Asianet Suvarna News Asianet Suvarna News

Bagalkote: ತರಹೇವಾರಿ ಬೆಲ್ಲಕ್ಕೆ ಜನ ಫಿದಾ, ಶುಗರ್​ ಫ್ರೀ ಬೆಲ್ಲದ ಪದಾರ್ಥಗಳಿಗೆ ಭಾರೀ ಡಿಮ್ಯಾಂಡ್

- ವಿಭಿನ್ನ ಬಗೆಯ ಬೆಲ್ಲದ ಆಹಾರ ಪದಾರ್ಥಗಳೊಂದಿಗೆ ಕಣ್ಮನ ಸೆಳೆದ ಬೆಲ್ಲದ ಹಬ್ಬ

- ತರಹೇವಾರಿ ಬೆಲ್ಲಕ್ಕೆ ಫಿದಾ ಆದ ಜನ, ಶುಗರ್​ ಫ್ರೀ ಬೆಲ್ಲದ ಐಟಂಮ್ಸ್​ ಕಂಡು ಸಂತಸ

- ರೈತರ ದಿನಾಚರಣೆ ನಿಮಿತ್ತ ಆಯೋಜಿಸಲಾಗಿದ್ದ ವಿಶಿಷ್ಟ ಬೆಲ್ಲದ ಹಬ್ಬ

Bagalkote Jaggery Festival Bellada Habba Displays Variety of Jaggery  and Food Products hls
Author
Bengaluru, First Published Dec 25, 2021, 5:41 PM IST

ಬಾಗಲಕೋಟೆ (ಡಿ. 25): ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ಸೇರಿದಂತೆ ಶುಗರ್ ಕಾಯಿಲೆಯಿಂದ (Diabities)  ಬಳಲುವ ಜನರೇ ಜಾಸ್ತಿ, ಹೀಗಾಗಿ ಸಾವಯವ ಬೆಲ್ಲಕ್ಕೆ ಇನ್ನಿಲ್ಲದ ಬೇಡಿಕೆ ಬರ್ತಿದೆ, ಇವುಗಳ ಮಧ್ಯೆ ಬೆಲ್ಲದಿಂದಲೇ ( Jaggery)  ವಿಭಿನ್ನ ಬಗೆಯ ಪದಾರ್ಥಗಳನ್ನ ತಯಾರಿಸಿ ಅವುಗಳ ಪ್ರದರ್ಶನ ಜೊತೆಗೆ ಮಾರಾಟಕ್ಕೆ ಇಲ್ಲಿ ಅವಕಾಶ ಮಾಡಿಕೊಡಲಾಗಿತ್ತು. ತರಹೇವಾರಿ ಬೆಲ್ಲದ ಪದಾರ್ಥ ಕಂಡು ಜನ್ರ ಬಾಯಲ್ಲಿ ನೀರೂರಿಸುವಂತಿತ್ತು. ಇಂತಹವೊಂದು ಕ್ಷಣಕ್ಕೆ ಸಾಕ್ಷಿಯಾಗಿದ್ದು ಮುಳುಗಡೆ ನಗರಿ ಬಾಗಲಕೋಟೆಯ (Bagalkote) ಅಪರೂಪದ ಬೆಲ್ಲದ ಹಬ್ಬ. 

"

ನಗರದ ವಿದ್ಯಾಗಿರಿಯ ಎಂಬಿಎ ಕಾಲೇಜು ಸಭಾಂಗಣದಲ್ಲಿ ರೈತ ದಿನಾಚರಣೆ ನಿಮಿತ್ತ ಕೃಷಿ ಇಲಾಖೆ ಹಾಗೂ ಬಸವೇಶ್ವರ ವಿದ್ಯಾವರ್ಧಕ ಸಂಘದ ಎಂಬಿಎ ಕಾಲೇಜು ಸೇರಿದಂತೆ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಬೆಲ್ಲದ ಹಬ್ಬ ಕಾರ್ಯಕ್ರಮವನ್ನು ಅಯೋಜನೆ ಮಾಡಲಾಗಿತ್ತು. ಬೆಲ್ಲದ ಹಬ್ಬದಲ್ಲಿ ದೂರದ ಊರುಗಳಿಂದ ಆಗಮಿಸಿದ್ದ ವಿವಿಧ ರೈತರು ಸೇರಿದಂತೆ ಮಾರಾಟಗಾರರು ಆಗಮಿಸಿದ್ರು. ಸಭಾಂಗಣದ ಹೊರಗಡೆ ಹಾಕಿದ ಮಳಿಗೆಗಳಲ್ಲಿ ಬೆಲ್ಲದಿಂದ ತಯಾರಿಸಿದ ವಿವಿಧ ಖಾದ್ಯಗಳು, ಬೆಲ್ಲದ ಗಟ್ಟಿಗಳು ಸೇರಿದಂತೆ ವಿವಿಧ ವಸ್ತುಗಳ ಪ್ರದರ್ಶನವನ್ನ ಹಮ್ಮಿಕೊಳ್ಳಲಾಗಿತ್ತು. ಶುಂಠಿ ಬೆಲ್ಲ, ಯಾಲಕ್ಕಿ ಬೆಲ್ಲ, ಕಾಳುಮೆಣಸು ಬೆಲ್ಲ, ದಾಲ್ಚಿನಿ ಬೆಲ್ಲ, ಬೆಲ್ಲದಿಂದ ತಯಾರಿಸಿದ ವಿಶೇಷ ಕಾಕಂಬಿ, ಪುಡಿ ಬೆಲ್ಲ, ತುಪ್ಪು ಮಿಶ್ರಿತ ಬೆಲ್ಲ, ತುಳಸಿ ಬೆಲ್ಲ, ಹಾಲು ಮಿಶ್ರಿತ ಬೆಲ್ಲ, ಲವಂಗ ಬೆಲ್ಲ ಸೇರಿದಂತೆ ಬೆಲ್ಲದಿಂದ ತಯಾರಿಸಿದ ವಿವಿಧ ವಸ್ತುಗಳ ಪ್ರದರ್ಶವನ್ನು ಸಹ ಮಾಡಲಾಗಿತ್ತು. ಇಂತಹ ಬೆಲ್ಲದ ಹಬ್ಬದ ಮೂಲಕ ವಿಭಿನ್ನ ಬಗೆಯ ಬೆಲ್ಲದ ಪ್ರೊಡೆಕ್ಟ್ ಗಳ ಮಾರಾಟಕ್ಕೆ ಅನುಕೂಲವಾಗಿದೆ ಎಂದು ರೈತರು ಸಂತಸ ವ್ಯಕ್ತಪಡಿಸಿದರು. 

