Asianet Suvarna News Asianet Suvarna News

ತಾಂಬೂಲ ಪ್ರಶ್ನೆ- ಹಾಗೆಂದರೇನು? ಹೇಗೆ ನೋಡುತ್ತಾರೆ?

ಮಂಗಳೂರಿನ ಸಮೀಪದ ಮಳಲಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ತಾಂಬೂಲ ಪ್ರಶ್ನೆ ಕೇಳಲಾಗಿದೆ. ಇಷ್ಟಕ್ಕೂ ಈ ತಾಂಬೂಲ ಪ್ರಶ್ನೆ ಎಂದರೇನು? ಹೇಗೆ ಭವಿಷ್ಯ ನೋಡಲಾಗುತ್ತದೆ?

What is the significance of Tambula Prashne skr
Author
Bangalore, First Published May 28, 2022, 11:32 AM IST

ದೈವಜ್ಞ ಡಾ. ಹರೀಶ್ ಕಶ್ಯಪ್

ಜ್ಯೋತಿಷ್ಯ ಕಲ್ಪ ನಿರುಕ್ತ ಶಿಕ್ಷಾ ವ್ಯಾಕರಣ ಛಂದಸ್ಸು ಎಂಬುದು ವೇದಗಳ ಷಡಂಗವೆನಿಸಿದೆ. 
ಜ್ಯೋತಿಷ್ಯ(Astrology)ದಲ್ಲಿ ಕೂಡಾ ಷಡಂಗ ವಿಭಾಗವಾಗಿ ಜಾತಕ, ಗೋಲ, ನಿಮಿತ್ತ, ಪ್ರಶ್ನೆ, ಮುಹೂರ್ತ ಮತ್ತು ಗಣಿತ ಎಂಬುದಾಗಿ ಆರು ವಿಧಗಳಿವೆ. ಇದರಲ್ಲಿ ಪ್ರಶ್ನಾ ಭಾಗ ಬರುತ್ತದೆ. ಜಾತಕದಿಂದ ಎಲ್ಲವನ್ನೂ ನಿರ್ಣಯ ಮಾಡಲಾಗದೇ ಇದ್ದ ಗಂಭೀರ ಸಮಸ್ಯೆಗಳಿಗೆ ಪ್ರಶ್ನಶಾಸ್ತ್ರ ರಚನೆಯಾಗಿದ್ದು ಕೇರಳದ ತಲಕೇರಿ ವೈಷ್ಣವೀಯ ಬ್ರಾಹ್ಮಣ ಋಷಿಯು ತೋರಿಸಿದ ಗಹನ ಶಾಸ್ತ್ರವಿದು. 
ಪ್ರಶ್ನಾ ಶಾಸ್ತ್ರದಲ್ಲಿ ಅಷ್ಟಮಂಗಲ, ಸ್ವರ್ಣಾರೂಢ, ತಾಂಬೂಲ ಪ್ರಶ್ನೆಗಳೆಂಬ ವಿಧಾನಗಳು ಅಡಕವಾಗಿವೆ. 

ಅಷ್ಟಮಂಗಲ ಪ್ರಶ್ನೆ ಎಂದರೇನು?
ಅಷ್ಟಮಂಗಲ(Ashtamangala) ಅಂದರೆ, ಅಕ್ಕಿಯ ಮಧ್ಯೆ ದೀಪ - ಕನ್ನಡಿ- ಬಂಗಾರ- ಹಾಲು, ಮೊಸರು, ಫಲ, ಪುಸ್ತಕ, ಬಿಳಿಯ ವಸ್ತ್ರ- ಈ ಎಂಟೂ ಮಂಗಲ ವಸ್ತುಗಳ ಆಯಾ ಅಭಿಮಾನಿ ದೇವತೆಗಳ ಆವರಣ- ಸ್ಥಾನ- ಕಲ್ಪೋಕ್ತ ಪೂಜೆ ಮಾಡಿ- ರಾಶಿ ಬರೆದು ಪ್ರಶ್ನಾವಳಿ ನಡೆಸುವುದು. 

ತಾಂಬೂಲ ಪ್ರಶ್ನೆ(Tambula Prashne)
ಇದರಂತೆಯೇ ತಾಂಬೂಲ ಪ್ರಶ್ನೆಯೂ ಆಗಿದೆ. 
ಪ್ರಷ್ಟ್ರಾ ವಿತೀರ್ಣ ತಾಂಬೂಲೈಃ ಶುಭಾಶುಭ ಮಶೇಷತಃ
ವಾಚ್ಯಂ ದ್ವಾದಶ ಭಾವೋತ್ಭಂ ತತ್ಪ್ರಕಾರೋಥ ಲಿಖ್ಯತೇ

ಪ್ರಶ್ನೆ ಮಾಡುವವರು ಇಂತಿಷ್ಟು ವೀಳ್ಯದೆಲೆಗಳ ದೈವಜ್ಞರಿಗೆ ಕೊಟ್ಟು - ಅದರ ಆಕಾರ, ಸಂಖ್ಯೆಗೆ ಅನುಗುಣವಾಗಿ ದ್ವಾದಶ ರಾಶಿಚಕ್ರದಲ್ಲಿ ಲಗ್ನಾದಿ ಶುಭಾಶುಭ ಫಲವನ್ನು ಹೇಳುವುದೇ ತಾಂಬೂಲ ಪ್ರಶ್ನೆಯ ಜ್ಯೋತಿಷ್ಯವಾಗಿದೆ.

