು ತಂಡಗಳೇ ಡುರಾಂಡ್ ಕಪ್‌ ಫೈನಲ್‌ನಲ್ಲಿ ಮುಖಾಮುಖಿಯಾಗಬಹುದು ಎಂದು ಫುಟ್ಬಾಲ್ ಅಭಿಮಾನಿಗಳು ಲೆಕ್ಕಾಚಾರ ಹಾಕಿದ್ದರು. ಆದರೆ ಎಫ್‌ಸಿ ಬೆಂಗಳೂರು ಯುನೈಟೆಡ್‌ ಸೆಮೀಸ್‌ನಲ್ಲೇ ಮುಖಾಭಂಗ ಅನುಭವಿಸಿದೆ. ಇನ್ನು ಚೆಟ್ರಿ ನೇತೃತ್ವದ ಬಿಎಫ್‌ಸಿ ತಂಡವಾದರೂ ಫೈನಲ್‌ಗೇರಿ ಟ್ರೋಫಿಗೆ ಮುತ್ತಿಕ್ಕುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ಸುದೀರ್‌ಮನ್‌ ಕಪ್‌: ಭಾರತಕ್ಕೆ ಮತ್ತೆ ಸೋಲು

ವಾಂಟಾ: ಸುದೀರ್‌ಮನ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತ ಸತತ 2ನೇ ಸೋಲು ಅನುಭವಿಸಿದೆ. ಸೋಮವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಭಾರತ, ಹಾಲಿ ಚಾಂಪಿಯನ್‌ ಚೀನಾ ವಿರುದ್ಧ 0-5ರಲ್ಲಿ ಸೋಲು ಅನುಭವಿಸಿತು. ಇದರೊಂದಿಗೆ ನಾಕೌಟ್‌ ಹಂತಕ್ಕೇರುವ ಅವಕಾಶ ಕಳೆದುಕೊಂಡಿತು. 

ಭಾನುವಾರ ನಡೆದಿದ್ದ ಮೊದಲ ಪಂದ್ಯದಲ್ಲಿ ಭಾರತ, ಥಾಯ್ಲೆಂಡ್‌ ವಿರುದ್ಧ 1-4ರಲ್ಲಿ ಸೋಲು ಕಂಡಿತ್ತು. ಬುಧವಾರ ಗುಂಪು ಹಂತದ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತ ತಂಡಕ್ಕೆ ಆತಿಥೇಯ ಥಾಯ್ಲೆಂಡ್‌ ಎದುರಾಗಲಿದೆ.

ಈ ಬಾರಿಯ ಸುದೀರ್‌ಮನ್‌ ಕಪ್ ಬ್ಯಾಡ್ಮಿಂಟನ್ ಟೂರ್ನಿಗೆ ಭಾರತ ತಾರಾ ಬ್ಯಾಡ್ಮಿಂಟನ್‌ ಪಟುಗಳಾದ ಮಹಿಳಾ ಸಿಂಗಲ್ಸ್‌ನ ಪಿ.ವಿ. ಸಿಂಧು, ಸೈನಾ ನೆಹ್ವಾಲ್‌ ಹಾಗೂ ಪುರುಷರ ಡಬಲ್ಸ್‌ನಲ್ಲಿ ಚಿರಾಗ್‌ ಶೆಟ್ಟಿ ಮತ್ತು ಸಾತ್ವಿಕ್‌ರಾಜ್‌ ರಂಕಿರೆಡ್ಡಿ ಅವರನ್ನೊಳಗೊಂಡ ಜೋಡಿ ಗೈರಾಗಿತ್ತು. ಕಳೆದ ತಿಂಗಳಿನಲ್ಲಷ್ಟೇ ಮುಕ್ತಾಯವಾದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಿ.ವಿ. ಸಿಂಧು ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದರು. ಇನ್ನು ಪುರುಷರ ಡಬಲ್ಸ್‌ನಲ್ಲಿ ಚಿರಾಗ್-ಸಾತ್ವಿಕ್‌ರಾಜ್‌ ಜೋಡಿ ಅಮೋಘ ಪ್ರದರ್ಶನದ ಹೊರತಾಗಿಯೂ ನಾಕೌಟ್‌ ಹಂತಕ್ಕೇರಲು ವಿಫಲವಾಗಿತ್ತು.