Asianet Suvarna News Asianet Suvarna News

ಇಂದು ಬಸವ ಜಯಂತಿ: ಆರ್ಥಿಕ ಕ್ರಾಂತಿಗೂ ನಾಂದಿ ಹಾಡಿದ್ದ ಬಸವಣ್ಣ

12ನೇ ಶತಮಾನದಲ್ಲಿ ದೈತ್ಯಾಕಾರವಾಗಿ ಬೆಳೆಯುತ್ತಿದ್ದ ಸಾಮಾಜಿಕ ಅಸಮಾನತೆಗೆ ಆರ್ಥಿಕ ಅಸಮಾನತೆಯೂ ಪ್ರಮುಖ ಕಾರಣವೆಂದು ಮೊದಲ ಬಾರಿಗೆ ಗುರುತಿಸಿದವರು ಬಸವಣ್ಣ. ಮಾತ್ರವಲ್ಲ ತಮ್ಮ ಮುಂದಾಳುತನದಲ್ಲಿ ಅರ್ಥಶಾಸ್ತ್ರಕ್ಕೆ ಹೊಸ ತಿರುವನ್ನೇ ನೀಡಿದರು.

Special Article By Dr Vijay Kumar N Over Basava Jayanti 2023 gvd
Author
First Published Apr 23, 2023, 5:32 AM IST

ಡಾ.ವಿಜಯಕುಮಾರ ಎನ್‌. ಬೀದರ್‌

ಭಾರತದ ಆರ್ಥಿಕ ಇತಿಹಾಸದಲ್ಲಿ ಹಾಗೂ ಅರ್ಥಶಾಸ್ತ್ರದಲ್ಲಿ ಹನ್ನೆರಡನೆಯ ಶತಮಾನದ ಶರಣರು ತಮ್ಮದೇ ಆದ ಗೌರವಯುತ ಸ್ಥಾನ ಹೊಂದಿದ್ದರು. ಸರ್ವ ಸಮಾನತೆಯ ಹಾಗೂ ಶೋಷಣೆ ರಹಿತ ಸಮಾಜ ನಿರ್ಮಾಣ ಕಾರ್ಯದಲ್ಲಿ ನಿರತರಾದ ಶರಣ ಮಹಾಶಯರು ಆರ್ಥಿಕ ವಿಚಾರಗಳಲ್ಲಿ ಬದಲಾವಣೆಯನ್ನು ತಂದರು. ಬಹುಶಃ ಭಾರತದ ಆರ್ಥಿಕ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಆರ್ಥಿಕ ಬದಲಾವಣೆ ತರುವಂತಹ ಜವಾಬ್ದಾರಿಯುತ ಕಾರ್ಯವನ್ನು ಕೈಗೊಂಡರು. ಸಮಾಜದ ವ್ಯವಸ್ಥೆಯ ಸ್ವರೂಪವು ಅದರ ನಿರ್ವಹಣೆಯನ್ನಲಂಬಿಸಿದೆ. ಅರ್ಥವ್ಯವಸ್ಥೆಯ ಕಾರ್ಯದಕ್ಷತೆ, ಸಮರ್ಪಕ ಆಡಳಿತದಿಂದ ನಿರ್ಧಾರವಾಗುತ್ತದೆ. ಸಮಾಜದ ಆರ್ಥಿಕ ಬದಲಾವಣೆಗೆ ನಿರ್ದಿಷ್ಟವಾದ ಹಾಗೂ ನಿರ್ಣಯಾತ್ಮಕ ಪಾತ್ರವಿದೆ ಎಂಬುದನ್ನು ಅವರು ಮನಗಂಡಿದ್ದರು. ಹೀಗಾಗಿ ಸಾಮಾಜಿಕ ಕ್ರಾಂತಿಯ ಹರಿಕಾರನೆಂದು ನಾವು ಗುರುತಿಸುವ ಬಸವಣ್ಣನವರು ಆರ್ಥಿಕ ಕ್ರಾಂತಿಯ ಹರಿಕಾರನೂ ಆಗಿದ್ದರು.

ಅಂದಿನ ಸಮಾಜದಲ್ಲಿ ದೈತ್ಯಾಕಾರವಾಗಿ ಬೆಳೆಯುತ್ತಿದ್ದ ಸಾಮಾಜಿಕ ಅಸಮಾನತೆಗೆ ಆರ್ಥಿಕ ಅಸಮಾನತೆಯೂ ಸಹ ಒಂದು ಪ್ರಮುಖ ಕಾರಣವೆಂದು ಮೊದಲ ಬಾರಿಗೆ ಗುರುತಿಸಿದವರು ಬಸವಣ್ಣ. ಮಾತ್ರವಲ್ಲ ತಮ್ಮ ಮುಂದಾಳುತನದಲ್ಲಿ ಅರ್ಥಶಾಸ್ತ್ರಕ್ಕೆ ಅಂದು ಹೊಸ ತಿರುವನ್ನೇ ನೀಡಿದರು. ಅರ್ಥಶಾಸ್ತ್ರದ ಹೆಸರಿನಲ್ಲಿ ಅವರಿವರಂತೆ ಪ್ರತ್ಯೇಕವಾಗಿ ಯಾವ ಗ್ರಂಥಗಳನ್ನು ಅವರು ಬರೆಯಲಿಲ್ಲ. ಆದರೆ ಸರ್ವ ಸಮಾನತೆಯ ಹಾಗೂ ಶೋಷಣೆ ರಹಿತ ಸಮಾಜ ನಿರ್ಮಾಣ ಕಾರ್ಯದಲ್ಲಿ ನಿರತರಾದಾಗ ತಾನಾಗಿಯೇ ಹುಟ್ಟಿಕೊಂಡ ಆರ್ಥಿಕ ಯೋಜನೆಗಳ ಕುರಿತ ಅವರ ವಚನಗಳು ಯಾವುದೇ ಅರ್ಥಶಾಸ್ತ್ರದ ಗ್ರಂಥಗಳಿಗಿಂತ ಕಮ್ಮಿಯೇನಿಲ್ಲ. ಪ್ರಾಚೀನ ಕಾಲವಿಂದಲೂ ಧರ್ಮದ ಹೆಸರಿನಲ್ಲಿ, ಆಧ್ಯಾತ್ಮದ ಹೆಸರಿನಲ್ಲಿ ಹಣಕ್ಕೆ ಸಿಗದೇ ಹೋದ ಪ್ರಾಮುಖ್ಯವನ್ನು ಗುರುತಿಸಿದ ಶರಣರು ಅರ್ಥಕ್ಕೆ ಅರ್ಥವನ್ನು ಒದಗಿಸಿಕೊಟ್ಟರು.

ಬ್ರಾಹ್ಮಣರೇಕೆ ರಾಜಕಾರಣದಲ್ಲಿ ಮೇಲೆ ಬರುತ್ತಿಲ್ಲ?: ಅಶೋಕ ಹಾರನಹಳ್ಳಿ

ಅರ್ಥಶಾಸ್ತ್ರೀಯ ವೈಚಾರಿಕತೆ: ಮನುಕುಲೋದ್ಧಾರಕ, ಮೊಟ್ಟಮೊದಲ ವರ್ಗ-ವರ್ಣ ರಹಿತ ಸಮಾಜದ ಕನಸು ಕಂಡಿದ್ದ ಬಸವಣ್ಣ, ಆರ್ಥಿಕ ಪ್ರಗತಿಯ ಪ್ರತಿಪಾದಕನೂ ಆಗಿದ್ದರು. ಒಬ್ಬ ಅರ್ಥ ಮಂತ್ರಿಯಾಗಿ ಭಂಡಾರದ ಸಂಪತ್ತಿನ ಆದಾನ - ಪ್ರದಾನಗಳ ವಿತರಣೆಯಲ್ಲಿ ಅವರು ಉಂಟುಮಾಡಿದ ಬದಲಾವಣೆ, ರಾಷ್ಟ್ರದ ಸುಖ ಜೀವನಕ್ಕೆ ಕಾರಣವಾದ ಸಂಪತ್ತಿನ ಉತ್ಪಾದನೆಯ ವಿಚಾರದಲ್ಲಿ ಅವರು ಉಂಟುಮಾಡಿದ ಸಮಷ್ಟಿಜಾಗ್ರತಿ, ಅದು ಸಮಾಜವನ್ನು ಸ್ವಯಂ ಪೂರ್ಣವಾಗಿಸಿದುದಲ್ಲದೇ, ದುಡಿಮೆಯ ಗೌರವವನ್ನು ಹೆಚ್ಚಿಸಿತ್ತು. ಸಮಾಜದ ಆರ್ಥಿಕ ಸ್ಥಿತಿಗತಿಯನ್ನು ಗಮನಿಸಿದ ಬಸವಣ್ಣನವರು ವಾಸ್ತವ ಮತ್ತು ತಾತ್ವಿಕ ನೆಲೆಗಳೆರಡರ ಮೂಲಕ ಸಮಾಜದಲ್ಲಿ ಆರ್ಥಿಕ ಸಮಾನತೆಯನ್ನು ತರಲು ಪ್ರಯತ್ನಿಸಿದರು. ಜನರಲ್ಲಿ ವೈಚಾರಿತೆಯನ್ನು ಮಾಡಿಸಲು ಮುಂದಾದರು. ಲೌಕಿಕಕ್ಕೆ ಅಂಟಿಕೊಂಡು ಬಂದು ವಾಸ್ತವದ ಅರಿವಿಲ್ಲದೇ ಆರ್ಥಿಕ ಸಮಾನತೆಯ ತಾತ್ವಿಕ ಸಿದ್ಧಾಂತವನ್ನು ಜಾರಿಯಲ್ಲಿ ತರಲು ಸಾಧ್ಯವಾಗುವುದಿಲ್ಲ ಎಂಬುದು ಬಸವಣ್ಣನವರಿಗೆ ಚೆನ್ನಾಗಿ ತಿಳಿದಿತ್ತು. ಆ ಪದದ ಜಾಡಿನಲ್ಲಿ ತಮ್ಮ ವೈಚಾರಿಕತೆಯ ಆಲೋಚನೆಗಳನ್ನು ವಿಸ್ತೃತಗೊಳಿಸಿಕೊಂಡು ಮಂಡಿಸಿದರು. ಅರ್ಥಚಿಂತನೆಗೆ ಉದಾತ್ತತೆಯನ್ನು ತಂದುಕೊಟ್ಟರು.