ಇನ್ನು ಎರಡು ದಿನಗಳ ಕಾಲ ನಡೆಯುವ ಬೆಲ್ಲದ ಹಬ್ಬದ ಮತ್ತೊಂದು ವಿಶೇಷ ಅಂದ್ರೆ ಎಂಬಿಎ ಕಾಲೇಜು ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳಿಂದ ಬೆಲ್ಲದ ವಿವಿಧ ಖಾದ್ಯಗಳ ವಸ್ತುಪ್ರದರ್ಶನ ಏರ್ಪಡಿಸಲಾಗಿತ್ತು. ಇದರಲ್ಲಿ ವಿದ್ಯಾರ್ಥಿಗಳು ಬೆಲ್ಲದ ಪೇಡಾ, ಬೆಲ್ಲದ ಮಾದಲಿ, ಬೆಲ್ಲದಿಂದ ತಯಾರಿಸಿದ ಪಾಕ, ಬೆಲ್ಲದ ಬಟರ್​, ಬೆಲ್ಲದ ಕೊಬರಿ ಮಿಠಾಯಿ, ಬೆಲ್ಲದ ಕರದಂಟು ಹೀಗೆ ಒಂದೇ ಎರಡೇ ನೂರಾರು ಬಗೆಯ ಖಾದ್ಯಗಳನ್ನ 28 ಗ್ರೂಪ್​ಗಳಲ್ಲಿ ವಿದ್ಯಾರ್ಥಿಗಳು ಪ್ರದರ್ಶನ ಮಾಡಿದ್ರು. ಈ ಪ್ರದರ್ಶನದಲ್ಲಿ ಉತ್ತಮವಾಗಿ ಆಯ್ಕೆಯಾದ ಮೂರು ಟೀಮ್​ಗೆ ಬಹುಮಾನ ಸಹಿತ ಪ್ರಶಸ್ತಿಗಳನ್ನ ನೀಡಲು ಉದ್ದೇಶಿಸಲಾಗಿತ್ತು. ಹೀಗಾಗಿ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ರು. ಇಂತಹ ಬೆಲ್ಲದ ಹಬ್ಬದ ಮೂಲಕ ಎಂಬಿಎ ವಿದ್ಯಾರ್ಥಿಗಳಾದ ನಮಗೆ ಹೊಸ ಹೊಸ ಅನುಭವ ಆಗ್ತಿದೆ, ಇದ್ರಿಂದ ನಮಗೂ ಒಳ್ಳೆಯ ಅನುಭವ ಆಗಿದ್ದು, ಶುಗರ್​ ಕಾಯಿಲೆಯಿಂದ ಬಳಲುವ ಜನರಿಗೆ ಹೊಸ ಖಾದ್ಯದ ಪರಿಚಯ ಮಾಡಿಕೊಡುವುದು ನಮ್ಮ ಉದ್ದೇಶವಾಗಿದೆ ಅಂದ್ರು ವಿದ್ಯಾರ್ಥಿಗಳು.
                               
ಒಟ್ಟಿನಲ್ಲಿ ಬಾಗಲಕೋಟೆಯಲ್ಲಿ ನಡೆದ ಬೆಲ್ಲದ ಹಬ್ಬ ಜನಸಾಮಾನ್ಯರಿಗೆ ನೋಡಲು ಆಕರ್ಷಣಿಯವಾಗಿದ್ದರೆ, ಶುಗರ್ ಕಾಯಿಲೆಯಿಂದ ಬಳಲುವವರಿಗೆ ಹೊಸ ಖಾದ್ಯಗಳ ಪರಿಚಯಕ್ಕೆ ಸಾಕ್ಷಿಯಾಗಿತ್ತು. ಅದೇನೆ ಇರಲಿ ಅಪರೂಪವಾಗಿ ನಡೆದ ಬೆಲ್ಲದ ಹಬ್ಬ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಂತು ಸುಳ್ಳಲ್ಲ..
 

Follow Us:
Download App:
  • android
  • ios