ಸಸ್ಯಹಾರಿ ಕುಟುಂಬವೊಂದಕ್ಕೆ ಅವರು ಆರ್ಡರ್ ಮಾಡಿದ್ದ ಮಟರ್ ಪನ್ನೀರ್‌ ಬದಲು ಚಿಕನ್ ಕರಿ ನೀಡಿದ್ದಕ್ಕೆ ಮಧ್ಯಪ್ರದೇಶದ ಗ್ವಾಲಿಯರ್‌ನ ರೆಸ್ಟೋರೆಂಟ್‌ ವೊಂದಕ್ಕೆ ಬರೋಬರಿ 20  ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.

ಭೋಪಾಲ್‌ : ಸಸ್ಯಹಾರಿ ಕುಟುಂಬವೊಂದಕ್ಕೆ ಅವರು ಆರ್ಡರ್ ಮಾಡಿದ್ದ ಮಟರ್ ಪನ್ನೀರ್‌ ಬದಲು ಚಿಕನ್ ಕರಿ ನೀಡಿದ್ದಕ್ಕೆ ಮಧ್ಯಪ್ರದೇಶದ ಗ್ವಾಲಿಯರ್‌ನ ರೆಸ್ಟೋರೆಂಟ್‌ ವೊಂದಕ್ಕೆ ಬರೋಬರಿ 20 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಗ್ವಾಲಿಯರ್ ಖ್ಯಾತ ಜಿವಾಜಿ ಕ್ಲಬ್‌ನಿಂದ ಸಸ್ಯಹಾರಿ ಕುಟುಂಬವೊಂದು ಮಟರ್ ಪನೀರ್ ಆರ್ಡರ್ ಮಾಡಿತ್ತು. ಆದರೆ ಅಚಾತುರ್ಯದಿಂದಾಗಿ ರೆಸ್ಟೋರೆಂಟ್ ಇವರಿಗೆ ಚಿಕನ್ ಕರಿ ನೀಡಿತ್ತು. ಈ ವಿಚಾರವನ್ನು ಕುಟುಂಬ ಗ್ರಾಹಕರ ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗಿದ್ದು, ಅಲ್ಲಿ ಕೋರ್ಟ್ ದೂರುದಾರರ ಪರ ತೀರ್ಪು ನೀಡಿ ರೆಸ್ಟೋರೆಂಟ್‌ಗೆ 20 ಸಾವಿರ ರೂಪಾಯಿ ದಂಡ ವಿಧಿಸಿದೆ. 

Add Asianetnews Kannada as a Preferred SourcegooglePreferred

ಜಿವಾಜಿ ಕ್ಲಬ್‌ನ ಸದಸ್ಯರಾದ ವಕೀಲ ಸಿದ್ಧಾರ್ಥ್ ಶ್ರೀವಾಸ್ತವ ಅವರು ಜನಪ್ರಿಯ ಆಹಾರ ವಿತರಣಾ ಅಪ್ಲಿಕೇಶನ್ ಆಗಿರುವ ಝೊಮ್ಯಾಟೋ ಮೂಲಕ ರೆಸ್ಟೋರೆಂಟ್‌ನಿಂದ ಮಟರ್ ಪನೀರ್ ಅನ್ನು ಆರ್ಡರ್ ಮಾಡಿದ್ದಾರೆ. ಆರ್ಡರ್ ಮನೆಗೆ ಬಂದು ತಲುಪಿದಾಗ ಶುದ್ಧ ಸಸ್ಯಾಹಾರಿ ಮನೆತನದ ಕುಟುಂಬ ಅದರಲ್ಲಿರುವ ಚಿಕನ್‌ ಕರಿ ನೋಡಿ ಬೆಚ್ಚಿಬಿದ್ದಿದ್ದರು. ಜಿವಾಜಿ ಕ್ಲಬ್‌ನ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿಲ್ಲ ಎಂದು ಶ್ರೀವಾಸ್ತವ ಆರೋಪಿಸಿ ಗ್ರಾಹಕರ ವೇದಿಕೆಯಲ್ಲಿ ಪ್ರಕರಣ ದಾಖಲಿಸಿದ್ದರು. ಹೊಟೇಲ್‌ನ ಈ ತಪ್ಪಾದ ಆರ್ಡರ್‌ನಿಂದ ಆದೇಶದಿಂದ ಕುಟುಂಬಕ್ಕೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಾನಿಯಾಗಿದೆ ಎಂದು ಗ್ರಾಹಕರ ವೇದಿಕೆಯ ಅಧಿಕಾರಿಗಳು ಹೇಳಿದ್ದಾರೆ.

ಸೇವೆಯ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದ್ದು, ಇದು ಸಂಪೂರ್ಣ ನಿರ್ಲಕ್ಷ್ಯದ ಪ್ರಕರಣ ಎಂದು ವೇದಿಕೆ ಗಮನಿಸಿದೆ. ಘಟನೆಯ ಬಳಿಕದೂರುದಾರರು ಹಲವಾರು ದಿನಗಳಿಂದ ಊಟ ಮಾಡಲು ಸಾಧ್ಯವಾಗಲಿಲ್ಲ ಮತ್ತು ಘಟನೆಯು ಕುಟುಂಬವನ್ನು ಭಾವನಾತ್ಮಕವಾಗಿ ಬಾಧಿಸಿತು ಎಂದು ಗ್ರಾಹಕರ ವೇದಿಕೆ ಹೇಳಿದೆ. ಈ ಹಿನ್ನೆಲೆಯಲ್ಲಿ ಆದೇಶದಂತೆ ಜಿವಾಜಿ ಕ್ಲಬ್‌ನ ಅಡುಗೆ ಕೋಣೆಗೆ 20,000 ರೂ. ದಂಡದ ಜೊತೆಗೆ ಪ್ರಕರಣದ ಹೋರಾಟಕ್ಕೆ ದೂರುದಾರರಿಗೆ ತಗಲಿದ ವೆಚ್ಚವನ್ನು ಪಾವತಿಸುವಂತೆ ಕ್ಲಬ್‌ಗೆ ಸೂಚಿಸಲಾಗಿದೆ.

ಇಂತಹ ಪ್ರಮಾದದಿಂದ ಜನರು ಗ್ರಾಹಕರ ವೇದಿಕೆಗಳ ಬಾಗಿಲು ತಟ್ಟುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಮಾರ್ಚ್‌ನಲ್ಲಿ ಗಾಜಿಯಾಬಾದ್‌ನ ಮಹಿಳೆಯೊಬ್ಬರಿಗೆ ಸಸ್ಯಾಹಾರಿ ಪಿಜ್ಜಾವನ್ನು ನೀಡುವ ಬದಲು ಮಾಂಸಾಹಾರಿ ಪಿಜ್ಜಾವನ್ನು ನೀಡಿದ್ದಕ್ಕಾಗಿ 1 ಕೋಟಿ ರೂಪಾಯಿ ಪರಿಹಾರವನ್ನು ಕೋರಿ ವೇದಿಕೆಯಲ್ಲಿ ದೂರು ಸಲ್ಲಿಸಿದ್ದರು. ಈ ಘಟನೆಯು ತನ್ನ ಧಾರ್ಮಿಕ ನಂಬಿಕೆಗಳನ್ನು ಘಾಸಿಗೊಳಿಸಿದೆ ಮತ್ತು ಜೀವನದುದ್ದಕ್ಕೂ ಮಾನಸಿಕ ಸಂಕಟವನ್ನು ಉಂಟುಮಾಡಿದೆ ಎಂದು ದೂರುದಾರರು ಹೇಳಿದ್ದರು