ಬಡತನವೆಂಬುದು ಪಾಪವಲ್ಲ: ಪ್ರತಿಯೊಬ್ಬರು ತಾವು ಕಷ್ಟಪಟ್ಟು ಸಂಪಾದಿಸುವುದು ತಮ್ಮನ್ನು ಮತ್ತು ತಮ್ಮನ್ನು ನಂಬಿದ ಜೀವಗಳನ್ನು ರಕ್ಷಿಸುವುದಕ್ಕಾಗಿ ಎಂಬುದು ಸತ್ಯ. ಜನರು ತಮ್ಮ ವಾಸ್ತವ ಬದುಕಿನ ಅಸಹಾಯಕತೆಯನ್ನು ಮುಚ್ಚಿಕೊಳ್ಳುವುದಕ್ಕಾಗಿ ಸದಾ ಪ್ರಯತ್ನಿಸುತ್ತಿರುತ್ತಾರೆ. ಯಾವಾಗ ಅವರ ಪ್ರಯತ್ನಕ್ಕೆ ಪ್ರತಿಫಲ ಸಿಗುವುದಿಲ್ಲವೋ ಆಗ ಅಂತಹ ವ್ಯಕ್ತಿ ಬೇರೆ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳತ್ತಾನೆ. ತನ್ನನ್ನು ನೋಡಿ ನಗುತ್ತಿರುವ ಜನರ ಕಣ್ಣು ಕುಕ್ಕಿಸಬೇಕೆಂದುಕೊಳ್ಳುತ್ತಾನೆ. ಹೊಟ್ಟಿಗೆ ಅನ್ನ ಸಿಗದಿದ್ದರೂ ಸರಿಯೇ ವೇಷದಿಂದಾದರೂ ಜನರನ್ನು ಮೋಸಗೊಳಿಸಬೇಕೆಂದು ಮೊದಲ ತಪ್ಪು ಹೆಜ್ಜೆಯನ್ನಿಡುತ್ತಾನೆ. ಹೊರಗಿನ ಥಳುಕಿನ ಪ್ರಪಂಚ ತನಗೆಷ್ಟುಸುಖ ಕೊಡಬಲ್ಲುದೇ ಎಂಬುದರತ್ತ ಗಮನ ಹರಿಸುವುದೂ ಇಲ್ಲ, ಅಂತರಂಗದ ಎಚ್ಚರದ ಕರೆಗಂಟೆಗೆ ಓಗೊಡುವುದೂ ಇಲ್ಲ. ಇಂಥ ಬಹಿರಾಡಂಬರದ ಜನರ ನಡೆಯನ್ನು ಕಂಡು ಬಸವಣ್ಣ ಮುಮ್ಮಲ ಮರುಗಿದ್ದರು. ಜನರ ಮೌಢ್ಯವನ್ನು ನೋಡಿ ಕನಿಕರಿಸಿದರು. ಎಷ್ಟೋ ಸಾರಿ ಅಂತರಂಗದ ಶ್ರೀಮಂತಿಕೆಯುಳ್ಳ ಜನರಿಗೆ ವೈಮುಚ್ಚಿಕೊಳ್ಳುವ ಸೌಲಭ್ಯವೂ ಇರುವುದಿಲ್ಲ. ಹಾಗೆಂದ ಮಾತ್ರಕ್ಕೆ ಅವರು ಬಡವರೇ? ಅಲ್ಲ. ಬೇರೆಯವರು ತಮ್ಮ ಸ್ಥಿತಿ ನೋಡಿ ಹೀಯಾಳಿಸಬಹುದೆಂದು ಊಹಿಸಿ ಅವರು ಕುಗ್ಗಿಹೋಗಬೇಕಾಗಿಲ್ಲ. ವೇಷದಿಂದಲೇ ಸಮಾಜದಲ್ಲಿ ಮಾನ ಮನ್ನಣೆ, ಗೌರವ ದೊರಕುತ್ತದೆ, ಜನರು ಕಣ್ಣೆತ್ತಿ ತಮ್ಮನ್ನು ನೋಡುತ್ತಾರೆಂಬ ಭ್ರಮೆಯಲ್ಲಿ ತೇಲಿ ಹೋಗುವುದು ಬೇಕಾಗಿಲ್ಲ, ಅಥವಾ ಯಾರೂ ತಮ್ಮನ್ನು ನೋಡಲೇ ಇಲ್ಲ ಎಂಬ ಚಿಂತೆಯ ಚಿತೆಯಲ್ಲಿ ದಗ್ಧವಾಗುವ ಅವಶ್ಯಕತೆಯೂ ಇಲ್ಲ.