ತಾಂಬೂಲ ಪ್ರಶ್ನೆಯ ಶೈಲಿ ಹೆಚ್ಚಾಗಿ ದೇವಳ ಸಂಬಂಧಿ ಜೀರ್ಣೋದ್ಧಾರ, ಅದರ ಜನಸಭೆ- ಮಂಗಲ ಕಾರ್ಯಗಳಿಗೆ ಬಳಸುವುದು. ತಾಂಬೂಲಂ ಶ್ರೀಕರಂ ಭದ್ರಂ ಎಂಬ ಶಾಸ್ತ್ರಪ್ರಮಾಣದಂತೆ ವೀಳ್ಯದೆಲೆಯು ಹರಿಪ್ರೇತಿಕರವಾದ ವಸ್ತು. ಹಾಗಾಗಿ, ದೇವಳ ಸಂಬಂಧಿ ಮಂಗಲ ಚಿಂತನೆಗಳಿಗೆ ಇದರ ಬಳಕೆ ನಡೆದಿದೆ. 

ಮಧ್ಯಾಹ್ನದ ಒಳಗಾದರೆ, ಪ್ರಶ್ನಕನು ಕೊಟ್ಟ ತಾಂಬೂಲಗಳನ್ನು - ಎಡಗೈ ಮೇಲಿಟ್ಟು ಒಂದೊಂದೇ ಎಲೆಗಳ ಬಲಗೈಯಿಂದ ಲಗ್ನಾದಿ 12 ಭಾವಗಳನ್ನು ಜೋಡಿಸುವುದು. ಉಳಿದ ಎಲೆಗಳ ಪಕ್ಕದಲ್ಲಿ ಎತ್ತಿಟ್ಟು ಕೊನೆಯಲ್ಲಿ ಎಲ್ಲವನ್ನೂ ಒಟ್ಟು ಮಾಡಿ ಫಲ ನಿರ್ದೇಶನ ಮಾಡುವುದು. 

ಮಧ್ಯಾಹ್ನದ ಮೇಲೆ ಆದರೆ, ಎಲೆಗಳನ್ನು ಕೆಳಗಿನಿಂದ ಎಣಿಸಿ ರಾಶಿ ಜೋಡಿಸುವುದು. 

ಶನಿ ಜಯಂತಿ 2022: ಈ ದಿನ ಪೂಜೆಯಲ್ಲಿ ಈ ಕೆಲಸ ಮಾಡಬೇಡಿ, 10 ವಿಷಯ ಸದಾ ನೆನಪಿಡಿ

ಹೀಗೆ ಜೋಡಿಸಿದ ಎಲೆಗಳ ಗುಣ ಹೇಗಿದೆ? ಚಿಕ್ಕದು, ದೊಡ್ಡದು, ಹರಿದಿದೆಯೇ, ಪೂರ್ಣವೇ, ಒದ್ದೆಯಾಗಿದೆಯೇ, ಒಣಗಿದೆಯೇ, ತೂತಾಗಿದೆಯೇ ಇದೆಲ್ಲವನ್ನೂ ಗಮನಿಸಿ- ಆಯಾ ರಾಶಿಯ ಗುಣದೋಷಗಳ ಹೇಳುತ್ತಾ ಸಾಗುವುದು. 

ಲಗ್ನದಿಂದ ದೇವತಾ ಸ್ವರೂಪ- ಎರಡರಿಂದ ಧನ- ಜನ, ಆದಾಯ- ಮೂರರಿಂದ, ಸಂಬಂಧಗಳು ನಾಲ್ಕರಿಂದ, ಐದರಿಂದ ಭೂತಾದಿ ಸತ್ವ ಮತ್ತು ದೈವ ಸಾನಿಧ್ಯ, ಆರರಿಂದ ಉಪದ್ರವ, ಏಳರಿಂದ ಶುಭಕಾರ್ಯ, ಎಂಟರಿಂದ ಪ್ರಸಾದ- ನೈವೇದ್ಯ- ಕಾಲ- ಆಯು, ಒಂಬತ್ತರಿಂದ ಜೀರ್ಣೋದ್ಧಾರ ಪುಣ್ಯ ವಿಶೇಷ, ಹತ್ತರಿಂದ ಕೀರ್ತಿ, ಹನ್ನೊಂದರಿಂದ ಸಂಪತ್ತಿನ ಗುಣ, ಹನ್ನೆರಡರಿಂದ ಲಾಭ ನಷ್ಟ ಕಾರಣ, ಇತರ ಬಾಧೆ ಅನುಕೂಲಗಳನ್ನು ನೋಡುವುದು. 

Vaastu Tips : ಕಪಾಟಿನಲ್ಲಿ ಈ ವಸ್ತು ಇಟ್ಟರೆ ಹಣದ ಹೊಳೆ ಹರಿಯೋದು ನಿಶ್ಚಿತ

ಹೀಗೆ ಒಂದೊಂದು ತಾಂಬೂಲ ಭಾವಕೂ ಇರುವ ಬಾಧೆಗಳಿಂದ ಆಯಾ ದೇವಳ ಮತ್ತು ತತ್‌ಸಂಬಂಧಿ ಕುಟುಂಬ, ಪರಿಸರ ಬಳಲುತ್ತ ಇರುತ್ತದೆ, ಇದೆಲ್ಲದರ ಕಾರಣಗಳು ಸ್ಪಷ್ಟವಾಗಿ ಅಷ್ಟಮಂಗಲ- ತಾಂಬೂಲ ಪ್ರಶ್ನೆ ಮೂಲಕ ಪರಿಹರಿಸಬಹುದಾಗಿದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios