ಚೌತಿ ಹಬ್ಬ ಹತ್ರ ಬಂತು. ಹಬ್ಬಕ್ಕೆ ತಯಾರಿ ಜೋರಾಗಿದೆ. ಗಣೇಶನ ದರ್ಶನ ಪಡೆಯಲು ಭಕ್ತರು ಕಾತರರಾಗಿದ್ದಾರೆ. ಮನೆಗೆ ಬಪ್ಪನ ಆಗಮನವಾಗಲಿದೆ. ಮನೆಗೆ ಬಂದ ಗಣೇಶ ಸಂತೋಷವಾಗ್ಬೇಕೆಂದ್ರೆ ಕೆಲ ತಪ್ಪು ಮಾಡಬಾರದು.  

ವಿಘ್ನಗಳನ್ನು ಪರಿಹರಿಸುವ ದೇವರೆ ವಿನಾಯಕ. ಇದೇ ಕಾರಣಕ್ಕೆ ಆತನನ್ನು ವಿಘ್ನ ವಿನಾಶಕ ಎಂದೇ ಕರೆಯಲಾಗುತ್ತದೆ. ಗಣೇಶನ ಆರಾಧಕರು ಗಣೇಶ ಚತುರ್ಥಿ ಆಚರಣೆಗೆ ಸಿದ್ಧರಾಗ್ತಿದ್ದಾರೆ. ಮೋದಕ, ಲಡ್ಡು,ಚಕ್ಕುಲಿ, ಪಂಚಕಜ್ಜಾಯ ಹೀಗೆ ಅನೇಕ ಭಕ್ಷ್ಯಗಳು ಸಿದ್ಧವಾಗ್ತಿವೆ. ಈ ಬಾರಿ ಆಗಸ್ಟ್ 31ರಂದು ಚೌತಿ ಹಬ್ಬವನ್ನು ಆಚರಿಸಲಾಗ್ತಿದೆ. 10 ದಿನಗಳ ಕಾಲ ಗಣೇಶನನ್ನು ಮನೆಯಲ್ಲಿ ಕೂರಿಸಿ ಪೂಜೆ ಮಾಡುವವರಿದ್ದಾರೆ. ಭಾರತದಲ್ಲಿ ವಿಜ್ರಂಭಣೆಯಿಂದ ನಡೆಯುವ ಹಬ್ಬಗಳಲ್ಲಿ ಗಣೇಶ ಚತುರ್ಥಿ ಕೂಡ ಒಂದು. ಮೋದಕ ಪ್ರಿಯನ ಕೃಪೆಗೆ ಪಾತ್ರರಾದ್ರೆ ಎಲ್ಲ ಸಮಸ್ಯೆ ದೂರವಾಗುತ್ತದೆ. ಸಂಕಷ್ಟ ಹರಣ ಗಣಪತಿಯನ್ನು ಭಕ್ತಿಯಿಂದ ಪೂಜೆ ಮಾಡ್ಬೇಕು. ಆತನ ಕೃಪೆ ಸದಾ ನಿಮ್ಮ ಮೇಲೆ ಇರಬೇಕು, ಮನೆಯಲ್ಲಿ ಸಂತೋಷ, ಆರೋಗ್ಯ, ಐಶ್ವರ್ಯ ಇರ್ಬೇಕು ಎಂದಾದ್ರೆ ಗಣೇಶನ ಪೂಜೆ ವೇಳೆ ಕೆಲ ತಪ್ಪುಗಳನ್ನು ಮಾಡ್ಬಾರದು. ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವುದು ಮಾತ್ರವಲ್ಲ ಪೂಜೆ ವಿಧಿ- ವಿಧಾನಗಳನ್ನು ತಿಳಿದಿರಬೇಕು. ಪೂಜೆಯಲ್ಲಿ ಯಡವಟ್ಟಾದ್ರೆ ಗಣೇಶನ ಕೋಪಕ್ಕೆ ಗುರಿಯಾಗ್ಬೇಕಾಗುತ್ತದೆ. ವಿಘ್ನಗಳನ್ನು ಎದುರಿಸಬೇಕಾಗುತ್ತದೆ. ಗಣೇಶನ ಆರಾಧನೆ ವೇಳೆ ಏನು ಮಾಡ್ಬಾರದು ಎಂಬುದನ್ನು ನಾವಿಂದು ಹೇಳ್ತೇವೆ.

Add Asianetnews Kannada as a Preferred SourcegooglePreferred

ಗಣೇಶ ಚತುರ್ಥಿ (Ganesha Chaturthi) ದಿನ ಮಾಡ್ಬೇಡಿ ಈ ಕೆಲಸ :

ತುಳಸಿ (Tulsi) ಯನ್ನು ಗಣೇಶನಿಗೆ ಅಪ್ಪಿತಪ್ಪಿ ಅರ್ಪಿಸ್ಬೇಡಿ : ಹಿಂದೂ ಧರ್ಮ (Hinduism)ದಲ್ಲಿ ಪ್ರತಿಯೊಂದು ದೇವರಿಗೂ ಪ್ರಿಯವಾದ ಹೂವಿದೆ. ಹಾಗೆಯೇ ತುಳಸಿಗೆ ಸಾಕಷ್ಟು ಮಹತ್ವವಿದೆ. ದೇವರ ಪೂಜೆಯಲ್ಲಿ ತುಳಸಿ ಬಳಸಲಾಗುತ್ತದೆ. ಆದ್ರೆ ಗಣೇಶನಿಗೆ ಅಪ್ಪಿತಪ್ಪಿಯೂ ತುಳಸಿ ಅರ್ಪಣೆ ಮಾಡ್ಬಾರದು. ಪುರಾಣಗಳ ಪ್ರಕಾರ, ತುಳಸಿ, ಗಣೇಶನನ್ನು ಗಜಮುಖ ಹಾಗೂ ಲಂಬೋದರ ಎಂದು ಕರೆದಿದ್ದಳಂತೆ. ಮುಂದೆ ಗಣೇಶ ತುಳಸಿಯನ್ನು ಮದುವೆಯಾಗಲು ನಿರಾಕರಿಸಿದ್ದನಂತೆ. ಇದ್ರಿಂದ ಕೋಪಗೊಂಡ ತುಳಸಿ, ಗಣೇಶನಿಗೆ ಶಾಪ ನೀಡಿದ್ದಳಂತೆ. ಎರಡು ಮದುವೆಯಾಗುವಂತೆ ಶಾಪ ನೀಡಿದ್ದಳಂತೆ. ಇದಾದ್ಮೇಲೆ ಗಣೇಶ ಕೂಡ ತುಳಸಿಗೆ ಶಾಪ ನೀಡಿದ್ದ. ರಾಕ್ಷಸನನ್ನು ಮದುವೆಯಾಗುವಂತೆ ಶಾಪ ನೀಡಿದ್ದನಂತೆ. ಇದೇ ಕಾರಣಕ್ಕೆ ಗಣೇಶನಿಗೆ ತುಳಸಿ ಹಾಕುವುದಿಲ್ಲ. ತುಳಸಿ ಅರ್ಪಿಸಿದ್ರೆ ಗಣೇಶ ಕ್ರೋದಿತನಾಗ್ತಾನೆ ಎಂದು ನಂಬಲಾಗಿದೆ. ಗಣೇಶ ದೂರ್ವೆ ಪ್ರಿಯ. ಹಾಗಾಗಿ ಗಣೇಶನಿಗೆ ದೂರ್ವೆ ಅರ್ಪಿಸಬೇಕೆಂದು ಭಕ್ತರು ನಂಬಿದ್ದಾರೆ.

ಈರುಳ್ಳಿ, ಬೆಳ್ಳುಳ್ಳಿಯಿಂದ ದೂರವಿರಿ : ಗಣೇಶ ಚೌತಿ ದಿನ ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರೆ ಈರುಳ್ಳಿ ಹಾಗೂ ಬೆಳ್ಳುಳ್ಳಿ ತಿನ್ನಬೇಡಿ. ಗಣೇಶನ ಪೂಜೆ ಮಾಡುವವರು ಹಾಗೂ ವೃತ ಮಾಡುವವರು ಸಾತ್ವಿಕ ಆಹಾರವನ್ನು ಸೇವನೆ ಮಾಡ್ಬೇಕು. ಈರುಳ್ಳಿ, ಬೆಳ್ಳುಳ್ಳಿ ಸೇವನೆ ಮಾಡುವುದ್ರಿಂದ ಮನಸ್ಸು ಚಂಚಲಗೊಳ್ಳುತ್ತದೆ. ಕ್ರೋದಗೊಳ್ಳುತ್ತದೆ. ಮನಸ್ಸು, ಆಲೋಚನೆ ಶುದ್ಧವಾಗಿರ್ಬೇಕೆಂದ್ರೆ ಸಾತ್ವಿಕ ಆಹಾರ ಸೇವನೆ ಮಾಡ್ಬೇಕು. ಬ್ರಹ್ಮಚರ್ಯವನ್ನು ಆಚರಿಸಬೇಕು. 

ನಿಮ್ಮ ಈ ಆರೋಗ್ಯ ಸಮಸ್ಯೆಗಳಿಗೆ ಶನಿ ದೋಷ ಕಾರಣವಿರಬಹುದು!

ಮನೆಯಲ್ಲಿ ಗಣಪತಿ ಮೂರ್ತಿಯನ್ನು ಒಂಟಿಯಾಗಿ ಬಿಡ್ಬೇಡಿ : ಗಣೇಶನ ಹಬ್ಬದ ದಿನ ಬಹುತೇಕರ ಮನೆಯಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡ್ತಾರೆ. ಮೂರ್ತಿಯನ್ನು 5 – 10 ದಿನ ಮನೆಯಲ್ಲಿಡುವವರು ಪೂಜೆ ಮಾಡಿದ ನಂತ್ರ ಅಥವಾ ಸಂಜೆ ಸಮಯದಲ್ಲಿ ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಹೋಗ್ತಾರೆ. ಆದ್ರೆ ಇದು ತಪ್ಪು. ಗಣೇಶನ ವಿಸರ್ಜನೆಯವರೆಗೂ ಮನೆಯಲ್ಲಿ ಗಣಪತಿಯನ್ನು ಒಂಟಿಯಾಗಿ ಬಿಡಬಾರದು. ಮನೆ ಬಾಗಿಲು ಹಾಕಬಾರದು. ಮನೆಯಲ್ಲಿ ಯಾರಾದ್ರೂ ಇರ್ಲೇಬೇಕು. ಹಾಗೆ ಮದ್ಯಪಾನ, ಧೂಮಪಾನವನ್ನು ಮನೆಯಲ್ಲಿ ಮಾಡಬಾರದು. ಮಾಂಸಾಹಾರ ಸೇವನೆ ಮಾಡಬಾರದು.

ಗಣೇಶನಿಗೆ ಮೊದಲ ಪೂಜೆ ಏಕೆ ಸಲ್ಲಬೇಕು? ಅವನನ್ನು ಏಕೆ ವಿಘ್ನ ನಿವಾರಕ ಎನ್ನುತ್ತಾರೆ?

ಕತ್ತಲೆಯಲ್ಲಿ ಗಣೇಶನ ದರ್ಶನ ಬೇಡ : ಗಣೇಶನ ಸುತ್ತಮುತ್ತ ಯಾವಾಗ್ಲೂ ಬೆಳಕಿರಬೇಕು. ಒಂದ್ವೇಳೆ ಗಣೇಶ ಮೂರ್ತಿ ಸುತ್ತಮುತ್ತ ಕತ್ತಲಿದ್ರೆ ಗಣೇಶ ಮೂರ್ತಿಯನ್ನು ಅಪ್ಪಿತಪ್ಪಿಯೂ ಸ್ಪರ್ಶಿಸ್ಬೇಡಿ. ಕತ್ತಲೆಯಲ್ಲಿ ಗಣೇಶನ ದರ್ಶನ ಪಡೆಯುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಹಾಗೆಯೇ ಗಣೇಶನ ಹಿಂಭಾಗವನ್ನು ಕೂಡ ಎಂದೂ ನೋಡ್ಬಾರದು.