Asianet Suvarna News Asianet Suvarna News

ವಿಜಯದಶಮಿ ಸಂಭ್ರಮ: ಸುಲಭವಾಗಿ ಮಾಡಬಹುದಾದ 7 ಸಿಹಿ ಅಡುಗೆ ರೆಸಿಪಿ ಇಲ್ಲಿದೆ

ಹಬ್ಬದ ಸಂದರ್ಭ ವಿಶೇಷ ಸಿಹಿ ಅಡುಗೆ | ಸುಲಭವಾಗಿ ನೀವೂ ಮಾಡಿ ಸಿಹಿ ತಿನಿಸುಗಳು | ಸ್ಪೆಷಲ್ ಹಬ್ಬದ ರೆಸಿಪಿಗಳು ನಿಮಗಾಗಿ

Navarathri festival special Dessert recipes for you dpl
Author
Bangalore, First Published Oct 26, 2020, 9:20 AM IST

1. ರವೆ ಸಜ್ಜಿಗೆ

1 ಪಾವು ಸಣ್ಣ ರವೆ ಹುರಿದುಕೊಂಡು, ಪಾವು ಹಾಲು ಒಲೆ ಮೇಲೆ ಇಟ್ಟು ಕುದಿದ ನಂತರ ಮುಕ್ಕಾಲು ಪಾವು ಸಕ್ಕರೆ ಹಾಕಿ 1 ಚಟಾಕು ತುಪ್ಪ ಹಾಕಿ , 1 ಚಿಟಿಕೆ ಕೇಸರಿಯನ್ನು ಹಾಲಿನಲ್ಲಿ ಅರೆದಕೊಂಡು, 1 ಚೂರು ಪಚ್ಚ ಕರ್ಪೂರ, 4 ಏಲಕ್ಕಿ ಪುಡಿ ಮಾಡಿ ಈ ಹಾಲಿಗೆ ಹಾಕಿ ಕುದಿದ ನಂತರ ರವೆ ಹಾಕಿ ಸಣ್ಣ ಉರಿ ಮಾಡಿ ಕಲಸಿ ಮುಚ್ಚಿಟ್ಟು ನಂತರ ಕಲಸಿ ಕೆಳಗೆ ಇಡಬೇಕು. ಈ ಕಡೆ ಗೋಡಂಬಿ 4 ಬಾದಾಮಿ ಹುರಿದು ಕೆಳಕ್ಕೆ ಇರಿಸಿ ಬಾದಾಮಿ ಮಾತ್ರ ಕಲ್ಲುಪತ್ತಿನಲ್ಲಿ ಅರೆದು ಪುಡಿ ಮಾಡಿ ದ್ರಾಕ್ಷಿ ಈ ಗೋಡಂಬಿ ಬಾದಾಮಿ ಎಲ್ಲಾ ಹಾಕಿ ಕಲಸಿ ಮುಚ್ಚಿಡಬೇಕು.

ಇದೇ ಸತ್ಯನಾರಾಯಣ ದೇವರಿಗೆ ಮಾಡುವ ಸಜ್ಜಿಗೆ.

2. ಬೇಸನ್‌ ಲಾಡು (ಲಡ್ಡು)

