ಕೊರೋನಾ ವೈರಸ್ ಲಾಕ್‌ಡೌನ್ ನಡುವೆ ಭಾರತ ಹಲವು ದಿಗ್ಗಜರನ್ನು ಕಳೆದುಕೊಂಡಿದೆ. ಬಾಲಿವುಡ್‌ನ ಹಿರಿಯ ನಟ ರಿಶಿ ಕಪೂರ್, ಅದ್ಭುತ ನಟ ಇರ್ಫಾನ್ ಖಾನ್ ಸಾವಿನ ನೋವಿನಿಂದ ಬಾಲಿವುದ ಹೊರಬಂದಿಲ್ಲ. ಇದೀಗ ಕ್ರೀಡಾಭಿಮಾನಿಗಳಿಗೂ ಶಾಕ್ ಎದುರಾಗಿದೆ. ಭಾರತದ ಫುಟ್ಬಾಲ್ ದಿಗ್ಗಜ ಚುನಿ ಗೋಸ್ವಾಮಿ ನಿಧನರಾಗಿದ್ದಾರೆ.

ಕೋಲ್ಕತಾ(ಏ.30): ಭಾರತದ ಮಾಜಿ ಫುಟ್ಬಾಲ್ ನಾಯಕ, ಮೋಹನ್ ಭಗನ್ ಫುಟ್ಬಾಲ್ ಕ್ಲಬ್‌ನ ಹಿರಿಯ ಸದಸ್ಯ ಚುನಿ ಗೋಸ್ವಾಮಿ ನಿಧನರಾಗಿದ್ದಾರೆ. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ 82 ವರ್ಷದ ಚುನಿ ಗೋಸ್ವಾಮಿ ಕಳೆರಡು ದಿನದಿಂದ ತೀವ್ರ ಅಸ್ವಸ್ಥರಾದ ಕಾರಣ ಕುಟುಂಬ ಸದಸ್ಯರು ಆಸ್ಪತ್ರೆಗೆ ದಾಖಲಿಸಿದ್ದರು. ಇಂದು(ಏ.30) ಮುಂಜಾನೆ 5 ಗಂಟೆಗೆ ಹೃದಯಾಘಾತದಿಂದ ಚುನಿ ಗೋಸ್ವಾಮಿ ನಿಧನರಾಗಿದ್ದಾರೆ.

Add Asianetnews Kannada as a Preferred SourcegooglePreferred

ಬ್ರಿಟನ್‌ ಫುಟ್ಬಾಲ್‌ ದಿಗ್ಗಜ ಹಂಟರ್‌ಗೆ ಕೊರೋನಾ ಸೋಂಕು ಪತ್ತೆ

ಕಳೆದ ಕೆಲ ತಿಂಗಳುಗಳಿಂದ ಚುನಿ ಗೋಸ್ವಾಮಿ ಮಧುಮೇಹ, ನರ ಹಾಗೂ ಕರಳು ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು. ಕಳೆದ ತಿಂಗಳು ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿತ್ತು. ಲಾಕ್‌ಡೌನ್ ನಡುವೆ ಚುನಿ ಗೋಸ್ವಾಮಿಯವರನ್ನು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಕೊಂಚ ಸುಧಾರಿಸಿಕೊಂಡು ಮನೆಗೆ ಮರಳಿದ್ದರು. ಆದರೆ ಎಪ್ರಿಲ್ 29ಕ್ಕೆ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲಿದ ಚುನಿ ಗೋಸ್ವಾಮಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆಗೆ ದೇಹ ಸ್ಪಂದಿಸಲಿಲ್ಲ. ಇದೇ ವೇಳೆ ಹೃದಯಾಘಾತದಿಂದ ಗೋಸ್ವಾಮಿ ಇಹಲೋಕ ತ್ಯಜಿಸಿದ್ದಾರೆ.

2027ರ ಎಎಫ್‌ಸಿ ಏಷ್ಯನ್‌ ಕಪ್‌ ಆತಿಥ್ಯಕ್ಕೆ ಭಾರತ ಬಿಡ್‌

ಚುನಿ ಗೋಸ್ವಾಮಿ ನಾಯಕತ್ವದಲ್ಲಿ ಭಾರತ ಫುಟ್ಬಾಲ್ ತಂಡ 1962ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿತ್ತು. 1964ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಚುನಿ ಗೋಸ್ವಾಮಿ ನೇತೃತ್ವದ ಭಾರತ ಫುಟ್ಬಾಲ್ ತಂಡ ರನ್ನರ್ ಅಪ್ ಪ್ರಶಸ್ತಿ ಗೆದ್ದುಕೊಂಡಿತ್ತು. ಕೋಲ್ಕತಾದ ಪ್ರಸಿದ್ದ ಮೋಹನ್ ಭಗನ್ ತಂಡವನ್ನು ಚುನಿಗೋಸ್ವಾಮಿ ತಮ್ಮ ಕಾಲೇಜು ದಿನಗಳಲ್ಲೇ ಪ್ರತಿನಿಧಿಸಿದ್ದರು. ಚುನಿ ಗೋಸ್ವಾಮಿಗೆ ಫುಟ್ಬಾಲ್ ದಿಗ್ಗಜ ಬ್ರೆಜಿಲ್‌ನ ಪೀಲೆ ನೆಚ್ಚಿನ ಪಟುವಾಗಿದ್ದರು. 

ಫುಟ್ಬಾಲ್‌ನಲ್ಲಿ ಮಾಸ್ಟರ್ ಆಗಿದ್ದ ಚುನಿ ಗೋಸ್ವಾಮಿ ಕ್ರೆಕೆಟ್‌ನಲ್ಲೂ ಆಸಕ್ತಿ ಹೊಂದಿದ್ದರು. ಇಷ್ಟೇ ಅಲ್ಲ ಅತ್ಯುತ್ತಮ ಕ್ರಿಕೆಟ್ ಆಟಗಾರನಾಗಿಯೂ ಹೊರಹೊಮ್ಮಿದ್ದರು. ಬಂಗಾಳ ಪ್ರಥಮ ದರ್ಜೆ ಕ್ರಿಕೆಟ್ ಕೂಡ ಆಡಿದ್ದಾರೆ. ಕ್ರಿಕೆಟ್‌ಗಿಂತ ಫುಟ್ಬಾಲ್ ಮೇಲೆ ಒಲವು ಹೆಚ್ಚಿದ್ದ ಕಾರಣ ಕ್ರಿಕೆಟ್‌ನಿಂದ ದೂರವಾದ ಚುನಿ ಗೋಸ್ವಾಮಿ ಕೇವಲ ಫುಟ್ಬಾಲ್‌ನಲ್ಲಿ ಮಾತ್ರ ಮುಂದುವರಿದರು. ಮೋಹನ್ ಭಗನ್ ಫುಟ್ಬಾಲ್ ಕ್ಲಬ್‌ನಲ್ಲಿ ಚುನಿ ಗೋಸ್ವಾಮಿ ಅವರನ್ನು ಬಾರತದ ಪೀಲೆ ಎಂದು ಕರೆಯುತ್ತಿದ್ದರು. 

ಚುನಿ ಗೋಸ್ವಾಮಿ ಕ್ರೀಡಾ ಸಾಧನೆಯನ್ನು ಗುರುತಿಸಿ 1963ರಲ್ಲಿ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇನ್ನು 1983ರಲ್ಲಿ ಪದ್ಮಶ್ರೀ ಪ್ರಶಸ್ತಿಗೂ ಭಾಜನರಾಗಿದ್ದಾರೆ.