8 ತಿಂಗಳ ಬಳಿಕ ಭಾರತದಲ್ಲಿ ಕ್ರೀಡಾ ಹಬ್ಬ ಆರಂಭಗೊಂಡಿದೆ. ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಬಲಿಷ್ಠ ಎಟಿಕೆ ಹಾಗೂ ಕೇರಳ ಹೋರಾಟ ನಡೆಸಿತ್ತು. ಉದ್ಘಾಟನಾ ಪಂದ್ಯದ ವಿವರ ಇಲ್ಲಿದೆ. 

ಗೋವಾ(ನ.20):  ರಾಯ್ ಕೃಷ್ಣ 67ನೇ ನಿಮಿಷದಲ್ಲಿ ಗಳಿಸಿದ ಗೋಲಿನಿಂದ ATK ಮೋಹನ್ ಬಾಗನ್ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನ 7ನೇ ಅವೃತ್ತಿಯ ಮೊದಲ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ವಿರುದ್ಧ 1-0 ಗೋಲಿನಿಂದ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಮೊದಲಾರ್ಧದಲ್ಲಿ ಗೋಲು ಗಳಿಸುವಲ್ಲಿ ವಿಫಲರಾದರೂ ಆತ್ಮಸ್ಥೈರ್ಯ ಕಳೆದುಕೊಳ್ಳದ ರಾಯ್ ಕೃಷ್ಣ ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ISL 7: ಕೊರೋನಾದಿಂದ ಸ್ಥಗಿತಗೊಂಡಿದ್ದ ಕ್ರೀಡಾ ಚಟುವಟಿಕೆ ಮತ್ತೆ ಆರಂಭ!

ಗೋಲಿಲ್ಲದ ಪ್ರಥಮಾರ್ಧ
ಕೇರಳ ಬ್ಲಾಸ್ಟರ್ಸ್ ತಂಡ ಹೆಚ್ಚು ಸಮಯ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ್ದರೂ ಗೋಲು ಗಳಿಸುವಲ್ಲಿ ವಿಫಲವಾಗಿತ್ತು. ಎರಡು ಉತ್ತಮ ಅವಕಾಶಗಳನ್ನು ಕೈಚೆಲ್ಲಿದ ತಂಡ ಗೋಲು ಗಳಿಸುವುದರಿಂದ ವಂಚಿತವಾಯಿತು. ರಾಯ್ ಕೃಷ್ಣ ಅವರಿಗೆ 37ನೇ ನಿಮಿಷದಲ್ಲಿ ಸ್ವಲ್ಪ ಹೊತ್ತು ತಾಳ್ಮೆ ವಹಿಸಿರುತ್ತಿದ್ದರೆ ಸಿಕ್ಕ ಅವಕಾಶವನ್ನು ಗೋಲಾಗಿ ಪರಿವರ್ತಿಸಬಹುದಾಗಿತ್ತು. ಆದರೆ ಗಡಿಬಿಡಿಯಲ್ಲಿ ತುಳಿದ ಚೆಂಡು ಗೋಲ್ ಬಾಕ್ಸ್ ನ ನೇರಕ್ಕೆ ಸಾಗಿದರೂ ಬಹಳ ಎತ್ತರದಿಂದ ಸಾಗಿತು.

ಉತ್ತಮ ಅವಕಾಶವೊಂದು ಕೈ ಜಾರಿತು. 35ನೇ ನಿಮಿಷದಲ್ಲೂ ಎಡುರಾಡೋ ತಮ್ಮ ಅನುಭವಕ್ಕೆ ತಕ್ಕಂತೆ ಆಡದೆ ಸಿಕ್ಕ ಅವಕಾಶದಲ್ಲಿ ಗೋಲು ಗಳಿಸುವಲ್ಲಿ ವಿಫಲವಾದರು. ಕೇರಳ ಪ್ರಥಮಾರ್ಧದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡಲಿಲ್ಲ. ಇದರೊಂದಿಗೆ ಹೀರೋ ಇಂಡಿಯನ್ ಸೂಪರ್ ಲೀಗ್ ನ ಮೊದಲ ಪಂದ್ಯದ ಪ್ರಥಮಾರ್ಧ ಗೋಲಿಲ್ಲದೆ ಅಂತ್ಯಗೊಂಡಿತು.

ಸೆಕೆಂಡ್ ಹಾಫ್‌ನಲ್ಲಿ ATK ಹೆಚ್ಚು ಅಗ್ರೆಸ್ಸೀವ್ ಆಟ ಪ್ರದರ್ಶಿಸಿತು. ಇತ್ತ ಕೇರಳ ತನ್ನ ಆಟದ ಶೈಲಿ ಬದಲಿಸಿತು. ಚೆಂಡಿನ ಮೇಲೆ ಹಿಡಿತ ಸಾಧಿಸಿದ ಕೇರಳ ಬ್ಲಾಸ್ಟರ್ಸ್ ಗೋಲಾಗಿ ಪರಿವರ್ತಿಸುವ ಅವಕಾಶಗಳು ಸೃಷ್ಟಿಸಲಿಲ್ಲ. ಆದರೆ 67 ನಿಮಿಷದಲ್ಲಿ ರಾಯ್ ಕೃಷ್ಣ ಎಟಿಕೆ ತಂಡಕ್ಕೆ ಗೋಲು ಸಿಡಿಸಿ ಭರ್ಜರಿ ಮುನ್ನಡೆ ತಂದುಕೊಟ್ಟರು. ಪಂದ್ಯ ಅಂತ್ಯದ ವೇಲೆ ಎಟಿಗೆ 1-0 ಅಂತರದಲ್ಲಿ ಗೆಲುವ ಸಾಧಿಸಿತು

ಕೊರೋನಾ ಮಾರಿಯಿಂದ ಕ್ರೀಡಾ ಜಗತ್ತು ಮೌನಕ್ಕೆ ಶರಣಾಗಿತ್ತು. ಭಾರತದಲ್ಲಿ ಕಳೆದ ಎಂಟು ತಿಂಗಳಿಂದ ಯಾವುದೇ ಕ್ರೀಡಾ ಚಟುವಟಿಕೆಗಳು ನಡೆದಿರಲಿಲ್ಲ. ಆದರೆ ಇಂಡಿಯನ್ ಸೂಪರ್ ಲೀಗ್ ಪ್ರೇಕ್ಷಕರ ಅನುಪಸ್ಥಿತಿಯಲ್ಲಿ ಗೋವಾದಲ್ಲಿ ಆರಂಭಗೊಂಡಿತು. ವಿಶೇಷ ಅಂದರೆ ಉದ್ಘಾಟನಾ ಪಂದ್ಯದಲ್ಲೇ ಭಾರತೀಯ ಪುಟ್ಬಾಲ್ ಪಟುಗಳು ಗೋಲಿನ ಶುಭಾರಂಭ ಮಾಡಿದ್ದಾರೆ.