ಅರ್ಧ ಸೇರು ಕಡಲೆಬೇಳೆಯನ್ನು ಮಿಲ್‌ನಲ್ಲಿ ಬೀಸಿ ಬಾಂಡ್ಲಿಗೆ ತುಪ್ಪ ಬಿಟ್ಟು ತುಪ್ಪ ಕಾದ ನಂತರ ಈ ಹಸಿ ಹಿಟ್ಟನ್ನೇ ದೋಣಿ ಹಿಟ್ಟಿನ ಹಾಗೆ ಕಲಸಿ ಕಾಳು ಕಣ್ಣು ಕಣ್ಣುವಂದ್ರಿಯಲ್ಲಿ ಉಜ್ಜಿ ಕಾಳು ಗರಿಗರಿ ಆದಮೇಲೆ ತುಪ್ಪದಿಂದ ತೆಗೆದು ಮಾರನೇ ದಿನ ಕುಟ್ಟಿಒಂದು ಬೇಸನ್ನಿಗೆ ಹಾಕಿ ಗೋಡಂಬಿ ಸಣ್ಣದಾಗಿ ಮುರಿದು ತುಪ್ಪದಲ್ಲಿ ಕರಿದು, 1 ಕೊಬ್ರಿ ಗಿಟಕು ತುರಿದು ಕರಿದಿರುವುದರಲ್ಲಿ ಅರ್ಧ ಗೋಡಂಬಿ, ಈ ಕೊಬ್ರಿ ಕುಟ್ಟಿ, ವಾಸನೆಗೆ 2 ಚೂರು ಏಲಕ್ಕಿ, 1 ಚೂರು ಜಾಯಿಕಾಯಿ ಎಲ್ಲಾ ಕುಟ್ಟಿಆ ಬೇಸನ್ನಿಗೆ ಹಾಕಿ, 1 ಪಾವು ಹಿಟ್ಟಿನಲ್ಲಿ ಕರಿದಕಾಳಿಗೆ ಒಂದೂವರೆ ಪಾವು ಬೂರಾ ಸಕ್ಕರೆಯನ್ನು ಕುಟ್ಟಿರುವುದಕ್ಕೆ ಸೇರಿಸಿ ನಂತರ ದ್ರಾಕ್ಷಿ ಗೋಡಂಬಿ ಹಾಕಿ ಉಂಡೆ ಕಟ್ಟಬೇಕು- ಇದೇ ಲಡ್ಡು.

3. ಮನೋಹರ

1 ಪಾವು ಅಕ್ಕಿ , 1 ಪಾವು ಉದ್ದಿನಬೇಳೆ ಮಿಲ್ಲಿನಲ್ಲಿ ಬೀಸಿಟ್ಟುಕೊಂಡು(ರಾಗಿ ವಗೈರೆ ಹಾಕಿದಾಗ ಬೀಸಿಟ್ಟುಕೊಳ್ಳಬಾರದು), 1 ಪಾವು ಹಿಟ್ಟನ್ನು ದೋಸೆ ಹಿಟ್ಟಿನ ಹದಕ್ಕೆ ನೀರುಬಿಟ್ಟು ಕಲಸಿ, ಬಾಂಡ್ಲಿಗೆ ತುಪ್ಪ ಬಿಟ್ಟು, ಸೋರು ಹಾಕುವ ಕಣ್ಣು ಕಣ್ಣು ವಂದ್ರಿಯಲ್ಲಿ ಈ ಹಿಟ್ಟನ್ನು ಬಾಂಡ್ಲಿಯಲ್ಲಿರುವ ತುಪ್ಪದಲ್ಲಿ ಉಜ್ಜಿದರೆ ಕಾಳು ಕಾಳಾಗುತ್ತದೆ. ನಂತರ ಕೈಯಾಡಿ 1 ಕಾಳು ಹಿಸುಕಿ ನೋಡಿದರೆ ಗರಿಗರಿಯಾಗಿದ್ದಾಗ ತುಪ್ಪದಿಂದ ಸೋರು ಹಾಕುವ ತಟ್ಟೆಯಲ್ಲಿ ಹಾಕಬೇಕು. 1 ಸಲಕ್ಕೆ ಒಂದಾವರ್ತಿ ಈ ಕಾಳನ್ನು ತಟ್ಟೆಯಿಂದ ಬೇಸನ್ನಿಗೆ ಹಾಕಿಡಬೇಕು. ಹಾಗೆ ಮಾಡಿ ಮಾರನೆ ದಿನ 3 ಅಚ್ಚು ಬೆಲ್ಲವನ್ನು ಸಣ್ಣಗೆ ಕುಟ್ಟಿ, ಒಂದೂವರೆ ಅಚ್ಚನ್ನು ಪಾಕಕ್ಕೆ ಇಟ್ಟು ಇನ್ನೊಂದು ಕಡೆ ಕೊಬ್ರಿ 1 ಗಿಟಕು, ಕಾಳು ಕಾಳಾಗಿ ಹೆಚ್ಚಿ, ಈ ಕಂದಿರುವ ಕಾಳಿಗೆ ಸೇರಿಸಿಟ್ಟು ಪಾಕ, ಉಂಡೆ ಪಾಕ ಬರಬೇಕು. ಆ ಪಾಕಕ್ಕೆ ಯಾಲಕ್ಕಿ ಪುಡಿ ಹುಟ್ಟಿದ್ದನ್ನು ಅರ್ಧ ಹಾಕಿ, ಪಾಕ ಬಂದ ನಂತರ ಒಂದು ಬೊಗಳೆ ಕಾಳನ್ನು ತಟ್ಟೆಯೊಂದಕ್ಕೆ ಹಾಕಿಕೊಂಡು, ಉಂಡೆ ಪಾಕ ತಕ್ಷಣ ಒಂದೆರಡು ಸೌಟು ಹಾಕಿ ಮೊಗಚಿ ಕೈಯಲ್ಲಿ ಕಲಕಿ ಕೈಯಾಡಿ ಬೇಗ ಬೇಗ ಉಂಡೆ ಕಟ್ಟಬೇಕು.

