Pitru Paksha: ಪುತ್ರರಿಲ್ಲದ ಮನೆಯಲ್ಲಿ ಮಹಿಳೆಯರು ಶ್ರಾದ್ಧ ಮಾಡ್ಬಹುದಾ?
ಪಿತೃ ಪಕ್ಷದಲ್ಲಿ ಪೂರ್ವಜರಿಗೆ ಶ್ರಾದ್ಧ, ತರ್ಪಣ ಬಿಡುವ ಕೆಲಸ ನಡೆಯುತ್ತದೆ. ಹಿರಿಯರ ಆಶೀರ್ವಾದ ಪಡೆಯಲು ಜನರು ಪಿಂಡದಾನ ಮಾಡ್ತಾರೆ. ಇದನ್ನು ಮಹಿಳೆಯರೂ ಮಾಡ್ಬಹುದು, ಆದ್ರೆ ಕೆಲ ನಿಯಮ ಪಾಲನೆ ಮಾಡ್ಬೇಕು.

ವರ್ಷದಲ್ಲಿ 15 ದಿನಗಳ ಕಾಲ ಪಿತೃ ಪಕ್ಷ ಇರುತ್ತದೆ. ಅದನ್ನು ಪೂರ್ವಜರಿಗೆ ಮೀಸಲಿಡಲಾಗಿದೆ. ಪಿತೃ ಪಕ್ಷದಲ್ಲಿ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲೆಂದು ತರ್ಪಣ ಬಿಡುವುದು ಮತ್ತು ಶ್ರಾದ್ಧ ಮಾಡುವ ಸಂಪ್ರದಾಯವಿದೆ. ಈ ದಿನಗಳಲ್ಲಿ ಪೂರ್ವಜರು ಭೂಮಿಗೆ ಬರ್ತಾರೆ ಎಂಬ ನಂಬಿಕೆಯಿದೆ. ತಮ್ಮ ಮನೆಗೆ ಬರುವ ಅವರು, ಕುಟುಂಬಸ್ಥರು ಮಾಡಿದ ಆಹಾರವನ್ನು ಸೇವಿಸುವುದಲ್ಲದೆ, ಶ್ರಾದ್ಧ, ತರ್ಪಣದಿಂದ ಖುಷಿಯಾಗಿ, ಮಕ್ಕಳನ್ನು ಹರಸಿಹೋಗ್ತಾರೆ ಎಂದು ನಂಬಲಾಗಿದೆ.
ಪೂರ್ವಜರಿಗೆ ಹಿಂದೂ (Hindu) ಧರ್ಮದಲ್ಲಿ ವಿಶೇಷ ಸ್ಥಾನ ನೀಡಲಾಗಿದೆ. ಪಿತೃ ದೋಷ ಇಡೀ ಮನೆಯ ಶಾಂತಿಯನ್ನು ಹಾಳು ಮಾಡುತ್ತದೆ. ಹಾಗಾಗಿ ಸದಾ ಪೂರ್ವಜರ ಆಶೀರ್ವಾದ ನಮ್ಮ ಮೇಲೆ ಇರುವಂತೆ ನೋಡಿಕೊಳ್ಳಬೇಕೇ ವಿನಃ ಪೂರ್ವಜರು ಮುನಿಸಿಕೊಳ್ಳುವ ಯಾವುದೇ ಕೆಲಸವನ್ನು ಮಾಡಬಾರದು. ಶ್ರಾದ್ಧ, ತರ್ಪಣ ಬಿಟ್ಟು ಅವರ ಆತ್ಮ (Soul) ಕ್ಕೆ ಶಾಂತಿಕೋರಬೇಕು.
ಈ ಪಿತೃ ಪಕ್ಷದಲ್ಲಿ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲೆಂದು ಪುತ್ರರು ಅಥವಾ ಮೊಮ್ಮಕ್ಕಳು ಶ್ರಾದ್ಧ (Shraddha) ಮಾಡುತ್ತಾರೆ. ಕೇವಲ ಪುರುಷರು ಮಾತ್ರ ತರ್ಪಣ ಬಿಡುವುದು, ಶ್ರಾದ್ಧ ಮಾಡುವುದು ಮಾಡಬೇಕೆಂದೇನಿಲ್ಲ. ಕೆಲ ಮನೆಯಲ್ಲಿ ಪುತ್ರ ಸಂತಾನ ಇರೋದಿಲ್ಲ. ಅಂಥ ಮನೆಯಲ್ಲಿ ಏನು ಮಾಡ್ಬೇಕು ಎನ್ನುವ ಪ್ರಶ್ನೆ ಕಾಡುತ್ತದೆ. ಅಂಥವರ ಮನೆಯಲ್ಲಿ ಪುತ್ರಿಯರು, ಮನೆಯಲ್ಲಿರುವ ಮಹಿಳೆಯರು ಶ್ರಾದ್ಧ ಮಾಡುವುದು, ತರ್ಪಣ ಬಿಡುವ ಕೆಲಸವನ್ನು ಮಾಡಬಹುದು.
ಪಿತೃ ಪಕ್ಷದಲ್ಲಿ ತಪ್ಪಿಯೂ ಕೂಡ ಈ ವಸ್ತು ದಾನ ಮಾಡಲೇಬೇಡಿ!
ಧರ್ಮಸಿಂಧು ಗ್ರಂಥ, ಮನುಸ್ಮೃತಿ, ವಾಯು ಪುರಾಣ, ಮಾರ್ಕಂಡೇಯ ಪುರಾಣ ಮತ್ತು ಗರುಡ ಪುರಾಣದಂತಹ ಅನೇಕ ಧಾರ್ಮಿಕ ಗ್ರಂಥಗಳಲ್ಲಿ ಮಹಿಳೆಯರಿಗೆ ಶ್ರಾದ್ಧ ಮಾಡುವ ಹಕ್ಕನ್ನು ನೀಡಲಾಗಿದೆ. ಶ್ರಾದ್ಧದ ಹೊರತಾಗಿ ಮಹಿಳೆಯರು ಪಿಂಡ ದಾನವನ್ನೂ ಮಾಡಬಹುದು ಎಂದು ಈ ಗ್ರಂಥಗಳಲ್ಲಿ ಹೇಳಲಾಗಿದೆ.
ಮಗನ ಅನುಪಸ್ಥಿತಿಯಲ್ಲಿ ಯಾರು ಶ್ರಾದ್ಧ, ಪಿಂಡದಾನ ಮಾಡ್ಬಹುದು ? :
• ಮೊದಲೇ ಹೇಳಿದಂತೆ ಮನೆಯಲ್ಲಿ ಯಾವುದೇ ಗಂಡು ಮಕ್ಕಳು ಇಲ್ಲದೆ ಹೋದಲ್ಲಿ ಅವನ ಮಗಳು, ಹೆಂಡತಿ ಅಥವಾ ಸೊಸೆ ಶ್ರಾದ್ಧ ಮತ್ತು ಪಿಂಡವನ್ನು ಮಾಡುವ ಅರ್ಹತೆ ಪಡೆಯುತ್ತಾಳೆ. ಗರುಡ ಪುರಾಣದ ಪ್ರಕಾರ, ಹೆಣ್ಣುಮಕ್ಕಳು ತಮ್ಮ ತಂದೆಯ ಶ್ರಾದ್ಧವನ್ನು ಗೌರವದಿಂದ ಮಾಡಬಹುದು. ತಂದೆಯ ಆತ್ಮವು ಇದನ್ನು ಸ್ವೀಕರಿಸಿ ಮಗಳಿಗೆ ಆಶೀರ್ವಾದ ನೀಡುತ್ತದೆ ಎನ್ನಲಾಗಿದೆ.
• ಗಂಡು ಸಂತಾನವಿದ್ದು, ಪಿತೃ ಪಕ್ಷದಲ್ಲಿ ಅಥವಾ ವ್ಯಕ್ತಿ ಸಾವನ್ನಪ್ಪಿದ ತಿಥಿಯಂದು ಮಗ ಅಲ್ಲಿಲ್ಲ ಎಂದಾದ್ರೂ ಮನೆಯಲ್ಲಿರುವ ಮಹಿಳೆಯರು ಶ್ರಾದ್ಧ ಮಾಡಬಹುದು. ವಾಲ್ಮೀಕಿ ರಾಮಾಯಣದಲ್ಲೂ ಇದರ ಉಲ್ಲೇಖವಿದೆ. ಸೀತೆ ಸ್ವತಃ ರಾಜ ದಶರಥನಿಗೆ ಪಿಂಡದಾನವನ್ನು ನೀಡಿದ್ದಳು.
• ಮಗನಿಲ್ಲದಿದ್ದರೆ ಮೃತರ ಸೋದರಳಿಯ, ಸೋದರಸಂಬಂಧಿಯ ಮಗ ಕೂಡ ತಂದೆಯ ಶ್ರಾದ್ಧವನ್ನು ಮಾಡುವ ಅರ್ಹತೆ ಹೊಂದುತ್ತಾನೆ.
• ಒಂದ್ವೇಳೆ ಕುಟುಂಬದಲ್ಲಿ ಯಾರೂ ಇಲ್ಲದಿದ್ದರೆ, ಮೃತರ ಶಿಷ್ಯರು, ಸ್ನೇಹಿತರು, ಸಂಬಂಧಿಕರು, ಕುಟುಂಬದ ಪುರೋಹಿತರು ಶ್ರಾದ್ಧವನ್ನು ಮಾಡಲು ಅರ್ಹರಾಗಿರುತ್ತಾರೆ.
ಪಿತೃಪಕ್ಷದ ಆಚರಣೆ, ಮಹತ್ವ, ಶಾಸ್ತ್ರೋಕ್ತ ವಿವರಗಳು ಇಲ್ಲಿವೆ
ಶ್ರಾದ್ಧ ಮತ್ತು ಪಿಂಡ ದಾನ ಮಾಡುವಾಗ ಮಹಿಳೆಯರು ಯಾವ ವಿಷ್ಯವನ್ನು ಗಮನಿಸಬೇಕು? :
• ವಿವಾಹಿತ ಸ್ತ್ರೀಯರು ಈ ಕೆಲಸ ಮಾಡಿದರೆ ಹೆಚ್ಚು ಸೂಕ್ತ ಎಂದು ಭಾವಿಸಲಾಗುತ್ತದೆ.
• ಪಿತೃ ತರ್ಪಣ ಸಮಯದಲ್ಲಿ ಮಹಿಳೆಯರು ಕುಶ ಮತ್ತು ಕಪ್ಪು ಎಳ್ಳನ್ನು ನೀರಿನಲ್ಲಿ ಹಾಕಬಾರದು.
• ನಿಧನ ಹೊಂದಿದ ದಿನಾಂಕ ನೆನಪಿಲ್ಲದಿದ್ದರೆ, ನವಮಿಯಂದು ವೃದ್ಧರು ಮತ್ತು ಮಹಿಳೆಯರಿಗೆ ಹಾಗೂ ಪಂಚಮಿಯಂದು ಮಕ್ಕಳಿಗೆ ಶ್ರಾದ್ಧವನ್ನು ಮಾಡಬಹುದು.
• ಶ್ರಾದ್ಧ ಆಚರಣೆಗಳಲ್ಲಿ ಮಹಿಳೆಯರು ಬಿಳಿ ಅಥವಾ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು.