Asianet Suvarna News Asianet Suvarna News

Chikkamagaluru: ದೇವಿರಮ್ಮ ದರ್ಶನಕ್ಕೆ ಹರಿದು ಬಂತು ಜನಸಾಗರ!

  • ದೇವಿರಮ್ಮ ದರ್ಶನಕ್ಕೆ ಹರಿದು ಬಂತು ಜನಸಾಗರ!
  • ಲಕ್ಷಾಂತರ ಮಂದಿ ಭಕ್ತರಿಂದ ದೇವಿ ದರ್ಶನ 
  • ಬರಿಗಾಲಲ್ಲೇ 3800ಅಡಿ ಎತ್ತರ ಗುಡ್ಡ ಏರಬೇಕು ಇದು ದೇವಿರಮ್ಮನ ಜಾತ್ರೆಯ ವೈಭವ,
People flocked to see Deviramma darshan at chikkamgaluru
Author
First Published Oct 24, 2022, 2:29 PM IST | Last Updated Oct 24, 2022, 2:29 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು : (ಅ.24) 25 ಸಾವಿರಕ್ಕೂ ಅಧಿಕ ವಾಹನಗಳು, ಒಂದುವರೆ ಲಕ್ಷಕ್ಕೂ ಹೆಚ್ಚು ಭಕ್ತರು. ಕಾಲಲ್ಲಿ ಚಪ್ಪಲಿ ಇಲ್ಲ. ನಡೆಯೋಕೆ ದಾರಿ ಇಲ್ಲ. ಆದ್ರೂ ಬೆಟ್ಟದ ತಾಯಿಯನ್ನ ನೋಡೋ ತವಕ. ಇದು ಚಿಕ್ಕಮಗಳೂರಿನ ಮಲ್ಲೇನಹಳ್ಳಿ ದೇವಿರಮ್ಮನ ದರ್ಶನ ಪಡೆಯೋಕೆ ಬಂದ ಭಕ್ತಸಾಗರ.

ದೇವೀರಮ್ಮ ದೇವಸ್ಥಾನ; ಬರಿಗಾಲಲ್ಲಿ 3800 ಅಡಿ ಬೆಟ್ಟವೇರಿ ಹರಕೆ ತೀರಿಸಲು ಭಕ್ತರು ಸಜ್ಜು

 ಸುಮಾರು 3800 ಅಡಿಗಳಷ್ಟು ಎತ್ತರದ ಗುಡ್ಡದಲ್ಲಿ ನೆಲೆಸಿರೋ ಆ ದೇವಿಯನ್ನ ನೋಡಲು ಜನಸಾಗರವೇ ಹರಿದು ಬಂದಿದೆ. ಭಕ್ತರು ಬರಿಗಾಲಲ್ಲಿ ಕಾಡು-ಮೇಡು ಅಲೆದು ದೇವಿಯ ದರ್ಶನ ಪಡೆದರು. ಇಂದಿನಿಂದ 4 ದಿನಗಳ ಕಾಲ ನಡೆಯೋ ಜಾತ್ರೆಗೆ ರಾಜ್ಯ, ಹೊರರಾಜ್ಯದಿಂದಲೂ ಆಗಮಿಸಿದ ಭಕ್ತರು, ಪೂಜಾ-ಕೈಂಕರ್ಯಗಳಲ್ಲಿ ಭಾಗವಹಿಸಿ ದೇವಿ ಕೃಪೆಗೆ ಪಾತ್ರರಾಗ್ತಿದ್ದಾರೆ.

ಬರಿಗಾಲಲ್ಲೇ ಬೆಟ್ಟವನ್ನೇರಿದ ಭಕ್ತರು: 

ವರ್ಷಕ್ಕೊಮ್ಮೆ ದರ್ಶನ ಕೊಡೋ ಚಿಕ್ಕಮಗಳೂರು ಜಿಲ್ಲೆಯ ಮಲ್ಲೇನಹಳ್ಳಿಯ ಬೆಟ್ಟದ ಮೇಲೆ ಇರುವ ತಾಯಿ ದೇವಿರಮ್ಮನ್ನ ನೋಡೋಕೆ ಈ ವರ್ಷ ನಿರೀಕ್ಷೆಗೂ ಮೀರಿದ ಭಕ್ತವೃಂದ ಆಗಮಿಸಿತ್ತು. ಕಳೆದ ಎರಡು ವರ್ಷಗಳ ಕಾಲ ಕೋವಿಡ್ ಹಿನ್ನಲೆಯಲ್ಲಿ ಭಕ್ತರಿಗೆ ನಿಷೇಧವಿತ್ತು.ಈ ಹಿನ್ನಲೆಯಲ್ಲಿ ಇಂದು ಭಾರೀ ಸಂಖ್ಯೆಯಲ್ಲಿ ಬೆಟ್ಟದಲ್ಲಿರುವ ದೇವಿ ದರ್ಶನ ಪಡೆಯಲು ಜನಸಾಗರವೇ ಹರಿದುಬಂದಿತ್ತು.

 ಈ ವರ್ಷ ಭಕ್ತರ ಸಂಖ್ಯೆ ಒಂದೂವರೆ ಲಕ್ಷಕ್ಕೂ ಹೆಚ್ಚು ಗಡಿ ದಾಟಿದೆ.  ದೀಪಾವಳಿ ಅಮವಾಸ್ಯೆಯ ಹಿಂದಿನ ದಿನ ಬೆಟ್ಟದಲ್ಲಿರೋ ಶಿವನ ಅಸ್ತ್ರಗಳುಳ್ಳ ದುರ್ಗೆಗೆ ವಿಶೇಷ ಪೂಜೆ ನಡೆಯಲಿದೆ. ಆ ಪೂಜೆಯನ್ನ ನೋಡಿ ಕಣ್ತುಂಬಿಕೊಳ್ಳಲು ಭಕ್ತರು ಬಿಂಡಿಗ ಗ್ರಾಮಕ್ಕೆ ಬಂದೇ ಬರ್ತಾರೆ. ಇಲ್ಲಿ ಹರಕೆ ಕಟ್ಟಿದ್ರೆ ಆ ಹರಕೆ ಈಡೇರೋದ್ರಲ್ಲಿ ಅನುಮಾನವಿಲ್ಲ. ಅದಕ್ಕಾಗಿ ಹರಕೆ ಕಟ್ಟಿದ-ಕಟ್ಟದ ಭಕ್ತರು ಪ್ರತಿವರ್ಷ ಇಲ್ಲಿಗೆ ಬಂದೇ ಬರ್ತಾರೆ. ವಿದ್ಯುತ್ ಸಂಪರ್ಕ ಕೂಡ ಇಲ್ಲದ ಆ ಕಲ್ಲು-ಬಂಡೆ, ಮುಳ್ಳುಗಳ ಬೆಟ್ಟದಲ್ಲಿ ಭಕ್ತರು ಹಿಂದಿನ ರಾತ್ರಿ 10 ಗಂಟೆಯಿಂದಲೇ ಬೆಟ್ಟ ಹತ್ತೋಕೆ ಶುರು ಮಾಡಿ ರಾತ್ರೋರಾತ್ರಿ ಕೆಳಗಿಳಿಯುತ್ತಾರೆ. ಬೆಟ್ಟವನ್ನೇರುವಾಗಿ ಕೊಂಚ ಎಡವಿದ್ರು ಪಾತಾಳ ಸೇರೋದು ಗ್ಯಾರಂಟಿ. ಅಂತಹ ಬೆಟ್ಟಗಳ ಸಾಲಲ್ಲಿ ಇರುವೆಯಂತೆ ತಳುಕುತ್ತಾ-ಬಳುಕುತ್ತಾ-ತೆವಳುತ್ತಾ ಅಕ್ಕಪಕ್ಕದವರ ನೆರವಿನಿಂದ ಭಕ್ತರು ಬೆಟ್ಟದ ತುದಿಯಲ್ಲಿ ಇರುವ ಬಿಂಡಿಗ ದೇವಿರಮ್ಮನ ದರ್ಶನವನ್ನು ಪಡೆಯುತ್ತಾರೆ. 

ದೇವಿಯ ದರ್ಶನ ಪಡೆದ ಸಿ,ಟಿ ರವಿ :

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಸಿ,ಟಿ ರವಿ ಕೂಡ ಪ್ರತಿವರ್ಷದಂತೆ ಬೆಟ್ಟವನ್ನೇರಿ ದೇವಿಯ ದರ್ಶನ ಪಡೆದರು. ಇಲ್ಲಿ ಹರಕೆ ಕಟ್ಟಿಕೊಂಡೋರು ಬೆಟ್ಟ ಹತ್ತುವಾಗ ಎಷ್ಟೇ ಕಷ್ಟವಾದ್ರು ಅವರ ಶಕ್ತಿಗನುಸಾರವಾಗಿ ಸೌದೆಯನ್ನ ಹೊತ್ತೊಯ್ಯುತ್ತಾರೆ. ಇದರ ಜೊತೆಗೆ, ಸೀರೆ, ತುಪ್ಪ, ಬೆಣ್ಣೆ, ಕಾಯಿ, ಬಾಳೆಹಣ್ಣನ್ನ ದೇವಿಗೆ ಸಮರ್ಪಿಸ್ತಾರೆ. ಸಮುದ್ರಮಟ್ಟದಿಂದ 3800 ಅಡಿ ಎತ್ತದಲ್ಲಿರೋ ದೇವಿರಮ್ಮನ ಬೆಟ್ಟದಲ್ಲಿ ವರ್ಷಕ್ಕೊಮ್ಮೆ ಮಾತ್ರ ಪೂಜೆ ನಡೆಯೋದು. ವ್ರತದ ಮೂಲಕ ಹರಕೆ ಕಟ್ಟಿ ಉಪವಾಸವಿದ್ದೋರು ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಬೆಟ್ಟದಲ್ಲಿ ಸಂಜೆ ದೀಪ ಬೆಳಗಿದ ನಂತರವೇ ಊಟ ಮಾಡೋದು. 

Chikkamagaluru; ಬಿಂಡಿಗ ದೇವೀರಮ್ಮನವರ ದೀಪೋತ್ಸವ, ಭಾರಿ ಪ್ರಮಾಣದ ಭಕ್ತರ ನಿರೀಕ್ಷೆ

ಇಂದು ಸಂಜೆ ಭಕ್ತರು ತಂದ ಸೌದೆ, ಎಣ್ಣೆ, ಬೆಣ್ಣೆ, ಸೀರೆ, ರವಕೆಗಳಿಗೆ ಅಗ್ನಿ ಸ್ಪರ್ಶ ಮಾಡಿದ ಮೇಲೆ ಚಿಕ್ಕಮಗಳೂರಿನ ಸುತ್ತಮುತ್ತಲಿನ ಜನ ಆ ಜ್ಯೋತಿಯನ್ನೇ ನೋಡಿದ ಬಳಿಕ ಅದಕ್ಕೆ ಆರತಿ ಮಾಡಿ ದೀಪಾವಳಿಯನ್ನ ಆಚರಿಸೋದು. ಒಟ್ಟಾರೆ, ಈ ಬೆಟ್ಟದ ತಾಯಿಯನ್ನ ನೋಡೋಕೆ ಪ್ರತಿವರ್ಷ ರಾಜ್ಯ-ಹೊರರಾಜ್ಯದಿಂದಲೂ ಭಕ್ತರು ಬರ್ತಾರೆ. ಇಲ್ಲಿನ ಆಹ್ಲಾದಕರ ವಾತಾವರಣವನ್ನ ಸವಿಯೋಕೆ ಬರೋರು ಉಂಟು, ಕಷ್ಟವನ್ನ ಪರಿಹರಿಸೆ ತಾಯಿ ಅಂತ ಬೇಡೋರು ಉಂಟು, ಬೆಟ್ಟ ಹತ್ತಿ ಎಂಜಾಯ್ ಮಾಡೋರು ಇದ್ದಾರೆ. ಆದ್ರೆ, ಆ ಬೆಟ್ಟದ ತಾಯಿ ಮಾತ್ರ ತನ್ನ ಮಡಿಲಿಗೆ ಬರೋ ಯಾರೊಬ್ಬರಿಗೂ ಎಳ್ಳಷ್ಟು ಅನಾಹುತವಾಗದಂತೆ ಕಾಯ್ತಿದ್ದಾಳೆ.ಬರುವ ಸೂಚನೆಯಲ್ಲಿದ್ದ ಮಳೆರಾಯ ಪವಾಡ ಎನ್ನುವಂತೆ ಬೆಳಿಗ್ಗೆನಿಂದ ಕಾಣ್ಣುದಂತೆ ಮಾಯಾವಾಗಿದ್ದು ಭಕ್ತರಲ್ಲಿ ಸಂತಸ ಮೂಡಿಸಿತ್ತು

Latest Videos
Follow Us:
Download App:
  • android
  • ios