(ಪಾಕದ ಹದ: 1 ಬಟ್ಟಲಿನಲ್ಲಿ ಸ್ವಲ್ಪ ನೀರು ಬಿಟ್ಟು ಕುದಿಯುತ್ತಿರುವ ಪಾಕವನ್ನು ನೀರಿನಲ್ಲಿ ಹಾಕಿ ಕೈಯಲ್ಲಿ ಎತ್ತಿದರೆ ಗಟ್ಟಿಯಾಗಿ ಬರುತ್ತದೆ. ಇದೇ ಪಾಕ.)

ನಂತರ ಪುನಃ ಕಾಳು ಹಾಕಿಕೊಂಡು ಉಂಡೆ ಕಟ್ಟಿನಂತರ ಬೆಲ್ಲ ಹಾಕಿ, ಇದೇ ತರಹ ಪಾಕ ಬಂದ ನಂತರ ಉಂಡೆ ಕಟ್ಟಿಡಬೇಕು. (ಒಟ್ಟಿಗೆ ಬೆಲ್ಲ ಹಾಕಿಬಿಟ್ಟರೆ ಪಾಕ ಹಾಗೂ ಉಂಡೆ ಕಪ್ಪಾಗುತ್ತೆ.) ಒಂದು ಸಲ ಪಾಕ ಬಂದ ನಂತರ ಪಾತ್ರ ಕೆಳಕ್ಕೆ ಇಡಬಾರದು. ಪಾಕ ಆರಿದರೆ ಉಂಡೆ ಬರುವುದಿಲ್ಲ. ಸಣ್ಣ ಉರಿ ಮಾಡಿ ಒಲೆ ಮೇಲೆ ಪಾಕ ಇದ್ದಂತೆ ಸರಸರನೆ ಪಾಕ ಹಾಕಿಕೊಂಡು ಉಂಡೆ ಕಟ್ಟಬೇಕು.

ಇದೇ ತಿರುಪತಿ ಶ್ರೀನಿವಾಸ ದೇವರಿಗೆ ಪ್ರೀತಿಯಾದ ಮನವಾರದ ಉಂಡೆ. (ಪ್ರೀತಿ)

4. ಸಜ್ಜಪ್ಪ

1 ಪಾವು ಮೀಡಿಯಂ ರವೆ ಹುರಿದು, ಬೆಟ್ಟವನ್ನು ಸಣ್ಣಗೆ ಕುಟ್ಟಿ, ಒಂದು ಪಾವಿಗೆ ಎರಡು ಪಾವು ಬೆಲ್ಲ, 1 ತೆಂಗಿನಕಾಯಿ, ಅರ್ಧ ಬಟ್ಲು ಕೊಬ್ರಿ ತುರಿದು ಬೆಲ್ಲವನ್ನು ಪಾಕಕ್ಕೆ ಇಟ್ಟು 1 ಚಟಾಕು ನೀರು ಹಾಕಿ ಬೆಲ್ಲ ಕರಗಿ ಕುದಿದ ನಂತರ ಕೊಬ್ಬಿ ಹಾಕಿ ಗೆಜ್ಜುಕುದಿ ಬರಬೇಕು. ಮೊಗಚೊ ಕೈಯಲ್ಲಿ ಬೆಲ್ಲದ ಹದ ನೋಡಿದರೆ ಚೆನ್ನಾಗಿ ಅಂಟು ಬಂದರೆ ತಕ್ಷಣ ಈ ಹುರಿದ ರವೆಯನ್ನು ಹಾಕಿ, ಒಂದು ನಿಮಿಷ ಬಿಟ್ಟು ಕೆಳಕ್ಕೆ ಇರಿಸಬೇಕು. ಮಾರನೆ ದಿನ ಏಲಕ್ಕಿ ಪುಡಿ ಹಾಕಿ ಸಣ್ಣಗೆ ಉಂಡೆ ಕಟ್ಟಿಕೊಂಡು, ನಂತರ ಅರ್ಧ ಪಾವು ಸಣ್ಣ ರವೆ, ಅರ್ಧ ಪಾವು ಮೈದಾ ಹಿಟ್ಟು ಹಾಕಿಕೊಂಡು 1 ಚಿಟಕಿ ಅರಿಸಿನ, 1 ಚಟಾಕು ಎಣ್ಣೆ ಹಾಕಿ ಕಲಸಿ ನೀರು ಬಿಟ್ಟು(ಚಪಾತಿ ಹಾಗೆ ಗಟ್ಟಿಯಾಗಿ ಕಲಸಬಾರದು) ಕೊಂಚ ತೆಳ್ಳಗೆ ಕಲಸಿಟ್ಟು, ಅರ್ಧ ಗಂಟೆಯಾದ ಮೇಲೆ ಆ ಕಣಕವನ್ನು ಚೆನ್ನಾಗಿ ಹದಕ್ಕೆ ತಂದು, ಒಂದೊಂದಾಗಿ ಕಣಕ ಉಂಡೆ ಮಾಡಿಕೊಂಡು ಸ್ವಲ್ಪ ತಟ್ಟಿಎಲೆ ಮೇಲೆ ಇಟ್ಟು ಈ ಹೂರಣ ಉಂಡೆಯನ್ನು ಮುಚ್ಚಿ ಎಣ್ಣೆ ಸವರಿಕೊಂಡು ತಟ್ಟಿಬಾಂಡ್ಲಿಯಲ್ಲಿ ತುಪ್ಪ ಹಾಕಿ ಕಾದ ನಂತರ ತಟ್ಟಿದ್ದನ್ನು ಹಾಕಿ ಕರಿದು ತೆಗೆಯಬೇಕು. ಇದೇ ಸಜ್ಜಪ್ಪ.

5. ಅತ್ರಸ (ಕಜ್ಜಾಯ)

1 ಪಾವು ಅಕ್ಕಿ ನೆನೆಸಿ, ಮಾರನೆ ದಿನ ಆ ನೀರನ್ನು ಸುರಿದು, ಬೇರೆ ನೀರುಹಾಕಿ ಪುನಃ ಆ ದಿನ ನೆನೆದು 3ನೇ ದಿನ ತಟ್ಟೆಯೊಂದರಲ್ಲಿ ಸೋರುಹಾಕಿ ಒರಳಲ್ಲಿ ಹಾಕಿ ಕುಟ್ಟಿಸಣ್ಣ ಕಣ್ಣು ವಂದ್ರಿಯಲ್ಲಿ ಹಿಟ್ಟು ವಂದಿಯಾಡಿ ಹಿಟ್ಟನ್ನು ತಟ್ಟೆಯೊಂದರಲ್ಲಿ ಹರಡದೆ 1 ಪಾವು ಅಕ್ಕಿಗೆ 1 ಪಾವು ಬೆಲ್ಲ ಪಾಕಕ್ಕೆ ಕೊಂಚ ನೀರು ಹಾಕಿಡಬೇಕು. ಉಂಡೆ ಪಾಕ ಅಂದರೆ ಒಂದು ಪುಟ್ಟಬಟ್ಟಿಗೆ ನೀರು ಹಾಕಿ ಪಾಕ ಬಿಟ್ಟರೆ ಕೈಗೆ ಉಂಡೆಯಾಗಿ ಬರುತ್ತೆ, ಅದೇ ಹದ, ಕೆಳಕ್ಕೆ ಇಟ್ಟುಕೊಂಡು ಈ ಕುಟ್ಟಿದ ಅಕ್ಕಿ ಹಿಟ್ಟನ್ನು ಆ ಪಾಕದಲ್ಲಿ ಹಾಕಿ ಕಲಸಿ ಮುಚ್ಚಿಡಬೇಕು. ಮಾರನೆ ದಿನ ಬಾಂಡ್ತಿಗೆ ತುಪ್ಪ ಹಾಕಿ ಒಂದೊಂದಾಗಿ ತಟ್ಟಿಹಾಕಬೇಕು. ಇದೇ ಅತ್ರಸ (ಕಜ್ಜಾಯ). ನರಸಿಂಹ ದೇವರಿಗೆ ಪ್ರೀತಿ- ನರಸಿಂಹ ಜಯಂತಿಗೆ ಮಾಡುತ್ತಾರೆ.

6. ಅಪ್ಪ (ತೆಂಗಿನಕಾಯಿ ಕಜ್ಜಾಯ)

ಅರ್ಧ ಪಾವು ಅಕ್ಕಿ , 1 ಹಿಡಿ ಗೋಧಿ ನೆನೆಸಿ, 1 ಪಾವು ಬೆಲ್ಲ, 1 ತೆಂಗಿನ ಕಾಯಿ, ಏಲಕ್ಕಿ ಎಲ್ಲಾ ರುಬ್ಬಿ ದೋಸೆ ಹಿಟ್ಟಿನ ಹದಕ್ಕೆ ತೆಗೆದು, ಬಾಂಡ್ಲಿಗೆ ತುಪ್ಪ ಬಿಟ್ಟು, ತುಪ್ಪ ಕಾದ ನಂತರ ದೋಸೆ ಹಾಗೆ ಗುಂಡಗೆ ಸಣ್ಣ ಸಣ್ಣದಾಗಿ ಬಿಟ್ಟು ನಂತರ ತಿರುಗಿಸಿ ಹದವಾಗಿ ತೆಗೆಯಬೇಕು. ಇದೇ ರಾಮನವಮಿ ಅಪ್ಪ. ಕೋಸಂಬರಿ, ಪಾನಕ ಮಾಡಿ ನೈವೇದ್ಯಕ್ಕೆ ಇಡಬೇಕು .

7. ಕರಗಡಬು

ಮೇಲಿನಹಾಗೆ ಹೂರಣ ಮಾಡಿಕೊಂಡು ಅರ್ಧ ಪಾವು ಸಣ್ಣ ರವೆ, ಮೂರನೆ ಒಂದು ಭಾಗ ಮೈದಾ ಹಿಟ್ಟು, 1 ಚಿಟಿಕೆ ಅರಿಶಿನ, 1 ಚಟಾಕು ತುಪ್ಪ ಹಾಕಿ ಕೊಂಚ ನೀರಿನಲ್ಲಿ ಕಲಸಿ ಚಪಾತಿ ಹಿಟ್ಟು ಕಲಸುವ ಹಾಗೆ ಇರಬೇಕು. (ಒಬ್ಬಟ್ಟಿಗೆ ಕಲಸುವ ಹಾಗೆ ಅಷ್ಟುತೆಳ್ಳಗೆ ಕಣುಕ ಕಲಸದೆ ಗಟ್ಟಿಯಾಗಿ ಕಲಸಿ) 1 ಗಂಟೆ ಹೊತ್ತು ಆದ ಮೇಲೆ ಚೆನ್ನಾಗಿ ಕೈಯಲ್ಲಿ ಕಲಸಿ ಮೈದಾ ಹಿಟ್ಟು ಉದ್ದವಾಗಿ ಒತ್ತಿಕೊಂಡು ಅಂಚಿನ ಸುತ್ತಾ 1 ಬೆಟ್ಟಿನಲ್ಲಿ ನೀರು ಅಧ್ದಿಕೊಂಡು ಒರಸಿ ಮಧ್ಯೆ 1 ಚಮಚದಷ್ಟುಈ ಹೂರಣ ಹಾಕಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಮಡಚಿ ಭದ್ರವಾಗಿ ಅಮಕಿ ಬಾಂಡ್ಲಿಗೆ ತುಂಪ್ಪ ಹಾಕಿ ತೆಗೆಯಬೇಕು. ಹೀಗೆ 10-12 ಅರೆದಿಟ್ಟುಕೊಂಡು ತುಪ್ಪದಲ್ಲಿ ಹಾಕಿದರೆ ಸರಾಗ. ಇದೇ ಗಣಪತಿ ಕಡಬು.

Follow Us:
Download App:
  • android
  • ios