ಬಸವಣ್ಣನ ದೃಷ್ಟಿಯಲ್ಲಿ ಆರ್ಥಿಕತೆ
ಕೃಷಿ ಕೃತ್ಯ ಕಾಯಕದಿಂದಾದಡೀನು
ತನುಮನ ಬಳಲಿಸಿ ತಂದು ದಾಸೋಹವ ಮಾಡುವ
ಪರಮ ಸದ್ಭಕ್ತನ ಪಾದವ ತೋರಯ್ಯಾ ಎನಗೆ
ಆದಂತೆನೆ ಆತನ ತನು ಶುದ್ಧ ಆತನ ಮನ ಶುದ್ಧ
ಆತನ ನಡೆ ಶುದ್ಧ, ನುಡಿಯೆಲ್ಲವು ಪಾವನವು
ಆತನಿಗೆ ಉಪದೇಶ ಮಾಡಿದಾತನೇ ಪರಮ ಸದ್ಗುರು ಕೂಡಲಸಂಗಮದೇವಾ

ಸತ್ಕಾರ್ಯಗಳಿಗೆ ಪ್ರೇರಣೆ ನೀಡುವ ಪವಿತ್ರವಾದ ರಂಜಾನ್‌ ಹಬ್ಬ: ಬನ್ನೂರು ಕೆ. ರಾಜು

ಕೃಷಿ ಕಾಯಕದಲ್ಲಿ ತೊಡಗಿರುವವನ ಶರೀರವು ಶುದ್ಧ. ಆತನ ಮನವು ಪರಿಶುದ್ಧ. ಅವನ ಮಾತು ಕೃತಿ ಎಲ್ಲವೂ ಶುದ್ಧ. ಅತಂಹ ವ್ಯಕ್ತಿಗೆ ಉಪದೇಶ ಮಾಡಿದ ಗುರುವು ಶ್ರೇಷ್ಠ ಸದ್ಗುರುವೆನಿಸುತ್ತಾನೆ. ಕಾಯಕಷ್ಟಕ್ಕೆ ಹೆದರುವ ಇಂದಿನ ಜನರು ಶರಣರ ದೃಷ್ಟಿಯಲ್ಲಿ ಯಾವ ಹೊಗಳಿಕೆಗೂ ಅರ್ಹರಲ್ಲ. ಒಕ್ಕಲಿಗರ ಶ್ರಮವನ್ನು ಗೌರವಿಸುವುದರ ಮೂಲಕ ಕೃಷಿಯು ಒಕ್ಕಲಿಗರ ಲೌಕಿಕ ಬದುಕಿಗೆ ನೆಮ್ಮದಿ ತಂದುಕೊಡುವುದಲ್ಲದೇ ಅಧ್ಯಾತ್ಮ ಆರ್ಥಿಕ ಮುನ್ನುಡಿಗೆ ಕಾರಣನಾದ ಬಗೆಯನ್ನು ಬಸವಣ್ಣನವರು ಬಹಳ ಮಾರ್ಮಿಕವಾಗಿ ನುಡಿದಿದ್ದಾರೆ. ಹೀಗೆ ಬಸವಣ್ಣನವರ ದೃಷ್ಟಿಯಲ್ಲಿ ಆರ್ಥಿಕತೆಯ ಅವಲೋಕನ ಗಮನಾರ್ಹವಾಗಿದೆ.

Follow Us:
Download App:
  • android
  • ios