ಪಿತೃಗಳ ಆಶೀರ್ವಾದಕ್ಕಾಗಿ ಅವರ ಫೋಟೋಗಳನ್ನು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಇಡುವುದು ಮುಖ್ಯ.  ಫೋಟೋಗಳು ಸ್ವಚ್ಛವಾಗಿರಬೇಕು ಮತ್ತು ಹರಿದಿರಬಾರದು. ಸರಿಯಾದ ಕ್ರಮದಲ್ಲಿ ಅವು ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. 


ಕೆಲವರಿಗೆ ಗೊಂದಲ- ತೀರಿಕೊಂಡ ನಮ್ಮ ಹಿರಿಯರ ಫೋಟೋ ಮನೆಯಲ್ಲಿ ಎಲ್ಲಿಡುವುದು? ಹಾಲ್‌ನಲ್ಲಿ ಇಟ್ಟರೆ ಸಾಕೋ ಅಥವಾ ಪೂಜಾ ಕೋಣೆಯಲ್ಲೋ? ಅದಕ್ಕೆ ನಿತ್ಯ ಹೂವಿನ ಹಾರ ಹಾಕಬೇಕೆ? ನಿತ್ಯ ಊದಿನ ಕಡ್ಡಿ ಬೆಳಗಬೇಕೆ? ಇತ್ಯಾದಿ. ಇದಕ್ಕೆಲ್ಲ ಉತ್ತರ ಕಂಡುಕೊಳ್ಳೋಣ. 

ನಮ್ಮ ಹಿಂದಿನ ಶಾಸ್ತ್ರಗಳು, ಗರುಡ ಪುರಾಣ ಇವುಗಳೆಲ್ಲ ತಿಳಿಸಿರುವ ಪ್ರಕಾರ, ಯಾರಿಗೆ ಪಿತೃಗಳ ಆಶೀರ್ವಾದ ದೊರೆಯುತ್ತದೆಯೋ ಅವರಿಗೆ ಜೀವನದಲ್ಲಿ ಉನ್ನತಿ ಎಂಬುದು ದೊರೆಯುತ್ತದೆ. ಪಿತೃಗಳನ್ನೇ ನೆನೆಯದ ವ್ಯಕ್ತಿ ಉದ್ಧಾರ ಆಗುವುದು ಸಾಧ್ಯವೇ ಇಲ್ಲ. ಬದುಕಿರುವ ಪಿತೃಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಹಾಗೇ ಗತಿಸಿಹೋದ ಪಿತೃಗಳನ್ನು ಶ್ರದ್ಧೆಯಿಂದ ನೆನೆಯಬೇಕು.

Add Asianetnews Kannada as a Preferred SourcegooglePreferred

ಮನುಷ್ಯರು ಪಿತೃಗಳ ನೆನಪಿಗೋಸ್ಕರ ಅವರ ಫೋಟೋಗಳನ್ನು ಗೋಡೆಯ ಮೇಲೆ ಹಾಕುತ್ತಾರೆ. ಆದರೆ ಫೋಟೋಗಳನ್ನು ಗೋಡೆಯ ಮೇಲೆ ಹಾಕಬೇಕಾದರೆ ದಿಕ್ಕಿನ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಈ ಒಂದು ಕಾರಣದಿಂದ ಪಿತೃಗಳಿಗೆ ಬೇಸರ ಉಂಟಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಪೂರ್ವಜರ ಅಥವಾ ಪಿತೃಗಳ ಫೋಟೋವನ್ನು ಗೋಡೆಯ ಮೇಲೆ ಅಂಟಿಸಿದರೆ ಒಳ್ಳೆಯ ಫಲಗಳು ಲಭಿಸುತ್ತದೆ. ಒಂದು ವೇಳೆ ತಪ್ಪಾದ ದಿಕ್ಕಿನಲ್ಲಿ ಫೋಟೋಗಳನ್ನು ಹಾಕಿದರೆ ಅದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗಿ ತೊಂದರೆಯನ್ನು ಸಹ ಅನುಭವಿಸಬೇಕಾಗುತ್ತದೆ. 

ಹಾಗಾದರೆ ವಾಸ್ತು ಶಾಸ್ತ್ರದ ಪ್ರಕಾರ ಪೂರ್ವಜರ ಫೋಟೋಗಳನ್ನು ಯಾವ ದಿಕ್ಕಿನಲ್ಲಿ ಇಡಬೇಕು? ಫೋಟೋದಲ್ಲಿರುವ ಪೂರ್ವಜರು ಖುಷಿಯಿಂದ ನಗುನಗುತ್ತಾ ಇರುವಂತಹ ಫೋಟೋವನ್ನು ಗೋಡೆಯ ಮೇಲೆ ಹಾಕಬೇಕು. ಪೂರ್ವಜರ ಫೋಟೋ ಮುಂದೆ ನಿಂತುಕೊಂಡು ದುಃಖವನ್ನಾಗಲಿ ಅಥವಾ ಬೇಸರವನ್ನಾಗಲಿ ವ್ಯಕ್ತಪಡಿಸಬಾರದು.

ಪೂರ್ವಜರ ಫೋಟೋವನ್ನು ಯಾವುದೇ ಕಾರಣಕ್ಕೂ ದೇವರ ಕೋಣೆಯಲ್ಲಿ ಇಡಬಾರದು. ಹಾಲ್‌ನಲ್ಲಿ ಇಡಬಹುದು. ಆದರ ಮಲಗುವ ಕೋಣೆಯಲ್ಲಿ ಬೇಡ. ಪೂರ್ವಜರ ಅಥವಾ ಪಿತೃಗಳ ಫೋಟೋವನ್ನು ಉತ್ತರ ದಿಕ್ಕಿನಲ್ಲಿ ಹಾಕಬೇಕು. ಪಿತೃ ಪಕ್ಷದಲ್ಲಿ ಮಾಡುವ ಪ್ರತಿಯೊಂದು ಕಾರ್ಯಗಳನ್ನು ದಕ್ಷಿಣ ಮುಖವಾಗಿ ಮಾಡಬೇಕು. ಇದರ ಜೊತೆಗೆ ಮಲಗುವ ಕೋಣೆಯಲ್ಲಿ ಅಥವಾ ಅಡುಗೆ ಕೋಣೆಯಲ್ಲಿ ಪಿತೃಗಳ ಫೋಟೋವನ್ನು ಹಾಕಬಾರದು.

ಗತಿಸಿದ ಹಿರಿಯರು ದೇವರಲ್ಲ. ಹೀಗಾಗಿ ದೇವರಂತೆ ಅವುಗಳನ್ನು ಪೂಜಿಸುವುದು ಸಲ್ಲದು. ಒಂದು ಹೂವಿನ ಹಾರವನ್ನು ಹಾಕಬಹುದು. ನಿತ್ಯವೂ ಹಾಕಬೇಕಿಲ್ಲ. ವಾರಕ್ಕೊಮ್ಮೆ ಹಾಕಿದರೂ ಸಾಕು. ದೇವರುಗಳ ಫೋಟೋದ ನಡುವಿನಲ್ಲಿ ಅವು ಬೇಡ. ಊದಿನಕಡ್ಡಿಯನ್ನು ಮಹಾಲಯ ಅಮವಾಸ್ಯೆಯಂಥ ದಿನಗಳಲ್ಲಿ ಹಚ್ಚಬಹುದು. ಕುಂಕುಮ ಅಥವಾ ವಿಭೂತಿ- ನಿಮ್ಮ ಸಂಪ್ರದಾಯಕ್ಕೆ ತಕ್ಕಂತೆ ಹಚ್ಚುವುದಕ್ಕೆ ಅಡ್ಡಿಯಿಲ್ಲ. ಆದರೆ ಹಣೆಯಲ್ಲಿ ಒಂದು ಬೊಟ್ಟು ಇಟ್ಟರೆ ಸಾಕು. 

ನಿಮ್ಮ ಮನೆಯನ್ನು ದುಷ್ಟಶಕ್ತಿಗಳಿಂದ, ಕೆಟ್ಟ ದೃಷ್ಠಿಯಿಂದ ರಕ್ಷಿಸಿಕೊಳ್ಳಲು ಸಿಂಪಲ್ ಟಿಪ್ಸ್

ಇನ್ನು ಪಿತೃಗಳ ಫೋಟೋದಲ್ಲಿ ಭಿನ್ನ ಇರಬಾರದು. ಅವುಗಳ ಗಾಜು ಒಡೆದಿರಬಾರದು. ಫೋಟೋ ಹರಿದಿರಬಾರದು. ನೀರಿನಲ್ಲಿ ನೆನೆದಿರಬಾರದು. ಅರ್ಧಂಬರ್ಧ ಫೋಟೋ ನೋಡಬೇಡಿ, ಹಾಕಬೇಡಿ. ಮನೆಯಲ್ಲಿ ಹಾಕುವ ಪ್ರತಿಯೊಬ್ಬ ಪಿತೃವಿನ ಹೆಸರೂ ಗೊತ್ತಿರಲಿ. ಮಕ್ಕಳಿಗೂ ತಿಳಿಸಿ. ಆಗಾಗ ಧೂಳು ತೆಗೆದು ಸ್ವಚ್ಛಗೊಳಿಸಿ.

ಮಹಾಲಯ ಅಮವಾಸ್ಯೆಯಂದು ಈ ಹಿರಿಯರಿಗೆ ಸೂಕ್ತ ಪಿಂಡಪ್ರದಾನ ಮಾಡುವುದು ಸರಿಯಾದ ಕ್ರಮ. ಅದು ಸಾಧ್ಯವಾಗದಿದ್ದರೆ ಅವರಿಗೆ ಇಷ್ಟವಾದ ತಿಂಡಿ- ತೀರ್ಥವನ್ನು ಮನೆಯಲ್ಲೇ ಮಾಡಿ ಅರ್ಪಿಸಿದರೆ ಸಾಕು. ಇಷ್ಟು ಮಾಡುವ ಮಕ್ಕಳನ್ನು ದೈವಸ್ವರೂಪರಾದ ಹಿರಿಯರು ಆಶೀರ್ವದಿಸಿ ಬದುಕಿನಲ್ಲಿ ಮುಂಚೂಣಿಗೆ ತರುತ್ತಾರೆ.

ವಾಸ್ತು ಟಿಪ್ಸ್: ಈ ಸಮಯದಲ್ಲಿ ನೀವು ಹಣ ವ್ಯವಹಾರ ಮಾಡಿದ್ರೆ ಏಳಿಗೆ ಇಲ್ಲ!